Saturday, January 2, 2010

ಕನಸುಗಳ ಸಾಕಾರಕ್ಕಾಗಿ ಹೊಸವರ್ಷದ ಸಂಕಲ್ಪ


ದಿನಾಲೂ ಬೆಳಿಗ್ಗೆ ವಾಯುವಿಹಾರ ಮಾಡಿರಿ, ದೇಹಕ್ಕೆ ಅವಶ್ಯಕ ಆಕ್ಸಿಜನ್ ದೊರೆಯುವುದು
ಒಂದಾದರೂ ಒಳ್ಳೆಯ ವಿಚಾರ ಪ್ರತಿದಿನ ಓದಿರಿ, ಚಿಂತಿಸಿರಿ, ಮನಕೆ ನೆಮ್ಮದಿ ಲಭಿಸುವುದು
ದೈನಂದಿನ ವ್ಯವಹಾರ ಆಯ-ವ್ಯಯ, ತಪ್ಪು-ಒಪ್ಪು, ದಿನಚರಿಯಲ್ಲಿ ಒಂದು ಪುಟ ಬರೆದಿಡಿ
ಜೀವ-ರಥದ ಲಗಾಮು ನಿಮ್ಮ ಕೈಗೆ ಸಿಗುವದು. ಕನಿಷ್ಠ ಒಬ್ಬರಿಗಾದರೂ ಸಹಾಯ ಮಾಡಿರಿ,
ಮನ ಪ್ರಫುಲ್ಲಿತವಾಗುವದು. ಒಳ್ಳೆಯ ಉಕ್ತಿ ಬರೆದು ಗೋಡೆಗೆ ತಾಗಿಸಿರಿ, ಅದರಿಂದ
ಸುವಿಚಾರ ನಿಮ್ಮ ಧಮನಿಯಲಿ ಹರಿಯುವುದು, ರಕ್ತದೊತ್ತಡ ಕಡಿಮೆಯಾಗುವುದು.

ನಾನು ಹಿಂದೆ ಯೋಗಪ್ರಚಾರ ಮಾಡುತ್ತ ಊರೂರು ಅಲೆದಾಡುತ್ತಿದ್ದೆ. ಮಲ್ಲಾಡಿಹಳ್ಳಿಯ ಯೋಗಾಚಾರ್ಯ ಶ್ರೀರಾಘವೇಂದ್ರ ಸ್ವಾಮಿಗಳಿಂದ ಪ್ರಭಾವಿತನಾಗಿದ್ದೆ. ಅವರು ತಾಯಂದಿರಿಗೆ ಹೇಳುತ್ತಿದ್ದರು. ನಿಮ್ಮ ಮಗು ಒಂದು ದಿನ ಸೂರ್ಯನಮಸ್ಕಾರ ಹಾಕುವುದನ್ನು ತಪ್ಪಿದರೆ, ಆ ದಿನ ಅವನಿಗೆ ಊಟ ಕೊಡಬೇಡಿ ಎಂದು. ನಾನು ಒಂದು ದಿನ ಊಟಕ್ಕೆ ಕೂಡಲು ಸಿದ್ಧನಾಗಿದ್ದೆ. ಆಗ ನೆನಪಾಯಿತು ನಾನು ಆ ದಿನ ಸೂರ್ಯ ನಾನು ನಮಸ್ಕಾರ ಹಾಕಿರಲಿಲ್ಲ ಎಂದು. ಬೇರೆ ಕೋಣೆಗೆ ಹೋಗಿ ಸೂರ್ಯ ನಮಸ್ಕಾರ ಹಾಕಿ ಬಂದೆ. ನನ್ನ ಮಡದಿಗೆ ನಗು ತಡೆಯಲಾಗಲಿಲ್ಲ. ನಾನು ಆಗ, ನಾವು ಇನ್ನೊಬ್ಬರಿಗೆ ಉಪದೇಶ ಮಾಡುತ್ತೇವೆ, ಆದರೆ ಅಚರಿಸುವುದಿಲ್ಲ. ಇದು ಸರಿಯಲ್ಲ ಎಂದಿದ್ದೆ. ನಮ್ಮ ಮಾತು ನಮ್ಮನ್ನು ತಿದ್ದಬೇಕು ಆಗ ಮಾತಿಗೆ ಮಂತ್ರದ ಶಕ್ತಿ ಬರುತ್ತದೆ ಎಂದು ಒಬ್ಬ ಮಹಾತ್ಮರು ಹೇಳಿದ್ದಾರೆ. ಪ್ರತಿ ದಿನ ಪಾರಾಯಣ ಮಾಡಬೇಕು. ಒಳ್ಳೆಯ ವಿಚಾರ ಓದಬೇಕು. ಈ ಕಾಲದಲ್ಲಿ ಟಿ.ವಿ. ಬಂದು ನಮ್ಮ ಜೀವನದ ಸ್ಥಿತಿಗತಿಯನ್ನೇ ಬದಲಿಸಿಬಿಟ್ಟಿದೆ. ದಿನಚರಿ ಬರೆಯುವ ಅಭ್ಯಾಸ ಮಕ್ಕಳಿಗೆ ಹೇಳಿಕೊಡಬೇಕು. ಅದರಿಂದ ಬಹಳ ಲಾಭವಿದೆ. ದಿನಚರಿ ಬರೆಯುವುದರಿಂದ ನಮ್ಮ ಕಾರ್ಯಕ್ರಮದ ಬಗ್ಗೆ ನಮಗೆ ಒಂದು ಬಗೆಯ ಹಿಡಿತ ದೊರೆಯುತ್ತದೆ. ಇತರರಿಗೆ ಸಹಾಯ ಮಾಡುವುದು ನಮ್ಮ ಜೀವನದ ಶೈಲಿಯಾಗಬೇಕು. ಅದರಿಂದ ಬಹಳ ಲಾಭಗಳಿವೆ. ಮನೆಯ ಗೋಡೆಯ ಮೇಲೆ ಒಳ್ಳೆಯ ಉಕ್ತಿಗಳನ್ನು ಬರೆದು ಹಚ್ಚುವ ವಾಡಿಕೆ ಹಿಂದಿನಕಾಲದಲ್ಲಿತ್ತು. ಈಗ ನಾನು ಅದನ್ನು ಕ್ವಚಿತ್ತಾಗಿ ಕಂಡಿದ್ದೇನೆ. ಸುವಿಚಾರ ಯಾವಾಗಲೂ ನಮ್ಮ ಧಮನಿಗಳಲ್ಲಿ ಹರಿಯುವುದು ಅವಶ್ಯಕವಾಗಿದೆ.

ಸಂಸ್ಕೃತ ಮಹಾಕವಿ ಭಾರವಿಯ ಬಗ್ಗೆ ಒಂದು ಕತೆ ಪ್ರಚಲಿತವಿದೆ. ಅವನು ಬಾಲಕನಾಗಿದ್ದಾಗ ಸುಂದರ ಕಾವ್ಯ ಶ್ಲೋಕಗಳನ್ನು ರಚಿಸುತ್ತಿದ್ದನಂತೆ. ಊರ ಜನರೆಲ್ಲ ಮೆಚ್ಚಿದರೂ ತಂದೆ ಮಾತ್ರ ಮೆಚ್ಚುತ್ತಿರಲಿಲ್ಲ. ಒಮ್ಮೆ ಮೆಚ್ಚದ ತಂದೆಯ ಮೇಲೆ ಕಲ್ಲೆಸೆಯಲು ಮನೆಯ ಮಾಳಿಗೆ ಏರಿದ್ದ. ಬೆಳಖಿಂಡಿಯಿಂದ ನೋಡಿದ. ತಾಯಿಗೆ ತಂದೆ ಹೇಳುತ್ತಿದ್ದ. `ನನ್ನ ಮಗ ಮಹಾಕವಿಯಾಗಬೇಕು, ಆಸ್ಥಾನಕವಿಯಾಗಬೇಕು. ಅದಕ್ಕೇ ನಾನು ಅವನ ಕಾವ್ಯ ಮೆಚ್ಚಿದರೂ ಅವನೆದುರು ನನ್ನ ಮೆಚ್ಚುಗೆ ತೋರುವುದಿಲ್ಲ. ಅವನ ಪ್ರಗತಿ ನಿಲ್ಲಬಾರದೆಂಬುದು ನನ್ನ ಆಸೆ' ಎಂದು. ಮಗನಿಗೆ ತನ್ನ ತಪ್ಪಿನ ಅರಿವಾಗಿ ತಂದೆಯ ಕಾಲು ಹಿಡಿಯುತ್ತಾನೆ. ತಂದೆಯನ್ನು ತಪ್ಪಾಗಿ ಭಾವಿಸಿ ಅವನನ್ನು ಶಿಕ್ಷಿಸಲು ಹೊರಟ ಮಗನಿಗೆ ಶಿಕ್ಷೆಯಾವುದು ಹೇಳಿರಿ? ಎಂದು ಕೇಳುತ್ತಾನೆ. ತಂದೆ ಹೇಳುತ್ತಾನೆ, ಅಂಥವನಿಗೆ ಹೆಂಡತಿಯ ಮನೆಗೆ ಇರಲು ಕಳಿಸಬೇಕು ಎಂದು. ಕೆಲಸವಿಲ್ಲದವ ಹೆಂಡತಿಯ ಮನೆಯಲ್ಲಿ ಕೆಲದಿನ ಇದ್ದು ಅವಮಾನ ಸಹಿಸಿ ಮನೆ ಬಿಟ್ಟು ಹೊರಬಿದ್ದಾಗ, ಒಂದು ಸರೋವರದ ದಂಡೆಯಲ್ಲಿ ಕಮಲ ಪತ್ರದ ಮೇಲೆ ಒಂದು ಶ್ಲೋಕ ಬರೆಯುತ್ತಾನೆ. ಅದನ್ನು ಅಲ್ಲಿಯ ರಾಜ ನೋಡಿ ಮೆಚ್ಚಿ ಒಯ್ಯುತ್ತಾನೆ. ನಂತರ ಅರಮನೆಗೆ ಬಂದು ಸಿಗಲು ಹೇಳುತ್ತಾನೆ.

ರಾಜನು ಆ ಶ್ಲೋಕವನ್ನು ಸುವರ್ಣಾಕ್ಷರಗಳಲ್ಲಿ ಕೆತ್ತಿಸಿ ತನ್ನ ಮಲಗುವ ಕೋಣೆಯಲ್ಲಿರಿಸಿರುತ್ತಾನೆ. ಕವಿಗೆ ರಾಜನನ್ನು ನೋಡುವ ಅವಕಾಶವೇ ದೊರೆಯುವುದಿಲ್ಲ. ಮುಂದೆ ಒಮ್ಮೆ ರಾಜ ಬೇಟೆಗಾಗಿ ಹೋದವ ಯಾವುದೋ ಕಾರಣದಿಂದಾಗಿ ಹಠಾತ್ತನೆ ಪ್ರಯಾಣ ನಿಲ್ಲಿಸಿ ಅರಮನೆಗೆ ಮರಳುತ್ತಾನೆ. ತನ್ನ ಶೈಯ್ಯಾಗೃಹದಲ್ಲಿ ರಾಣಿ ಒಬ್ಬ ಯುಕನೊಂದಿಗೆ ಮಲಗಿದ್ದು ನೋಡುತ್ತಾನೆ. ಕೂಡಲೆ ಖಡ್ಗವನ್ನು ತೆಗೆದು ಅವರಿಬ್ಬರನ್ನು ಕೊಲ್ಲಲು ಸಿದ್ಧನಾಗುತ್ತಾನೆ. ಆಗ ಕವಿಯ ಶ್ಲೋಕ ಕಾಣುತ್ತದೆ. ಅದನ್ನು ಓದುತ್ತಾನೆ. :

ಸಹಸಾವಿದಧೀತನಕ್ರಿಯಾಂ ಅವಿವೇಕಃಪರಮಾಪದಾಂಪದಂ | ವೃಣುತೇ ಹಿ ವಿಮೃಶ್ಯಕಾರಿಣಂ ಗುಣಲಿಬ್ಧಾಃ ಸ್ವಯಮೇವ ಸಂಪದಾಃ (ಒಮ್ಮೆಲೇ ಯಾವುದೇ ಕಲಸವನ್ನು ಮಾಡಬಾರದು. ಅವಿವೇಕವು ಪರಮ ಆಪತ್ತುಗಳನ್ನು ತವರ್ಮನೆಯಾಗಿದೆ. ವಿಚಾರವಿಮರ್ಶೆ ಮಾಡಿ ಕೆಲಸಮಾಡಬೇಕು. ಸಂಪತ್ತು (ಯಶ) ಗುಣಗಳನ್ನು ಹುಡುಕಿಕೊಂಡು ಬರುತ್ತದೆ.) ಅವರನ್ನು ಎಚ್ಚರಿಸಿ ವಿಚಾರಿಸುತ್ತಾನೆ. ನಿಜ ಸಂಗತಿ ತಿಳಿದು ದಂಗಾಗುತ್ತಾನೆ. ಹಿಂದೆ ರಾಜನ ಪುತ್ರನನ್ನು ದುಷ್ಕರ್ಮಿಗಳು ಅಪಹರಿಸಿರುತ್ತಾರೆ. ಹಲವಾರು ವರ್ಷಗಳ ಮೇಲೆ ರಾಜನ ಅನುಪಸ್ಥಿತಿಯಲ್ಲಿ ಆ ಹುಡುಗ ಸಿಕ್ಕಿರುತ್ತಾನೆ. ಅವನೀಗ ದೊಡ್ಡವನಾಗಿರುತ್ತಾನೆ. ತಾಯಿಯಾದ ರಾಣಿ ಅವನನ್ನು ಸತ್ಕರಿಸಿ ಎರೆದು ಮಲಗಿಸಿರುತ್ತಾಳೆ. ರಾಜನಿಗೆ ತಾನು ಮಾಡಬಹುದಾಗಿದ್ದ ತಪ್ಪಿನ ಅರಿವಾಗುತ್ತದೆ. ಆ ಶ್ಲೋಕ ಬರೆದ ಕವಿಯನ್ನು ಹುಡುಕಿಸಿ ರಾಜ ಮರ್ಯದೆಕೊಟ್ಟು ಆಸ್ಥಾನ ಕವಿ ಪಟ್ಟ ನೀಡುತ್ತಾನೆ ಎಂಬ ಕತೆ ಇದೆ. ಒಳ್ಳೆಯ ವಿಚಾರ ನಮ್ಮ ನೆನಪಿನಲ್ಲಿದ್ದರೂ ಅವು ನಮ್ಮನ್ನು ಕಾಪಾಡುತ್ತವೆ. ಹೊಸ ವರ್ಷದ ಶುಭಾಶಯಗಳು.