Saturday, January 30, 2010

"ಹೇಳದೇ ಉಳಿದ ಮಾತುಗಳು..."


ಐದಾರು ವರ್ಷಗಳ ಹಿಂದಿನ ಮಾತು. ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ಪುಟ್ಟಣ್ಣ ಕಣಗಾಲ್ ಸ್ಮರಣೆಗೆ ಗೀತನಮನ ಕಾರ್ಯಕ್ರಮವೊಂದು ನಡೆಯಿತು. ಅದರ ಹಿಂದಿದ್ದವರು ರಮ್ಯ ಕಲ್ಚರಲ್ ಅಕಾಡೆಮಿಯ ಬಾಲಿ. ಅವತ್ತು, ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳಿಂದ ಆಯ್ದ ಮಧುರ ಗೀತೆಗಳನ್ನು ನಾಡಿನ ಹೆಸರಾಂತ ಗಾಯಕ-ಗಾಯಕಿಯರು ಹಾಡಿದರು. ಪ್ರೇಕ್ಷಕರ ಸಾಲಿನಲ್ಲಿ ಹಿರಿಯ ಪತ್ರಕರ್ತ ವಿ.ಎನ್. ಸುಬ್ಬರಾವ್, ನಟ ಶಿವರಾಂ, ಶ್ರೀಮತಿ ನಾಗಲಕ್ಷ್ಮಿ ಪುಟ್ಟಣ್ಣ ಕಣಗಾಲ್, ಆರ್.ಎನ್. ಜಯಗೋಪಾಲ್ ಮುಂತಾದವರಿದ್ದರು. ಶುಭಮಂಗಳ ಚಿತ್ರದ `ಸೂರ್ಯಂಗು ಚಂದ್ರಂಗೂ ಬಂದಾರೆ ಮುನಿಸು...' ಗೀತೆಯನ್ನು ಗಾಯಕ ಎಲ್.ಎನ್. ಶಾಸ್ತ್ರಿ ಹಾಡಲು ನಿಂತಾಗ, ತುಂಬ ಭಾವುಕರಾದ ನಟ ಶಿವರಾಂ, ವೇದಿಕೆಯೇರಿ, ಶಾಸ್ತ್ರಿ ಅವರೊಂದಿಗೆ ತಾವೂ ಒಂದು ಚರಣ ಹಾಡಿ ಪುಟ್ಟಣ್ಣನ ನೆನಪಾಗಿ ಕಣ್ತುಂಬಿಕೊಂಡರು.

ಹೀಗೆ, ಹಾಡುಗಳ ನೆಪದಲ್ಲಿ ಪುಟ್ಟಣ್ಣ ಕಣಗಾಲ್ ಅವರನ್ನೂ , ಪುಟ್ಟಣ್ಣನ ನೆಪದಲ್ಲಿ ಹಾಡುಗಳನ್ನೂ ಕೇಳುತ್ತಿದ್ದ ಸಂದರ್ಭದಲ್ಲೇ ಕಾರ್ಯಕ್ರಮ ಮುಕ್ತಾಯದ ವೇಳೆ ಹತ್ತಿರವಾಗತೊಡಗಿತು. ಅದೇ ವೇಳೆಗೆ, ಮೂರು ಹಾಡುಗಳ ನಂತರ ಕಾರ್ಯಕ್ರಮ ಮುಗಿಯಲಿದೆ ಎಂದು ಸಂಘಟಕರೂ ಘೋಷಿಸಿಬಿಟ್ಟರು. ಪರಿಣಾಮ, ಮುಂದಿನ ಹದಿನೈದಿಪ್ಪತ್ತು ನಿಮಿಷಗಳ ನಂತರ ಮನೆಗೆ ಹೋಗಲು ಎಲ್ಲರೂ ಮಾನಸಿಕವಾಗಿ ತಯಾರಾಗುತ್ತಿದ್ದರು. ಆಗಲೇ ಪ್ರವೇಶ ದ್ವಾರದಲ್ಲಿ ಏನೋ ಸದ್ದಾಯಿತು. ಅಲ್ಲಿದ್ದ ಜನರೆಲ್ಲ ಒಟ್ಟಾಗಿ `ಓ... ಬಂದ್ರು ಬಂದ್ರು...' ಎಂದರು. ಈಗ ಬಂದವರು ಯಾರಿರಬಹುದು ಎಂದು ನೋಡಿದರೆ ನಟ ವಿಷ್ಣುವರ್ಧನ್! ತಮ್ಮ ಐದಾರು ಮಂದಿ ಆಪ್ತರೊಂದಿಗೆ ಕಾರ್ಯಕ್ರಮಕ್ಕೆ ಬಂದಿದ್ದರು ವಿಷ್ಣು. ಹಾಗೆ ಬಂದವರು, ಸಮಾರಂಭದಲ್ಲಿದ್ದ ಎಲ್ಲರ ಕುಶಲ ವಿಚಾರಿಸಿದರು. ನಂತರ ವೇದಿಕೆ ಏರಿ, ತಮ್ಮ ಗುರುಗಳಾದ ಪುಟ್ಟಣ್ಣ ಕಣಗಾಲರ ಬಗ್ಗೆ ನಾಲ್ಕು ಒಳ್ಳೆಯ ಮಾತುಗಳಾಡಿದರು. ಹಿಂದೆಯೇ ತುಂಬ ಸಂಭ್ರಮದಿಂದ `ಬಾರೇ ಬಾರೇ ಚಂದದ ಚೆಲುವಿನ ತಾರೆ...' ಗೀತೆಗೆ ದನಿಯಾದರು. ಆ ಹಾಡು ಕೇಳಿದ ನಂತರ ಕಾರ್ಯಕ್ರಮಕ್ಕೆ ಬಂದಿದ್ದವರ ಸಂಭ್ರಮಕ್ಕೆ ಎಣೆಯೇ ಇರಲಿಲ್ಲ.

ಬೆಂಗಳೂರಿನ ಅವಲಹಳ್ಳಿ ಬಸ್ ನಿಲ್ದಾಣದ ಎದುರಿಗೆ ಮ್ಯಾಜಿಕ್ ಸ್ಪೇಸ್ ಎಂಬ ಮ್ಯಾಜಿಕ್ ಉತ್ಪನ್ನಗಳ ಮಾರಾಟದ ಮಳಿಗೆಯೊಂದಿದೆ. ಯಾರದೋ ಸಂಕಟಕ್ಕೆ ಕಣ್ಣೀರಾಗುವ, ಕಷ್ಟಕ್ಕೆ ಹೆಗಲಾಗುವ ಜತೆಗಿರುವ ಎಲ್ಲರಿಗೂ ಸದಾ ಒಳಿತನ್ನೇ ಬಯಸುವ ಗಿರಿಧರ್ ಕಾಮತ್, ಈ ಮಳಿಗೆಯ ಒಡೆಯ. ಪ್ರವೀಣ್ ಗೋಡ್ಖಿಂಡಿಯವರ ಪಾಲಿಗೆ ಡಿಯರೆಸ್ಟ್ ಅಂಡ್ ನಿಯರೆಸ್ಟ್ ಫ್ರೆಂಡ್ ಆಗಿರುವ ಇವರು, ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಂದ ವೆಂಗ್ ಸರ್ಕಾರ್ ಎಂದು ಕರೆಸಿಕೊಂಡವರು! ಈ ಗಿರಿಧರ್ ಕಾಮತ್ ಅವರದು ಯಾವತ್ತೂ ಒನ್‌ಲೈನ್ ಡೈಲಾಗ್. `ಮುಂದಿನ ಜನ್ಮ ಅನ್ನೋದು ಬಹುಶಃ ಇಲ್ಲವೇ ಇಲ್ಲ. ಹಾಗಾಗಿ, ಇರುವಷ್ಟು ದಿನ ಬಿಂದಾಸ್ ಆಗೇ ಬದುಕೋಣ. ನಮ್ಮಿಂದ ಇದು ಅಸಾಧ್ಯ ಎಂದು ಯಾವ ಸಂದರ್ಭದಲ್ಲೂ ಯೋಚಿಸುವುದು ಬೇಡ. ನಮ್ಮಿಂದ ಎಲ್ಲವೂ ಸಾಧ್ಯ ಎಂದುಕೊಂಡೇ ಮುನ್ನುಗ್ಗೋಣ. ಯಾವುದೇ ಕೆಲಸ ಮಾಡಿದರೂ ಡಿಫರೆಂಟ್ ಆಗಿ ಮಾಡೋಣ...'

ಈ think different ಎಂಬ ಮಾತಿನ ಹಿಂದೆ ಮುಂದೆಯೇ ಸುತ್ತುತ್ತಿದ್ದ ಸಂದರ್ಭದಲ್ಲಿಯೇ `ಹಾಡು ಹುಟ್ಟಿದ ಸಮಯ' ಪುಸ್ತಕ ಬಿಡುಗಡೆಯ ಕೆಲಸ ಶುರುವಾಯಿತು. ಪುಸ್ತಕ ಬಿಡುಗಡೆಯನ್ನು ಹಳೆಯ ಸಿದ್ಧ ಸೂತ್ರದಂತೆ ಮಾಡುವ ಬದಲು ಸ್ವಲ್ಪ ಭಿನ್ನವಾಗಿ, ಒಂದಷ್ಟು ಹೊಸತನದೊಂದಿಗೆ ಮಾಡೋಣ ಎಂದುಕೊಂಡಿದ್ದಾಯಿತು. ಮುಖ್ಯ ಅತಿಥಿಗಳಾಗಿ ಒಂದು ಕಾಲದ ಜನಪ್ರಿಯ ಜೋಡಿ ಅಂಬರೀಷ್ -ಲಕ್ಷ್ಮಿಯನ್ನು ಒಪ್ಪಿಸಲು ಯೋಚಿಸಿದ್ದೂ ಆಯಿತು. ಆದರೆ, ಈ ಕಡೆ ಅಂಬರೀಷ್, ಆ ಕಡೆ ಲಕ್ಷ್ಮಿ ಇಬ್ಬರೂ ಸಿಗಲಿಲ್ಲವಾದ ಕಾರಣದಿಂದ ಐಡಿಯಾ ಫ್ಲಾಪ್ ಆಯಿತು. `ಮುಂದ?' ಎಂದುಕೊಂಡು ಪೆಚ್ಚಾಗಿ ಕೂತಾಗಲೇ think different ಎಂಬ ಮಾತಿಗೆ ಖಡಕ್ಕಾಗಿ ಹೊಂದುವಂಥ ಹೊಸ ಯೋಜನೆಯೊಂದು ಕಣ್ಮುಂದೆ ಬಂತು.

ಏನೆಂದರೆ ಪುಸ್ತಕ ಬಿಡುಗಡೆಗೆ, ವಿಷ್ಣುವರ್ಧನ್-ಭಾರತಿ ಹಾಗೂ ರಮೇಶ್‌ರನ್ನು ಕರೆಸುವುದು. ಹೇಗಿದ್ದರೂ ಆ ಪುಸ್ತಕದಲ್ಲಿ 60 ವರ್ಷದ ಇತಿಹಾಸಕ್ಕೆ ಸಾಕ್ಷಿಯಾಗಬಲ್ಲ ಹಾಡುಗಳಿದ್ದವು. ಹಳೆಯ ಹಾಡುಗಳ ಪ್ರತಿನಿಧಿಗಳಾಗಿ ವಿಷ್ಣು-ಭಾರತಿ, ಹೊಸ ಹಾಡುಗಳನ್ನು ಪ್ರತಿನಿಧಿಸಲು ರಮೇಶ್ ಬಂದರೆ ಕಾರ್ಯಕ್ರಮಕ್ಕೆ ವಿಶೇಷ ಆಕರ್ಷಣೆ ಬರುತ್ತೆ ಎನ್ನಿಸಿತು. ಈ ಸಂಗತಿಯನ್ನು ಗೆಳೆಯರಾದ ಉಪಾಸನಾ ಮೋಹನ್ ಹಾಗೂ ಫಲ್ಗುಣ ಅವರಲ್ಲಿ ಹೇಳಿಕೊಂಡಾಗ ಅವರು ಇನ್ನೊಂದು ರೆಕ್ಕೆಪುಕ್ಕ ಸೇರಿಸಿದರು : `ಹಾಗೇ ಮಾಡಿ. ಜತೆಗೆ, ಎಲ್ಲ ಗೀತೆರಚನೆಕಾರರನ್ನು, ಅವರ ಕುಟುಂಬದವರನ್ನು ಕರೆಸಿ. ಜತೆಗೆ ಸಿ. ಅಶ್ವತ್ಥ್ ಹಾಗೂ ಶಿವಮೊಗ್ಗ ಸುಬ್ಬಣ್ಣ ಅವರನ್ನೂ ಕರೆಸಿ `ತಪ್ಪು ಮಾಡದವ್ರು ಯಾರವ್ರೆ?' ಗೀತೆಯನ್ನು ಅಶ್ವತ್ಥ್ ಅವರಿಂದಲೂ `ಕಾಡು ಕುದುರೆ ಓಡಿಬಂದಿತ್ತಾ...' ಗೀತೆಯನ್ನು ಸುಬ್ಬಣ್ಣ ಅವರಿಂದಲೂ ಹಾಡಿಸಿ. ಉಳಿದ ಹಾಡುಗಳಿಗೆ ಯುವ ಗಾಯಕ-ಗಾಯಕಿಯರು ದನಿಯಾಗಲಿ. ಆಗ ಹಳೇ ಬೇರು ಹೊಸ ಚಿಗುರು ಎರಡನ್ನೂ ಒಂದೇ ವೇದಿಕೆಯಲ್ಲಿ ತಂದಂತಾಗುತ್ತದೆ. think different ಎನ್ನುವ ನಿಮ್ಮ ಮಾತು ನಿಜವಾಗುತ್ತದೆ...'

ಮುಂದೆ ಈ ಯೋಜನೆಯನ್ನೇ ಸ್ವಲ್ಪ update ಮಾಡಿದ್ದಾಯಿತು. ಅದು ಹೀಗೆ : ರಾಜ್ಯೋತ್ಸವ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಿಸುವುದು. ನಂತರದಲ್ಲಿ ಮೂರು ಹಾಡುಗಳು. ಐದನೇ ಗೀತೆಯಾಗಿ ವಿಷ್ಣುವರ್ಧನ್ ಅವರಿಂದ ಅದೇ `ಬಾರೇ ಬಾರೇ ಚೆಂದದ ಚೆಲುವಿನ ತಾರೆ...' ಹಾಡು ಹೇಳಿಸುವುದು. ಹಾಡಿನ ಎರಡನೇ ಚರಣ ಆರಂಭವಾದ ತಕ್ಷಣ ಭಾರತಿಯವರನ್ನು ವೇದಿಕೆಗೆ ಕರೆದೊಯ್ಯುವುದು. ಹಾಡು ಮುಗಿಯುತ್ತಿದ್ದಂತೆಯೇ ನಟ ರಮೇಶ್ ಅವರಿಂದ ಮ್ಯಾಜಿಕ್ ಮಾಡಿಸುವ ಮೂಲಕ ಪುಸ್ತಕ ಬಿಡುಗಡೆ ಮಾಡಿಸುವುದು. ಮೊದಲ ಪ್ರತಿಯನ್ನು ವಿಷ್ಣು ಅವರಿಂದ ಭಾರತಿ ಅವರಿಗೆ ಕೊಡಿಸುವುದು, ವಿಷ್ಣು-ಭಾರತಿ ದಂಪತಿಯನ್ನು ಸನ್ಮಾನಿಸುವುದು... ಪುಸ್ತಕ ಬಿಡುಗಡೆಯ ನಂತರ ಅಶ್ವತ್ಥ್ ಅವರಿಂದ `ತಪ್ಪೇ ಮಾಡದವ್ರು ಯಾರವ್ರೆ...' ಗೀತೆ ಹಾಡಿಸುವುದು. ಹತ್ತು ನಿಮಿಷದ ನಂತರ ಶಿವಮೊಗ್ಗ ಸುಬ್ಬಣ್ಣ ಅವರಿಂದಲೂ...

ಈ ಎಲ್ಲ ಸಂಗತಿಯನ್ನು ಸಂಗೀತ ನಿರ್ದೇಶಕ ಕೆ. ಕಲ್ಯಾಣ್ ಅವರಲ್ಲಿ ಹೇಳಿಕೊಂಡಾಗ ಅವರೆಂದರು. ಇದು ನಿಜಕ್ಕೂ think different ಅನ್ನೋ ಯೋಚನೆ-ಯೋಜನೆ. ಒಂದು ವೇದಿಕೆಯಲ್ಲಿ ಅಷ್ಟೊಂದು ಜನರನ್ನು ನೋಡುವುದೇ ಒಂದು ಖುಷಿ. ನಿಮ್ಮ ಈ ಸಾಹಸದಲ್ಲಿ ನಾನೂ ಒಂದಿಷ್ಟು ಕೆಲಸ ಮಾಡ್ತೇನೆ. ವಿಷ್ಣು ಸರ್ ಹಾಗೂ ಭಾರತಿ ಮೇಡಂ ಅವರನ್ನು ಒಪ್ಪಿಸಲು ನಿಮ್ಮೊಂದಿಗೆ ನಾನೂ ಬರ್‍ತೇನೆ. ನಿಮ್ಮ ಪರವಾಗಿ ನಾನೇ ಮಾತಾಡ್ತೇನೆ. ಅಶ್ವತ್ಥ್ ಹಾಡಿಗೆ ವಿಷ್ಣು ಸರ್ ತಾಳ ಹಾಕುತ್ತಾ ಕೂರುವುದನ್ನು; ಸುಬ್ಬಣ್ಣ ಅವರ ಗಾಯನಕ್ಕೆ ಎಲ್ಲರೂ ಮೈಮರೆಯುವ ಸಂದರ್ಭವನ್ನು; ವಿಷ್ಣು-ಭಾರತಿ ಪರಸ್ಪರ ಅಭಿನಂದಿಸುವುದನ್ನು ಕಂಡು ಎಲ್ಲರೂ ಚಪ್ಪಾಳೆ ಹೊಡೆಯುವುದನ್ನು; ರಮೇಶ್ ಅವರ ಚಿನಕುರುಳಿ ಮಾತಿಗೆ ರವೀಂದ್ರ ಕಲಾಕ್ಷೇತ್ರವೇ ಮರುಳಾಗುವುದನ್ನು ಎಲ್ಲರೂ ಕಣ್ತುಂಬಿಕೊಳ್ಳೋಣ. ಮುಂದಿನ ಮಂಗಳವಾರ ವಿಷ್ಣುವರ್ಧನ್ ಅವರ ಮನೆಗೆ ಹೋಗೋಣ... ನೀವು ಬಾಕಿ ಕೆಲಸ ಮಾಡಿ ಮುಗಿಸಿ...

ದುರಂತವೆಂದರೆ ಅಂಥದೊಂದು ಮಧುರ ಸಂದರ್ಭ ಬರಲೇ ಇಲ್ಲ. ಈ ಮಾತುಕತೆ ಮುಗಿದ ಎರಡೇ ದಿನಕ್ಕೆ, ವಿಷ್ಣುವರ್ಧನ್ ಅವರಿಗೆ ಆರೋಗ್ಯ ಚೆನ್ನಾಗಿಲ್ಲವಂತೆ. ಚಿಕಿತ್ಸೆಗೊಂದು ಅವರು ಮೈಸೂರಿಗೆ ಹೋಗಿದ್ದಾರಂತೆ. ಇನ್ನೂ ಒಂದು ತಿಂಗಳು ಚಿಕಿತ್ಸೆಯಂತೆ ಎಂಬ ಸುದ್ದಿ ಬಂತು. ಈ ಅನಿರೀಕ್ಷಿತ ಸುದ್ದಿಯನ್ನು ನಂಬಲಾಗಿದೆ ನಂಬಿದ್ದಾಗಲೇ, ಲಹರಿ ವೇಲು ಹೀಗೊಂದು ಎಸ್ಸೆಮ್ಮೆಸ್ ಕಳಿಸಿದ್ದರು. `ಸಾಹೇಬ್ರೆ, ಸಿ. ಅಶ್ವತ್ಥ್ ಅವರಿಗೆ ಹುಷಾರಿಲ್ವಂತೆ. ಕಿಡ್ನಿ ಫೇಲ್. ಯಶವಂತಪುರದ ಆಸ್ಪತ್ರೆಗೆ ಸೇರಿಸಿದ್ದಾರಂತೆ. ಒಮ್ಮೆ ಹೋಗಿ ಬರೋಣವಾ...?'

ನಂತರದ ದಿನಗಳಲ್ಲಿ ಎಲ್ಲವೂ `ಅವಸರದಲ್ಲಿ' ಎಂಬಂತೆ ನಡೆದುಹೋಯಿತು. ಮೊದಲಿಗೆ, ಚಿಕ್ಕದೊಂದು ಕಾರಣವನ್ನೂ ಹೇಳದೆ ಅಶ್ವತ್ಥ್ ಹೋಗಿಬಿಟ್ಟರು. ಈ ಸಂಕಟದಿಂದ ಚೇತರಿಸಿಕೊಳ್ಳುವ ಮೊದಲೇ ವಿಷ್ಣು ಅವರೂ... ಈಗ ಅವರಿಲ್ಲ ನಿಜ. ಆದರೆ, ಅವರ ಬಗ್ಗೆ ನಾವು ಕಂಡ ಕನಸುಗಳಿವೆ. ಆಡಿಕೊಂಡ ಮಾತುಗಳಿವೆ. ಬಣ್ಣದ ಲೋಕದ ಮಹನೀಯರಿಬ್ಬರು ಹಾಡದೇ ಹೋಗಿಬಿಟ್ಟ ಹಾಡುಗಳು ಹಾಗೇ ಉಳಿದುಹೋಗಿವೆ. ಇದನ್ನೆಲ್ಲ ಮತ್ತೆ ಮತ್ತೆ ನೆನಪು ಮಾಡಿಕೊಂಡಾಗ `ಬದುಕು ಒಂದು ಬಸ್ಸಿನಂತೆ ನಿಲ್ಲದಂತೆ ಸಾಗಿದೆ/ವಿಧಿಯೇ ಅದರ ಡ್ರೈವರ್ ಆಗಿ ಕಾಣದಂತೆ ಕೂತಿದೆ' ಎಂಬ ಇನ್ನೊಂದು ಚಿತ್ರಗೀತೆ ನೆನಪಾಗುತ್ತಿದೆ...

"ಹೃದಯವಂತ ಹೃದಯತಜ್ಞ ಪದ್ಮಭೂಷಣ ಬಿಎಂ ಹೆಗ್ಡೆ"

"ಪದ್ಮಭೂಷಣ ಪ್ರೊ. ಬಿ.ಎಂ. ಹೆಗ್ಡೆ ; ನಾನು ಕಂಡಂತೆ" ಲೇಖನದಲ್ಲಿ ಶ್ರೀಮಾನ್ ಎಚ್. ಆನಂದರಾಮ ಶಾಸ್ತ್ರೀಯವರು ಹೇಳಿದ್ದು ಅಕ್ಷರಶಃ ಸತ್ಯ. ನನ್ನ ಗುರುಗಳಾದ ಪ್ರೊ. ಬಿ.ಎಂ. ಹೆಗ್ಡೆಯವರು ಅತ್ಯಂತ ಸಾಮಾಜಿಕ ಕಳಕಳಿಯುಳ್ಳ, ವಿನಯಶೀಲ, ಸರಳ ಜೀವಿ, ಉತ್ತಮ ವಾಗ್ಮಿ, ಅನೇಕ ಭಾಷೆಗಳ ಪಾಂಡಿತ್ಯವಿರುವ, ಹೃದಯವಂತ ಹೃದಯ ತಜ್ಞರು. ಅವರಿಗೆ ಪದ್ಮಭೂಷಣ ಬಂದಿರುವುದು ನಮಗೆಲ್ಲರಿಗೂ ಅತೀವ ಸಂತಸ ತಂದಿದೆ.

ಪ್ರೊ. ಬಿ.ಎಂ. ಹೆಗ್ಡೆಯವರು ಇತರ ವೈದ್ಯರಿಗಿಂತ ಭಿನ್ನರು. ಜನರ ಆರೋಗ್ಯದ ಬಗ್ಗೆ ನಿಜವಾದ ಕಾಳಜಿಯುಳವರು. ಹೆಗಡೆಯವರ ಲೇಖನವನ್ನು ಓದಿ ಪ್ರೇರಣೆಗೊಂಡು, ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಮಂಗಳೂರಿನಲ್ಲಿರುವ ಹೆಗಡೆಯವರ ಮನೆಗೆ ದೂರವಾಣಿಯ ಮೂಲಕ ಸಂಪರ್ಕಿಸಿದ್ದರು. ಅವರನ್ನು ಗುಜರಾತಿಗೆ ಕರೆಸಿ, ಅವರೊಡನೆ ಚರ್ಚಿಸಿ, ಹೆಗಡೆಯವರನ್ನು ತಮ್ಮ ಆರೋಗ್ಯ ಇಲಾಖೆಗೆ ಸಲಹೆಗಾರರನ್ನಾಗಿ ನೇಮಿಸಿದ್ದರು. ಅದೇ ರೀತಿ ಅವರು ಬಿಹಾರದ ಆರೋಗ್ಯ ಇಲಾಖೆಗೂ ಸಲಹಾಗಾರರಾಗಿ ಸೇವೆ ಸಲ್ಲಿಸಿದ್ದಾರೆ.

ಪ್ರೊ. ಬಿ.ಎಂ. ಹೆಗಡೆಯವರು ಬಿಡುವಿಲ್ಲದೆ ದುಡಿಯುವ ಕ್ರಿಯಾಶೀಲರು. ಮಕ್ಕಳಿಂದ ಹಿಡಿದು ದೊಡ್ದವವರೆಗೆ ಯಾರೇ ಅವರಿಗೆ ಪತ್ರ ಬರೆದರೂ ಕೂಡಲೇ ಪ್ರತಿಸ್ಪಂದಿಸುತ್ತಾರೆ. ನಾನು ಆರನೇ ತರಗತಿಯಲ್ಲಿ ಇದ್ದಾಗ ಅವರಿಗೆ ಒಂದು ಪತ್ರ ಬರೆದಿದ್ದೆ. ಅದಕ್ಕೆ ಕೂಡಲೇ ಉತ್ತರ ಬರೆದಿದ್ದರು. ಇವಾಗಲೂ ಕೂಡ ಯಾವುದೇ ಪತ್ರಕ್ಕೂ ತಕ್ಷಣವೇ ಉತ್ತರ ಕೊಡುತ್ತಾರೆ. ತಮ್ಮ ಅಸಮಾನ್ಯ ಕಾರ್ಯ ಚಟುವಟಿಕೆಗಳ ನಡುವೆ ಎಲ್ಲವನ್ನೂ ಸುಗಮವಾಗಿ ನಿಭಾಯಿಸುವ ರೀತಿಯನ್ನು ನೋಡಿ ನಾವು ಬೆರಗುಗೊಂಡಿದ್ದೇವೆ.

ಭಾರತದಲ್ಲಿ ಹಾಗು ಹೊರದೇಶಗಳಲ್ಲಿ (ಅಮೇರಿಕ, ಇಂಗ್ಲೆಂಡ್) ಅನೇಕ ವಿಶ್ವ ವಿದ್ಯಾನಿಲಯಗಳಿಗೆ ಗೌರವ ಪ್ರಾಧ್ಯಾಪಕರಾಗಿ ಹಾಗು ಸಂಶೋಧಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇಲ್ಲಿಗೆ (ಅಮೆರಿಕಕ್ಕೆ) ಬಂದಾಗಲೂ ಬಿಡುವಿಲ್ಲದ ಕಾರ್ಯ ಚಟುವಟಿಕೆಗಳನ್ನು ಹೊಂದಿರುತ್ತಾರೆ. ಅನೇಕ ಸಭೆ, ಸಮಾರಂಭಗಳಿಗೆ ಅವರನ್ನು ಅಧ್ಯಕ್ಷರನ್ನಾಗಿ ಆಮಂತ್ರಿಸುತ್ತಾರೆ. ಹಾಗಾಗಿ ಇಲ್ಲಿಯೂ ಕೂಡ ಅನೇಕ ಸಲ ಅವರ ಉಪನ್ಯಾಸವನ್ನು ಕೇಳುವ ಭಾಗ್ಯ ನಮ್ಮದಾಗಿದೆ. ಅವರ ಮಗಳಲ್ಲಿಗೆ ಬಂದಾಗ ಮೂವತೈದು ಮೈಲು ದೂರದಲಿರುವ ನಮ್ಮ ಮನೆಗೂ ಅರ್ಧ ಗಂಟೆಗಾದರೂ ಬಂದು ಹೋಗುತ್ತಾರೆ. ಯಾರೇ ಅವರನ್ನು ಮನೆಗೆ ಆಹ್ವಾನಿಸಿದರೂ, ತಮ್ಮ ಬಿಡುವಿಲ್ಲದ ಕಾರ್ಯಗಳ ಮದ್ಯದಲ್ಲೂ ಸ್ವಲ್ಪ ಹೊತ್ತಿಗಾದರೂ ಭೇಟಿಕೊಡುವ ಹೃದಯವಂತರು.

ಹೆಗ್ದೆಯವರಂತೆ ಅವರ ಮಗಳು-ಅಳಿಯನೂ ಕೂಡ (ಡಾ. ಮೈನ, ರವಿ ಶೆಟ್ಟಿ) ವಿನಯಶೀಲರು. ''ತುಂಬಿದ ಕೊಡ ತುಳುಕುವುದಿಲ್ಲ" ಎಂಬ ಗಾದೆ ಮಾತು ಅವರ ಕುಟುಂಬಕ್ಕೆ ಹೇಳಿ ಮಾಡಿಸಿದಂತೆ ಇದೆ. ಹೆಗ್ಡೆ ಮತ್ತು ಅವರ ಕುಟುಂಬ ನಮ್ಮ ಮನೆಗೆ ಬಂದಾಗ ತೆಗೆದ ಒಂದು ಛಾಯ ಚಿತ್ರವನ್ನು ನಿಮ್ಮೊಂದಿಗೆ ಸಂತೋಷದಿಂದ ಹಂಚಿಕೊಳ್ಳುತಿದ್ದೇನೆ. ನನ್ನ ಗುರುಗಳಿಗೆ ಪದ್ಮಭೂಷಣ ಬಂದಿರುವುದು ನಾನು ಅಭಿಮಾನದಿಂದ ಬೀಗುತ್ತಿದ್ದೇನೆ.


"ಕಾವ್ಯ ಸಮಾಜಮುಖಿಯಾಗಲಿ: ದೊಡ್ಡರಂಗೇಗೌಡ"


ಹಂಪಿ, ಜ.29:'ಅಂತರಂಗದ ಭಾವಲಹರಿ ಕವಿತೆ- ಬದುಕಿನ ಅನುಭವಗಳಿಂದ ಮಡುಗಟ್ಟಿ ಹೊರಹೊಮ್ಮಬೇಕು, ಕಾವ್ಯ ಮಾಜಮುಖಿಯಾಗಿರಬೇಕು ಎನ್ನುವ ಆಶಯವನ್ನು ಸಾಹಿತಿ ಡಾ. ದೊಡ್ಡರಂಗೇಗೌಡರು ವ್ಯಕ್ತಪಡಿಸಿದರು.

ಶ್ರೀ ಕೃಷ್ಣದೇವರಾಯರ ಪಟ್ಟಾಭಿಷೇಕದ 500ನೇ ವರ್ಷಾಚರಣೆ ಪ್ರಯುಕ್ತ ವಿರೂಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಲಾಗಿದ್ದ ಕವಿಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಂಪಿಯ ಕಲ್ಲು ಕಲ್ಲುಗಳೂ ವೀಣೆಯ ನಾದವನ್ನು ಹೊರಹೊಮ್ಮಿಸುತ್ತವೆ. ದಕ್ಷ ಆಡಳಿತದೊಂದಿಗೆ ನವರಸ ಕಾವ್ಯಗಳ ವಿಹಾರದಲ್ಲಿ ಜನಮನವನ್ನು ತಣಿಸಿದ ರಾಯರ ರಾಯ ಶ್ರೀಕೃಷ್ಣದೇವರಾಯ. ಅಂತಹ ನೆಲದಲ್ಲಿ ಇಂದು ಕವಿತಾ ವಾಚನ-ಗಾಯನ ಬಹಳಷ್ಟು ಅರ್ಥಪೂರ್ಣವೆಂದು ಕವಿ ದೊಡ್ಡರಂಗೇಗೌಡರು ನುಡಿದರು.

ಬೌದ್ಧಿಕವಾಗಿದ್ದು ಭಾವವಿಲ್ಲದಿದ್ದರೆ ಕವಿತೆ ನೀರಸವಾಗುತ್ತದೆ. ಅಂತ ಕವಿತೆ ಜನಮನದಲ್ಲಿ ಬೇರೂರುವುದಿಲ್ಲ. ಜೀವನ ಭಾವನೆಗಳ ಸಂಗಮವೇ ಕವಿತೆಯಾಗಬೇಕು. ಅನುಭವದ ಪುನರ್ಮನನವೇ ಕವಿತೆ ಎನ್ನುವ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು. ನುಡಿದಂತೆ ನಡೆಯುವ ಗುಣವನ್ನು ಕವಿ ರೂಪಿಸಿಕೊಳ್ಳಬೇಕು. ಬದುಕು- ಬರಹ ಕವಿಗೆ ಅಭೇದ್ಯವಾಗಬೇಕು. ಸಮಾಜಮುಖಿ ಕಾವ್ಯರಚನೆಗೆ ಈ ವೇದಿಕೆ ಸತ್ಪ್ರೇರಣೆಯಾಗಲಿ ಎನ್ನುವ ಆಶಯವನ್ನು ಕವಿಗಳು ವ್ಯಕ್ತಪಡಿಸಿದರು.

'ಅದ್ವಿತೀಯ ಶ್ರೀಕೃಷ್ಣದೇವರಾಯ ಎನ್ನುವ ಕವನವನ್ನು ದೊಡ್ಡರಂಗೇಗೌಡರು ವಾಚಿಸಿದರು. ಕವಿಗಳು ವಾಚಿಸಿದ ಕವನವನ್ನು ಮೃತ್ಯುಂಜಯ ದೊಡ್ಡವಾಡ ಅವರ ಸಂಗೀತ ಸಂಯೋಜನೆಯಲ್ಲಿ ವೇದಿಕೆಯಲ್ಲೇ ಹಾಡಲಾಯಿತು. ಅಧ್ಯಕ್ಷತೆ ವಹಿಸಿದ್ದ ಡಾ. ಎನ್ ಎಸ್ ಲಕ್ಷ್ಮೀನಾರಾಯಣಭಟ್ಟರು ಮಾತನಾಡಿ `ವೇದಿಕೆ ಬೃಹಸ್ಪತಿ- ಸಭೆ ಸಾಕ್ಷಾತ್ ಸರಸ್ವತಿ ಕವಿತಾ ವಾಚನ ಕೇಳಲು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಕೇಳುಗರು ಸೇರಿರುವುದು ತಮಗೆ ಸಂತಸ ತಂದಿದೆ ಎಂದರು.

ನಾನು ಹಾಡುವುದು ನನಗೆಂದು ,
ಎದೆಭಾರ ಇಳಿಯಲೆಂದು,
ಎಲ್ಲ ಮರೆತು ಕೇಳುತಿಹ ನಿಮಗೆಂದು
ಎನ್ನುವ ಕವನ ವಾಚಿಸಿದರು.

ಬಸವರಾಜ ವಕ್ಕುಂದ, ರವಿಕೊಟಾರಗಸ್ತಿ, ಡಾ.ಎಲ್ ಎನ್ ಮುಕುಂದರಾಜ್, ಡಾ. ವಿಕ್ರಮ್ ವಿಸಾಜಿ, ಎನ್ ಕೆ ಹನುಮಂತಯ್ಯ, ಡಾ. ಸತ್ಯಾನಂದ ಪಾತ್ರೋಟ, ಡಾ. ಲತಾಗುತ್ತಿ, ಸಂಗಮೇಶ್, ದೊಡ್ಡಾಲೂರು ಲಿಂಗಪ್ಪ, ಸಿದ್ದರಾಮ ಕಲ್ಮಠ, ಸಿದ್ದು ದೇವರಮನಿ, ಪರಮೇಶ್ವರಯ್ಯ ಸೊಪ್ಪಿಮಠ, ಶಿವಲಿಂಗಪ್ಪ ಬಳ್ಳಾರಿ, ವಿಘ್ನೇಶ್ವರ ಹಾಗೂ ಗೀತಾಭಟ್ ತಮ್ಮ ಕವನಗಳನ್ನು ವಾಚಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಮನುಬಳಿಗಾರ್, ಜಂಟಿನಿರ್ದೇಶಕರಾದ ಶಂಕರಪ್ಪ ಉಪಸ್ಥಿತರಿದ್ದರು.

"ವಿಜಯನಗರ ಪುನರ್ ನಿರ್ಮಾಣಕ್ಕೆ ಅಡ್ವಾಣಿ ಶಿಲಾನ್ಯಾಸ"


ಹಂಪೆ (ಕಮಲಾಪುರ), ಜ. 29- "ವರ್ತಮಾನವನ್ನು ಸಮೃದ್ಧಗೊಳಿಸಿ ಉಜ್ವಲ ಭವಿಷ್ಯ ಕಟ್ಟಿಕೊಳ್ಳಲು ಭವಿಷ್ಯತ್ ಕಾಲದ ಘಟನೆಗಳು ಪ್ರೇರಣೆ ನೀಡುತ್ತವೆ ಎಂದು ಮಾಜಿ ಉಪ ಪ್ರಧಾನಿ ಸಂಸದ ಎಲ್. ಕೆ. ಆಡ್ವಾಣಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಜಯನಗರ ಪುನಶ್ಚೆನ ಪ್ರತಿಷ್ಠಾನದ ಆಶ್ರಯದಲ್ಲಿ `ಪ್ರಕಲ್ಪಗಳ ಭೂಮಿಪೂಜೆ ಹಾಗೂ ಕಟ್ಟಡಗಳ ಶಿಲಾನ್ಯಾಸವನ್ನು ಶುಕ್ರವಾರ ನೆರವೇರಿಸಿ ಮಾತನಾಡಿದ ಅವರು, ಶ್ರೀಕೃಷ್ಣದೇವರಾಯನ ಆಡಳಿತ ಅನುಕರಣೀಯ ಎಂದ ಹೇಳಿದರು.

`ಕರ್ನಾಟಕಕ್ಕೂ ಮತ್ತು ನನಗೂ ಅವಿನಾಭಾವ ಸಂಬಂಧ ಇದೆ. ಹಂಪೆಗೆ ಎರಡನೇಬಾರಿ ಭೇಟಿ ನೀಡುತ್ತಿದ್ದೆನೆ. ಕಳೆದ ಬಾರಿ ನಾನು ಹಂಪೆಗೆ ಭೇಟಿ ನೀಡಿದಾಗ ಶ್ರೀಕೃಷ್ಣದೇವರಾಯ ಪಟ್ಟಾಭಿಷೇಕದ 500ನೇ ವರ್ಷಾಚರಣೆಯ ಮಹೋತ್ಸವಕ್ಕೆ ನನ್ನನ್ನು ಆಹ್ವಾನಿಸಿದ್ದರು ನಾನು ವಚನ ಪಾಲಿಸಿ, ಆಗಮಿಸಿದ್ದೆ ಎಂದು ಹೇಳಿದರು.ವಿಜಯನಗರ ಸಾಮ್ರಾಜ್ಯದ ಮಾಹಿತಿಯನ್ನು ಬಿಂಬಿಸುವ `ಥೀಮ್ ಪಾರ್ಕ್ ' ನಿರ್ಮಾಣ ಆಗುತ್ತಿರುವುದು ಹಾಗೂ ಈ ಸಾಮ್ರಾಜ್ಯದ ವೈಭವ ನೆನಪಿಸುವ ಚಟುವಟಿಕೆಗಳು ಇಲ್ಲಿ ನಡೆಯುತ್ತಿರುವುದು ಸಂತೋಷದ ಸಂಗತಿ ಎಂದು ಅವರು ಹೇಳಿದರು.

ತಾವು ಕೇಂದ್ರ ವಾರ್ತಾ ಹಾಗೂ ಪ್ರಸಾರ ಸಚಿವರಾಗಿದ್ದಾಗ ಶ್ರೀಕೃಷ್ಣದೇವರಾಯರ ಧ್ವನಿ ಮತ್ತು ಬೆಳಕಿನ ಕಾರ್ಯಕ್ರಮವನ್ನು ರೂಪಿಸಿದ್ದನ್ನು ಸ್ಮರಿಸಿದ ಅವರು, ಈ ಪ್ರದರ್ಶನ ಹೈದರಾಬಾದ್ನಲ್ಲಿ ಪ್ರಯೊ ಆಗಿದ್ದನ್ನು ಪ್ರಸ್ತಾಪಿಸಿ ವಿಜಯನಗರದ ರಾಜಧಾನಿ ಕರ್ನಾಟಕದ ಹಂಪೆಯಲ್ಲೂ ಕೂಡ ಪ್ರದರ್ಶನಗೊಳ್ಳಬೇಕು ಎಂದು ಸಲಹೆ ನೀಡಿದ್ದಾಗಿ ಹೇಳಿದರು.

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಮಾತನಾಡಿ, ವಿಜಯನಗರ ಸಾಮ್ರಾಜ್ಯದ ಭವ್ಯತೆಯ ಪುನರ್ದರ್ಶನಕ್ಕಾಗಿ ಈ ಸಾಮ್ರಾಜ್ಯದ ಚಟುವಟಿಕೆಗಳನ್ನು ಜನರಿಗೆ ತಿಳಿಸಲು ಕರ್ನಾಟಕ ರಾಜ್ಯ ಸರ್ಕಾರ ಪ್ರವಾಸೋದ್ಯಮ ಇಲಾಖೆಯಡಿಯಲ್ಲಿ ವಿಜಯನಗರ ಪುನಶ್ಚೆನ ಪ್ರತಿಷ್ಠಾನ (ಟ್ರಟ್ಸ್ ಸ್ಥಾಪಿಸಿದ್ದು ವೈಯಕ್ತಿಕವಾಗಿ ಸಾರ್ಥಕತೆ - ತೃಪ್ತಿ ಮೂಡಿಸಿದೆ ಎಂದರು. ಈ ಪ್ರತಿಷ್ಠಾನದ ಚಟುವಟಿಕೆಗಳಿಗೆ ಕೂಡಲೇ ಐದು ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗುತ್ತದೆ ಪ್ರತಿಷ್ಠಾನ ತನ್ನ ಕ್ರಿಯಾ ಯೊನೆಯನ್ನು ಸರ್ಕಾರಕ್ಕೆ ಸಲ್ಲಿಸಿದ ನಂತರ ಮುಂದಿನ ಆಯವ್ಯಯದಲ್ಲಿ ಹಣ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಪಟ್ಟಾಭಿಷೇಕ ಮಹೋತ್ಸವ ಸಮಿತಿಯ ಕಾರ್ಯದರ್ಶಿ ವಿ. ನಾಗರಾಜ್ ಅವರು ಮಾತನಾಡಿ, ಅಕ್ಷರ ಧಾಮದ ಮಾದರಿಯಲ್ಲಿ ವಿಜಯನಗರ ವೈಭವದ ಪ್ರತಿಕೃತಿಗಳಲ್ಲದೆ ಸಂಶೋಧನೆ ಉದ್ಯಾನವನ ಮಲ್ಟಿ ಮೀಡಿಯಾ ಪ್ರದರ್ಶನ ಪುಸ್ತಕ ಹಾಗೂ ವಸ್ತು ಸಂಗ್ರಹಾಲಯವನ್ನು ಇಲ್ಲಿ ನಿರ್ಮಿಸಲಾಗುವುದು ಇದಕ್ಕಾಗಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಅಗತ್ಯ ನೆರವು ಪಡೆಯಲಾಗಿದೆ ಎಂದರು

ಶ್ರಿ ರವಿಶಂಕರ್ ಗುರೂಜಿ ಅವರು ಸಾನಿಧ್ಯವಹಿಸಿದ್ದರು ಸಂಸದ ಅನಂತ ಕುಮಾರ್, ಸಚಿವರಾದ ಜಿ. ಕರುಣಾಕರ ರೆಡ್ಡಿ ಜಿ. ಜನಾರ್ದನ ರಡ್ಡಿ ಬಿ. ಶ್ರೀರಾಮುಲು ವಿಶ್ವೇಶ್ವರಹೆಗಡೆ ಕಾಗೇರಿ, ಸಂಸದೆ ಜೆ. ಶಾಂತ ಶಾಸಕರಾದ ಆನಂದ್ ಸಿಂಗ್ ಸುರೇಶ್ ಬಾಬು, ಮೃತ್ಯುಂಜಯ ಜಿನಗಾ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎನ್. ರುದ್ರಗೌಡ ಈ ಸಮಾರಂಭದಲ್ಲಿ ಇದ್ದರು. ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಸ್ವಾಗತಿಸಿದರು ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎ. ಮುರಿಗೆಪ್ಪ ವಂದಿಸಿದರು

Friday, January 22, 2010

"ಸಮ್ಮೇಳನದ ಭಾರ ಹೊತ್ತ ಐದರ ಪೋರ"

ಪೂರ್ವ ಕರಾವಳಿಯ ನ್ಯೂ ಜೆರ್ಸಿ ಕನ್ನಡ ಕುಟುಂಬಗಳ ಒಂದು ಚಿತ್ರವಿದು. ಎಡಿಸನ್ ಸುತ್ತಮುತ್ತ ಪ್ರದೇಶದಲ್ಲಿ ನೆಲೆಸಿರುವ ಸುಮಾರು ಇನ್ನೂರೈವತ್ತು ಕುಟುಂಬಗಳ ಪೈಕಿ ಶೇ.70ರಷ್ಟು ಕನ್ನಡಿಗರಿಗೆ ಕನ್ನಡವೆನಿಸಿಕೊಳ್ಳುವ ಎಲ್ಲದರ ಬಗ್ಗೆ ತಣಿಯದ ಬಯಕೆ. ಒಂದು ಸುಶ್ರಾವ್ಯ ಕನ್ನಡ ಹಾಡು ಆಲಿಸಬೇಕೆಂದರೆ ವಾರಾಂತ್ಯದವರೆಗೂ ಕಾಯಬೇಕಲ್ಲ ಎಂಬ ಕೊರಗು. ಕಾಯುವುದಕ್ಕೆ ತಾಳ್ಮೆ ಇಲ್ಲ. ಅಷ್ಟೇ ಅಲ್ಲ, ಕಾರ್ಯಕ್ರಮ ಎಲ್ಲಿದೆ ಎಂದು ಹುಡುಕಿಕೊಂಡು ಎಕ್ಸಿಟ್ಟುಗಳಲ್ಲಿ ಹೊರಳಾಡಿಕೊಂಡು ಕನ್ನಡದ ವಾಸನೆ ಹಿಡಿದು ಕಾರು ಓಡಿಸುತ್ತಿರಬೇಕು.

ಈ ಬಾರಿ ಟ್ರೈ ಸ್ಟೇಟ್ಸ್ ತ್ರಿವೇಣಿ ಕನ್ನಡ ಸಂಘದಲ್ಲಿ ನಾಟಕ ಇದೆ, ಅದರ ಮುಂದಿನ ವಾರ ಹೊಯ್ಸಳ ಸಂಘದಲ್ಲಿ ಭಾರತದ ಬಂದಿರುವ ಗಾಯಕಿಯ ಭರ್ಜರಿ ಹಾಡುಗಾರಿಕೆ ಇದೆಯಂತೆ, ಅಲ್ಲಿಗೆ ಹೋಗಬೇಕು. ಡಿಸೆಂಬರ್ ನಲ್ಲಿ ನ್ಯೂಯಾರ್ಕಿನಲ್ಲಿ ಕನ್ನಡ ಮಕ್ಕಳ ನಾಟಕಕ್ಕೆ ಹೋಗಲೇಬೇಕು.. ಹೀಗೆ, ಕನ್ನಡತನವನ್ನು ಹುಡುಕಿಕೊಂಡು ನಿತ್ಯ ಸುತ್ತಾಡುತ್ತಿರಬೇಕು. ಇದು ಹತ್ತಾರು ವರಷಗಳಿಂದ ನಡೆದುಬಂದ ಪರಿಪಾಠ. ಆದರೆ, ಎಷ್ಟು ದಿನ ಅಂತ ಅಲ್ಲಿ ಇಲ್ಲಿ ಹೋಗಿಬಂದು ಮಾಡುವುದಕ್ಕೆ ಸಾಧ್ಯ. ನಾವೇ ಒಂದು ಕನ್ನಡ ಸಂಘ ಕಟ್ಟಿದರೆ ಆಯ್ತು, ಅದೇನು ಮಹಾ, ಎಂದುಕೊಂಡರು ಅವರು.

ಒಂದು ದಿನ ಮನೆಗೆ ಹುಡುಗ ಹಾಲು ತರದಿದ್ದರೆ, ಅದಕ್ಕೇನಂತೆ ನಾವೇ ಒಂದು ಡೈರಿ ಶುರುಮಾಡೋಣ ಎನ್ನುವಂತಹವರು ಅಲ್ಲಿದ್ದರು. ಅವರಿಗೆಲ್ಲ ಪ್ರಸನ್ನಕುಮಾರ್ ಎಂಬ ಮಧ್ಯವಯಸ್ಕನೇ ನಾಯಕ. ಸರಿ, ಆಗಷ್ಟೇ ಫ್ಲಾರಿಡಾ ಅಕ್ಕ ಸಮ್ಮೇಳನ (2004) ಮುಗಿದು ಎಲ್ಲರೂ ನ್ಯೂ ಜೆರ್ಸಿಗೆ ವಾಪಸ್ಸಾಗಿದ್ದರು. ಕನ್ನಡದ ಪರಿಮಳ ಇನ್ನೂ ಹಸಿಹಸಿಯಾಗಿ ನವುರಾಗಿತ್ತು. ಒಂದು ಸಂಜೆ ಎಲ್ಲರೂ ಕುಳಿತು ಸಭೆ ಮಾಡಿ ಕನ್ನಡ ಸಂಘ ಕಟ್ಟಿಬಿಡುವ ನಿರ್ಧಾರಕ್ಕೆ ಬಂದರು. ಅಲ್ಲಿ ಒಂದು ಬೃಂದಾವನವೇ ನಿರ್ಮಾಣವಾಯಿತು. ನ್ಯೂ ಜೆರ್ಸಿ ಕನ್ನಡಿಗರ ನಂದಗೋಕುಲದಂತಿರುವ ಬೃಂದಾವನಕ್ಕೆ ಮೊನ್ನೆ ಡಿಸೆಂಬರ್ 5ಕ್ಕೆ ಐದು ವರ್ಷ ತುಂಬಿ ಆರಕ್ಕೆ ಬಿತ್ತು.

ಕರ್ನಾಟಕದ ಶಾಲೆಗಳ ಲೆಕ್ಕದಲ್ಲಿ ಬೃಂದಾವನ ನರ್ಸರಿಗೆ ಹೋಗುವ ಬಾಲಕ. ಐದು ವರ್ಷ ಎಂಟು ತಿಂಗಳು ತುಂಬದೆ ಒಂದನೆ ತರಗತಿಗೆ ಸೇರುವಂತಿಲ್ಲ. ಆದರೆ ಇದೊಂದು ಸ್ಪೆಷಲ್ ಕೇಸ್ ಎಂದು ಪರಿಗಣಿಸಿ ಬಾಲಕನನ್ನು ಪದವಿ ಪರೀಕ್ಷೆಗೆ ಒಡ್ಡಲಾಗಿದೆ. ಅಮೆರಿಕಾದ ಅತ್ಯಂತ ಕಿರಿಯ ಕನ್ನಡ ಸಂಘ ಬೃಂದಾವನ ಬೃಹತ್ ನ್ಯೂ ಜೆರ್ಸಿ ಅಕ್ಕ ಸಮ್ಮೇಳನದ ಭಾರ ಹೊತ್ತು ನಿಲ್ಲುತ್ತಿದೆ. ಈ ಸಮ್ಮೇಳನಕ್ಕೆ ಐದರ ಪೋರನಾಗಿದ್ದಾಗಲೇ ಪವರ್ಫುಲ್ ನಟನೆಯಿಂದ ಸ್ಟಾರ್ ಆಗಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬ್ರಾಂಡ್ ಅಂಬಾಸಡರ್ ಆಗಿದ್ದಾರೆ. ಬೃಂದಾವನ ಸಂಘ ಮಾಜಿ ಅಧ್ಯಕ್ಷ ಮತ್ತು ಅಕ್ಕ ಸಮ್ಮೇಳನದ ಸಂಯೋಜಕ ತ್ರಿವಳಿಗಳಲ್ಲಿ ಒಬ್ಬರಾಗಿರುವ ಪ್ರಸನ್ನ ಕುಮಾರ್ ಅವರನ್ನು ನಾನು ಮೊನ್ನೆ ಬೆಂಗಳೂರಿನಲ್ಲಿ ಭೇಟಿ ಆಗಿದ್ದೆ. ಅವರೊಂದಿಗೆ ನಡೆಸಿದ ಮಾತುಕತೆಯ ಸಾರಾಂಶಕ್ಕಾಗಿ, ನೋಡುತ್ತಿರಿ ದಟ್ಸ್ ಕನ್ನಡ ಎನ್ಆರ್ಐ.

"ಅಮೆರಿಕ ಕನ್ನಡ ಸಂಘಗಳ ಚಾರಿತ್ರಿಕ ದಾಖಲೆ"

ವಿಶಾಲ ಉತ್ತರ ಅಮೆರಿಕದಾದ್ಯಂತ ಮೂವತ್ತರೆಡು ಕನ್ನಡ ಸಂಘಗಳಿವೆ. ಅಂದಾಜು ಒಂದೊಂದು ರಾಜ್ಯಕ್ಕೆ ಒಂದು ಕನ್ನಡ ಸಂಘ ಎನ್ನುವುದು ಲೆಕ್ಕ. ಅರುವತ್ತರ ದಶಕದಲ್ಲಿ ಅಮೆರಿಕಾಗೆ ವಲಸೆಹೋದ ಕನ್ನಡ ಕುಟುಂಬಗಳಿಗೆ ಮೊದಲಬಾರಿಗೆ ಕನ್ನಡ ಸಂಘದ ಚೌಕಟ್ಟು (1972) ಕೊಟ್ಟದ್ದು ಮಿಚಿಗನ್ ರಾಜ್ಯದ ಪುಟ್ಟ ಊರು ಆನ್ ಆನ್ಬರ್. ಆ ಸಂಘದ ಹೆಸರು ಪಂಪ ಕನ್ನಡ ಸಂಘ. ಸಂಘವನ್ನು ಕಟ್ಟಿ ಬೆಳೆಸಿದವರು ಪ್ರಾಥಃ ಸ್ಮರಣೀಯರಾದ ಶ್ರೀಪಾದ ರಾಜು, ಕೃಷ್ಣಪ್ಪ ಮತ್ತು ಗೆಳೆಯರು. 37 ಸಂವತ್ಸರಗಳನ್ನು ಕಂಡಿರುವ ಪಂಪ ಸಂಘದ ಅಧ್ಯಕ್ಷೆಯಾಗಿ ಈ ಸಾಲಿನಲ್ಲಿ ಕೆಲಸ ಮಾಡುತ್ತಿರುವವರು ಮೈಸೂರು ಅನಂತಸ್ವಾಮಿ ಅವರ ಮಗಳು ಸುನೀತಾ ಅನಂತಸ್ವಾಮಿ. ಇವತ್ತಿನ ಲೇಖನಕ್ಕೆ ಈ ಐದು ವಾಕ್ಯಗಳ ಮುನ್ನುಡಿ ಆದಿಪುರಾಣದ ಮುಖಪುಟ ಮತ್ತು ಹಿಂಬದಿಯಪುಟ ಮಾತ್ರ ಎಂದು ಭಾವಿಸಬೇಕು.

ಪಂಪ ಆರಂಭವಾದ ಅನತಿಕಾಲದಲ್ಲೇ ಜನ್ಮತಾಳಿದ್ದು ವಾಷಿಂಗ್ಟನ್ ಡಿಸಿ ಪ್ರದೇಶದ ಕಾವೇರಿ ಕನ್ನಡ ಅಸೋಸಿಯೇಷನ್. ಇತರ ರಾಜ್ಯಗಳಲ್ಲಿ ಕಾಲಕಾಲಕ್ಕೆ ಕನ್ನಡಿಗರ ಜನಸಾಂದ್ರತೆ ಹೆಚ್ಚಾದಂತೆ ಸಂಘಗಳು ಜನ್ಮತಾಳುತ್ತಾ ಬಂದವು. ಕನ್ನಡ ಕುಟುಂಬಗಳಿಗೆ ಒಂದು ವೇದಿಕೆ ಕಲ್ಪಿಸಿಕೊಡುವಲ್ಲಿ ಸಾಫಲ್ಯ ಕಂಡುಕೊಳ್ಳುವುದೇ ಪ್ರತಿಯೊಂದೂ ಸಂಘಗಳ ಮೂಲ ಉದ್ದೇಶ. ಈ ಎಲ್ಲ ಸಂಘಗಳ ಹುಟ್ಟು ಬೆಳವಣಿಗೆ ಸಾಧನೆಯ ಹೆಜ್ಜೆಗುರುತುಗಳನ್ನು ದಾಖಲಿಸುವುದು ಈ ಬರಹದ ಉದ್ದೇಶವಲ್ಲ. ಆದರೆ, ವಿವರಗಳು ಬೇಕು. ಎಲ್ಲಿವೆ? ಯಾರು ಕಟ್ಟಿಕೊಡುತ್ತಾರೆ? ಶ್ರಮ ಮತ್ತು ವಾತ್ಸಲ್ಯದಿಂದ ತಾವು ಕಟ್ಟಿದ ಕನ್ನಡ ಸಂಘಗಳ ಇತಿಹಾಸ ಕಳೆದು ಹೋಗುತ್ತದಾ? ಎಂಬ ಪ್ರಶ್ನೆಯನ್ನು ಅನೇಕ ಹಿರಿಯ ಅಮೆರಿಕನ್ನಡಿಗರು ನಮ್ಮ ಡಾಟ್ ಕಾಂ ಮುಂದೆ ಇಡುತ್ತಿರುತ್ತಾರೆ. ಈ ನಿಟ್ಟಿನಲ್ಲಿ ಕೆಲವು ಬಿಡಿ ಲೇಖನಗಳು ಹರಿಹರೇಶ್ವರ ಅವರು ಸಂಪಾದಿಸುತ್ತಿದ್ದ ಅಮೆರಿಕನ್ನಡ ಪತ್ರಿಕೆಯಲ್ಲಿ ಹಾಗೂ ಹ್ಯೂಸ್ಟನ್ ಸಮ್ಮೇಳನದ ಸ್ಮರಣ ಗ್ರಂಥ 'ದರ್ಶನ' ದಲ್ಲಿ ಎಂಎಸ್ ನಟರಾಜ್ ಅವರ ಕನ್ನಡ ಸಂಘ ನಡೆದುಬಂದ ದಾರಿಯ ಕಥಾನಕಗಳು ಬೆಳಕು ಕಂಡಿವೆ. ಅವೆಲ್ಲ ಇವತ್ತು ಚದುರಿದ ಚಿತ್ರಗಳಂತೆ ಕಾಣಿಸುತ್ತವೆ.

ಅಮೆರಿಕನ್ನಡಿಗ ಎಂದ ಕೂಡಲೇ ಅಕ್ಕ ಹೆಸರು ನೆನಪಾಗುವ ಈ ಕಾಲಘಟ್ಟದಲ್ಲಿ ಅಮೆರಿಕಾ ಕನ್ನಡ ಸಂಘಗಳ ಸಮಗ್ರ ಚರಿತ್ರೆ ಸಂಪುಟವನ್ನು ಅಕ್ಕ ವತಿಯಿಂದಲೇ ನಿರೀಕ್ಷಿಸುವುದು ತಪ್ಪಾಗುವುದಿಲ್ಲ. ಎರಡು ವರ್ಷಕ್ಕೊಮ್ಮೆ ಅಕ್ಕ ಸಮ್ಮೇಳನ ನಡೆಯತ್ತೆ, ನಿಜ. ಸಮ್ಮೇಳನದ ನೆನಪಿಗೆ ಸ್ಮರಣ ಸಂಚಿಕೆಗಳೂ ಸಿದ್ಧವಾಗುತ್ತವೆ, ನಿಜ. ಈ ವರೆಗೆ ನಾವು ಕಂಡ ಸ್ಮರಣ ಸಂಚಿಕೆಗಳು ಬಿಡಿಬಿಡಿ ಲೇಖನಗಳ ಮಾಲೆಯಾಗಿ ಬೈಂಡಿಗ್ ಆಗಿವೆಯೇ ವಿನಾ, ಅವುಗಳಿಗೆ ಒಂದು ಚರಿತ್ರೆಯ ಸತ್ವ ಬಂದಿಲ್ಲ, ನಿಜ. ಸ್ಮರಣ ಸಂಚಿಕೆಗಳ ಉದ್ದಿಶ್ಯ ಚರಿತ್ರೆ ಬರೆಯುವುದಲ್ಲವಾದರೂ ಸಂಘ ಪರಿವಾರದೊಂದಿಗೆ ಸಾಗಿಬಂದ ಕನ್ನಡ ಕುಟುಂಬಗಳ ಪಯಣವನ್ನು ದಾಖಲೆ ಮಾಡುವವರು ಯಾರು? ಅದನ್ನು ಪ್ರಕಟಿಸುವವರು ಯಾರು?

ಐದಾರು ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿ ಸಮ್ಮೇಳನ ನಡೆಸುವ ಅಕ್ಕ ಬಳಗ ಇಂಥದೊಂದು ಕೃತಿಯನ್ನು ಪ್ರಾಜೆಕ್ಟ್ ಮಾದರಿಯಲ್ಲಿ ಕೈಗೆತ್ತಿಕೊಳ್ಳದಿರುವುದು ಒಂದು ಲೋಪ. ಒಂದು ಸಂಘದ ಚರಿತ್ರೆಗೆ 6 ಪುಟದಂತೆ ಲೆಕ್ಕಹಾಕಿ 32 ಸಂಘಗಳ ಸಾಂಸ್ಥಿಕ ಚರಿತ್ರೆಯನ್ನು ದಾಖಲಿಸುವ ಯೋಜನೆಯನ್ನು ಅಕ್ಕ ಈಗಲಾದರೂ ಹಾಕಿಕೊಳ್ಳಬೇಕೆಂದು ದಟ್ಸ್ ಕನ್ನಡ ಸಲಹೆ ಮಾಡುತ್ತದೆ. 200 ಪುಟಗಳ ಅಂಥ ಕೃತಿಯನ್ನು ಬರೆಯುವುದಕ್ಕೆ ಅನುಭವ, ಭಾಷೆ, ಸಮತೋಲನ ಇರುವ ಒಬ್ಬ ಅಮೆರಿಕ ವಾಸಿ ಬರಹಗಾರನನ್ನು ನೇಮಿಸಬೇಕು. ಒಂದು ಪುಸ್ತಕಕ್ಕೆ 10 ಡಾಲರು ಮುಖಬೆಲೆ ಇಡಿ. ಹತ್ತು ಸಾವಿರ ಪ್ರತಿ ಮುದ್ರಿಸಿ ಮಾರಾಟಕ್ಕಿಡಿ. ಡೋನಟ್ಟುಗಳ ಥರ ಮಾರಾಟವಾಗಿ ಅಕ್ಕ ಬೊಕ್ಕಸಕ್ಕೆ ಕನಿಷ್ಠ 50,000 ಡಾಲರು ಆದಾಯ ಬರದಿದ್ದರೆ ಆಗ ನಮ್ಮನ್ನು ಕೇಳಿ.

ಈ ಹಣ ಇಟ್ಟುಕೊಂಡು ಏನು ಮಾಡಬೇಕು? ಬರಲಿರುವ ನ್ಯೂ ಜೆರ್ಸಿ ಅಕ್ಕ ಸಮ್ಮೇಳನ ಅಥವಾ ಅದರ ಮುಂದೆ 2012ರಲ್ಲಿ ಬರುವ ಸಮ್ಮೇಳನದ ಮೊದಲ ದಿನ, ಮೂರು ದಿನಗಳ ಕಾರ್ಯಕ್ರಮಗಳನ್ನು ದೀಪ ಬೆಳಗಿಸಿ ಉದ್ಘಾಟಿಸುವ ಪರಿಪಾಠವಿದೆಯಷ್ಟೆ. ಆ ಹೊತ್ತು ಅಲ್ಲಿ ವಾಡಿಕೆಯಂತೆ ಹಚ್ಚೇವು ಕನ್ನಡದ ದೀಪ ಗೀತೆಯ ಸಮೂಹಗಾನ ಇದ್ದೇ ಇರುತ್ತದೆ. ಪುಸ್ತಕ ಮಾರಿಬಂದ ಹಣದಿಂದ ವೇದಿಕೆಯ ಮೇಲೆ ಹೊಳೆಯುವ ನೀಲಾಜನಗಳಿಗೆ ತುಪ್ಪ ತುಂಬಿಸಿದರೆ ಹೇಗಿರತ್ತೆ? ರಾಜಕಾರಣಿಗಳು ನೀಡುವ ದೇಣಿಗೆಯಿಂದ ಹ್ಯಾಲೋಜಿನ್ ದೀಪಗಳು ಝಗಝಗಿಸುತ್ತವೆ. ಆದರೆ, ಕನ್ನಡದ ಮಮತೆಯನ್ನೂ, ಕನ್ನಡಿಗರನ್ನೂ ಭಾವನಾತ್ಮಕವಾಗಿ ಶಾಶ್ವತವಾಗಿ ಬೆಸೆಯುವ ಇಂಥ ಹಾಲು ಜೇನು ಪ್ರಯತ್ನಗಳನ್ನು ಇನ್ನಾದರೂ ಮಾಡದಿದ್ದರೆ ಬಂದಾದರೂ ಏನು ಪ್ರಯೋಜನ.

Monday, January 18, 2010

ಪಂಚಭೂತಗಳಲ್ಲಿ ನಟ ಕೆಎಸ್ ಅಶ್ವತ್ಥ್ ಲೀನ

ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ಕೆಎಸ್ ಅಶ್ವತ್ಥ್ ಅವರ ಅಂತ್ಯಕ್ರಿಯೆ ಸಕಲ ಸರಕಾರಿ ಗೌರವಗಳೊಂದಿಗೆ ಸೋಮವಾರ ಸಂಜೆ ನೆರವೇರಿತು. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಹರಿಶ್ಚಂದ್ರ ರುದ್ರಭೂಮಿಯಲ್ಲಿ ಅಶ್ವತ್ಥ್ ಅವರ ಪಾರ್ಥೀವ ಶರೀರಕ್ಕೆ ಅವರ ಮಗ ಶಂಕರ್ ಅಶ್ವತ್ಥ್ ಅಗ್ನಿ ಸ್ಪರ್ಶ ಮಾಡುವ ಮೂಲಕ ಅವರ ಭೌತಿಕ ಕಾಯ ಪಂಚಭೂತಗಳಲ್ಲಿ ಲೀನವಾಯಿತು.

ಮೇರುನಟ ಅಶ್ವಥ್ ಚಿತ್ರಸಂಪುಟ

ರಾಜ್ಯ ಸರಕಾರದ ಪ್ರತಿನಿಧಿಯಾಗಿ ಅಶ್ವತ್ಥ್ ಅವರ ಅಂತ್ಯಕ್ರಿಯೆಯಲ್ಲಿ ಕೈಗಾರಿಕಾ ಸಚಿವ ಮುರುಗೇಶ್ ಪಾಲ್ಗೊಂಡಿದ್ದರು. ಸ್ಥಳೀಯ ಶಾಸಕ ರಾಮದಾಸ್, ಮೈಸೂರು ಜಿಲ್ಲಾಧಿಕಾರಿ ಮಣಿವಣ್ಣನ್ ಸಹ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಭಾನು ಪ್ರಕಾಶ್ ಶರ್ಮ ಅವರು ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು.

ಗಣ್ಯರ ಅಂತಿಮ ನಮನ
ಸಂಸದ ಎಚ್ ವಿಶ್ವನಾಥ್, ಮೇಯರ್ ಪುರುಷೋತ್ತಮ್, ಮಾಜಿ ಸಚಿವ ಎಚ್ ಎಸ್ ಮಹದೇವ ಪ್ರಸಾದ್, ಎಂ ಶಿವಣ್ಣ ಮತ್ತು ಎಂ ಮಹದೇವ್, ಕೆಎಚ್ ಬಿ ಅಧ್ಯಕ್ಷ ಜಿ ಟಿ ದೇವೇಗೌಡ, ನಟರಾದ ಕೆಎಸ್ ರತ್ನಾಕರ್, ಶ್ರೀನಾಥ್, ಚೇತನ್ ರಾಮರಾಮ್, ರಾಜೇಶ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಉಮೇಶ್, ರಮೇಶ್ ಭಟ್, ಲೋಕನಾಥ್, ಶಿವರಾಮ್, ಶ್ರೀನಿವಾಸಮೂರ್ತಿ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ನಿರ್ಮಾಪಕ ಎಸ್ ನಾರಾಯಣ್, ಮಾಜಿ ಶಾಸಕ ಎಂ ಕೆ ಸೋಮಶೇಖರ್, ಕನ್ನಡಹೋರಾಟಗಾರ ತಾಯೂರು ವಿಠಲ ಮೂರ್ತಿ ಸೇರಿದಂತೆ ಹಲವಾರು ಗಣ್ಯರು ಅಶ್ವತ್ಥ್ ಅವರ ಅಂತಿಮ ದರ್ಶನ ಪಡೆದರು.

Saturday, January 2, 2010

ಕನಸುಗಳ ಸಾಕಾರಕ್ಕಾಗಿ ಹೊಸವರ್ಷದ ಸಂಕಲ್ಪ


ದಿನಾಲೂ ಬೆಳಿಗ್ಗೆ ವಾಯುವಿಹಾರ ಮಾಡಿರಿ, ದೇಹಕ್ಕೆ ಅವಶ್ಯಕ ಆಕ್ಸಿಜನ್ ದೊರೆಯುವುದು
ಒಂದಾದರೂ ಒಳ್ಳೆಯ ವಿಚಾರ ಪ್ರತಿದಿನ ಓದಿರಿ, ಚಿಂತಿಸಿರಿ, ಮನಕೆ ನೆಮ್ಮದಿ ಲಭಿಸುವುದು
ದೈನಂದಿನ ವ್ಯವಹಾರ ಆಯ-ವ್ಯಯ, ತಪ್ಪು-ಒಪ್ಪು, ದಿನಚರಿಯಲ್ಲಿ ಒಂದು ಪುಟ ಬರೆದಿಡಿ
ಜೀವ-ರಥದ ಲಗಾಮು ನಿಮ್ಮ ಕೈಗೆ ಸಿಗುವದು. ಕನಿಷ್ಠ ಒಬ್ಬರಿಗಾದರೂ ಸಹಾಯ ಮಾಡಿರಿ,
ಮನ ಪ್ರಫುಲ್ಲಿತವಾಗುವದು. ಒಳ್ಳೆಯ ಉಕ್ತಿ ಬರೆದು ಗೋಡೆಗೆ ತಾಗಿಸಿರಿ, ಅದರಿಂದ
ಸುವಿಚಾರ ನಿಮ್ಮ ಧಮನಿಯಲಿ ಹರಿಯುವುದು, ರಕ್ತದೊತ್ತಡ ಕಡಿಮೆಯಾಗುವುದು.

ನಾನು ಹಿಂದೆ ಯೋಗಪ್ರಚಾರ ಮಾಡುತ್ತ ಊರೂರು ಅಲೆದಾಡುತ್ತಿದ್ದೆ. ಮಲ್ಲಾಡಿಹಳ್ಳಿಯ ಯೋಗಾಚಾರ್ಯ ಶ್ರೀರಾಘವೇಂದ್ರ ಸ್ವಾಮಿಗಳಿಂದ ಪ್ರಭಾವಿತನಾಗಿದ್ದೆ. ಅವರು ತಾಯಂದಿರಿಗೆ ಹೇಳುತ್ತಿದ್ದರು. ನಿಮ್ಮ ಮಗು ಒಂದು ದಿನ ಸೂರ್ಯನಮಸ್ಕಾರ ಹಾಕುವುದನ್ನು ತಪ್ಪಿದರೆ, ಆ ದಿನ ಅವನಿಗೆ ಊಟ ಕೊಡಬೇಡಿ ಎಂದು. ನಾನು ಒಂದು ದಿನ ಊಟಕ್ಕೆ ಕೂಡಲು ಸಿದ್ಧನಾಗಿದ್ದೆ. ಆಗ ನೆನಪಾಯಿತು ನಾನು ಆ ದಿನ ಸೂರ್ಯ ನಾನು ನಮಸ್ಕಾರ ಹಾಕಿರಲಿಲ್ಲ ಎಂದು. ಬೇರೆ ಕೋಣೆಗೆ ಹೋಗಿ ಸೂರ್ಯ ನಮಸ್ಕಾರ ಹಾಕಿ ಬಂದೆ. ನನ್ನ ಮಡದಿಗೆ ನಗು ತಡೆಯಲಾಗಲಿಲ್ಲ. ನಾನು ಆಗ, ನಾವು ಇನ್ನೊಬ್ಬರಿಗೆ ಉಪದೇಶ ಮಾಡುತ್ತೇವೆ, ಆದರೆ ಅಚರಿಸುವುದಿಲ್ಲ. ಇದು ಸರಿಯಲ್ಲ ಎಂದಿದ್ದೆ. ನಮ್ಮ ಮಾತು ನಮ್ಮನ್ನು ತಿದ್ದಬೇಕು ಆಗ ಮಾತಿಗೆ ಮಂತ್ರದ ಶಕ್ತಿ ಬರುತ್ತದೆ ಎಂದು ಒಬ್ಬ ಮಹಾತ್ಮರು ಹೇಳಿದ್ದಾರೆ. ಪ್ರತಿ ದಿನ ಪಾರಾಯಣ ಮಾಡಬೇಕು. ಒಳ್ಳೆಯ ವಿಚಾರ ಓದಬೇಕು. ಈ ಕಾಲದಲ್ಲಿ ಟಿ.ವಿ. ಬಂದು ನಮ್ಮ ಜೀವನದ ಸ್ಥಿತಿಗತಿಯನ್ನೇ ಬದಲಿಸಿಬಿಟ್ಟಿದೆ. ದಿನಚರಿ ಬರೆಯುವ ಅಭ್ಯಾಸ ಮಕ್ಕಳಿಗೆ ಹೇಳಿಕೊಡಬೇಕು. ಅದರಿಂದ ಬಹಳ ಲಾಭವಿದೆ. ದಿನಚರಿ ಬರೆಯುವುದರಿಂದ ನಮ್ಮ ಕಾರ್ಯಕ್ರಮದ ಬಗ್ಗೆ ನಮಗೆ ಒಂದು ಬಗೆಯ ಹಿಡಿತ ದೊರೆಯುತ್ತದೆ. ಇತರರಿಗೆ ಸಹಾಯ ಮಾಡುವುದು ನಮ್ಮ ಜೀವನದ ಶೈಲಿಯಾಗಬೇಕು. ಅದರಿಂದ ಬಹಳ ಲಾಭಗಳಿವೆ. ಮನೆಯ ಗೋಡೆಯ ಮೇಲೆ ಒಳ್ಳೆಯ ಉಕ್ತಿಗಳನ್ನು ಬರೆದು ಹಚ್ಚುವ ವಾಡಿಕೆ ಹಿಂದಿನಕಾಲದಲ್ಲಿತ್ತು. ಈಗ ನಾನು ಅದನ್ನು ಕ್ವಚಿತ್ತಾಗಿ ಕಂಡಿದ್ದೇನೆ. ಸುವಿಚಾರ ಯಾವಾಗಲೂ ನಮ್ಮ ಧಮನಿಗಳಲ್ಲಿ ಹರಿಯುವುದು ಅವಶ್ಯಕವಾಗಿದೆ.

ಸಂಸ್ಕೃತ ಮಹಾಕವಿ ಭಾರವಿಯ ಬಗ್ಗೆ ಒಂದು ಕತೆ ಪ್ರಚಲಿತವಿದೆ. ಅವನು ಬಾಲಕನಾಗಿದ್ದಾಗ ಸುಂದರ ಕಾವ್ಯ ಶ್ಲೋಕಗಳನ್ನು ರಚಿಸುತ್ತಿದ್ದನಂತೆ. ಊರ ಜನರೆಲ್ಲ ಮೆಚ್ಚಿದರೂ ತಂದೆ ಮಾತ್ರ ಮೆಚ್ಚುತ್ತಿರಲಿಲ್ಲ. ಒಮ್ಮೆ ಮೆಚ್ಚದ ತಂದೆಯ ಮೇಲೆ ಕಲ್ಲೆಸೆಯಲು ಮನೆಯ ಮಾಳಿಗೆ ಏರಿದ್ದ. ಬೆಳಖಿಂಡಿಯಿಂದ ನೋಡಿದ. ತಾಯಿಗೆ ತಂದೆ ಹೇಳುತ್ತಿದ್ದ. `ನನ್ನ ಮಗ ಮಹಾಕವಿಯಾಗಬೇಕು, ಆಸ್ಥಾನಕವಿಯಾಗಬೇಕು. ಅದಕ್ಕೇ ನಾನು ಅವನ ಕಾವ್ಯ ಮೆಚ್ಚಿದರೂ ಅವನೆದುರು ನನ್ನ ಮೆಚ್ಚುಗೆ ತೋರುವುದಿಲ್ಲ. ಅವನ ಪ್ರಗತಿ ನಿಲ್ಲಬಾರದೆಂಬುದು ನನ್ನ ಆಸೆ' ಎಂದು. ಮಗನಿಗೆ ತನ್ನ ತಪ್ಪಿನ ಅರಿವಾಗಿ ತಂದೆಯ ಕಾಲು ಹಿಡಿಯುತ್ತಾನೆ. ತಂದೆಯನ್ನು ತಪ್ಪಾಗಿ ಭಾವಿಸಿ ಅವನನ್ನು ಶಿಕ್ಷಿಸಲು ಹೊರಟ ಮಗನಿಗೆ ಶಿಕ್ಷೆಯಾವುದು ಹೇಳಿರಿ? ಎಂದು ಕೇಳುತ್ತಾನೆ. ತಂದೆ ಹೇಳುತ್ತಾನೆ, ಅಂಥವನಿಗೆ ಹೆಂಡತಿಯ ಮನೆಗೆ ಇರಲು ಕಳಿಸಬೇಕು ಎಂದು. ಕೆಲಸವಿಲ್ಲದವ ಹೆಂಡತಿಯ ಮನೆಯಲ್ಲಿ ಕೆಲದಿನ ಇದ್ದು ಅವಮಾನ ಸಹಿಸಿ ಮನೆ ಬಿಟ್ಟು ಹೊರಬಿದ್ದಾಗ, ಒಂದು ಸರೋವರದ ದಂಡೆಯಲ್ಲಿ ಕಮಲ ಪತ್ರದ ಮೇಲೆ ಒಂದು ಶ್ಲೋಕ ಬರೆಯುತ್ತಾನೆ. ಅದನ್ನು ಅಲ್ಲಿಯ ರಾಜ ನೋಡಿ ಮೆಚ್ಚಿ ಒಯ್ಯುತ್ತಾನೆ. ನಂತರ ಅರಮನೆಗೆ ಬಂದು ಸಿಗಲು ಹೇಳುತ್ತಾನೆ.

ರಾಜನು ಆ ಶ್ಲೋಕವನ್ನು ಸುವರ್ಣಾಕ್ಷರಗಳಲ್ಲಿ ಕೆತ್ತಿಸಿ ತನ್ನ ಮಲಗುವ ಕೋಣೆಯಲ್ಲಿರಿಸಿರುತ್ತಾನೆ. ಕವಿಗೆ ರಾಜನನ್ನು ನೋಡುವ ಅವಕಾಶವೇ ದೊರೆಯುವುದಿಲ್ಲ. ಮುಂದೆ ಒಮ್ಮೆ ರಾಜ ಬೇಟೆಗಾಗಿ ಹೋದವ ಯಾವುದೋ ಕಾರಣದಿಂದಾಗಿ ಹಠಾತ್ತನೆ ಪ್ರಯಾಣ ನಿಲ್ಲಿಸಿ ಅರಮನೆಗೆ ಮರಳುತ್ತಾನೆ. ತನ್ನ ಶೈಯ್ಯಾಗೃಹದಲ್ಲಿ ರಾಣಿ ಒಬ್ಬ ಯುಕನೊಂದಿಗೆ ಮಲಗಿದ್ದು ನೋಡುತ್ತಾನೆ. ಕೂಡಲೆ ಖಡ್ಗವನ್ನು ತೆಗೆದು ಅವರಿಬ್ಬರನ್ನು ಕೊಲ್ಲಲು ಸಿದ್ಧನಾಗುತ್ತಾನೆ. ಆಗ ಕವಿಯ ಶ್ಲೋಕ ಕಾಣುತ್ತದೆ. ಅದನ್ನು ಓದುತ್ತಾನೆ. :

ಸಹಸಾವಿದಧೀತನಕ್ರಿಯಾಂ ಅವಿವೇಕಃಪರಮಾಪದಾಂಪದಂ | ವೃಣುತೇ ಹಿ ವಿಮೃಶ್ಯಕಾರಿಣಂ ಗುಣಲಿಬ್ಧಾಃ ಸ್ವಯಮೇವ ಸಂಪದಾಃ (ಒಮ್ಮೆಲೇ ಯಾವುದೇ ಕಲಸವನ್ನು ಮಾಡಬಾರದು. ಅವಿವೇಕವು ಪರಮ ಆಪತ್ತುಗಳನ್ನು ತವರ್ಮನೆಯಾಗಿದೆ. ವಿಚಾರವಿಮರ್ಶೆ ಮಾಡಿ ಕೆಲಸಮಾಡಬೇಕು. ಸಂಪತ್ತು (ಯಶ) ಗುಣಗಳನ್ನು ಹುಡುಕಿಕೊಂಡು ಬರುತ್ತದೆ.) ಅವರನ್ನು ಎಚ್ಚರಿಸಿ ವಿಚಾರಿಸುತ್ತಾನೆ. ನಿಜ ಸಂಗತಿ ತಿಳಿದು ದಂಗಾಗುತ್ತಾನೆ. ಹಿಂದೆ ರಾಜನ ಪುತ್ರನನ್ನು ದುಷ್ಕರ್ಮಿಗಳು ಅಪಹರಿಸಿರುತ್ತಾರೆ. ಹಲವಾರು ವರ್ಷಗಳ ಮೇಲೆ ರಾಜನ ಅನುಪಸ್ಥಿತಿಯಲ್ಲಿ ಆ ಹುಡುಗ ಸಿಕ್ಕಿರುತ್ತಾನೆ. ಅವನೀಗ ದೊಡ್ಡವನಾಗಿರುತ್ತಾನೆ. ತಾಯಿಯಾದ ರಾಣಿ ಅವನನ್ನು ಸತ್ಕರಿಸಿ ಎರೆದು ಮಲಗಿಸಿರುತ್ತಾಳೆ. ರಾಜನಿಗೆ ತಾನು ಮಾಡಬಹುದಾಗಿದ್ದ ತಪ್ಪಿನ ಅರಿವಾಗುತ್ತದೆ. ಆ ಶ್ಲೋಕ ಬರೆದ ಕವಿಯನ್ನು ಹುಡುಕಿಸಿ ರಾಜ ಮರ್ಯದೆಕೊಟ್ಟು ಆಸ್ಥಾನ ಕವಿ ಪಟ್ಟ ನೀಡುತ್ತಾನೆ ಎಂಬ ಕತೆ ಇದೆ. ಒಳ್ಳೆಯ ವಿಚಾರ ನಮ್ಮ ನೆನಪಿನಲ್ಲಿದ್ದರೂ ಅವು ನಮ್ಮನ್ನು ಕಾಪಾಡುತ್ತವೆ. ಹೊಸ ವರ್ಷದ ಶುಭಾಶಯಗಳು.

Friday, January 1, 2010

ಸಾಧನೆಗೆ ದೃಢ ಸಂಕಲ್ಪ, ಆತ್ಮಾವಲೋಕನ


ಹೊಸವರ್ಷಕ್ಕೆ ಸ್ವಾಗತ ಬಯಸುವಾಗ ಕಳೆದ ವರ್ಷದಲ್ಲಿಯ ಆಗುಹೋಗುಗಳ ಬಗ್ಗೆ ಒಂದು ಸಿಂಹಾವಲೋಕನ ಮಾಡುವ ಪದ್ಧತಿ ಇರುತ್ತದೆ. ವೈಯಕ್ತಿಕ ಜೀವನದಲ್ಲಿ ಪ್ರತಿಯೊಬ್ಬರೂ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಸಫಲವಾಗಲಿ ಎಂದು ಹಾರೈಸಿ ಒಂದು ಬಗೆಯ ಸಂಕಲ್ಪ ಮಾಡುತ್ತಾರೆ. ಇಂಗ್ಲೀಷಿನಲ್ಲಿ `ನ್ಯು ಇಯರ್ ರೆಸೊಲ್ಯುಶನ್' ಎನ್ನುತ್ತಾರೆ. ಹೊಸ ವರ್ಷಕ್ಕಾಗಿ ಏನು ಮಾಡಬೇಕು, ಏನು ಬಿಡಬೇಕು ಎಂಬ ನಿರ್ಧಾರ ಕೈಕೊಳ್ಳುತ್ತಾರೆ. ಹಾಗೆ ಪ್ರತಿಯೊಬ್ಬರೂ ಒಂದು ಬಗೆಯ ಅತ್ಮಾವಲೋಕನ ಮಾಡುವುದು ಉಚಿತ.

ಕಳೆದ ವರ್ಷ ಆಲಸ್ಯದಲ್ಲೇ ಕಳೆದುಹೋಯಿತು ಎಂದು ನನ್ನ ಮನಃಸಾಕ್ಷಿ ನುಡಿಯುತ್ತದೆ. ನನ್ನ ಮಿತ್ರರು ಹಿತೈಷಿಗಳ ನೆನಪಾಗುತ್ತದೆ. ಅವರಲ್ಲಿದ್ದ ಜಿಗುಟುತನ ನನ್ನಲ್ಲಿ ಇಲ್ಲವಲ್ಲ ಎಂದು ಬೇಸರ ಬರುತ್ತದೆ. ಮಿತ್ರ ಎಚ್.ಬಿ.ಎಲ್.ರಾಯರು ನೆನಪಾಗುತ್ತಾರೆ. ಅವರಷ್ಟು ಪಾದರಸದಂತೆ ಕ್ರಿಯಾಶೀಲರಾದ ವ್ಯಕ್ತಿಯನ್ನು ನಾನು ಕಂಡಿಲ್ಲ. ಮುಂಬೈಯಲ್ಲಿ ನಿರ್ಮಿತವಾದ ಭವ್ಯ ಕನ್ನಡ ಭವನಕ್ಕಾಗಿ ಅವರು ಪಟ್ಟ ಕಷ್ಟ, ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಅವರ ಉತ್ಸಾಹ ಅದಮ್ಯ. ಬೈಪಾಸ್ ಸರ್ಜರಿ ಆದ ಈ ವ್ಯಕ್ತಿ, ಎಪ್ಪತ್ತಾರು ಮೀರಿದ ಮೇಲೂ ಇಪ್ಪತ್ತಾರರ ಉತ್ಸಾಹ ತೋರಿ ಯುವಕರನ್ನು ನಾಚಿಸುವಂತಹ ಕೆಲಸಮಾಡುತ್ತಾರೆ. ಬಹುಶಃ ಗಿನ್ನಿಸ್ ರೆಕಾರ್ಡ್ ಸಾಧಿಸಬಹುದಾದ ವ್ಯಕ್ತಿ ಇವರು. ಅವರ ನೆನಪಾದಾಗ ನನ್ನ ಆಲಸ್ಯದ ಬಗ್ಗೆ ನನಗೇ ನಾಚಿಕೆಯಾಗುತ್ತದೆ. ಇನ್ನೊಬ್ಬ ಮಿತ್ರ ಡಾ| ಕೆ.ಎಸ್.ಶರ್ಮಾ ಅವರ ಸಾಹಸ ಪವಾಡ ಸದೃಶ. ವಕೀಲಿವೃತ್ತಿಯಲ್ಲಿ, ಕಾರ್ಮಿಕರ ಪರವಾಗಿ ನಡೆಸಿದ ಹೋರಾಟ ಮತ್ತು ಸಾಧನೆಯನ್ನು ಬದಿಗಿರಿಸಿ ಅವರು ಸಾಹಿತ್ಯಕ್ಕಾಗಿ ದುಡಿದದ್ದನ್ನು ಗಮನಿಸಿದರೂ ಆಶ್ಚರ್ಯವಾಗುತ್ತದೆ. ಸಮಗ್ರ ಬೇಂದ್ರೆ ಸಂಪುಟಗಳನ್ನು ತರುವಲ್ಲಿ ಅವರು ಮಾಡಿದ ಹರಸಾಹಸ ಕನ್ನಡದಲ್ಲಿ ಅಪೂರ್ವ. ನನಗೆ ಹೊಸವರ್ಷದ ಪ್ರಥಮ ದಿನ ನೆನಪಾದ ಇನ್ನೊಬ್ಬ ಅಸಾಧಾರಣ ವ್ಯಕ್ತಿ ರವಿ ಬೆಳಗೆರೆ. ದಿನಕ್ಕೆ 80 ಪುಟ ಬರೆಯುತ್ತಾರೆ ಈ ಆಸಾಮಿ. ಮೂರು ದಿನಗಳಲ್ಲಿ ಒಂದು ಪುಸ್ತಕ ಬರೆದುಬಿಡುವ ಛಲ ಹಾಗೂ ಬಲ ಇವರಲ್ಲಿದೆ. ಅವರಲ್ಲಿದ್ದ ದೈತ್ಯಶಕ್ತಿಯ ಬಗ್ಗೆ ನನಗೆ ಬಹಳ ಸಲ ಅಚ್ಚರಿಯಾಗುತ್ತದೆ. ಅಧ್ಯಾತ್ಮದಲ್ಲೂ ನನಗೆ ಬಹಳ ಆಸಕ್ತಿ ಇದೆ. ಆ ಕ್ಷೇತ್ರದಲ್ಲಿ ನನಗೆ ಆತ್ಮೀಯರಾದ ಡಾ| ಪ್ರಭಂಜನಾಚಾರ್ಯ ಹಾಗೂ ವಿದ್ಯಾವಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಬರವಣಿಗೆ ಹಾಗೂ ಭಾಷಣಗಳು ನನ್ನನ್ನು ಮೂಕವಿಸ್ಮಿತನನ್ನಾಗಿಸುತ್ತವೆ. ಈ ಶಕ್ತಿ ಅವರಿಗೆಲ್ಲಿಂದ ಬಂತು ಎಂದು ನಾನು ಬಹಳ ಸಲ ಅಚ್ಚರಿ ಪಟ್ಟಿದ್ದೇನೆ.

ಹೊಸವರ್ಷದ ಶುಭಾರಂಭದಲ್ಲಿ ನನ್ನ ಗುರುಗಳೆಲ್ಲ ನೆನಪಾಗುತ್ತಾರೆ. ಬೇಂದ್ರೆ, ಗೋಕಾಕ, ಮಧುರಚೆನ್ನರ ನೆನಪಾಗುತ್ತದೆ. ಕನ್ನಡ ಸಾಹಿತ್ಯದ ಈ ಮೂವರು ದಿಗ್ಗಜರು ನನಗೆ ಆತ್ಮೀಯರು ಎಂಬ ಹೆಮ್ಮೆ ನನಗಿದೆ. ಅವರ ಸಾಧನೆಯ ಪರ್ವತದ ಮುಂದೆ ನಮ್ಮ ಸಾಧನೆ ಒಂದು ಚಿಕ್ಕ ಮಳಲದಿನ್ನೆಯಂತಹದು. ಇನ್ನು ಜೀವನದಲ್ಲಿ ನನ್ನ ಸಂಪರ್ಕಕ್ಕೆ ಬಂದ ಮಹಾತ್ಮರ ನೆನಪಾಗುತ್ತದೆ. ಭಗವಾನ ನಿತ್ಯಾನಂದರನ್ನು ನಾನು 1960ರ ಸಾಲಿನಲ್ಲಿ ಪ್ರತಿವಾರ ಸಂದರ್ಶಿಸುತ್ತಿದ್ದೆ. ನಿತ್ಯಾನಂದ ದರ್ಶನ ಎಂಬ ಪತ್ರಿಕೆಯನ್ನು ಸಂಪಾದಕನಾಗಿ ಒಂದು ವರ್ಷ ನಡೆಸಿದೆ. ಈ ಸಿದ್ಧರ ಶಿಷ್ಯರಾದ ಸ್ವಾಮಿ ಶಿವಾನಂದರ ಸಂಪರ್ಕ ಬಂತು, ಆಶ್ಚರ್ಯವೆನಿಸಿತು. ಅವರು ನಿತ್ಯಾನಂದರನ್ನು ಪ್ರತ್ಯಕ್ಷ ಕಾಣದಿದ್ದರೂ ಸ್ವಪ್ನದಲ್ಲಿ ಕಂಡು ಮಾರ್ಗದರ್ಶನ ಪಡೆದಿದ್ದಾರೆ, ಅಗಾಧ ಸಾಧನೆ ಮಾಡಿದ್ದಾರೆ. ನಾವು ಅವರನ್ನು ಹತ್ತಿರದಿಂದ ಕಂಡು ಕೂಡ ಏನೂ ಸಾಧಿಸಲಿಲ್ಲ. ಗುರುದೇವ ರಾನಡೆಯವರ ನೆನಪಾಗುತ್ತದೆ. ಅವರ ಕೃಪಾಕಟಾಕ್ಷ ಪಡೆದವನು ನಾನು. ಮಹಾತ್ಮರ ಮಾನಸ ಸರೋವರಗಳಲ್ಲಿ ಮಿಂದೆ, ಆದರೆ ಪೂರ್ತಿ ಲಾಭ ಪಡೆಯುವ ಯೋಗ್ಯತೆ ನನ್ನಲ್ಲಿರಲಿಲ್ಲ. ಯೋಗ ವಿಷಯದಲ್ಲಿ ಯೋಗಾಚಾರ್ಯ ಬಿ.ಕೆ.ಎಸ್.ಅಯ್ಯಂಗಾರ್, ಹಟಯೋಗಿ ನಿಕಂ ಗುರೂಜಿ, ನಿಸರ್ಗೋಪಚಾರ ತಜ್ಞ ಡಾ| ಪದ್ಮನಾಭ ಬೋಳಾರ, ಇತ್ತೀಚೆಗೆ ನನ್ನ ಮೇಲೆ ಪ್ರಭಾವ ಬೀರುತ್ತಿರುವ ಬಾಬಾ ರಾಮದೇವ ಇವರಿಂದ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸ್ವಲ್ಪ ಕಲಿತಿದ್ದೇನೆ, ಆದರೆ ಕಲಿಯುವುದು ಇನ್ನೂ ಬಹಳ ಇದೆ ಎಂಬ ಎಚ್ಚರ ನನಗಿದೆ.

ಹೊಸ ವರುಷ ಬಂದಾಗ ಅನೇಕ ಅಪೂರ್ಣ ಕೆಲಸಗಳು ನೆನಪಾಗುತ್ತವೆ. ಈ ವರ್ಷ ಅವನ್ನೆಲ್ಲ ಪೂರೈಸಬೇಕೆಂಬ ಸಂಕಲ್ಪ ಮಾಡಬೇಕೆನಿಸುತ್ತದೆ. ಇದಕ್ಕಾಗಿ ಅವಿರತ ಪ್ರಯತ್ನ ಕಾರ್ಯಮಗ್ನತೆ ಅವಶ್ಯ. ನಾನೇ ಹಿಂದೆ ಬರೆದ ಒಂದು ವಚನ ನನಗೆ ನೆನಪಾಗುತ್ತದೆ: