Wednesday, December 8, 2010

ಸ್ಕಾಟ್ಲಂಡ್ ಕರ್ನಾಟಕ ಸಂಘದ ಕನ್ನಡ ಡಿಂಡಿಮ


ಸ್ಕಾಟ್ಲಂಡಿನಲ್ಲಿ ಕನ್ನಡ ಡಿಂಡಿಮ ಬಾರಿಸುತ್ತಿರುವ 'ಸ್ಕಾಟಿಶ್ ಕರ್ನಾಟಕ ಸಂಘ'ವು ಇದೇ ಶನಿವಾರ, ನವೆಂಬರ್ 27ರಂದು 'ದೀಪಾವಳಿ ಮತ್ತು ರಾಜ್ಯೋತ್ಸವ' ಕಾರ್ಯಕ್ರಮವನ್ನು ಸ್ಕಾಟ್ಲಂಡಿನ ಗ್ಲಾಸ್ಗೋದಲ್ಲಿ ಆಯೋಜಿಸಿದೆ.

2001ರಲ್ಲಿ ಆರಂಭಗೊಂಡ ಸಂಘ, ಸ್ಕಾಟ್ಲಂಡಿನಲ್ಲಿ ಕನ್ನಡದ ಕಂಪನ್ನು ಬೀರಲು ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. ವರ್ಷದಲ್ಲಿ ಎರಡು ಪ್ರಮುಖ (ಉಗಾದಿ ಮತ್ತು ದೀಪಾವಳಿ) ಕಾರ್ಯಕ್ರಮಗಳನ್ನು ಆಯೋಜಿಸಿ, ಕರ್ನಾಟಕದ ಜನತೆಯನ್ನು ಒಂದೆಡೆ ಸೇರಿಸುವ ಪ್ರಯತ್ನದಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದೆ. ಸ್ಕಾಟ್ಲಂಡಿನ ಸುತ್ತಮುತ್ತಲಿನ ಕರ್ನಾಟಕದ ಜನರು ಈ ಕಾರ್ಯಕ್ರಮವನ್ನು ಪ್ರೊತ್ಸಾಹಿಸಬೇಕೆಂದು ಸಂಘದ ಕಾರ್ಯಕರ್ತರು ದಟ್ಸ್ ಕನ್ನಡ ಮೂಲಕ ವಿನಂತಿಸಿಕ್ಕೊಳ್ಳುತ್ತಿದ್ದಾರೆ.

ಕಾರ್ಯಕ್ರಮದ ದಿನ ಮತ್ತು ಜಾಗ ನೆನಪಿರಲಿ

ಶನಿವಾರ : 27 ನವೆಂಬರ್, 2010
ಸಮಯ : ಮಧ್ಯಾಹ್ನ 3ರಿಂದ 9
ಜಾಗ : Westerton Hall, 84, Maxwell Avenue, Bearsden, GLASGOW – G61 1NZ.

ಕರ್ನಾಟಕದ ನಾಡು ನುಡಿಯ ಮೇಲಿನ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸ್ಕಾಟ್ಲಂಡಿನ ಕರ್ನಾಟಕ ಪ್ರೇಮಿಗಳು ತಮ್ಮ ಪ್ರತಿಭೆಯ ಮೂಲಕ ಪರಿಚಯಿಸಲಿದ್ದಾರೆ.

ಮುಖ್ಯ ಕಾರ್ಯಕ್ರಮದ ವಿವರ ಹೀಗಿದೆ

* ಲಕ್ಷ್ಮಿ ಪೂಜೆ
* ಸ್ಕಾಟಿಶ್ ಕರ್ನಾಟಕ ಸಂಘದ ವೆಬ್ ಸೈಟ್ ಪರಿಚಯ
* ಕನ್ನಡ ಭಾವಗೀತೆ ಮತ್ತು ನೃತ್ಯ
* ಕನ್ನಡ ಹಾಸ್ಯ ತುಣುಕುಗಳು
* ಮಕ್ಕಳ ವಿಶೇಷ ಕಾರ್ಯಕ್ರಮಗಳು ಹಾಗು ಚಿಣ್ಣರಿಗಾಗಿ ಆಟಗಳು
* ಕನ್ನಡ ರಸ ಪ್ರಶ್ನೆ ಮತ್ತು ಆಂತ್ಯಾಕ್ಷರ
* ಹಬ್ಬದ ಭೋಜನ

ಕಾರ್ಯಕ್ರಮಕ್ಕೆ 10 ಪೌಂಡು ಹಾಗು 5 ವರುಷ ಮೇಲಿನ ಮಕ್ಕಳಿಗೆ ಮತ್ತು ವಿದ್ಯಾರ್ಥಿ ಮಿತ್ರರಿಗೆ 5 ಪೌಂಡು ನಿಗದಿಪಡಿಸಲಾಗಿದೆ. ಕಾರ್ಯಕ್ರಮದ ಹೆಚ್ಚಿನ ವಿವರಗಳಿಗೆ ಸಂಘದ ಮಿತ್ರರನ್ನು ಸಂಪರ್ಕಿಸಿ.

ಡಾ.ಪ್ರಭಾಕರ ಭಟ್ಟ್ - prabhakarabhatt@hotmail.com
ಡಾ.ಜೈರಾಮ್ ಶಾಸ್ತ್ರಿ - jairamsastry@hotmail.com
ಶಶಿಧರ ರಾಮಚಂದ್ರ - shashidhara.r@gmail.com
ಪ್ರೇಮ್ ಕುಮಾರ್ - virtual_limits@yahoo.co.in
ಗಂಗಾಧರ ಆಲದಕಟ್ಟಿ - gangadhar@hotmail.co.uk
ಮಹೇಶ ಮಧ್ಯಸ್ಥ - mmadhyastha@gmail.com

ನಿಮಗೆ ಪರಿಚಯವಿರುವ ಸ್ನೇಹಿತರಿಗೆ ವಿಷಯ ಮುಟ್ಟಿಸಿ. ಆಭಿಮಾನಿಗಳೆಲ್ಲಾ ಬಂದು, ಸ್ಕಾಟ್ಲಂಡಿನ ಕರ್ನಾಟಕ ಜನರನ್ನು ಬೆಸೆಯುವ ಸಂಕಲ್ಪಕ್ಕೆ ಟೊಂಕ ಕಟ್ಟಿರುವ ಸಂಘದ ಕೈಗಳಿಗೆ ಕೈ ಜೋಡಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ.

ಅಮೆರಿಕಾದ ಕೊಲಂಬಸ್ ನಗರದಲ್ಲಿ ನವೆಂಬರ್ 6ರಂದು ಕೊಲಂಬಸ್ ಕನ್ನಡಿಗರ ಬಳಗ 55ನೇ ಕನ್ನಡ ರಾಜ್ಯೋತ್ಸವನ್ನು ಆಯೋಜಿಸಿತ್ತು. ಫಾಲ್ಸ್ ಸೀಸನ್ನಲ್ಲಿ ಮರಗಳು ತಮ್ಮ ಹಳದಿ ಕೆಂಪು ಬಣ್ಣದ ಎಲೆಗಳಿಂದ ಸಾರುತ್ತವೆ ಇದು ಕನ್ನಡ ರಾಜ್ಯೋತ್ಸವದ ಸಮಯವೆಂದು. ಅಂದು ಆ ರಸಸಂಜೆಯಂದು ಚಳಿಗಾಲದ ಸಮಯ, ಕನ್ನಡ ಹಬ್ಬದ ಸಡಗರ, ಬಂದಿದ್ದರು ಕನ್ನಡಿಗರು ಹಚ್ಚಲು ಕನ್ನಡ ದೀಪವನು, ಸೂಸಲು ಕನ್ನಡ ಕಂಪನ್ನು, ಅವರಲ್ಲೇನೋ ಹಬ್ಬವನ್ನು ಆಚರಿಸುವ ಉತ್ಸಾಹ, ಛಲ ಹಾಗು ಸಂತಸ.

ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ ಅಂದಹಾಗೆ, ಸಭಾಂಗಣದಲ್ಲಿ ಭಾರತ ಹಾಗು ಕರ್ನಾಟಕ ಬಾವುಟ ಒಂದರ ಕೆಳಗೊಂದು ರಾರಾಜಿಸುತ್ತಿದ್ದವು. ಕನ್ನಡ ನಾಡು ನುಡಿಗೆ, ಕೊಡುಗೆ ನೀಡಿದ ಕವಿಗಳ, ನಟರ, ಗಾಯಕರ ಭಾವ ಚಿತ್ರಗಳು ಹೃದಯಕ್ಕೆ ಕಂಬನಿ ಮಿಡಿದಂತಿದ್ದವು.

ಕಾರ್ಯಕ್ರಮ ಅಂದಮೇಲೆ ತಿಂಡಿ ತಿನಿಸು ಇರದೆ ಇರುತ್ಯೇ? ಸ್ಟಾರ್ಟರಾಗಿ ಗರಿ ಗರಿಯಾದ ಸಮೋಸ ಹಾಗು ಪಕೋಡ ಎಲ್ಲರ ಬಾಯಿನೀರೂರಿಸಿದ್ದವು. ಸ್ವಲ್ಪ ಎನರ್ಜಿ ಬಂದಮೇಲೆ ಕಾರ್ಯಕ್ರಮ ಶುರು ಆಯಿತು ನೋಡಿ.

ಹುಯಿಲಗೋಳ ನಾರಾಯಣ ರಾಯರ "ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು" ಎಂಬ ಗೀತೆಯನ್ನು ಗುನುಗುತ್ತ ಉದಯವಾಯಿತು ನಮ್ಮ ಕನ್ನಡ ರಾಜ್ಯೋತ್ಸವ. ವಿಘ್ನನಿವಾರಕ ವಿಘ್ನೇಶ್ವರನ ಸುಶ್ರಾವ್ಯ ಪ್ರಾರ್ಥನೆಯಿಂದ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿತು. ಪುಟಾಣಿ ಮಕ್ಕಳಿಂದ ಫಾಶನ್ ಶೋನಲ್ಲಿ ಬಸವಣ್ಣ, ಸರ್ವಜ್ಞ, ಕೃಷ್ಣ, ಭುವನೇಶ್ವರಿ, ಸೂಪರ್ ಮ್ಯಾನ್, ಹುಲಿ ಪಾತ್ರಗಳು ಜೀವ ಪಡೆದಿದ್ದವು. ಮಕ್ಕಳ ಮುಗ್ಧತೆ, ನಾಚಿಕೆ, ವೇಷ ಭೂಷಣಗಳು, ಆಟೋಟಗಳು, ತೊದಲು ನುಡಿಗಳು ನಮಗೆ ಮುದನೀಡುತಿದ್ದವು.

"ಜಯ ಭಾರತ ಜನನಿಯ ತನುಜಾತೆ..." ಸಾಮೂಹಿಕ ನಾಡ ಗೀತೆಗೆ ನೆರೆದ ಎಲ್ಲಾ ಕನ್ನಡಿಗರು ಗೌರವ ಸೂಚ್ಯಕವಾಗಿ ಎದ್ದು ನಿಂತು ದನಿಗೂಡಿಸಿದ್ದು ಅಭಿನಂದನೀಯ. ಪುಟಾಣಿ ತನ್ವಿಯ ಹನಿ ಹನಿ ಇಬ್ಬನಿ ಹಾಡಿಗೆ ಪುಟ್ಟ ಪುಟ್ಟ ಹೆಜ್ಜೆ ಹಾಕಿ ಇಬ್ಬನಿಯೇ ಕರಗಿಂತಾಯಿತು, ಚಿಲಿಪಿಲಿ ಹಕ್ಕಿ ಹಾಡಿದಂತಾಯಿತು. ಕೃಷ್ಣವೇಣಿಯಾದ ಪುಣ್ಯಗೌರಿಯ ಬೆಣ್ಣೆ ಕದ್ದ ಕಳ್ಳ ಕೃಷ್ಣನ ಲೀಲೆಗಳ ನೃತ್ಯ ನಯನ ಮನೋಹರವಾಗಿತ್ತು.

ಕನ್ನಡ ನಾಡು, ಕವಿಗಳ ಬೀಡು ಬಣ್ಣಿಸುವ ಕಾವ್ಯಲಹರಿಯಿದ್ದರೆ ರಾಜ್ಯೋತ್ಸವಕ್ಕೊಂದು ಕಳೆ. ಸ್ನೇಹಿತ ಹೇಗಿರಬೇಕೆನ್ನುವ ಶ್ರೀಹರಿಯ ಕಾವ್ಯ ಚಿಕ್ಕದಾಗಿ ಚೊಕ್ಕದಾಗಿತ್ತು. ಕಾರ್ಗಿಲ್ ಗಣೇಶ ಕಾವ್ಯದ ಕಲ್ಪನೆ, ಯುದ್ದದ ಚಿತ್ರಣ, ವಾಸ್ತವ ಪ್ರಪಂಚದ ನೈಜತೆ ಅಮೋಘವಾಗಿತ್ತು. ಕನ್ನಡತಿ ಲಕ್ಷ್ಮೀರವರ "ಈ ಕನ್ನಡ ನಾಡನು ಮರಿಬೇಡ ಓ ಅಭಿಮಾನಿ ಈ ಕನ್ನಡ ಹೆಣ್ಣನು ಜರಿಬೇಡ ಓ ಅಭಿಮಾನಿ" ನೃತ್ಯ ಕನ್ನಡಿಗರ ಮನದಲ್ಲಿ ಕೆಚ್ಚೆದೆಯನ್ನು ಹೆಚ್ಚಿಸಿತು. ಲಂಗ ತೊಟ್ಟ ಲಲನಾಮಣಿಯರು ಕಾರ್ಮೋಡ ನೋಡಿ ಜಿಗಿದ ನವಿಲಿನ ಹಾಗೆ ವೈಯಾರದಿಂದ ತಮ್ಮ ಸೊಂಟವನ್ನು ಬಳಕುಸುತ್ತಾ ಪ್ರೇಕ್ಷಕರನ್ನು ರಂಜಿಸಿದರು.

ಆದರ್ಶ್ ತಂಡದ "ಜುಮ್ ಜುಮ್ ಸ್ಪ್ರೇ" ನಾಟಕ ಪ್ರೇಕ್ಷಕರನ್ನು ನಕ್ಕುನಲಿಸಿತು. ನಾಟಕದ ಪರಿಕಲ್ಪನೆ, ಸಂಭಾಷಣೆ, ಅಭಿನಯ, ಸಿನಿಮಾ ಹಾಡುಗಳ ಜೋಡಣೆ ಅಮೋಘವಾಗಿತ್ತು. ತ್ರೀ ರೋಸಸ್ ಟೀ, ಡಾ|| ರಾಜಕುಮಾರ್ ಅಪಹರಣ, ದ್ರೌಪು ಸನ್ನಿವೇಶಗಳು ಮರೆಯಲಾಗದು. ಸಂತೋಷ್ ದಂಪತಿಗಳ "ಗಂಡ ಹೆಂಡತಿ" ಚಿತ್ರದ "ಮಾತು ಮುರಿದೆ ಮಾತಾಡದೆ..." ಹಾಡಿನ ನೃತ್ಯ ಹಾಗು ಅದರ ಸಂಯೋಜನೆ ನಯನ ಮನೋಹರವಾಗಿತ್ತು. ಮನ್ಮಥ, ರತಿ ಧರೆಗಿಳಿದು ಗಂಡ ಹೆಂಡಿರ ಹಾಗೆ ನೃತ್ಯ ಮಾಡಿದಂತಿತ್ತು.

ಪ್ರಭು ತಂಡದವರ ಟ್ರಾನ್ಸ್ ಫಾರ್ಮರು(ಪರಿವರ್ತನೆ) ನಾಟಕ ಹೇಗೆ ಒಬ್ಬ ಉತ್ತರ ಕರ್ನಾಟಕದ ಹಳ್ಳಿ ಹೈದ ಹಳ್ಳಿಯಿಂದ ಬೆಂಗಳೂರಿನಂತಹ ಮಹಾನಗರಕ್ಕೆ ಬಂದಾಗ, ಹಾಗು ಮತ್ತೆ ಅವನು ಹಳ್ಳಿಗೆ ಹೋದಾಗ ಅವನಲ್ಲಿ ಹಾಗು ಸಮಾಜದಲ್ಲಾಗುವ ಪರಿವರ್ತನೆಗಳ ಹಾಸ್ಯ ರೂಪಕ ತುಂಬಾ ಚೆನ್ನಾಗಿತ್ತು. ಉತ್ತರ ಕರ್ನಾಟಕದ ಸೊಗಡಿನ ಸಂಭಾಷಣೆ ಅಮೋಘವಾಗಿತ್ತು. ಉಮೇಶ್ ತಂಡದವರ ಶರಣರ, ಜಂಗಮರ ಪದಗಳು, ಅದಕ್ಕೆ ತಕ್ಕಂತೆ ತಾಳಗಳು, ಕೊರಸ್ ಎಲ್ಲರನ್ನೂ ಮೋಡಿ ಮಾಡಿದವು.

ಕಳೆದ ವರ್ಷ ಅಗಲಿದ ನಾಯಕ ನಟ ಸಾಹಸಸಿಂಹ ಡಾ|| ವಿಷ್ಣುವರ್ಧನ್ ಆವರ ಸವಿ ನೆನಪಿಗಾಗಿ ಸಂತೋಷ್ ರವರು ವಿಷ್ಣುರವರ ಹಾಡಿಗೆ ಅವರಂತೆ ನರ್ತಿಸಿ ರಂಜಿಸಿದರು. ಆಣ್ಣಾವ್ರ ಪದ ಹೆಳ್ದೇ ಕನ್ನಡ ರಾಜ್ಯೋತ್ಸವ ಅಪೂರ್ಣ. ಬಬ್ರುವಾಹನ ಚಿತ್ರದ ಬಬ್ರುವಾಹನ-ಅರ್ಜುನನ ಸಂವಾದ ಅರವಿಂದ್ ಅವರ ಏಕಪಾತ್ರಾಭಿನಯದ ಮೂಲಕ ಜೀವ ತಳೆದಿತ್ತು. ಉಮೇಶ್ ರವರ ಮಿಮಿಕ್ರಿ ಊಟಕ್ಕೆ ಉಪ್ಪಿನಕಾಯಿಯಂತಿತ್ತು.

ಇಷ್ಟೆಲ್ಲ ಆದಮೇಲೆ ಊಟಕ್ಕೆ ಬುಲಾವ್ ಬುಲಾವ್ ಅನ್ನುವಷ್ಟರಲ್ಲೇ ಮಾಯವಾಯಿತು ಪಲಾವ್. ಪೂರಿ, ಸಾಗು, ಅನ್ನ ಸಾರು, ಜಿಲೇಬಿ-ಬಾದುಶಾಗಳು ಬಂದವರ ಹಸಿವನ್ನು ತಣಿಸಿದ್ದವು. ಅಮೇರಿಕಾದ ಬೇರೆ ನಗರದಿಂದ ಬಂದವಕು ಕಾರ್ಯಕ್ರಮದ ಬಗ್ಗೆ ಅತ್ಯಂತ ಮೆಚ್ಚುಗೆ ವ್ಯಕ್ತಪಡಿಸಿದರು. ಮತ್ತೆ ಭೇಟಿಯಾಗೋಣ.

ಗುರ್‌ಗಾಂವ್‌ನಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ

ಗುರ್‌ಗಾಂವ್ ಕನ್ನಡ ಸಂಘ ಮತ್ತು ಕರ್ನಾಟಕ ಸರ್ಕಾರ ವಾರ್ತಾಇಲಾಖೆ ಇವರ ಸಹಯೋಗದಲ್ಲಿ ದಿನಾಂಕ 21-11-2010 ರ ಭಾನುವಾರದಂದು, ಇಲ್ಲಿನ ಸೆಕ್ಟರ್-4 ರ ಬಾಲಭವನದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಬಿ.ಆರ್.ಛಾಯಾರವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಪದ್ಮಪಾಣಿ ನಿರ್ಮಾಪಕರು, ರಾಜೇಂದ್ರಕುಮಾರ್ ಕಟಾರಿಯಾ ಜಿಲ್ಲಾಧಿಕಾರಿಗಳು ಗುರ್‌ಗಾಂವ್, ವಸಂತಶೆಟ್ಟಿ ಬೆಳ್ಳಾರೆ ಉಪಾಧ್ಯಕ್ಷರು ದೆಹಲಿ ಕನ್ನಡ ಸಂಘ, ಮತ್ತು ಗಿರೀಶ್ ಉಪನಿರ್ದೇಶಕರು ವಾರ್ತಾಇಲಾಖೆ ನವದೆಹಲಿ, ಇವರು ಸಹಾ ಆಹ್ವಾನಿತ ಅತಿಥಿಗಳಾಗಿ ಆಗಮಿಸಿದ್ದರು.

ಆನಂದ ಶರ್ಮಾರವರ "ಸರಿಗಮಪ ಕ್ರಿಯೇಷನ್ಸ್" ನ ಸರಿಗಮಪ ಲಿಟ್ಲ್ ಚಾಂಪಿಯನ್ಸ್ ಚಿ.ಅಶ್ವಿನ್ ಶರ್ಮಾ, ಕು. ಅರುಂಧತಿ ಮತ್ತು ಕು. ಹಂಸಿನಿ ಹಾಗೂ ಇವರ ಸಂಪೂರ್ಣ ವಾಧ್ಯವೃಂದ ಆಗಮಿಸಿದ್ದರು. ನಾಡಗೀತೆಯೋದಿಗೆ ಪ್ರಾರಂಭವಾದ ರಾಜ್ಯೋತ್ಸವ ಕಾರ್ಯಕ್ರಮ ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರನ್ನು ಕಂಡು ಶ್ರೀಮತಿ ಬಿ.ಆರ್.ಛಾಯಾ ತಮ್ಮ ಭಾಷಣದಲ್ಲಿ, ಹೊರರಾಜ್ಯದಲ್ಲಿ ನಿಮ್ಮ ಕನ್ನಡ ಅಭಿಮಾನಕ್ಕೆ ನನ್ನಿಂದ ಮಾತು ಹೊರ ಹೊಮ್ಮುತ್ತಿಲ್ಲ ಎಂದು ತಿಳಿಸಿದರು.

ಪದ್ಮಪಾಣಿರವರು ಹರ್ಷಚಿತ್ತರಾಗಿ "ಕಲಾವಿದರನ್ನು ಗೌರವಿಸುವ, ಆದರಿಸುವ ಜನ ನಿಜಕ್ಕೂ ಕನ್ನಡ ತಾಯಿಯ ಚಿನ್ನದ ಮಕ್ಕಳು ಎಂದು ಹೇಳಿದರು. ರಾಜೇಂದ್ರಕುಮಾರ್ ಕಟಾರಿಯಾರವರು ತಮ್ಮ ವೃತ್ತಿಯನ್ನು ಕರ್ನಾಟಕದಲ್ಲಿ ಪ್ರಾರಂಭಿಸಿದ್ದರು. ಆಗ ನಡೆದ ಘಟನೆಗಳನ್ನು ಮೆಲುಕು ಹಾಕಿದರು.

ಅಧ್ಯಕ್ಷೀಯ ಭಾಷಣದಲ್ಲಿ ಸಾಯಿಪ್ರಸಾದ್‌ರವರು ಸರ್ವರಿಗೂ ಅಭಿನಂದನೆ ವ್ಯಕ್ತಪಡಿಸಿದರು. ಆನಂತರ ನಮ್ಮನ್ನಗಲಿದ ಶ್ರೀಮತಿ ಜಯಶ್ರೀ, ಶ್ರೀನಿವಾಸ್ ಮತ್ತು ಲಕ್ಷ್ಮಿ ದಂಪತಿಗಳಿಗೆ ಶ್ರದ್ಧಾಂಜಲಿ ವ್ಯಕ್ತಪಡಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕು.ನವನೀಶಾ, ಕು.ಅಬೀಙ್ಞ ಮತ್ತು ಕು.ಹಂಸಿನಿ ನೃತ್ಯ ರೂಪಕ ಪ್ರದರ್ಶಿಸಿದರು. ಶ್ರೀಮತಿ ಬಿ.ಆರ್.ಛಾಯಾರವರ ಗಾಯನದಿಂದ ಕನ್ನಡಿಗರು ಪುಳಕಿತರಾದರು, ಪುಟಾಣಿ ಮಕ್ಕಳಾದ ಚಿ.ಅಶ್ವಿನ್, ಕು.ಅರುಂಧತಿ ಮತ್ತು ಕು.ಹಂಸಿನಿ ಭಾವಗೀತೆ, ಜನಪದಗೀತೆ, ದೇಶಭಕ್ತಿಗೀತೆ ಮತ್ತು ಚಲನಚಿತ್ರಗೀತೆಗಳನ್ನು ತನ್ಮಯವಾಗಿ ಹಾಡಿದರು.

ವಸಂತಶೆಟ್ಟಿ ಬೆಳ್ಳಾರೆಯವರು ದಿವಂಗತ ಜಯಶ್ರೀ ಅವರೊಂದಿಗಿನ ಒಡನಾಟವನ್ನು ಹಂಚಿಕೊಂಡರು. ಶ್ರೀ ಗಿರೀಶರವರು ಮಾತಾಡಿ ಭವಿಷ್ಯದಲ್ಲಿ ಇನ್ನೂ ಅನೇಕ ಕಾರ್ಯಕ್ರಮಗಳನ್ನು ರೂಪಿಸುವ ಬಗ್ಗೆ ಭರವಸೆ ವ್ಯಕ್ತಪಡಿಸಿದರು.

ಮಧ್ಯದಲ್ಲಿ ಪದ್ಮಪಾಣಿರವರು ಮಾತುಗಳ ಮುಖಾಂತರ ಪ್ರೇಕ್ಷಕರನ್ನು ನಗೆಯ ಹಬ್ಬದೂಟ ಉಣ ಬಡಿಸುತ್ತಿದ್ದರು. ಒಂದು ಅದ್ಭುತ ಮತ್ತು ಅಚ್ಚುಕಟ್ಟಾದ ರಾಜ್ಯೋತ್ಸವ ಆಚರಣೆ ಎಂದು ಆಗಮಿಸಿದ ಗಣ್ಯರೆಲ್ಲರು ಬಣ್ಣಿಸಿದರು. ಕರ್ನಾಟಕ ಶೈಲಿಯ ಭೋಜನದ ವ್ಯವಸ್ತೆ ಮಾಡಲಾಗಿತ್ತು. ಈ ಬಾರಿ ನಡೆದ ಕರ್ನಾಟಕ ರಾಜ್ಯೋತ್ಸವ ನಿಜಕ್ಕೂ ಅರ್ಥಗರ್ಭಿತವಾಗಿತ್ತು.

Sunday, June 27, 2010

"ಭಾಷಾ ಬೆಳವಣಿಗೆಗೆ ದೂರದರ್ಶನ ಕನ್ನಡ ವಾರ್ತೆಯ ಕೊಡುಗೆ"

ಈ ಪ್ರಬಂಧ ಓದುವ ಆರಂಭದಲ್ಲಿ ನಮ್ಮೆಲ್ಲರ ಪ್ರೀತಿಯ ಪ್ರತಿಭಾವಂತ ಹೊಸತನ ತುಡಿತ ಹೊಂದಿದ್ದ ಅಕಾಲದಲ್ಲಿ ಅಗಲಿದ ಕಿರಿಯ ಸಹೋದ್ಯೋಗಿ ಕೆ.ಆರ್. ಪ್ರಹ್ಲಾದ್ ನನ್ನು ನೆನಪು ಮಾಡಿಕೊಂಡು ಮುಂದುವರಿಯುವೆ. ಹೊಸ ಪದಗಳನ್ನು ಟಂಕಿಸುವುದರಲ್ಲಿ ಅವನಿಗೆ ಅಪಾರ ಆಸಕ್ತಿ. ಧಾರವಾಡ ಆಕಾಶವಾಣಿ ಸುದ್ದಿ ವಿಭಾಗ ಆರಂಭವಾದಾಗಲೇ ಇನ್ಸಾಟ್ ಉಪಗ್ರಹ ಉಡಾವಣೆಯ ಗೌಜು. ಆಗ ಮತ್ತೊಬ್ಬ ಮಿತ್ರ ನಾಗೇಶ್ ಶಾನ್ ಬಾಗ್ ಜೊತೆಗೂಡಿ ಹೊಸ ಹೊಸ ಪದಗಳನ್ನು ಜೋಡಿಸುವ ಕೃಷಿ.

ಕನ್ನಡಗದ್ಯಕ್ಕೆ ಸಿದ್ದವನಹಳ್ಳಿ ಕೃಷ್ಣಶರ್ಮ, ತಿರುಮಲೆ ತಾತಾಚಾರ್ಯ ಶರ್ಮ, ಕಡೆಂಗೋಡ್ಲು ಶಂಕರಭಟ್ಟ, ಡಿ.ವಿ.ಜಿ., ಆಮೇಲಿನ ತಲೆಮಾರಿನಲ್ಲಿ ಖಾದ್ರಿ ಶಾಮಣ್ಣ, ಬಾಸು ಕೃಷ್ಣಮೂರ್ತಿ, ಎನ್.ಎಸ್. ರಾಮಪ್ರಸಾದ್ ಅವರ ಪ್ರಯೋಗ ಶೀಲ ಕೊಡುಗೆ ನಮಗೆ ದಾರಿದೀಪ. ಡಿವಿ.ಜಿ.ಯವರ ವ್ಯಾಕರಣ ಸ್ವಲ್ಪ ಅಳ್ಳಕ ಇರಲಿ ಏಕೆಂದರೆ ಕನ್ನಡ ಬೆಳೆಯುತ್ತಿರುವ ಭಾಷೆ, ಆದರೆ ಗತಿ ಗೆಡದಿರಲಿ ಎಂಬ ಕಿವಿಮಾತು ಹಾಗೂ ಕಡೆಂಗೋಡ್ಲು ಅವರ ಇಂತಿದ್ದರೆ ಅರಿಸಮಾಸವಾದರೂ ಸೈ ಎಂಬ ಸ್ಫೂರ್ತಿ, ಸಿದ್ಧವನಹಳ್ಳಿಯವರ ಪುಟ್ಟಪುಟ್ಟ ವ್ಯಾಕರಣವನ್ನು ಒಡಲಲ್ಲೇ ಹುದುಗಿಸಿಕೊಂಡ ಭಾಷೆ, ತಿ.ತಾ.ಶರ್ಮರ ವೀರೋಚಿತ ಸೊಗಡಿನ ಕನ್ನಡ ವಿದ್ಯುನ್ಮಾನ ಮಾಧ್ಯಮಕ್ಕೆ ವಲಸೆ ಬಂದ ನಮ್ಮ ಪೀಳಿಗೆಯ ಹಲವರಿಗೆ ಬೆನ್ನೆಲುಬು, ಶ್ರೀರಕ್ಷೆ.

ಮೊದಲು ಆಕಾಶವಾಣಿ ಸುದ್ದಿ ಸಂಕಲನದಲ್ಲಿ ಪ್ರಯೋಗ, ಜನರನ್ನು ತಲುಪುವ ಹಂಬಲ, ಚಡಪಡಿಕೆ, ಸಂವಹನ ಸಾಧ್ಯವಾಯಿತೇ ಎಂಬ ತೊಳಲಾಟ. ಆಡುಮಾತು ಮತ್ತು ಮುದ್ರಣ ಮಾಧ್ಯಮದ ಗ್ರಂಥಸ್ಥ ಭಾಷೆಯಲ್ಲಿ ಸರಳಶೈಲಿಯನ್ನು ಹುಡುಕಿ, ಶ್ರೋತೃಗಳಿಗೆ ಅವೆರಡರ ಸುಮಧುರ ಚೊಕ್ಕ ಸಭ್ಯ ನುಡಿಗೆ ತುಸು ಸಮೀಪವಾದ ಸುದ್ದಿ ಭಾಷೆ ಸಾದರಪಡಿಸುವ ಕುಶಲಕಲೆ ದೂರದರ್ಶನ ಸುದ್ದಿಗೆ ಭೂಮಿಕೆ.

ಇನ್ನು ದೂರದರ್ಶನ ವಾರ್ತೆಯಲ್ಲಿ ದೃಶ್ಯಾವಳಿಗಳದೇ ಮೇಜುವಾನಿ. ಅವನ್ನು ಅರ್ಥೈಸುವ ಕುಸುರಿ ಕೆಲಸ ಕನ್ನಡ ಗದ್ಯ ರಚನೆಯಲ್ಲಿ ಅಂಕುರಾರ್ಪಣ ಮಾಡಿದವರು ಹಿರಿಯರಾದ ನಾಗರಾಜರಾಯರು. ವಿ.ಎಚ್. ದೇಸಾಯಿ, ಬಸವರಾಜು, ಎಂ.ಕೆ. ಸುಬ್ಬರಾವ್, ಶೇಷಚಂದ್ರಿಕಾ, ನೆರವಿಗೆ ನಿಂತವರು ಬಿ.ಎನ್. ಗುರುಮೂರ್ತಿ, ಮೈ.ಸಿ.ಪಾಟೀಲ್, ನಂತರದವರು ನಾನು (ಈ ಲೇಖಕ), ಸುಂದರೇಶ್ವರ, ವಿ.ಎಸ್. ಸೂರ್ಯನಾರಾಯಣ, ಜಿ.ಕೆ. ಶ್ರೀನಿವಾಸ್, ರಜನೀಕಾಂತ್, ಡಿ.ವಿ.ಹೆಗಡೆ, ಟಿ.ಸಿ.ಪೂರ್ಣಿಮಾ, ಎಸ್.ಜಿ.ರವೀಂದ್ರ, ಪಲ್ಲವಿಚಿಣ್ಯ, ಬಿ.ಎನ್. ಸತ್ಯನಾರಾಯಣ, ಎನ್.ಡಿ.ಪ್ರಸಾದ್.

ಇಲ್ಲಿ ಪ್ರತಿಯೊಬ್ಬರದೂ ಸೃಜನಶೀಲ ಕೊಡುಗೆ. ಹೊಸಪ್ರಯೋಗಗಳಿಗೆ ಹಿರಿಯರ ಪ್ರೋತ್ಸಾಹ with a pinch of salt!

ಆದರೆ, ಹೊಸ ಪ್ರಯೋಗ, ಹೊಸ ಮಾಧ್ಯಮದ ತಗಾದೆಯಾಗಿತ್ತು. ಎರಡು ವಾಕ್ಯ ಬರೆದುಬಿಡಿ, ಅದಕ್ಕೆ ದೃಶ್ಯ ಜೋಡಣೆ ಚೊಕ್ಕಗೊಳಿಸುವೆ ಎಂಬ ಸುದ್ದಿ ನಿರ್ಮಾತೃವಿನ ಸವಿನಯ ಆದೇಶ ಸುದ್ದಿ ಸಂಪಾದಕನಿಗೆ. ಇದು ಒಮ್ಮೊಮ್ಮೆ ವಾಗ್ಯುದ್ಧಗಳಿಗೆ ಎಡೆ ಮಾಡಿದ್ದರೆ ಅದು ಸುದ್ದಿಮನೆ ಸ್ವಾರಸ್ಯ. ವ್ಯಕ್ತಿಗತ ನಂಜಿಲ್ಲ. ಅವ್ಯಕ್ತ ಸ್ವಪ್ರತಿಷ್ಠೆಯ ಸೊಂಕಿಲ್ಲ. ವಾಸ್ತವವಾಗಿ ಟಿ.ವಿ. ವಾರ್ತೆ ಒಂದು ತಂಡ ಪರಿಶ್ರಮ. ಇಲ್ಲಿ ಪರಿಣಾಮ ಸಾಮೂಹಿಕ ಸೃಜನಶೀಲತೆಯಿಂದ ಮಾಡಿದ್ದು. ಉದ್ದನೆಯ ವಾಕ್ಯಗಳನ್ನು ಕಂಡಾಗ ಹೌಹಾರುವ ಸುದ್ದಿ ವಾಚಕ, ಸುದ್ದಿ ನಿರ್ಮಾತೃ. ಎಲ್ಲರೂ ಮುದ್ರಣ ಮಾಧ್ಯಮದಿಂದ ಮೂಲತಃ ವಲಸೆ ಬಂದವರೇ ಆದುದರಿಂದ ಜನಪದದ ಮಾಧ್ಯಮದ ಆವಶ್ಯಕತೆಗಳನ್ನು ಅರಿಯುವುದರಲ್ಲಿ ಸ್ವಲ್ಪ ವಿಳಂಬವಾಯಿತಾದರೂ, ಬೇಗ ಒಗ್ಗಿ ಹೋದೆವು. ಹೊಸತನಕ್ಕೆ ತೆರೆದುಕೊಂಡೆವು. ಫಲಶ್ರುತಿಯೇ ಸಂಕ್ಷಿಪ್ತತೆಗೆ ಪ್ರಾಧಾನ್ಯತೆ, ನೇರ, ಸರಳ, ಝಳ ಝಳ ಹೇಳಿಬಿಡುವ ಗುಣ ಮೈಗೂಡಿತು. ಮೈ.ಸಿ.ಪಾಟೀಲರ ಹಣೆಬರಹ, ಮತ್ತೊಬ್ಬರ ತಲೆಬರಹ, ರಜನಿ ಪದ್ಯ ಐಶ್ವರ್ಯ ರೈ ಭುವನ ಸುಂದರಿಯಾದಾಗ, ಶೇಷಚಂದ್ರಿಕಾ, ಕನ್ನಡ ಸಾಹಿತ್ಯ ಪರಿಷತ್ತನ್ನು ದೃಶ್ಯಾವಳಿಗಳೊಡನೆ ಕನ್ನಡಿಗರಿಗೆ ಪರಿಚಯಿಸಿದ ಸುದ್ದಿ, ಮಹಾಮಸ್ತಕಾಬಿಷೇಕದ ನೇರ ಪ್ರಸಾರ ನೋಡಿಯೇ ರಮ್ಯ ಸುದ್ದಿಚಿತ್ರ ಬಿಡಿಸಿದ ಜಿ.ಕೆ.ಎಸ್. , ಕಾಡುಗಳ್ಳ ವೀರಪ್ಪನ್ ವರನಟ ರಾಜ್ ಕುಮಾರ್ ಅಪಹರಣ ಮಾಡಿದ ಸಂದರ್ಭದಲ್ಲಿ ಕಾಡಿನಲ್ಲಿ ಮಾಯವಾದ ಮಾಯಾವಿ ಉದ್ಗಾರ, ಹಾಗೆಯೇ ವಾಜಪೇಯಿ ಮೊದಲ ಬಾರಿ ಪ್ರಧಾನಿಯಾದಾಗ ಬಿಡಿಸಿದ ನುಡಿಚಿತ್ರ, ಗುಜರಾತ್ ಭೂಕಂಪ, ಸುನಾಮಿ, ಚುನಾವಣೆಗಳ ಸಮಯ, ಬಜೆಟ್ ಮಂಡನೆ ಹೀಗೆ ಬೆಳವಣಿಗೆಯ ಹಾದಿಯಲ್ಲಿ ಕಂಡ ಪ್ರತಿಯೊಂದು ವಿದ್ಯಮಾನವೂ ದೂರದರ್ಶನ ಕನ್ನಡ ವಾರ್ತೆಗಳಲ್ಲಿ ಮನಮುಟ್ಟುವ ರೀತಿಯಲ್ಲಿ, ಚೊಕ್ಕವಾಗಿ ಕನ್ನಡತನ ಮೆರೆಸಿದೆವು ನಾವು. ಈಗಲ್ಲಿ ಆ ಕನ್ನಡ ಕೆಲಸ ದೀಕ್ಷೆಯಾಗಿದ ದೂರದರ್ಶನ ವಾರ್ತೆಗೆ. ಹೀಗಾಗಿ ಬೇರೆ ವಾಹಿನಿಗಳಲ್ಲಿ ಆಗಾಗ ನುಸುಳುವ ಕನ್ನಡ ಜಾಯಮಾನಕ್ಕೆ ಅಪಚಾರವಾದ ರೀತಿಯ ಪದ ಪ್ರಯೋಗ ಹಾಗೂ ಪರಭಾಷಾ ಆಕ್ರಮಣ ವೀಕ್ಷಕರಿಗೆ ಮಂಡೆ ಬಿಸಿ ಮಾಡುತ್ತದೆ.

ದೀಕ್ಷೆ ಎಂದಾಗ ನೆನಪಿಗೆ ಬರುತ್ತದೆ ದೀಕ್ಷಾದಳ ಎಬ ಪದಪ್ರಯೋಗ. ಮೊದಲು ಒಮ್ಮೆ ಇದನ್ನು ಕನ್ನಡಪ್ರಭದಲ್ಲಿ ಪ್ರಯೋಗ ಮಾಡಿದವರು ಎನ್.ಎಸ್. ರಾಮಪ್ರಸಾದ್. ಆಮೇಲೆ ಅದು ಚಾಲ್ತಿಗೆ ಬರಲೇ ಇಲ್ಲ. ರಾಜೀವಗಾಂಧೀ ಅನೇಕ ವಿಷಯಗಳ ಬಗ್ಗೆ ತ್ವರಿತ ಕಾರ್ಯಾಚರಣೆಗೆ ಆಯಾಯಾ ಮಿಷನ್ ರಚಿಸಿದರು. ಉದಾಹರಣೆಗೆ oil seeds mission, Tele communication mission. ಆಗ ರಾಮಪ್ರಸಾದ್ ಈ ಯೋಜನೆಗಳ ಹಿಂದಿರುವ ಐತಿಹ್ಯ ಮಹತ್ವ ಅರಿತು ಅವಕ್ಕೆ mission ಬದಲಾಗಿ ದೀಕ್ಷಾದಳ ಎಂದು ಪದ ಟಂಕಿಸಿದರು. ಆಕಾಶವಾಣಿ ಮತ್ತು ದೂರದರ್ಶನ ವಾರ್ತೆಗಳಲ್ಲಿ ನಾವು ಅದಕ್ಕೆ ಚಾಲ್ತಿ ನೀಡಿದೆವು. ಪತ್ರಿಕೆಯವರು ಮರೆತರು. ಕನ್ನಡದಲ್ಲಿ ಆಯೋಗ, ನಿಯೋಗ, ಮಹೋದ್ದೇಶ, ಘನೋದ್ದೇಶ ಎಂದೆಲ್ಲಾ ಈಗಲೂ ಬಳಸುತ್ತಾರೆ. ಹಾಗೆಯೇ ವಾಟರ್ ಶೆಡ್ ಜಲಾನಯನವಾಗಿದೆ. ಆದರೆ ನಮಗೆ ಮಾತ್ರ ಅದು ಜಲಾಶ್ರಯ. ಹೆಮ್ಮೆಯಿಂದ ಬೀಗಲು ಸಂಕೋಚ ಏಕೆ. ಹೀಗೆ ತಲೆಬರಹ ಬರೆಯುವ ಕುಸುರಿ ಕೆಲಸದಲ್ಲಿ ಆರೋಗ್ಯ ಪೂರ್ಣ ಪೈಪೋಟಿ. ಕಲೆ, ಸಾಹಿತ್ಯ, ಸಂಸ್ಕೃತಿ ಸುದ್ದಿಗಳಿಗೆ ಆದ್ಯತೆ ನೀಡಿದ್ದರಿಂದ ಆವಲಯಗಳ ಹಿರಿಯರಿಂದ ಮೆಚ್ಚುಗೆ.

ಭಾಷೆ ಬಳಕೆಯಲ್ಲಿ ದುಡಿಸಿಕೊಳ್ಳುವುದರಲ್ಲಿ ತೋರಿದ ಪರಿಶ್ರಮ, ಆಸಕ್ತಿ ಒಂದು ಸವಿಬುತ್ತಿ. ಕಿಂಚಿತ್ ಕನ್ನಡದ ಕಾಯಕ ಮಾಡಿದ ತೃಪ್ತಿ. ಕನ್ನಡ ಜನಮಾನಸದಲ್ಲಿ ಟಿ.ವಿ.ವಾರ್ತೆಗಳೆಂದರೆ ದೂರದರ್ಶನ ವಾರ್ತೆ ಎಂಬ ಅಭಿಮಾನ.

ಆರಂಭದ ದಿನಗಳಲ್ಲಿ ಆಕಾಶವಾಣಿ ಸುದ್ದಿ ದೂರದರ್ಶನ ಪರದೆಯ ಮೇಲೆ ಚಂದಗಾಣಿಸಿದರವರು ಚಂದದ ಸುದ್ದಿ ವಾಚಕರು. ಅಷ್ಟಾಗಿ ದೃಶ್ಯಾವಳಿ ಇಲ್ಲ. ಆ ಮೇಲೆ ಗರಿಗಟ್ಟಿಕೊಂಡಿತು. ಎಲ್ಲ ಸುದ್ದಿ ತುಣುಕಿಗೂ ದೃಶ್ಯ ಸಂಯೋಜನೆ. ಟಿವಿ ವಾರ್ತೆ ನೈಜಾರ್ಥದಲ್ಲಿ ಜಿಲ್ಲೆಗಳಿಂದ ಘಟನೆಗಳ ಸಚಿತ್ರ ವರದಿ ರವಾನೆಗೆ ಪ್ರತಿನಿಧಿಗಳ ಜಾಲ ಹರಡಿಕೊಂಡಿತು. ತಂತ್ರಜ್ಞರ ಕಲ್ಪನೆ, ಶ್ರಮದಿಂದ ಬೀದರಿನ ಘಟನೆ ಕೆಲವೇ ತಾಸುಗಳಲ್ಲಿ ದೂರದರ್ಶನ ಕೇಂದ್ರ ತಲುಪುವಷ್ಟರ ಮಟ್ಟಿಗೆ ಪ್ರಗತಿ.

ಉತ್ತಮ ಚಿತ್ರಗಳೇ ಉತ್ತಮ ವರದಿ. ಅವಕ್ಕೆ ಪೂರಕವಾಗಿ, ಪೋಷಕವಾಗಿ ಪದಗಳು, ವಾಕ್ಯಗಳು. ಪುಟ್ಟಪುಟ್ಟ ಪದ, ವಾಕ್ಯಗಾಳಾದರಂತೂ ಇನ್ನೂ ಸೊಗಸು. ತಂತೀ ಭಾಷೆಯ ಕೌಶಲ್ಯ ಬೇಕು. ಮಾತು ಚಿತ್ರಗಳಿಗೆ ಅರ್ಥ ತುಂಬಿದರೆ, ಚಿತ್ರಗಳು ಮಾತಿಗೆ ಅರ್ಥ ತುಂಬುತ್ತವೆ. ಚಿತ್ರದಲ್ಲಿ ಇಲ್ಲದ್ದನ್ನು ಹೇಳದೇ ಇರುವುದೇ ಲೇಸು.

ಇನ್ನು ಆಡು ಮಾತಿಗೆ ಸಮೀಪವಾದ ಸಾಧ್ಯವಾದಷ್ಟೂ ಶುದ್ಧ ಭಾಷೆ ಕರಗತ ನಮಗಾಯಿತು ಎಂದೇ ನನ್ನ ನಂಬಿಕೆ. ಸರ್ದಾರ್ ಪಟೇಲರು ದೇಶದ ಮೊದಲ ಸಮಾಚಾರ ಮತ್ತು ಪ್ರಸಾರ ಸಚಿವರು. ಅವರು ತಮ್ಮ ರಾಜ್ಯ ಸಚಿವ ಸಹೋದ್ಯೋಗಿ ರಂ.ರಾ. ದಿವಾಕರ್ ಗೆ ಬಾನುಲಿ ಭಾಷೆ ಎಂತಿರಬೇಕು ಎಂದು ಪತ್ರ ಬರೆದಿದ್ದರು. ಅದರ ಕೆಲ ಸಾಲುಗಳನ್ನು ಉದ್ಧರಿಸಿ ನನ್ನ ಮಾತು ಮುಗಿಸುವೆ.

ಬಹುಸಂಖ್ಯೆ ಜನರು ಅರ್ಥ ಮಾಡಿಕೊಳ್ಳುವ ಭಾಷೆಯಲ್ಲಿ ಆಕಾಶವಾಣಿ ಅಭಿವ್ಯಕ್ತಗೊಳಿಸದಿದ್ದರೆ, ಜನಾಭಿಪ್ರಾಯ ರೂಪಿಸುವ ಅಥವಾ ಜನಾಭಿರುಚಿ ರೂಪಿಸಲು ಆಕಾಶವಾಣಿ ಮಾಡುವ ಯಾವ ಪ್ರಯತ್ನವಾಗಲೀ ವಿಫಲವಾಗುವುದು ನಿಶ್ಚಿತ. ಶುದ್ಧ, ನಿಖರ ಹಾಗೂ ಘನತೆಯ ಭಾಷೆಯಲ್ಲಿ ಆಕಾಶವಾಣಿ ಅಭಿವ್ಯಕ್ತ ಪಡಿಸಬೇಕೆಂಬ ಗುರಿ ಅರ್ಥವಾಗುವಂಥಹುದು. ಈ ಗುಣಗಳು ಸರಳತೆಯಲ್ಲಿ ಅಡಕವಾಗಿರಲು ಸಾಧ್ಯ. ಆಕಾಶವಾಣಿ ನೇತೃತ್ವ ವಹಿಸುವ ಯಾರಿಗೇ ಆಗಲಿ ಸಾಹಿತ್ಯದಲ್ಲಿ ಹಾಗೂ ಭಾಷೆಗಳಲ್ಲಿ ಉಗ್ರತೆ ಮೀರಿದ ನೋಟ ಮತ್ತು ಕಲ್ಪನೆ ಅವರಿಗೆ ಮಾರ್ಗದರ್ಶಕವಾಗಿರಬೇಕು. ಅಭಿವ್ಯಕ್ತಿಯಲ್ಲಿ ಪದಗಳ ನುಡಿಗಟ್ಟು ಮತ್ತು ಪ್ರಕಾರಗಳ ಬಳಕೆಯಲ್ಲೂ ಇದಿರಬೇಕು. ವಿಶಾಲ ದೃಷ್ಟಿ ಮೂಲಭೂತವಾಗಿರ ಬೇಕು ಮತ್ತು ಸರಳವಾಗಿರುವುದರ ಜೊತೆಗೆ ಅರ್ಥವಾಗುವ ಉತ್ತಮ ಮಟ್ಟದ ಅಭಿವ್ಯಕ್ತಿ ಮತ್ತು ಶೈಲಿಯ ಪದಗಳ ಆಯ್ಕೆ ನಮ್ಮ ಗುರಿಯಾಗಿರಬೇಕು. ಬಾಪೂ ಅವರ ಭಾಷಣಗಳನ್ನು ಎಚ್ಚರವಹಿಸಿ ಅಧ್ಯಯನ ಮಾಡಿದರೆ, ಭಾಷೆಯ ಗುಣಮಟ್ಟಕ್ಕೆ ಹಿಂಸೆ ಮಾಡದೆ ಈ ಉದ್ದೇಶ ಸಾಕಾರಗೊಳಿಸುವುದು ಸಾಧ್ಯ ಎಂಬುದು ಯಾರಿಗಾದರೂ ಮನವರಿಕೆಯಾದೀತು.

ದೂರದರ್ಶನ ಕನ್ನಡ ವಾರ್ತೆಗಳ ಭಾಷಾ ಪ್ರಯೋಗ ಈ ಆಶಯಗಳನ್ನು ಬಹಳಷ್ಟು ಈಡೇರಿಸಿ, ಸರಳ ಕನ್ನಡ ಗದ್ಯ ವಿಕಾಸದಲ್ಲಿ ಅಳಿಲು ಸೇವೆ ಸಲ್ಲಿಸಿದೆ ಎಂಬುದು ನನ್ನ ಅನುಭವ ಜನ್ಯ ಅನಿಸಿಕೆ. ವಂದನೆಗಳು.

"ಸಂಸತ್ತಿನಲ್ಲಿ ಮೊಳಗಿದ ಕನ್ನಡ ಕಹಳೆ"

ರಾಜ್ಯದಿಂದ ಲೋಕಸಭೆಗೆ ಆಯ್ಕೆಯಾಗಿರುವ 28 ಸಂಸದರ ಪೈಕಿ 24 ಸಂಸತ್ ಸದಸ್ಯರು ಸೋಮವಾರ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಸಂಸತ್ತಿನಲ್ಲಿ ಕನ್ನಡದ ಕಹಳೆ ಮೊಳಗಿಸಿದರು.

ರಾಜ್ಯ ಸರ್ಕಾರ 2009ನ್ನು ಕನ್ನಡ ಅನುಷ್ಠಾನ ವರ್ಷ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಹಾಗೂ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನ ಮಾನ ದೊರಕಿರುವ ಪ್ರಸಕ್ತ ವರ್ಷದಲ್ಲಿ ಎಲ್ಲ ಸಂಸತ್ ಸದಸ್ಯರೂ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಸಂಸತ್ತಿನಲ್ಲಿ ಕನ್ನಡದ ದನಿ ಎತ್ತುವಂತೆ ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಹಲವು ಕನ್ನಡ ಪರ ಸಂಘಟನೆಗಳು ಮನವಿ ಮಾಡಿಕೊಂಡಿದ್ದವು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸಹ ನೂತನ ಸಂಸತ್ ಸದಸ್ಯರೆಲ್ಲರೂ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸುವಂತೆ ಮನವಿ ಮಾಡಿದ್ದರು.

ಈ ಮನವಿಗೆ ಓಗೊಟ್ಟ ರಾಜ್ಯದ ಸಂಸತ್ ಸದಸ್ಯರು ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದರೆ, ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ ಹಾಗೂ ರೈಲ್ವೆ ಖಾತೆ ಸಹಾಯಕ ಸಚಿವ ಕೆ.ಎಚ್. ಮುನಿಯಪ್ಪ ಅವರಿಬ್ಬರು ಮಾತ್ರ ಆಂಗ್ಲವ್ಯಾಮೋಹ ಬಿಡದೆ ಇಂಗ್ಲಿಷ್ ನಲ್ಲೇ ಪ್ರಮಾಣ ವಚನ ಸ್ವೀಕರಿಸಿದರು. ಕನ್ನಡತನ ಮೆರೆದ ಸಂಸದರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅಭಿನಂದನೆ ಸಲ್ಲಿಸಿದ್ದಾರೆ.

Saturday, January 30, 2010

"ಹೇಳದೇ ಉಳಿದ ಮಾತುಗಳು..."


ಐದಾರು ವರ್ಷಗಳ ಹಿಂದಿನ ಮಾತು. ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ಪುಟ್ಟಣ್ಣ ಕಣಗಾಲ್ ಸ್ಮರಣೆಗೆ ಗೀತನಮನ ಕಾರ್ಯಕ್ರಮವೊಂದು ನಡೆಯಿತು. ಅದರ ಹಿಂದಿದ್ದವರು ರಮ್ಯ ಕಲ್ಚರಲ್ ಅಕಾಡೆಮಿಯ ಬಾಲಿ. ಅವತ್ತು, ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳಿಂದ ಆಯ್ದ ಮಧುರ ಗೀತೆಗಳನ್ನು ನಾಡಿನ ಹೆಸರಾಂತ ಗಾಯಕ-ಗಾಯಕಿಯರು ಹಾಡಿದರು. ಪ್ರೇಕ್ಷಕರ ಸಾಲಿನಲ್ಲಿ ಹಿರಿಯ ಪತ್ರಕರ್ತ ವಿ.ಎನ್. ಸುಬ್ಬರಾವ್, ನಟ ಶಿವರಾಂ, ಶ್ರೀಮತಿ ನಾಗಲಕ್ಷ್ಮಿ ಪುಟ್ಟಣ್ಣ ಕಣಗಾಲ್, ಆರ್.ಎನ್. ಜಯಗೋಪಾಲ್ ಮುಂತಾದವರಿದ್ದರು. ಶುಭಮಂಗಳ ಚಿತ್ರದ `ಸೂರ್ಯಂಗು ಚಂದ್ರಂಗೂ ಬಂದಾರೆ ಮುನಿಸು...' ಗೀತೆಯನ್ನು ಗಾಯಕ ಎಲ್.ಎನ್. ಶಾಸ್ತ್ರಿ ಹಾಡಲು ನಿಂತಾಗ, ತುಂಬ ಭಾವುಕರಾದ ನಟ ಶಿವರಾಂ, ವೇದಿಕೆಯೇರಿ, ಶಾಸ್ತ್ರಿ ಅವರೊಂದಿಗೆ ತಾವೂ ಒಂದು ಚರಣ ಹಾಡಿ ಪುಟ್ಟಣ್ಣನ ನೆನಪಾಗಿ ಕಣ್ತುಂಬಿಕೊಂಡರು.

ಹೀಗೆ, ಹಾಡುಗಳ ನೆಪದಲ್ಲಿ ಪುಟ್ಟಣ್ಣ ಕಣಗಾಲ್ ಅವರನ್ನೂ , ಪುಟ್ಟಣ್ಣನ ನೆಪದಲ್ಲಿ ಹಾಡುಗಳನ್ನೂ ಕೇಳುತ್ತಿದ್ದ ಸಂದರ್ಭದಲ್ಲೇ ಕಾರ್ಯಕ್ರಮ ಮುಕ್ತಾಯದ ವೇಳೆ ಹತ್ತಿರವಾಗತೊಡಗಿತು. ಅದೇ ವೇಳೆಗೆ, ಮೂರು ಹಾಡುಗಳ ನಂತರ ಕಾರ್ಯಕ್ರಮ ಮುಗಿಯಲಿದೆ ಎಂದು ಸಂಘಟಕರೂ ಘೋಷಿಸಿಬಿಟ್ಟರು. ಪರಿಣಾಮ, ಮುಂದಿನ ಹದಿನೈದಿಪ್ಪತ್ತು ನಿಮಿಷಗಳ ನಂತರ ಮನೆಗೆ ಹೋಗಲು ಎಲ್ಲರೂ ಮಾನಸಿಕವಾಗಿ ತಯಾರಾಗುತ್ತಿದ್ದರು. ಆಗಲೇ ಪ್ರವೇಶ ದ್ವಾರದಲ್ಲಿ ಏನೋ ಸದ್ದಾಯಿತು. ಅಲ್ಲಿದ್ದ ಜನರೆಲ್ಲ ಒಟ್ಟಾಗಿ `ಓ... ಬಂದ್ರು ಬಂದ್ರು...' ಎಂದರು. ಈಗ ಬಂದವರು ಯಾರಿರಬಹುದು ಎಂದು ನೋಡಿದರೆ ನಟ ವಿಷ್ಣುವರ್ಧನ್! ತಮ್ಮ ಐದಾರು ಮಂದಿ ಆಪ್ತರೊಂದಿಗೆ ಕಾರ್ಯಕ್ರಮಕ್ಕೆ ಬಂದಿದ್ದರು ವಿಷ್ಣು. ಹಾಗೆ ಬಂದವರು, ಸಮಾರಂಭದಲ್ಲಿದ್ದ ಎಲ್ಲರ ಕುಶಲ ವಿಚಾರಿಸಿದರು. ನಂತರ ವೇದಿಕೆ ಏರಿ, ತಮ್ಮ ಗುರುಗಳಾದ ಪುಟ್ಟಣ್ಣ ಕಣಗಾಲರ ಬಗ್ಗೆ ನಾಲ್ಕು ಒಳ್ಳೆಯ ಮಾತುಗಳಾಡಿದರು. ಹಿಂದೆಯೇ ತುಂಬ ಸಂಭ್ರಮದಿಂದ `ಬಾರೇ ಬಾರೇ ಚಂದದ ಚೆಲುವಿನ ತಾರೆ...' ಗೀತೆಗೆ ದನಿಯಾದರು. ಆ ಹಾಡು ಕೇಳಿದ ನಂತರ ಕಾರ್ಯಕ್ರಮಕ್ಕೆ ಬಂದಿದ್ದವರ ಸಂಭ್ರಮಕ್ಕೆ ಎಣೆಯೇ ಇರಲಿಲ್ಲ.

ಬೆಂಗಳೂರಿನ ಅವಲಹಳ್ಳಿ ಬಸ್ ನಿಲ್ದಾಣದ ಎದುರಿಗೆ ಮ್ಯಾಜಿಕ್ ಸ್ಪೇಸ್ ಎಂಬ ಮ್ಯಾಜಿಕ್ ಉತ್ಪನ್ನಗಳ ಮಾರಾಟದ ಮಳಿಗೆಯೊಂದಿದೆ. ಯಾರದೋ ಸಂಕಟಕ್ಕೆ ಕಣ್ಣೀರಾಗುವ, ಕಷ್ಟಕ್ಕೆ ಹೆಗಲಾಗುವ ಜತೆಗಿರುವ ಎಲ್ಲರಿಗೂ ಸದಾ ಒಳಿತನ್ನೇ ಬಯಸುವ ಗಿರಿಧರ್ ಕಾಮತ್, ಈ ಮಳಿಗೆಯ ಒಡೆಯ. ಪ್ರವೀಣ್ ಗೋಡ್ಖಿಂಡಿಯವರ ಪಾಲಿಗೆ ಡಿಯರೆಸ್ಟ್ ಅಂಡ್ ನಿಯರೆಸ್ಟ್ ಫ್ರೆಂಡ್ ಆಗಿರುವ ಇವರು, ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಂದ ವೆಂಗ್ ಸರ್ಕಾರ್ ಎಂದು ಕರೆಸಿಕೊಂಡವರು! ಈ ಗಿರಿಧರ್ ಕಾಮತ್ ಅವರದು ಯಾವತ್ತೂ ಒನ್‌ಲೈನ್ ಡೈಲಾಗ್. `ಮುಂದಿನ ಜನ್ಮ ಅನ್ನೋದು ಬಹುಶಃ ಇಲ್ಲವೇ ಇಲ್ಲ. ಹಾಗಾಗಿ, ಇರುವಷ್ಟು ದಿನ ಬಿಂದಾಸ್ ಆಗೇ ಬದುಕೋಣ. ನಮ್ಮಿಂದ ಇದು ಅಸಾಧ್ಯ ಎಂದು ಯಾವ ಸಂದರ್ಭದಲ್ಲೂ ಯೋಚಿಸುವುದು ಬೇಡ. ನಮ್ಮಿಂದ ಎಲ್ಲವೂ ಸಾಧ್ಯ ಎಂದುಕೊಂಡೇ ಮುನ್ನುಗ್ಗೋಣ. ಯಾವುದೇ ಕೆಲಸ ಮಾಡಿದರೂ ಡಿಫರೆಂಟ್ ಆಗಿ ಮಾಡೋಣ...'

ಈ think different ಎಂಬ ಮಾತಿನ ಹಿಂದೆ ಮುಂದೆಯೇ ಸುತ್ತುತ್ತಿದ್ದ ಸಂದರ್ಭದಲ್ಲಿಯೇ `ಹಾಡು ಹುಟ್ಟಿದ ಸಮಯ' ಪುಸ್ತಕ ಬಿಡುಗಡೆಯ ಕೆಲಸ ಶುರುವಾಯಿತು. ಪುಸ್ತಕ ಬಿಡುಗಡೆಯನ್ನು ಹಳೆಯ ಸಿದ್ಧ ಸೂತ್ರದಂತೆ ಮಾಡುವ ಬದಲು ಸ್ವಲ್ಪ ಭಿನ್ನವಾಗಿ, ಒಂದಷ್ಟು ಹೊಸತನದೊಂದಿಗೆ ಮಾಡೋಣ ಎಂದುಕೊಂಡಿದ್ದಾಯಿತು. ಮುಖ್ಯ ಅತಿಥಿಗಳಾಗಿ ಒಂದು ಕಾಲದ ಜನಪ್ರಿಯ ಜೋಡಿ ಅಂಬರೀಷ್ -ಲಕ್ಷ್ಮಿಯನ್ನು ಒಪ್ಪಿಸಲು ಯೋಚಿಸಿದ್ದೂ ಆಯಿತು. ಆದರೆ, ಈ ಕಡೆ ಅಂಬರೀಷ್, ಆ ಕಡೆ ಲಕ್ಷ್ಮಿ ಇಬ್ಬರೂ ಸಿಗಲಿಲ್ಲವಾದ ಕಾರಣದಿಂದ ಐಡಿಯಾ ಫ್ಲಾಪ್ ಆಯಿತು. `ಮುಂದ?' ಎಂದುಕೊಂಡು ಪೆಚ್ಚಾಗಿ ಕೂತಾಗಲೇ think different ಎಂಬ ಮಾತಿಗೆ ಖಡಕ್ಕಾಗಿ ಹೊಂದುವಂಥ ಹೊಸ ಯೋಜನೆಯೊಂದು ಕಣ್ಮುಂದೆ ಬಂತು.

ಏನೆಂದರೆ ಪುಸ್ತಕ ಬಿಡುಗಡೆಗೆ, ವಿಷ್ಣುವರ್ಧನ್-ಭಾರತಿ ಹಾಗೂ ರಮೇಶ್‌ರನ್ನು ಕರೆಸುವುದು. ಹೇಗಿದ್ದರೂ ಆ ಪುಸ್ತಕದಲ್ಲಿ 60 ವರ್ಷದ ಇತಿಹಾಸಕ್ಕೆ ಸಾಕ್ಷಿಯಾಗಬಲ್ಲ ಹಾಡುಗಳಿದ್ದವು. ಹಳೆಯ ಹಾಡುಗಳ ಪ್ರತಿನಿಧಿಗಳಾಗಿ ವಿಷ್ಣು-ಭಾರತಿ, ಹೊಸ ಹಾಡುಗಳನ್ನು ಪ್ರತಿನಿಧಿಸಲು ರಮೇಶ್ ಬಂದರೆ ಕಾರ್ಯಕ್ರಮಕ್ಕೆ ವಿಶೇಷ ಆಕರ್ಷಣೆ ಬರುತ್ತೆ ಎನ್ನಿಸಿತು. ಈ ಸಂಗತಿಯನ್ನು ಗೆಳೆಯರಾದ ಉಪಾಸನಾ ಮೋಹನ್ ಹಾಗೂ ಫಲ್ಗುಣ ಅವರಲ್ಲಿ ಹೇಳಿಕೊಂಡಾಗ ಅವರು ಇನ್ನೊಂದು ರೆಕ್ಕೆಪುಕ್ಕ ಸೇರಿಸಿದರು : `ಹಾಗೇ ಮಾಡಿ. ಜತೆಗೆ, ಎಲ್ಲ ಗೀತೆರಚನೆಕಾರರನ್ನು, ಅವರ ಕುಟುಂಬದವರನ್ನು ಕರೆಸಿ. ಜತೆಗೆ ಸಿ. ಅಶ್ವತ್ಥ್ ಹಾಗೂ ಶಿವಮೊಗ್ಗ ಸುಬ್ಬಣ್ಣ ಅವರನ್ನೂ ಕರೆಸಿ `ತಪ್ಪು ಮಾಡದವ್ರು ಯಾರವ್ರೆ?' ಗೀತೆಯನ್ನು ಅಶ್ವತ್ಥ್ ಅವರಿಂದಲೂ `ಕಾಡು ಕುದುರೆ ಓಡಿಬಂದಿತ್ತಾ...' ಗೀತೆಯನ್ನು ಸುಬ್ಬಣ್ಣ ಅವರಿಂದಲೂ ಹಾಡಿಸಿ. ಉಳಿದ ಹಾಡುಗಳಿಗೆ ಯುವ ಗಾಯಕ-ಗಾಯಕಿಯರು ದನಿಯಾಗಲಿ. ಆಗ ಹಳೇ ಬೇರು ಹೊಸ ಚಿಗುರು ಎರಡನ್ನೂ ಒಂದೇ ವೇದಿಕೆಯಲ್ಲಿ ತಂದಂತಾಗುತ್ತದೆ. think different ಎನ್ನುವ ನಿಮ್ಮ ಮಾತು ನಿಜವಾಗುತ್ತದೆ...'

ಮುಂದೆ ಈ ಯೋಜನೆಯನ್ನೇ ಸ್ವಲ್ಪ update ಮಾಡಿದ್ದಾಯಿತು. ಅದು ಹೀಗೆ : ರಾಜ್ಯೋತ್ಸವ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಿಸುವುದು. ನಂತರದಲ್ಲಿ ಮೂರು ಹಾಡುಗಳು. ಐದನೇ ಗೀತೆಯಾಗಿ ವಿಷ್ಣುವರ್ಧನ್ ಅವರಿಂದ ಅದೇ `ಬಾರೇ ಬಾರೇ ಚೆಂದದ ಚೆಲುವಿನ ತಾರೆ...' ಹಾಡು ಹೇಳಿಸುವುದು. ಹಾಡಿನ ಎರಡನೇ ಚರಣ ಆರಂಭವಾದ ತಕ್ಷಣ ಭಾರತಿಯವರನ್ನು ವೇದಿಕೆಗೆ ಕರೆದೊಯ್ಯುವುದು. ಹಾಡು ಮುಗಿಯುತ್ತಿದ್ದಂತೆಯೇ ನಟ ರಮೇಶ್ ಅವರಿಂದ ಮ್ಯಾಜಿಕ್ ಮಾಡಿಸುವ ಮೂಲಕ ಪುಸ್ತಕ ಬಿಡುಗಡೆ ಮಾಡಿಸುವುದು. ಮೊದಲ ಪ್ರತಿಯನ್ನು ವಿಷ್ಣು ಅವರಿಂದ ಭಾರತಿ ಅವರಿಗೆ ಕೊಡಿಸುವುದು, ವಿಷ್ಣು-ಭಾರತಿ ದಂಪತಿಯನ್ನು ಸನ್ಮಾನಿಸುವುದು... ಪುಸ್ತಕ ಬಿಡುಗಡೆಯ ನಂತರ ಅಶ್ವತ್ಥ್ ಅವರಿಂದ `ತಪ್ಪೇ ಮಾಡದವ್ರು ಯಾರವ್ರೆ...' ಗೀತೆ ಹಾಡಿಸುವುದು. ಹತ್ತು ನಿಮಿಷದ ನಂತರ ಶಿವಮೊಗ್ಗ ಸುಬ್ಬಣ್ಣ ಅವರಿಂದಲೂ...

ಈ ಎಲ್ಲ ಸಂಗತಿಯನ್ನು ಸಂಗೀತ ನಿರ್ದೇಶಕ ಕೆ. ಕಲ್ಯಾಣ್ ಅವರಲ್ಲಿ ಹೇಳಿಕೊಂಡಾಗ ಅವರೆಂದರು. ಇದು ನಿಜಕ್ಕೂ think different ಅನ್ನೋ ಯೋಚನೆ-ಯೋಜನೆ. ಒಂದು ವೇದಿಕೆಯಲ್ಲಿ ಅಷ್ಟೊಂದು ಜನರನ್ನು ನೋಡುವುದೇ ಒಂದು ಖುಷಿ. ನಿಮ್ಮ ಈ ಸಾಹಸದಲ್ಲಿ ನಾನೂ ಒಂದಿಷ್ಟು ಕೆಲಸ ಮಾಡ್ತೇನೆ. ವಿಷ್ಣು ಸರ್ ಹಾಗೂ ಭಾರತಿ ಮೇಡಂ ಅವರನ್ನು ಒಪ್ಪಿಸಲು ನಿಮ್ಮೊಂದಿಗೆ ನಾನೂ ಬರ್‍ತೇನೆ. ನಿಮ್ಮ ಪರವಾಗಿ ನಾನೇ ಮಾತಾಡ್ತೇನೆ. ಅಶ್ವತ್ಥ್ ಹಾಡಿಗೆ ವಿಷ್ಣು ಸರ್ ತಾಳ ಹಾಕುತ್ತಾ ಕೂರುವುದನ್ನು; ಸುಬ್ಬಣ್ಣ ಅವರ ಗಾಯನಕ್ಕೆ ಎಲ್ಲರೂ ಮೈಮರೆಯುವ ಸಂದರ್ಭವನ್ನು; ವಿಷ್ಣು-ಭಾರತಿ ಪರಸ್ಪರ ಅಭಿನಂದಿಸುವುದನ್ನು ಕಂಡು ಎಲ್ಲರೂ ಚಪ್ಪಾಳೆ ಹೊಡೆಯುವುದನ್ನು; ರಮೇಶ್ ಅವರ ಚಿನಕುರುಳಿ ಮಾತಿಗೆ ರವೀಂದ್ರ ಕಲಾಕ್ಷೇತ್ರವೇ ಮರುಳಾಗುವುದನ್ನು ಎಲ್ಲರೂ ಕಣ್ತುಂಬಿಕೊಳ್ಳೋಣ. ಮುಂದಿನ ಮಂಗಳವಾರ ವಿಷ್ಣುವರ್ಧನ್ ಅವರ ಮನೆಗೆ ಹೋಗೋಣ... ನೀವು ಬಾಕಿ ಕೆಲಸ ಮಾಡಿ ಮುಗಿಸಿ...

ದುರಂತವೆಂದರೆ ಅಂಥದೊಂದು ಮಧುರ ಸಂದರ್ಭ ಬರಲೇ ಇಲ್ಲ. ಈ ಮಾತುಕತೆ ಮುಗಿದ ಎರಡೇ ದಿನಕ್ಕೆ, ವಿಷ್ಣುವರ್ಧನ್ ಅವರಿಗೆ ಆರೋಗ್ಯ ಚೆನ್ನಾಗಿಲ್ಲವಂತೆ. ಚಿಕಿತ್ಸೆಗೊಂದು ಅವರು ಮೈಸೂರಿಗೆ ಹೋಗಿದ್ದಾರಂತೆ. ಇನ್ನೂ ಒಂದು ತಿಂಗಳು ಚಿಕಿತ್ಸೆಯಂತೆ ಎಂಬ ಸುದ್ದಿ ಬಂತು. ಈ ಅನಿರೀಕ್ಷಿತ ಸುದ್ದಿಯನ್ನು ನಂಬಲಾಗಿದೆ ನಂಬಿದ್ದಾಗಲೇ, ಲಹರಿ ವೇಲು ಹೀಗೊಂದು ಎಸ್ಸೆಮ್ಮೆಸ್ ಕಳಿಸಿದ್ದರು. `ಸಾಹೇಬ್ರೆ, ಸಿ. ಅಶ್ವತ್ಥ್ ಅವರಿಗೆ ಹುಷಾರಿಲ್ವಂತೆ. ಕಿಡ್ನಿ ಫೇಲ್. ಯಶವಂತಪುರದ ಆಸ್ಪತ್ರೆಗೆ ಸೇರಿಸಿದ್ದಾರಂತೆ. ಒಮ್ಮೆ ಹೋಗಿ ಬರೋಣವಾ...?'

ನಂತರದ ದಿನಗಳಲ್ಲಿ ಎಲ್ಲವೂ `ಅವಸರದಲ್ಲಿ' ಎಂಬಂತೆ ನಡೆದುಹೋಯಿತು. ಮೊದಲಿಗೆ, ಚಿಕ್ಕದೊಂದು ಕಾರಣವನ್ನೂ ಹೇಳದೆ ಅಶ್ವತ್ಥ್ ಹೋಗಿಬಿಟ್ಟರು. ಈ ಸಂಕಟದಿಂದ ಚೇತರಿಸಿಕೊಳ್ಳುವ ಮೊದಲೇ ವಿಷ್ಣು ಅವರೂ... ಈಗ ಅವರಿಲ್ಲ ನಿಜ. ಆದರೆ, ಅವರ ಬಗ್ಗೆ ನಾವು ಕಂಡ ಕನಸುಗಳಿವೆ. ಆಡಿಕೊಂಡ ಮಾತುಗಳಿವೆ. ಬಣ್ಣದ ಲೋಕದ ಮಹನೀಯರಿಬ್ಬರು ಹಾಡದೇ ಹೋಗಿಬಿಟ್ಟ ಹಾಡುಗಳು ಹಾಗೇ ಉಳಿದುಹೋಗಿವೆ. ಇದನ್ನೆಲ್ಲ ಮತ್ತೆ ಮತ್ತೆ ನೆನಪು ಮಾಡಿಕೊಂಡಾಗ `ಬದುಕು ಒಂದು ಬಸ್ಸಿನಂತೆ ನಿಲ್ಲದಂತೆ ಸಾಗಿದೆ/ವಿಧಿಯೇ ಅದರ ಡ್ರೈವರ್ ಆಗಿ ಕಾಣದಂತೆ ಕೂತಿದೆ' ಎಂಬ ಇನ್ನೊಂದು ಚಿತ್ರಗೀತೆ ನೆನಪಾಗುತ್ತಿದೆ...

"ಹೃದಯವಂತ ಹೃದಯತಜ್ಞ ಪದ್ಮಭೂಷಣ ಬಿಎಂ ಹೆಗ್ಡೆ"

"ಪದ್ಮಭೂಷಣ ಪ್ರೊ. ಬಿ.ಎಂ. ಹೆಗ್ಡೆ ; ನಾನು ಕಂಡಂತೆ" ಲೇಖನದಲ್ಲಿ ಶ್ರೀಮಾನ್ ಎಚ್. ಆನಂದರಾಮ ಶಾಸ್ತ್ರೀಯವರು ಹೇಳಿದ್ದು ಅಕ್ಷರಶಃ ಸತ್ಯ. ನನ್ನ ಗುರುಗಳಾದ ಪ್ರೊ. ಬಿ.ಎಂ. ಹೆಗ್ಡೆಯವರು ಅತ್ಯಂತ ಸಾಮಾಜಿಕ ಕಳಕಳಿಯುಳ್ಳ, ವಿನಯಶೀಲ, ಸರಳ ಜೀವಿ, ಉತ್ತಮ ವಾಗ್ಮಿ, ಅನೇಕ ಭಾಷೆಗಳ ಪಾಂಡಿತ್ಯವಿರುವ, ಹೃದಯವಂತ ಹೃದಯ ತಜ್ಞರು. ಅವರಿಗೆ ಪದ್ಮಭೂಷಣ ಬಂದಿರುವುದು ನಮಗೆಲ್ಲರಿಗೂ ಅತೀವ ಸಂತಸ ತಂದಿದೆ.

ಪ್ರೊ. ಬಿ.ಎಂ. ಹೆಗ್ಡೆಯವರು ಇತರ ವೈದ್ಯರಿಗಿಂತ ಭಿನ್ನರು. ಜನರ ಆರೋಗ್ಯದ ಬಗ್ಗೆ ನಿಜವಾದ ಕಾಳಜಿಯುಳವರು. ಹೆಗಡೆಯವರ ಲೇಖನವನ್ನು ಓದಿ ಪ್ರೇರಣೆಗೊಂಡು, ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಮಂಗಳೂರಿನಲ್ಲಿರುವ ಹೆಗಡೆಯವರ ಮನೆಗೆ ದೂರವಾಣಿಯ ಮೂಲಕ ಸಂಪರ್ಕಿಸಿದ್ದರು. ಅವರನ್ನು ಗುಜರಾತಿಗೆ ಕರೆಸಿ, ಅವರೊಡನೆ ಚರ್ಚಿಸಿ, ಹೆಗಡೆಯವರನ್ನು ತಮ್ಮ ಆರೋಗ್ಯ ಇಲಾಖೆಗೆ ಸಲಹೆಗಾರರನ್ನಾಗಿ ನೇಮಿಸಿದ್ದರು. ಅದೇ ರೀತಿ ಅವರು ಬಿಹಾರದ ಆರೋಗ್ಯ ಇಲಾಖೆಗೂ ಸಲಹಾಗಾರರಾಗಿ ಸೇವೆ ಸಲ್ಲಿಸಿದ್ದಾರೆ.

ಪ್ರೊ. ಬಿ.ಎಂ. ಹೆಗಡೆಯವರು ಬಿಡುವಿಲ್ಲದೆ ದುಡಿಯುವ ಕ್ರಿಯಾಶೀಲರು. ಮಕ್ಕಳಿಂದ ಹಿಡಿದು ದೊಡ್ದವವರೆಗೆ ಯಾರೇ ಅವರಿಗೆ ಪತ್ರ ಬರೆದರೂ ಕೂಡಲೇ ಪ್ರತಿಸ್ಪಂದಿಸುತ್ತಾರೆ. ನಾನು ಆರನೇ ತರಗತಿಯಲ್ಲಿ ಇದ್ದಾಗ ಅವರಿಗೆ ಒಂದು ಪತ್ರ ಬರೆದಿದ್ದೆ. ಅದಕ್ಕೆ ಕೂಡಲೇ ಉತ್ತರ ಬರೆದಿದ್ದರು. ಇವಾಗಲೂ ಕೂಡ ಯಾವುದೇ ಪತ್ರಕ್ಕೂ ತಕ್ಷಣವೇ ಉತ್ತರ ಕೊಡುತ್ತಾರೆ. ತಮ್ಮ ಅಸಮಾನ್ಯ ಕಾರ್ಯ ಚಟುವಟಿಕೆಗಳ ನಡುವೆ ಎಲ್ಲವನ್ನೂ ಸುಗಮವಾಗಿ ನಿಭಾಯಿಸುವ ರೀತಿಯನ್ನು ನೋಡಿ ನಾವು ಬೆರಗುಗೊಂಡಿದ್ದೇವೆ.

ಭಾರತದಲ್ಲಿ ಹಾಗು ಹೊರದೇಶಗಳಲ್ಲಿ (ಅಮೇರಿಕ, ಇಂಗ್ಲೆಂಡ್) ಅನೇಕ ವಿಶ್ವ ವಿದ್ಯಾನಿಲಯಗಳಿಗೆ ಗೌರವ ಪ್ರಾಧ್ಯಾಪಕರಾಗಿ ಹಾಗು ಸಂಶೋಧಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇಲ್ಲಿಗೆ (ಅಮೆರಿಕಕ್ಕೆ) ಬಂದಾಗಲೂ ಬಿಡುವಿಲ್ಲದ ಕಾರ್ಯ ಚಟುವಟಿಕೆಗಳನ್ನು ಹೊಂದಿರುತ್ತಾರೆ. ಅನೇಕ ಸಭೆ, ಸಮಾರಂಭಗಳಿಗೆ ಅವರನ್ನು ಅಧ್ಯಕ್ಷರನ್ನಾಗಿ ಆಮಂತ್ರಿಸುತ್ತಾರೆ. ಹಾಗಾಗಿ ಇಲ್ಲಿಯೂ ಕೂಡ ಅನೇಕ ಸಲ ಅವರ ಉಪನ್ಯಾಸವನ್ನು ಕೇಳುವ ಭಾಗ್ಯ ನಮ್ಮದಾಗಿದೆ. ಅವರ ಮಗಳಲ್ಲಿಗೆ ಬಂದಾಗ ಮೂವತೈದು ಮೈಲು ದೂರದಲಿರುವ ನಮ್ಮ ಮನೆಗೂ ಅರ್ಧ ಗಂಟೆಗಾದರೂ ಬಂದು ಹೋಗುತ್ತಾರೆ. ಯಾರೇ ಅವರನ್ನು ಮನೆಗೆ ಆಹ್ವಾನಿಸಿದರೂ, ತಮ್ಮ ಬಿಡುವಿಲ್ಲದ ಕಾರ್ಯಗಳ ಮದ್ಯದಲ್ಲೂ ಸ್ವಲ್ಪ ಹೊತ್ತಿಗಾದರೂ ಭೇಟಿಕೊಡುವ ಹೃದಯವಂತರು.

ಹೆಗ್ದೆಯವರಂತೆ ಅವರ ಮಗಳು-ಅಳಿಯನೂ ಕೂಡ (ಡಾ. ಮೈನ, ರವಿ ಶೆಟ್ಟಿ) ವಿನಯಶೀಲರು. ''ತುಂಬಿದ ಕೊಡ ತುಳುಕುವುದಿಲ್ಲ" ಎಂಬ ಗಾದೆ ಮಾತು ಅವರ ಕುಟುಂಬಕ್ಕೆ ಹೇಳಿ ಮಾಡಿಸಿದಂತೆ ಇದೆ. ಹೆಗ್ಡೆ ಮತ್ತು ಅವರ ಕುಟುಂಬ ನಮ್ಮ ಮನೆಗೆ ಬಂದಾಗ ತೆಗೆದ ಒಂದು ಛಾಯ ಚಿತ್ರವನ್ನು ನಿಮ್ಮೊಂದಿಗೆ ಸಂತೋಷದಿಂದ ಹಂಚಿಕೊಳ್ಳುತಿದ್ದೇನೆ. ನನ್ನ ಗುರುಗಳಿಗೆ ಪದ್ಮಭೂಷಣ ಬಂದಿರುವುದು ನಾನು ಅಭಿಮಾನದಿಂದ ಬೀಗುತ್ತಿದ್ದೇನೆ.


"ಕಾವ್ಯ ಸಮಾಜಮುಖಿಯಾಗಲಿ: ದೊಡ್ಡರಂಗೇಗೌಡ"


ಹಂಪಿ, ಜ.29:'ಅಂತರಂಗದ ಭಾವಲಹರಿ ಕವಿತೆ- ಬದುಕಿನ ಅನುಭವಗಳಿಂದ ಮಡುಗಟ್ಟಿ ಹೊರಹೊಮ್ಮಬೇಕು, ಕಾವ್ಯ ಮಾಜಮುಖಿಯಾಗಿರಬೇಕು ಎನ್ನುವ ಆಶಯವನ್ನು ಸಾಹಿತಿ ಡಾ. ದೊಡ್ಡರಂಗೇಗೌಡರು ವ್ಯಕ್ತಪಡಿಸಿದರು.

ಶ್ರೀ ಕೃಷ್ಣದೇವರಾಯರ ಪಟ್ಟಾಭಿಷೇಕದ 500ನೇ ವರ್ಷಾಚರಣೆ ಪ್ರಯುಕ್ತ ವಿರೂಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಲಾಗಿದ್ದ ಕವಿಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಂಪಿಯ ಕಲ್ಲು ಕಲ್ಲುಗಳೂ ವೀಣೆಯ ನಾದವನ್ನು ಹೊರಹೊಮ್ಮಿಸುತ್ತವೆ. ದಕ್ಷ ಆಡಳಿತದೊಂದಿಗೆ ನವರಸ ಕಾವ್ಯಗಳ ವಿಹಾರದಲ್ಲಿ ಜನಮನವನ್ನು ತಣಿಸಿದ ರಾಯರ ರಾಯ ಶ್ರೀಕೃಷ್ಣದೇವರಾಯ. ಅಂತಹ ನೆಲದಲ್ಲಿ ಇಂದು ಕವಿತಾ ವಾಚನ-ಗಾಯನ ಬಹಳಷ್ಟು ಅರ್ಥಪೂರ್ಣವೆಂದು ಕವಿ ದೊಡ್ಡರಂಗೇಗೌಡರು ನುಡಿದರು.

ಬೌದ್ಧಿಕವಾಗಿದ್ದು ಭಾವವಿಲ್ಲದಿದ್ದರೆ ಕವಿತೆ ನೀರಸವಾಗುತ್ತದೆ. ಅಂತ ಕವಿತೆ ಜನಮನದಲ್ಲಿ ಬೇರೂರುವುದಿಲ್ಲ. ಜೀವನ ಭಾವನೆಗಳ ಸಂಗಮವೇ ಕವಿತೆಯಾಗಬೇಕು. ಅನುಭವದ ಪುನರ್ಮನನವೇ ಕವಿತೆ ಎನ್ನುವ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು. ನುಡಿದಂತೆ ನಡೆಯುವ ಗುಣವನ್ನು ಕವಿ ರೂಪಿಸಿಕೊಳ್ಳಬೇಕು. ಬದುಕು- ಬರಹ ಕವಿಗೆ ಅಭೇದ್ಯವಾಗಬೇಕು. ಸಮಾಜಮುಖಿ ಕಾವ್ಯರಚನೆಗೆ ಈ ವೇದಿಕೆ ಸತ್ಪ್ರೇರಣೆಯಾಗಲಿ ಎನ್ನುವ ಆಶಯವನ್ನು ಕವಿಗಳು ವ್ಯಕ್ತಪಡಿಸಿದರು.

'ಅದ್ವಿತೀಯ ಶ್ರೀಕೃಷ್ಣದೇವರಾಯ ಎನ್ನುವ ಕವನವನ್ನು ದೊಡ್ಡರಂಗೇಗೌಡರು ವಾಚಿಸಿದರು. ಕವಿಗಳು ವಾಚಿಸಿದ ಕವನವನ್ನು ಮೃತ್ಯುಂಜಯ ದೊಡ್ಡವಾಡ ಅವರ ಸಂಗೀತ ಸಂಯೋಜನೆಯಲ್ಲಿ ವೇದಿಕೆಯಲ್ಲೇ ಹಾಡಲಾಯಿತು. ಅಧ್ಯಕ್ಷತೆ ವಹಿಸಿದ್ದ ಡಾ. ಎನ್ ಎಸ್ ಲಕ್ಷ್ಮೀನಾರಾಯಣಭಟ್ಟರು ಮಾತನಾಡಿ `ವೇದಿಕೆ ಬೃಹಸ್ಪತಿ- ಸಭೆ ಸಾಕ್ಷಾತ್ ಸರಸ್ವತಿ ಕವಿತಾ ವಾಚನ ಕೇಳಲು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಕೇಳುಗರು ಸೇರಿರುವುದು ತಮಗೆ ಸಂತಸ ತಂದಿದೆ ಎಂದರು.

ನಾನು ಹಾಡುವುದು ನನಗೆಂದು ,
ಎದೆಭಾರ ಇಳಿಯಲೆಂದು,
ಎಲ್ಲ ಮರೆತು ಕೇಳುತಿಹ ನಿಮಗೆಂದು
ಎನ್ನುವ ಕವನ ವಾಚಿಸಿದರು.

ಬಸವರಾಜ ವಕ್ಕುಂದ, ರವಿಕೊಟಾರಗಸ್ತಿ, ಡಾ.ಎಲ್ ಎನ್ ಮುಕುಂದರಾಜ್, ಡಾ. ವಿಕ್ರಮ್ ವಿಸಾಜಿ, ಎನ್ ಕೆ ಹನುಮಂತಯ್ಯ, ಡಾ. ಸತ್ಯಾನಂದ ಪಾತ್ರೋಟ, ಡಾ. ಲತಾಗುತ್ತಿ, ಸಂಗಮೇಶ್, ದೊಡ್ಡಾಲೂರು ಲಿಂಗಪ್ಪ, ಸಿದ್ದರಾಮ ಕಲ್ಮಠ, ಸಿದ್ದು ದೇವರಮನಿ, ಪರಮೇಶ್ವರಯ್ಯ ಸೊಪ್ಪಿಮಠ, ಶಿವಲಿಂಗಪ್ಪ ಬಳ್ಳಾರಿ, ವಿಘ್ನೇಶ್ವರ ಹಾಗೂ ಗೀತಾಭಟ್ ತಮ್ಮ ಕವನಗಳನ್ನು ವಾಚಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಮನುಬಳಿಗಾರ್, ಜಂಟಿನಿರ್ದೇಶಕರಾದ ಶಂಕರಪ್ಪ ಉಪಸ್ಥಿತರಿದ್ದರು.

"ವಿಜಯನಗರ ಪುನರ್ ನಿರ್ಮಾಣಕ್ಕೆ ಅಡ್ವಾಣಿ ಶಿಲಾನ್ಯಾಸ"


ಹಂಪೆ (ಕಮಲಾಪುರ), ಜ. 29- "ವರ್ತಮಾನವನ್ನು ಸಮೃದ್ಧಗೊಳಿಸಿ ಉಜ್ವಲ ಭವಿಷ್ಯ ಕಟ್ಟಿಕೊಳ್ಳಲು ಭವಿಷ್ಯತ್ ಕಾಲದ ಘಟನೆಗಳು ಪ್ರೇರಣೆ ನೀಡುತ್ತವೆ ಎಂದು ಮಾಜಿ ಉಪ ಪ್ರಧಾನಿ ಸಂಸದ ಎಲ್. ಕೆ. ಆಡ್ವಾಣಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಜಯನಗರ ಪುನಶ್ಚೆನ ಪ್ರತಿಷ್ಠಾನದ ಆಶ್ರಯದಲ್ಲಿ `ಪ್ರಕಲ್ಪಗಳ ಭೂಮಿಪೂಜೆ ಹಾಗೂ ಕಟ್ಟಡಗಳ ಶಿಲಾನ್ಯಾಸವನ್ನು ಶುಕ್ರವಾರ ನೆರವೇರಿಸಿ ಮಾತನಾಡಿದ ಅವರು, ಶ್ರೀಕೃಷ್ಣದೇವರಾಯನ ಆಡಳಿತ ಅನುಕರಣೀಯ ಎಂದ ಹೇಳಿದರು.

`ಕರ್ನಾಟಕಕ್ಕೂ ಮತ್ತು ನನಗೂ ಅವಿನಾಭಾವ ಸಂಬಂಧ ಇದೆ. ಹಂಪೆಗೆ ಎರಡನೇಬಾರಿ ಭೇಟಿ ನೀಡುತ್ತಿದ್ದೆನೆ. ಕಳೆದ ಬಾರಿ ನಾನು ಹಂಪೆಗೆ ಭೇಟಿ ನೀಡಿದಾಗ ಶ್ರೀಕೃಷ್ಣದೇವರಾಯ ಪಟ್ಟಾಭಿಷೇಕದ 500ನೇ ವರ್ಷಾಚರಣೆಯ ಮಹೋತ್ಸವಕ್ಕೆ ನನ್ನನ್ನು ಆಹ್ವಾನಿಸಿದ್ದರು ನಾನು ವಚನ ಪಾಲಿಸಿ, ಆಗಮಿಸಿದ್ದೆ ಎಂದು ಹೇಳಿದರು.ವಿಜಯನಗರ ಸಾಮ್ರಾಜ್ಯದ ಮಾಹಿತಿಯನ್ನು ಬಿಂಬಿಸುವ `ಥೀಮ್ ಪಾರ್ಕ್ ' ನಿರ್ಮಾಣ ಆಗುತ್ತಿರುವುದು ಹಾಗೂ ಈ ಸಾಮ್ರಾಜ್ಯದ ವೈಭವ ನೆನಪಿಸುವ ಚಟುವಟಿಕೆಗಳು ಇಲ್ಲಿ ನಡೆಯುತ್ತಿರುವುದು ಸಂತೋಷದ ಸಂಗತಿ ಎಂದು ಅವರು ಹೇಳಿದರು.

ತಾವು ಕೇಂದ್ರ ವಾರ್ತಾ ಹಾಗೂ ಪ್ರಸಾರ ಸಚಿವರಾಗಿದ್ದಾಗ ಶ್ರೀಕೃಷ್ಣದೇವರಾಯರ ಧ್ವನಿ ಮತ್ತು ಬೆಳಕಿನ ಕಾರ್ಯಕ್ರಮವನ್ನು ರೂಪಿಸಿದ್ದನ್ನು ಸ್ಮರಿಸಿದ ಅವರು, ಈ ಪ್ರದರ್ಶನ ಹೈದರಾಬಾದ್ನಲ್ಲಿ ಪ್ರಯೊ ಆಗಿದ್ದನ್ನು ಪ್ರಸ್ತಾಪಿಸಿ ವಿಜಯನಗರದ ರಾಜಧಾನಿ ಕರ್ನಾಟಕದ ಹಂಪೆಯಲ್ಲೂ ಕೂಡ ಪ್ರದರ್ಶನಗೊಳ್ಳಬೇಕು ಎಂದು ಸಲಹೆ ನೀಡಿದ್ದಾಗಿ ಹೇಳಿದರು.

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಮಾತನಾಡಿ, ವಿಜಯನಗರ ಸಾಮ್ರಾಜ್ಯದ ಭವ್ಯತೆಯ ಪುನರ್ದರ್ಶನಕ್ಕಾಗಿ ಈ ಸಾಮ್ರಾಜ್ಯದ ಚಟುವಟಿಕೆಗಳನ್ನು ಜನರಿಗೆ ತಿಳಿಸಲು ಕರ್ನಾಟಕ ರಾಜ್ಯ ಸರ್ಕಾರ ಪ್ರವಾಸೋದ್ಯಮ ಇಲಾಖೆಯಡಿಯಲ್ಲಿ ವಿಜಯನಗರ ಪುನಶ್ಚೆನ ಪ್ರತಿಷ್ಠಾನ (ಟ್ರಟ್ಸ್ ಸ್ಥಾಪಿಸಿದ್ದು ವೈಯಕ್ತಿಕವಾಗಿ ಸಾರ್ಥಕತೆ - ತೃಪ್ತಿ ಮೂಡಿಸಿದೆ ಎಂದರು. ಈ ಪ್ರತಿಷ್ಠಾನದ ಚಟುವಟಿಕೆಗಳಿಗೆ ಕೂಡಲೇ ಐದು ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗುತ್ತದೆ ಪ್ರತಿಷ್ಠಾನ ತನ್ನ ಕ್ರಿಯಾ ಯೊನೆಯನ್ನು ಸರ್ಕಾರಕ್ಕೆ ಸಲ್ಲಿಸಿದ ನಂತರ ಮುಂದಿನ ಆಯವ್ಯಯದಲ್ಲಿ ಹಣ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಪಟ್ಟಾಭಿಷೇಕ ಮಹೋತ್ಸವ ಸಮಿತಿಯ ಕಾರ್ಯದರ್ಶಿ ವಿ. ನಾಗರಾಜ್ ಅವರು ಮಾತನಾಡಿ, ಅಕ್ಷರ ಧಾಮದ ಮಾದರಿಯಲ್ಲಿ ವಿಜಯನಗರ ವೈಭವದ ಪ್ರತಿಕೃತಿಗಳಲ್ಲದೆ ಸಂಶೋಧನೆ ಉದ್ಯಾನವನ ಮಲ್ಟಿ ಮೀಡಿಯಾ ಪ್ರದರ್ಶನ ಪುಸ್ತಕ ಹಾಗೂ ವಸ್ತು ಸಂಗ್ರಹಾಲಯವನ್ನು ಇಲ್ಲಿ ನಿರ್ಮಿಸಲಾಗುವುದು ಇದಕ್ಕಾಗಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಅಗತ್ಯ ನೆರವು ಪಡೆಯಲಾಗಿದೆ ಎಂದರು

ಶ್ರಿ ರವಿಶಂಕರ್ ಗುರೂಜಿ ಅವರು ಸಾನಿಧ್ಯವಹಿಸಿದ್ದರು ಸಂಸದ ಅನಂತ ಕುಮಾರ್, ಸಚಿವರಾದ ಜಿ. ಕರುಣಾಕರ ರೆಡ್ಡಿ ಜಿ. ಜನಾರ್ದನ ರಡ್ಡಿ ಬಿ. ಶ್ರೀರಾಮುಲು ವಿಶ್ವೇಶ್ವರಹೆಗಡೆ ಕಾಗೇರಿ, ಸಂಸದೆ ಜೆ. ಶಾಂತ ಶಾಸಕರಾದ ಆನಂದ್ ಸಿಂಗ್ ಸುರೇಶ್ ಬಾಬು, ಮೃತ್ಯುಂಜಯ ಜಿನಗಾ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎನ್. ರುದ್ರಗೌಡ ಈ ಸಮಾರಂಭದಲ್ಲಿ ಇದ್ದರು. ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಸ್ವಾಗತಿಸಿದರು ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎ. ಮುರಿಗೆಪ್ಪ ವಂದಿಸಿದರು

Friday, January 22, 2010

"ಸಮ್ಮೇಳನದ ಭಾರ ಹೊತ್ತ ಐದರ ಪೋರ"

ಪೂರ್ವ ಕರಾವಳಿಯ ನ್ಯೂ ಜೆರ್ಸಿ ಕನ್ನಡ ಕುಟುಂಬಗಳ ಒಂದು ಚಿತ್ರವಿದು. ಎಡಿಸನ್ ಸುತ್ತಮುತ್ತ ಪ್ರದೇಶದಲ್ಲಿ ನೆಲೆಸಿರುವ ಸುಮಾರು ಇನ್ನೂರೈವತ್ತು ಕುಟುಂಬಗಳ ಪೈಕಿ ಶೇ.70ರಷ್ಟು ಕನ್ನಡಿಗರಿಗೆ ಕನ್ನಡವೆನಿಸಿಕೊಳ್ಳುವ ಎಲ್ಲದರ ಬಗ್ಗೆ ತಣಿಯದ ಬಯಕೆ. ಒಂದು ಸುಶ್ರಾವ್ಯ ಕನ್ನಡ ಹಾಡು ಆಲಿಸಬೇಕೆಂದರೆ ವಾರಾಂತ್ಯದವರೆಗೂ ಕಾಯಬೇಕಲ್ಲ ಎಂಬ ಕೊರಗು. ಕಾಯುವುದಕ್ಕೆ ತಾಳ್ಮೆ ಇಲ್ಲ. ಅಷ್ಟೇ ಅಲ್ಲ, ಕಾರ್ಯಕ್ರಮ ಎಲ್ಲಿದೆ ಎಂದು ಹುಡುಕಿಕೊಂಡು ಎಕ್ಸಿಟ್ಟುಗಳಲ್ಲಿ ಹೊರಳಾಡಿಕೊಂಡು ಕನ್ನಡದ ವಾಸನೆ ಹಿಡಿದು ಕಾರು ಓಡಿಸುತ್ತಿರಬೇಕು.

ಈ ಬಾರಿ ಟ್ರೈ ಸ್ಟೇಟ್ಸ್ ತ್ರಿವೇಣಿ ಕನ್ನಡ ಸಂಘದಲ್ಲಿ ನಾಟಕ ಇದೆ, ಅದರ ಮುಂದಿನ ವಾರ ಹೊಯ್ಸಳ ಸಂಘದಲ್ಲಿ ಭಾರತದ ಬಂದಿರುವ ಗಾಯಕಿಯ ಭರ್ಜರಿ ಹಾಡುಗಾರಿಕೆ ಇದೆಯಂತೆ, ಅಲ್ಲಿಗೆ ಹೋಗಬೇಕು. ಡಿಸೆಂಬರ್ ನಲ್ಲಿ ನ್ಯೂಯಾರ್ಕಿನಲ್ಲಿ ಕನ್ನಡ ಮಕ್ಕಳ ನಾಟಕಕ್ಕೆ ಹೋಗಲೇಬೇಕು.. ಹೀಗೆ, ಕನ್ನಡತನವನ್ನು ಹುಡುಕಿಕೊಂಡು ನಿತ್ಯ ಸುತ್ತಾಡುತ್ತಿರಬೇಕು. ಇದು ಹತ್ತಾರು ವರಷಗಳಿಂದ ನಡೆದುಬಂದ ಪರಿಪಾಠ. ಆದರೆ, ಎಷ್ಟು ದಿನ ಅಂತ ಅಲ್ಲಿ ಇಲ್ಲಿ ಹೋಗಿಬಂದು ಮಾಡುವುದಕ್ಕೆ ಸಾಧ್ಯ. ನಾವೇ ಒಂದು ಕನ್ನಡ ಸಂಘ ಕಟ್ಟಿದರೆ ಆಯ್ತು, ಅದೇನು ಮಹಾ, ಎಂದುಕೊಂಡರು ಅವರು.

ಒಂದು ದಿನ ಮನೆಗೆ ಹುಡುಗ ಹಾಲು ತರದಿದ್ದರೆ, ಅದಕ್ಕೇನಂತೆ ನಾವೇ ಒಂದು ಡೈರಿ ಶುರುಮಾಡೋಣ ಎನ್ನುವಂತಹವರು ಅಲ್ಲಿದ್ದರು. ಅವರಿಗೆಲ್ಲ ಪ್ರಸನ್ನಕುಮಾರ್ ಎಂಬ ಮಧ್ಯವಯಸ್ಕನೇ ನಾಯಕ. ಸರಿ, ಆಗಷ್ಟೇ ಫ್ಲಾರಿಡಾ ಅಕ್ಕ ಸಮ್ಮೇಳನ (2004) ಮುಗಿದು ಎಲ್ಲರೂ ನ್ಯೂ ಜೆರ್ಸಿಗೆ ವಾಪಸ್ಸಾಗಿದ್ದರು. ಕನ್ನಡದ ಪರಿಮಳ ಇನ್ನೂ ಹಸಿಹಸಿಯಾಗಿ ನವುರಾಗಿತ್ತು. ಒಂದು ಸಂಜೆ ಎಲ್ಲರೂ ಕುಳಿತು ಸಭೆ ಮಾಡಿ ಕನ್ನಡ ಸಂಘ ಕಟ್ಟಿಬಿಡುವ ನಿರ್ಧಾರಕ್ಕೆ ಬಂದರು. ಅಲ್ಲಿ ಒಂದು ಬೃಂದಾವನವೇ ನಿರ್ಮಾಣವಾಯಿತು. ನ್ಯೂ ಜೆರ್ಸಿ ಕನ್ನಡಿಗರ ನಂದಗೋಕುಲದಂತಿರುವ ಬೃಂದಾವನಕ್ಕೆ ಮೊನ್ನೆ ಡಿಸೆಂಬರ್ 5ಕ್ಕೆ ಐದು ವರ್ಷ ತುಂಬಿ ಆರಕ್ಕೆ ಬಿತ್ತು.

ಕರ್ನಾಟಕದ ಶಾಲೆಗಳ ಲೆಕ್ಕದಲ್ಲಿ ಬೃಂದಾವನ ನರ್ಸರಿಗೆ ಹೋಗುವ ಬಾಲಕ. ಐದು ವರ್ಷ ಎಂಟು ತಿಂಗಳು ತುಂಬದೆ ಒಂದನೆ ತರಗತಿಗೆ ಸೇರುವಂತಿಲ್ಲ. ಆದರೆ ಇದೊಂದು ಸ್ಪೆಷಲ್ ಕೇಸ್ ಎಂದು ಪರಿಗಣಿಸಿ ಬಾಲಕನನ್ನು ಪದವಿ ಪರೀಕ್ಷೆಗೆ ಒಡ್ಡಲಾಗಿದೆ. ಅಮೆರಿಕಾದ ಅತ್ಯಂತ ಕಿರಿಯ ಕನ್ನಡ ಸಂಘ ಬೃಂದಾವನ ಬೃಹತ್ ನ್ಯೂ ಜೆರ್ಸಿ ಅಕ್ಕ ಸಮ್ಮೇಳನದ ಭಾರ ಹೊತ್ತು ನಿಲ್ಲುತ್ತಿದೆ. ಈ ಸಮ್ಮೇಳನಕ್ಕೆ ಐದರ ಪೋರನಾಗಿದ್ದಾಗಲೇ ಪವರ್ಫುಲ್ ನಟನೆಯಿಂದ ಸ್ಟಾರ್ ಆಗಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬ್ರಾಂಡ್ ಅಂಬಾಸಡರ್ ಆಗಿದ್ದಾರೆ. ಬೃಂದಾವನ ಸಂಘ ಮಾಜಿ ಅಧ್ಯಕ್ಷ ಮತ್ತು ಅಕ್ಕ ಸಮ್ಮೇಳನದ ಸಂಯೋಜಕ ತ್ರಿವಳಿಗಳಲ್ಲಿ ಒಬ್ಬರಾಗಿರುವ ಪ್ರಸನ್ನ ಕುಮಾರ್ ಅವರನ್ನು ನಾನು ಮೊನ್ನೆ ಬೆಂಗಳೂರಿನಲ್ಲಿ ಭೇಟಿ ಆಗಿದ್ದೆ. ಅವರೊಂದಿಗೆ ನಡೆಸಿದ ಮಾತುಕತೆಯ ಸಾರಾಂಶಕ್ಕಾಗಿ, ನೋಡುತ್ತಿರಿ ದಟ್ಸ್ ಕನ್ನಡ ಎನ್ಆರ್ಐ.

"ಅಮೆರಿಕ ಕನ್ನಡ ಸಂಘಗಳ ಚಾರಿತ್ರಿಕ ದಾಖಲೆ"

ವಿಶಾಲ ಉತ್ತರ ಅಮೆರಿಕದಾದ್ಯಂತ ಮೂವತ್ತರೆಡು ಕನ್ನಡ ಸಂಘಗಳಿವೆ. ಅಂದಾಜು ಒಂದೊಂದು ರಾಜ್ಯಕ್ಕೆ ಒಂದು ಕನ್ನಡ ಸಂಘ ಎನ್ನುವುದು ಲೆಕ್ಕ. ಅರುವತ್ತರ ದಶಕದಲ್ಲಿ ಅಮೆರಿಕಾಗೆ ವಲಸೆಹೋದ ಕನ್ನಡ ಕುಟುಂಬಗಳಿಗೆ ಮೊದಲಬಾರಿಗೆ ಕನ್ನಡ ಸಂಘದ ಚೌಕಟ್ಟು (1972) ಕೊಟ್ಟದ್ದು ಮಿಚಿಗನ್ ರಾಜ್ಯದ ಪುಟ್ಟ ಊರು ಆನ್ ಆನ್ಬರ್. ಆ ಸಂಘದ ಹೆಸರು ಪಂಪ ಕನ್ನಡ ಸಂಘ. ಸಂಘವನ್ನು ಕಟ್ಟಿ ಬೆಳೆಸಿದವರು ಪ್ರಾಥಃ ಸ್ಮರಣೀಯರಾದ ಶ್ರೀಪಾದ ರಾಜು, ಕೃಷ್ಣಪ್ಪ ಮತ್ತು ಗೆಳೆಯರು. 37 ಸಂವತ್ಸರಗಳನ್ನು ಕಂಡಿರುವ ಪಂಪ ಸಂಘದ ಅಧ್ಯಕ್ಷೆಯಾಗಿ ಈ ಸಾಲಿನಲ್ಲಿ ಕೆಲಸ ಮಾಡುತ್ತಿರುವವರು ಮೈಸೂರು ಅನಂತಸ್ವಾಮಿ ಅವರ ಮಗಳು ಸುನೀತಾ ಅನಂತಸ್ವಾಮಿ. ಇವತ್ತಿನ ಲೇಖನಕ್ಕೆ ಈ ಐದು ವಾಕ್ಯಗಳ ಮುನ್ನುಡಿ ಆದಿಪುರಾಣದ ಮುಖಪುಟ ಮತ್ತು ಹಿಂಬದಿಯಪುಟ ಮಾತ್ರ ಎಂದು ಭಾವಿಸಬೇಕು.

ಪಂಪ ಆರಂಭವಾದ ಅನತಿಕಾಲದಲ್ಲೇ ಜನ್ಮತಾಳಿದ್ದು ವಾಷಿಂಗ್ಟನ್ ಡಿಸಿ ಪ್ರದೇಶದ ಕಾವೇರಿ ಕನ್ನಡ ಅಸೋಸಿಯೇಷನ್. ಇತರ ರಾಜ್ಯಗಳಲ್ಲಿ ಕಾಲಕಾಲಕ್ಕೆ ಕನ್ನಡಿಗರ ಜನಸಾಂದ್ರತೆ ಹೆಚ್ಚಾದಂತೆ ಸಂಘಗಳು ಜನ್ಮತಾಳುತ್ತಾ ಬಂದವು. ಕನ್ನಡ ಕುಟುಂಬಗಳಿಗೆ ಒಂದು ವೇದಿಕೆ ಕಲ್ಪಿಸಿಕೊಡುವಲ್ಲಿ ಸಾಫಲ್ಯ ಕಂಡುಕೊಳ್ಳುವುದೇ ಪ್ರತಿಯೊಂದೂ ಸಂಘಗಳ ಮೂಲ ಉದ್ದೇಶ. ಈ ಎಲ್ಲ ಸಂಘಗಳ ಹುಟ್ಟು ಬೆಳವಣಿಗೆ ಸಾಧನೆಯ ಹೆಜ್ಜೆಗುರುತುಗಳನ್ನು ದಾಖಲಿಸುವುದು ಈ ಬರಹದ ಉದ್ದೇಶವಲ್ಲ. ಆದರೆ, ವಿವರಗಳು ಬೇಕು. ಎಲ್ಲಿವೆ? ಯಾರು ಕಟ್ಟಿಕೊಡುತ್ತಾರೆ? ಶ್ರಮ ಮತ್ತು ವಾತ್ಸಲ್ಯದಿಂದ ತಾವು ಕಟ್ಟಿದ ಕನ್ನಡ ಸಂಘಗಳ ಇತಿಹಾಸ ಕಳೆದು ಹೋಗುತ್ತದಾ? ಎಂಬ ಪ್ರಶ್ನೆಯನ್ನು ಅನೇಕ ಹಿರಿಯ ಅಮೆರಿಕನ್ನಡಿಗರು ನಮ್ಮ ಡಾಟ್ ಕಾಂ ಮುಂದೆ ಇಡುತ್ತಿರುತ್ತಾರೆ. ಈ ನಿಟ್ಟಿನಲ್ಲಿ ಕೆಲವು ಬಿಡಿ ಲೇಖನಗಳು ಹರಿಹರೇಶ್ವರ ಅವರು ಸಂಪಾದಿಸುತ್ತಿದ್ದ ಅಮೆರಿಕನ್ನಡ ಪತ್ರಿಕೆಯಲ್ಲಿ ಹಾಗೂ ಹ್ಯೂಸ್ಟನ್ ಸಮ್ಮೇಳನದ ಸ್ಮರಣ ಗ್ರಂಥ 'ದರ್ಶನ' ದಲ್ಲಿ ಎಂಎಸ್ ನಟರಾಜ್ ಅವರ ಕನ್ನಡ ಸಂಘ ನಡೆದುಬಂದ ದಾರಿಯ ಕಥಾನಕಗಳು ಬೆಳಕು ಕಂಡಿವೆ. ಅವೆಲ್ಲ ಇವತ್ತು ಚದುರಿದ ಚಿತ್ರಗಳಂತೆ ಕಾಣಿಸುತ್ತವೆ.

ಅಮೆರಿಕನ್ನಡಿಗ ಎಂದ ಕೂಡಲೇ ಅಕ್ಕ ಹೆಸರು ನೆನಪಾಗುವ ಈ ಕಾಲಘಟ್ಟದಲ್ಲಿ ಅಮೆರಿಕಾ ಕನ್ನಡ ಸಂಘಗಳ ಸಮಗ್ರ ಚರಿತ್ರೆ ಸಂಪುಟವನ್ನು ಅಕ್ಕ ವತಿಯಿಂದಲೇ ನಿರೀಕ್ಷಿಸುವುದು ತಪ್ಪಾಗುವುದಿಲ್ಲ. ಎರಡು ವರ್ಷಕ್ಕೊಮ್ಮೆ ಅಕ್ಕ ಸಮ್ಮೇಳನ ನಡೆಯತ್ತೆ, ನಿಜ. ಸಮ್ಮೇಳನದ ನೆನಪಿಗೆ ಸ್ಮರಣ ಸಂಚಿಕೆಗಳೂ ಸಿದ್ಧವಾಗುತ್ತವೆ, ನಿಜ. ಈ ವರೆಗೆ ನಾವು ಕಂಡ ಸ್ಮರಣ ಸಂಚಿಕೆಗಳು ಬಿಡಿಬಿಡಿ ಲೇಖನಗಳ ಮಾಲೆಯಾಗಿ ಬೈಂಡಿಗ್ ಆಗಿವೆಯೇ ವಿನಾ, ಅವುಗಳಿಗೆ ಒಂದು ಚರಿತ್ರೆಯ ಸತ್ವ ಬಂದಿಲ್ಲ, ನಿಜ. ಸ್ಮರಣ ಸಂಚಿಕೆಗಳ ಉದ್ದಿಶ್ಯ ಚರಿತ್ರೆ ಬರೆಯುವುದಲ್ಲವಾದರೂ ಸಂಘ ಪರಿವಾರದೊಂದಿಗೆ ಸಾಗಿಬಂದ ಕನ್ನಡ ಕುಟುಂಬಗಳ ಪಯಣವನ್ನು ದಾಖಲೆ ಮಾಡುವವರು ಯಾರು? ಅದನ್ನು ಪ್ರಕಟಿಸುವವರು ಯಾರು?

ಐದಾರು ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿ ಸಮ್ಮೇಳನ ನಡೆಸುವ ಅಕ್ಕ ಬಳಗ ಇಂಥದೊಂದು ಕೃತಿಯನ್ನು ಪ್ರಾಜೆಕ್ಟ್ ಮಾದರಿಯಲ್ಲಿ ಕೈಗೆತ್ತಿಕೊಳ್ಳದಿರುವುದು ಒಂದು ಲೋಪ. ಒಂದು ಸಂಘದ ಚರಿತ್ರೆಗೆ 6 ಪುಟದಂತೆ ಲೆಕ್ಕಹಾಕಿ 32 ಸಂಘಗಳ ಸಾಂಸ್ಥಿಕ ಚರಿತ್ರೆಯನ್ನು ದಾಖಲಿಸುವ ಯೋಜನೆಯನ್ನು ಅಕ್ಕ ಈಗಲಾದರೂ ಹಾಕಿಕೊಳ್ಳಬೇಕೆಂದು ದಟ್ಸ್ ಕನ್ನಡ ಸಲಹೆ ಮಾಡುತ್ತದೆ. 200 ಪುಟಗಳ ಅಂಥ ಕೃತಿಯನ್ನು ಬರೆಯುವುದಕ್ಕೆ ಅನುಭವ, ಭಾಷೆ, ಸಮತೋಲನ ಇರುವ ಒಬ್ಬ ಅಮೆರಿಕ ವಾಸಿ ಬರಹಗಾರನನ್ನು ನೇಮಿಸಬೇಕು. ಒಂದು ಪುಸ್ತಕಕ್ಕೆ 10 ಡಾಲರು ಮುಖಬೆಲೆ ಇಡಿ. ಹತ್ತು ಸಾವಿರ ಪ್ರತಿ ಮುದ್ರಿಸಿ ಮಾರಾಟಕ್ಕಿಡಿ. ಡೋನಟ್ಟುಗಳ ಥರ ಮಾರಾಟವಾಗಿ ಅಕ್ಕ ಬೊಕ್ಕಸಕ್ಕೆ ಕನಿಷ್ಠ 50,000 ಡಾಲರು ಆದಾಯ ಬರದಿದ್ದರೆ ಆಗ ನಮ್ಮನ್ನು ಕೇಳಿ.

ಈ ಹಣ ಇಟ್ಟುಕೊಂಡು ಏನು ಮಾಡಬೇಕು? ಬರಲಿರುವ ನ್ಯೂ ಜೆರ್ಸಿ ಅಕ್ಕ ಸಮ್ಮೇಳನ ಅಥವಾ ಅದರ ಮುಂದೆ 2012ರಲ್ಲಿ ಬರುವ ಸಮ್ಮೇಳನದ ಮೊದಲ ದಿನ, ಮೂರು ದಿನಗಳ ಕಾರ್ಯಕ್ರಮಗಳನ್ನು ದೀಪ ಬೆಳಗಿಸಿ ಉದ್ಘಾಟಿಸುವ ಪರಿಪಾಠವಿದೆಯಷ್ಟೆ. ಆ ಹೊತ್ತು ಅಲ್ಲಿ ವಾಡಿಕೆಯಂತೆ ಹಚ್ಚೇವು ಕನ್ನಡದ ದೀಪ ಗೀತೆಯ ಸಮೂಹಗಾನ ಇದ್ದೇ ಇರುತ್ತದೆ. ಪುಸ್ತಕ ಮಾರಿಬಂದ ಹಣದಿಂದ ವೇದಿಕೆಯ ಮೇಲೆ ಹೊಳೆಯುವ ನೀಲಾಜನಗಳಿಗೆ ತುಪ್ಪ ತುಂಬಿಸಿದರೆ ಹೇಗಿರತ್ತೆ? ರಾಜಕಾರಣಿಗಳು ನೀಡುವ ದೇಣಿಗೆಯಿಂದ ಹ್ಯಾಲೋಜಿನ್ ದೀಪಗಳು ಝಗಝಗಿಸುತ್ತವೆ. ಆದರೆ, ಕನ್ನಡದ ಮಮತೆಯನ್ನೂ, ಕನ್ನಡಿಗರನ್ನೂ ಭಾವನಾತ್ಮಕವಾಗಿ ಶಾಶ್ವತವಾಗಿ ಬೆಸೆಯುವ ಇಂಥ ಹಾಲು ಜೇನು ಪ್ರಯತ್ನಗಳನ್ನು ಇನ್ನಾದರೂ ಮಾಡದಿದ್ದರೆ ಬಂದಾದರೂ ಏನು ಪ್ರಯೋಜನ.

Monday, January 18, 2010

ಪಂಚಭೂತಗಳಲ್ಲಿ ನಟ ಕೆಎಸ್ ಅಶ್ವತ್ಥ್ ಲೀನ

ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ಕೆಎಸ್ ಅಶ್ವತ್ಥ್ ಅವರ ಅಂತ್ಯಕ್ರಿಯೆ ಸಕಲ ಸರಕಾರಿ ಗೌರವಗಳೊಂದಿಗೆ ಸೋಮವಾರ ಸಂಜೆ ನೆರವೇರಿತು. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಹರಿಶ್ಚಂದ್ರ ರುದ್ರಭೂಮಿಯಲ್ಲಿ ಅಶ್ವತ್ಥ್ ಅವರ ಪಾರ್ಥೀವ ಶರೀರಕ್ಕೆ ಅವರ ಮಗ ಶಂಕರ್ ಅಶ್ವತ್ಥ್ ಅಗ್ನಿ ಸ್ಪರ್ಶ ಮಾಡುವ ಮೂಲಕ ಅವರ ಭೌತಿಕ ಕಾಯ ಪಂಚಭೂತಗಳಲ್ಲಿ ಲೀನವಾಯಿತು.

ಮೇರುನಟ ಅಶ್ವಥ್ ಚಿತ್ರಸಂಪುಟ

ರಾಜ್ಯ ಸರಕಾರದ ಪ್ರತಿನಿಧಿಯಾಗಿ ಅಶ್ವತ್ಥ್ ಅವರ ಅಂತ್ಯಕ್ರಿಯೆಯಲ್ಲಿ ಕೈಗಾರಿಕಾ ಸಚಿವ ಮುರುಗೇಶ್ ಪಾಲ್ಗೊಂಡಿದ್ದರು. ಸ್ಥಳೀಯ ಶಾಸಕ ರಾಮದಾಸ್, ಮೈಸೂರು ಜಿಲ್ಲಾಧಿಕಾರಿ ಮಣಿವಣ್ಣನ್ ಸಹ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಭಾನು ಪ್ರಕಾಶ್ ಶರ್ಮ ಅವರು ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು.

ಗಣ್ಯರ ಅಂತಿಮ ನಮನ
ಸಂಸದ ಎಚ್ ವಿಶ್ವನಾಥ್, ಮೇಯರ್ ಪುರುಷೋತ್ತಮ್, ಮಾಜಿ ಸಚಿವ ಎಚ್ ಎಸ್ ಮಹದೇವ ಪ್ರಸಾದ್, ಎಂ ಶಿವಣ್ಣ ಮತ್ತು ಎಂ ಮಹದೇವ್, ಕೆಎಚ್ ಬಿ ಅಧ್ಯಕ್ಷ ಜಿ ಟಿ ದೇವೇಗೌಡ, ನಟರಾದ ಕೆಎಸ್ ರತ್ನಾಕರ್, ಶ್ರೀನಾಥ್, ಚೇತನ್ ರಾಮರಾಮ್, ರಾಜೇಶ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಉಮೇಶ್, ರಮೇಶ್ ಭಟ್, ಲೋಕನಾಥ್, ಶಿವರಾಮ್, ಶ್ರೀನಿವಾಸಮೂರ್ತಿ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ನಿರ್ಮಾಪಕ ಎಸ್ ನಾರಾಯಣ್, ಮಾಜಿ ಶಾಸಕ ಎಂ ಕೆ ಸೋಮಶೇಖರ್, ಕನ್ನಡಹೋರಾಟಗಾರ ತಾಯೂರು ವಿಠಲ ಮೂರ್ತಿ ಸೇರಿದಂತೆ ಹಲವಾರು ಗಣ್ಯರು ಅಶ್ವತ್ಥ್ ಅವರ ಅಂತಿಮ ದರ್ಶನ ಪಡೆದರು.

Saturday, January 2, 2010

ಕನಸುಗಳ ಸಾಕಾರಕ್ಕಾಗಿ ಹೊಸವರ್ಷದ ಸಂಕಲ್ಪ


ದಿನಾಲೂ ಬೆಳಿಗ್ಗೆ ವಾಯುವಿಹಾರ ಮಾಡಿರಿ, ದೇಹಕ್ಕೆ ಅವಶ್ಯಕ ಆಕ್ಸಿಜನ್ ದೊರೆಯುವುದು
ಒಂದಾದರೂ ಒಳ್ಳೆಯ ವಿಚಾರ ಪ್ರತಿದಿನ ಓದಿರಿ, ಚಿಂತಿಸಿರಿ, ಮನಕೆ ನೆಮ್ಮದಿ ಲಭಿಸುವುದು
ದೈನಂದಿನ ವ್ಯವಹಾರ ಆಯ-ವ್ಯಯ, ತಪ್ಪು-ಒಪ್ಪು, ದಿನಚರಿಯಲ್ಲಿ ಒಂದು ಪುಟ ಬರೆದಿಡಿ
ಜೀವ-ರಥದ ಲಗಾಮು ನಿಮ್ಮ ಕೈಗೆ ಸಿಗುವದು. ಕನಿಷ್ಠ ಒಬ್ಬರಿಗಾದರೂ ಸಹಾಯ ಮಾಡಿರಿ,
ಮನ ಪ್ರಫುಲ್ಲಿತವಾಗುವದು. ಒಳ್ಳೆಯ ಉಕ್ತಿ ಬರೆದು ಗೋಡೆಗೆ ತಾಗಿಸಿರಿ, ಅದರಿಂದ
ಸುವಿಚಾರ ನಿಮ್ಮ ಧಮನಿಯಲಿ ಹರಿಯುವುದು, ರಕ್ತದೊತ್ತಡ ಕಡಿಮೆಯಾಗುವುದು.

ನಾನು ಹಿಂದೆ ಯೋಗಪ್ರಚಾರ ಮಾಡುತ್ತ ಊರೂರು ಅಲೆದಾಡುತ್ತಿದ್ದೆ. ಮಲ್ಲಾಡಿಹಳ್ಳಿಯ ಯೋಗಾಚಾರ್ಯ ಶ್ರೀರಾಘವೇಂದ್ರ ಸ್ವಾಮಿಗಳಿಂದ ಪ್ರಭಾವಿತನಾಗಿದ್ದೆ. ಅವರು ತಾಯಂದಿರಿಗೆ ಹೇಳುತ್ತಿದ್ದರು. ನಿಮ್ಮ ಮಗು ಒಂದು ದಿನ ಸೂರ್ಯನಮಸ್ಕಾರ ಹಾಕುವುದನ್ನು ತಪ್ಪಿದರೆ, ಆ ದಿನ ಅವನಿಗೆ ಊಟ ಕೊಡಬೇಡಿ ಎಂದು. ನಾನು ಒಂದು ದಿನ ಊಟಕ್ಕೆ ಕೂಡಲು ಸಿದ್ಧನಾಗಿದ್ದೆ. ಆಗ ನೆನಪಾಯಿತು ನಾನು ಆ ದಿನ ಸೂರ್ಯ ನಾನು ನಮಸ್ಕಾರ ಹಾಕಿರಲಿಲ್ಲ ಎಂದು. ಬೇರೆ ಕೋಣೆಗೆ ಹೋಗಿ ಸೂರ್ಯ ನಮಸ್ಕಾರ ಹಾಕಿ ಬಂದೆ. ನನ್ನ ಮಡದಿಗೆ ನಗು ತಡೆಯಲಾಗಲಿಲ್ಲ. ನಾನು ಆಗ, ನಾವು ಇನ್ನೊಬ್ಬರಿಗೆ ಉಪದೇಶ ಮಾಡುತ್ತೇವೆ, ಆದರೆ ಅಚರಿಸುವುದಿಲ್ಲ. ಇದು ಸರಿಯಲ್ಲ ಎಂದಿದ್ದೆ. ನಮ್ಮ ಮಾತು ನಮ್ಮನ್ನು ತಿದ್ದಬೇಕು ಆಗ ಮಾತಿಗೆ ಮಂತ್ರದ ಶಕ್ತಿ ಬರುತ್ತದೆ ಎಂದು ಒಬ್ಬ ಮಹಾತ್ಮರು ಹೇಳಿದ್ದಾರೆ. ಪ್ರತಿ ದಿನ ಪಾರಾಯಣ ಮಾಡಬೇಕು. ಒಳ್ಳೆಯ ವಿಚಾರ ಓದಬೇಕು. ಈ ಕಾಲದಲ್ಲಿ ಟಿ.ವಿ. ಬಂದು ನಮ್ಮ ಜೀವನದ ಸ್ಥಿತಿಗತಿಯನ್ನೇ ಬದಲಿಸಿಬಿಟ್ಟಿದೆ. ದಿನಚರಿ ಬರೆಯುವ ಅಭ್ಯಾಸ ಮಕ್ಕಳಿಗೆ ಹೇಳಿಕೊಡಬೇಕು. ಅದರಿಂದ ಬಹಳ ಲಾಭವಿದೆ. ದಿನಚರಿ ಬರೆಯುವುದರಿಂದ ನಮ್ಮ ಕಾರ್ಯಕ್ರಮದ ಬಗ್ಗೆ ನಮಗೆ ಒಂದು ಬಗೆಯ ಹಿಡಿತ ದೊರೆಯುತ್ತದೆ. ಇತರರಿಗೆ ಸಹಾಯ ಮಾಡುವುದು ನಮ್ಮ ಜೀವನದ ಶೈಲಿಯಾಗಬೇಕು. ಅದರಿಂದ ಬಹಳ ಲಾಭಗಳಿವೆ. ಮನೆಯ ಗೋಡೆಯ ಮೇಲೆ ಒಳ್ಳೆಯ ಉಕ್ತಿಗಳನ್ನು ಬರೆದು ಹಚ್ಚುವ ವಾಡಿಕೆ ಹಿಂದಿನಕಾಲದಲ್ಲಿತ್ತು. ಈಗ ನಾನು ಅದನ್ನು ಕ್ವಚಿತ್ತಾಗಿ ಕಂಡಿದ್ದೇನೆ. ಸುವಿಚಾರ ಯಾವಾಗಲೂ ನಮ್ಮ ಧಮನಿಗಳಲ್ಲಿ ಹರಿಯುವುದು ಅವಶ್ಯಕವಾಗಿದೆ.

ಸಂಸ್ಕೃತ ಮಹಾಕವಿ ಭಾರವಿಯ ಬಗ್ಗೆ ಒಂದು ಕತೆ ಪ್ರಚಲಿತವಿದೆ. ಅವನು ಬಾಲಕನಾಗಿದ್ದಾಗ ಸುಂದರ ಕಾವ್ಯ ಶ್ಲೋಕಗಳನ್ನು ರಚಿಸುತ್ತಿದ್ದನಂತೆ. ಊರ ಜನರೆಲ್ಲ ಮೆಚ್ಚಿದರೂ ತಂದೆ ಮಾತ್ರ ಮೆಚ್ಚುತ್ತಿರಲಿಲ್ಲ. ಒಮ್ಮೆ ಮೆಚ್ಚದ ತಂದೆಯ ಮೇಲೆ ಕಲ್ಲೆಸೆಯಲು ಮನೆಯ ಮಾಳಿಗೆ ಏರಿದ್ದ. ಬೆಳಖಿಂಡಿಯಿಂದ ನೋಡಿದ. ತಾಯಿಗೆ ತಂದೆ ಹೇಳುತ್ತಿದ್ದ. `ನನ್ನ ಮಗ ಮಹಾಕವಿಯಾಗಬೇಕು, ಆಸ್ಥಾನಕವಿಯಾಗಬೇಕು. ಅದಕ್ಕೇ ನಾನು ಅವನ ಕಾವ್ಯ ಮೆಚ್ಚಿದರೂ ಅವನೆದುರು ನನ್ನ ಮೆಚ್ಚುಗೆ ತೋರುವುದಿಲ್ಲ. ಅವನ ಪ್ರಗತಿ ನಿಲ್ಲಬಾರದೆಂಬುದು ನನ್ನ ಆಸೆ' ಎಂದು. ಮಗನಿಗೆ ತನ್ನ ತಪ್ಪಿನ ಅರಿವಾಗಿ ತಂದೆಯ ಕಾಲು ಹಿಡಿಯುತ್ತಾನೆ. ತಂದೆಯನ್ನು ತಪ್ಪಾಗಿ ಭಾವಿಸಿ ಅವನನ್ನು ಶಿಕ್ಷಿಸಲು ಹೊರಟ ಮಗನಿಗೆ ಶಿಕ್ಷೆಯಾವುದು ಹೇಳಿರಿ? ಎಂದು ಕೇಳುತ್ತಾನೆ. ತಂದೆ ಹೇಳುತ್ತಾನೆ, ಅಂಥವನಿಗೆ ಹೆಂಡತಿಯ ಮನೆಗೆ ಇರಲು ಕಳಿಸಬೇಕು ಎಂದು. ಕೆಲಸವಿಲ್ಲದವ ಹೆಂಡತಿಯ ಮನೆಯಲ್ಲಿ ಕೆಲದಿನ ಇದ್ದು ಅವಮಾನ ಸಹಿಸಿ ಮನೆ ಬಿಟ್ಟು ಹೊರಬಿದ್ದಾಗ, ಒಂದು ಸರೋವರದ ದಂಡೆಯಲ್ಲಿ ಕಮಲ ಪತ್ರದ ಮೇಲೆ ಒಂದು ಶ್ಲೋಕ ಬರೆಯುತ್ತಾನೆ. ಅದನ್ನು ಅಲ್ಲಿಯ ರಾಜ ನೋಡಿ ಮೆಚ್ಚಿ ಒಯ್ಯುತ್ತಾನೆ. ನಂತರ ಅರಮನೆಗೆ ಬಂದು ಸಿಗಲು ಹೇಳುತ್ತಾನೆ.

ರಾಜನು ಆ ಶ್ಲೋಕವನ್ನು ಸುವರ್ಣಾಕ್ಷರಗಳಲ್ಲಿ ಕೆತ್ತಿಸಿ ತನ್ನ ಮಲಗುವ ಕೋಣೆಯಲ್ಲಿರಿಸಿರುತ್ತಾನೆ. ಕವಿಗೆ ರಾಜನನ್ನು ನೋಡುವ ಅವಕಾಶವೇ ದೊರೆಯುವುದಿಲ್ಲ. ಮುಂದೆ ಒಮ್ಮೆ ರಾಜ ಬೇಟೆಗಾಗಿ ಹೋದವ ಯಾವುದೋ ಕಾರಣದಿಂದಾಗಿ ಹಠಾತ್ತನೆ ಪ್ರಯಾಣ ನಿಲ್ಲಿಸಿ ಅರಮನೆಗೆ ಮರಳುತ್ತಾನೆ. ತನ್ನ ಶೈಯ್ಯಾಗೃಹದಲ್ಲಿ ರಾಣಿ ಒಬ್ಬ ಯುಕನೊಂದಿಗೆ ಮಲಗಿದ್ದು ನೋಡುತ್ತಾನೆ. ಕೂಡಲೆ ಖಡ್ಗವನ್ನು ತೆಗೆದು ಅವರಿಬ್ಬರನ್ನು ಕೊಲ್ಲಲು ಸಿದ್ಧನಾಗುತ್ತಾನೆ. ಆಗ ಕವಿಯ ಶ್ಲೋಕ ಕಾಣುತ್ತದೆ. ಅದನ್ನು ಓದುತ್ತಾನೆ. :

ಸಹಸಾವಿದಧೀತನಕ್ರಿಯಾಂ ಅವಿವೇಕಃಪರಮಾಪದಾಂಪದಂ | ವೃಣುತೇ ಹಿ ವಿಮೃಶ್ಯಕಾರಿಣಂ ಗುಣಲಿಬ್ಧಾಃ ಸ್ವಯಮೇವ ಸಂಪದಾಃ (ಒಮ್ಮೆಲೇ ಯಾವುದೇ ಕಲಸವನ್ನು ಮಾಡಬಾರದು. ಅವಿವೇಕವು ಪರಮ ಆಪತ್ತುಗಳನ್ನು ತವರ್ಮನೆಯಾಗಿದೆ. ವಿಚಾರವಿಮರ್ಶೆ ಮಾಡಿ ಕೆಲಸಮಾಡಬೇಕು. ಸಂಪತ್ತು (ಯಶ) ಗುಣಗಳನ್ನು ಹುಡುಕಿಕೊಂಡು ಬರುತ್ತದೆ.) ಅವರನ್ನು ಎಚ್ಚರಿಸಿ ವಿಚಾರಿಸುತ್ತಾನೆ. ನಿಜ ಸಂಗತಿ ತಿಳಿದು ದಂಗಾಗುತ್ತಾನೆ. ಹಿಂದೆ ರಾಜನ ಪುತ್ರನನ್ನು ದುಷ್ಕರ್ಮಿಗಳು ಅಪಹರಿಸಿರುತ್ತಾರೆ. ಹಲವಾರು ವರ್ಷಗಳ ಮೇಲೆ ರಾಜನ ಅನುಪಸ್ಥಿತಿಯಲ್ಲಿ ಆ ಹುಡುಗ ಸಿಕ್ಕಿರುತ್ತಾನೆ. ಅವನೀಗ ದೊಡ್ಡವನಾಗಿರುತ್ತಾನೆ. ತಾಯಿಯಾದ ರಾಣಿ ಅವನನ್ನು ಸತ್ಕರಿಸಿ ಎರೆದು ಮಲಗಿಸಿರುತ್ತಾಳೆ. ರಾಜನಿಗೆ ತಾನು ಮಾಡಬಹುದಾಗಿದ್ದ ತಪ್ಪಿನ ಅರಿವಾಗುತ್ತದೆ. ಆ ಶ್ಲೋಕ ಬರೆದ ಕವಿಯನ್ನು ಹುಡುಕಿಸಿ ರಾಜ ಮರ್ಯದೆಕೊಟ್ಟು ಆಸ್ಥಾನ ಕವಿ ಪಟ್ಟ ನೀಡುತ್ತಾನೆ ಎಂಬ ಕತೆ ಇದೆ. ಒಳ್ಳೆಯ ವಿಚಾರ ನಮ್ಮ ನೆನಪಿನಲ್ಲಿದ್ದರೂ ಅವು ನಮ್ಮನ್ನು ಕಾಪಾಡುತ್ತವೆ. ಹೊಸ ವರ್ಷದ ಶುಭಾಶಯಗಳು.

Friday, January 1, 2010

ಸಾಧನೆಗೆ ದೃಢ ಸಂಕಲ್ಪ, ಆತ್ಮಾವಲೋಕನ


ಹೊಸವರ್ಷಕ್ಕೆ ಸ್ವಾಗತ ಬಯಸುವಾಗ ಕಳೆದ ವರ್ಷದಲ್ಲಿಯ ಆಗುಹೋಗುಗಳ ಬಗ್ಗೆ ಒಂದು ಸಿಂಹಾವಲೋಕನ ಮಾಡುವ ಪದ್ಧತಿ ಇರುತ್ತದೆ. ವೈಯಕ್ತಿಕ ಜೀವನದಲ್ಲಿ ಪ್ರತಿಯೊಬ್ಬರೂ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಸಫಲವಾಗಲಿ ಎಂದು ಹಾರೈಸಿ ಒಂದು ಬಗೆಯ ಸಂಕಲ್ಪ ಮಾಡುತ್ತಾರೆ. ಇಂಗ್ಲೀಷಿನಲ್ಲಿ `ನ್ಯು ಇಯರ್ ರೆಸೊಲ್ಯುಶನ್' ಎನ್ನುತ್ತಾರೆ. ಹೊಸ ವರ್ಷಕ್ಕಾಗಿ ಏನು ಮಾಡಬೇಕು, ಏನು ಬಿಡಬೇಕು ಎಂಬ ನಿರ್ಧಾರ ಕೈಕೊಳ್ಳುತ್ತಾರೆ. ಹಾಗೆ ಪ್ರತಿಯೊಬ್ಬರೂ ಒಂದು ಬಗೆಯ ಅತ್ಮಾವಲೋಕನ ಮಾಡುವುದು ಉಚಿತ.

ಕಳೆದ ವರ್ಷ ಆಲಸ್ಯದಲ್ಲೇ ಕಳೆದುಹೋಯಿತು ಎಂದು ನನ್ನ ಮನಃಸಾಕ್ಷಿ ನುಡಿಯುತ್ತದೆ. ನನ್ನ ಮಿತ್ರರು ಹಿತೈಷಿಗಳ ನೆನಪಾಗುತ್ತದೆ. ಅವರಲ್ಲಿದ್ದ ಜಿಗುಟುತನ ನನ್ನಲ್ಲಿ ಇಲ್ಲವಲ್ಲ ಎಂದು ಬೇಸರ ಬರುತ್ತದೆ. ಮಿತ್ರ ಎಚ್.ಬಿ.ಎಲ್.ರಾಯರು ನೆನಪಾಗುತ್ತಾರೆ. ಅವರಷ್ಟು ಪಾದರಸದಂತೆ ಕ್ರಿಯಾಶೀಲರಾದ ವ್ಯಕ್ತಿಯನ್ನು ನಾನು ಕಂಡಿಲ್ಲ. ಮುಂಬೈಯಲ್ಲಿ ನಿರ್ಮಿತವಾದ ಭವ್ಯ ಕನ್ನಡ ಭವನಕ್ಕಾಗಿ ಅವರು ಪಟ್ಟ ಕಷ್ಟ, ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಅವರ ಉತ್ಸಾಹ ಅದಮ್ಯ. ಬೈಪಾಸ್ ಸರ್ಜರಿ ಆದ ಈ ವ್ಯಕ್ತಿ, ಎಪ್ಪತ್ತಾರು ಮೀರಿದ ಮೇಲೂ ಇಪ್ಪತ್ತಾರರ ಉತ್ಸಾಹ ತೋರಿ ಯುವಕರನ್ನು ನಾಚಿಸುವಂತಹ ಕೆಲಸಮಾಡುತ್ತಾರೆ. ಬಹುಶಃ ಗಿನ್ನಿಸ್ ರೆಕಾರ್ಡ್ ಸಾಧಿಸಬಹುದಾದ ವ್ಯಕ್ತಿ ಇವರು. ಅವರ ನೆನಪಾದಾಗ ನನ್ನ ಆಲಸ್ಯದ ಬಗ್ಗೆ ನನಗೇ ನಾಚಿಕೆಯಾಗುತ್ತದೆ. ಇನ್ನೊಬ್ಬ ಮಿತ್ರ ಡಾ| ಕೆ.ಎಸ್.ಶರ್ಮಾ ಅವರ ಸಾಹಸ ಪವಾಡ ಸದೃಶ. ವಕೀಲಿವೃತ್ತಿಯಲ್ಲಿ, ಕಾರ್ಮಿಕರ ಪರವಾಗಿ ನಡೆಸಿದ ಹೋರಾಟ ಮತ್ತು ಸಾಧನೆಯನ್ನು ಬದಿಗಿರಿಸಿ ಅವರು ಸಾಹಿತ್ಯಕ್ಕಾಗಿ ದುಡಿದದ್ದನ್ನು ಗಮನಿಸಿದರೂ ಆಶ್ಚರ್ಯವಾಗುತ್ತದೆ. ಸಮಗ್ರ ಬೇಂದ್ರೆ ಸಂಪುಟಗಳನ್ನು ತರುವಲ್ಲಿ ಅವರು ಮಾಡಿದ ಹರಸಾಹಸ ಕನ್ನಡದಲ್ಲಿ ಅಪೂರ್ವ. ನನಗೆ ಹೊಸವರ್ಷದ ಪ್ರಥಮ ದಿನ ನೆನಪಾದ ಇನ್ನೊಬ್ಬ ಅಸಾಧಾರಣ ವ್ಯಕ್ತಿ ರವಿ ಬೆಳಗೆರೆ. ದಿನಕ್ಕೆ 80 ಪುಟ ಬರೆಯುತ್ತಾರೆ ಈ ಆಸಾಮಿ. ಮೂರು ದಿನಗಳಲ್ಲಿ ಒಂದು ಪುಸ್ತಕ ಬರೆದುಬಿಡುವ ಛಲ ಹಾಗೂ ಬಲ ಇವರಲ್ಲಿದೆ. ಅವರಲ್ಲಿದ್ದ ದೈತ್ಯಶಕ್ತಿಯ ಬಗ್ಗೆ ನನಗೆ ಬಹಳ ಸಲ ಅಚ್ಚರಿಯಾಗುತ್ತದೆ. ಅಧ್ಯಾತ್ಮದಲ್ಲೂ ನನಗೆ ಬಹಳ ಆಸಕ್ತಿ ಇದೆ. ಆ ಕ್ಷೇತ್ರದಲ್ಲಿ ನನಗೆ ಆತ್ಮೀಯರಾದ ಡಾ| ಪ್ರಭಂಜನಾಚಾರ್ಯ ಹಾಗೂ ವಿದ್ಯಾವಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಬರವಣಿಗೆ ಹಾಗೂ ಭಾಷಣಗಳು ನನ್ನನ್ನು ಮೂಕವಿಸ್ಮಿತನನ್ನಾಗಿಸುತ್ತವೆ. ಈ ಶಕ್ತಿ ಅವರಿಗೆಲ್ಲಿಂದ ಬಂತು ಎಂದು ನಾನು ಬಹಳ ಸಲ ಅಚ್ಚರಿ ಪಟ್ಟಿದ್ದೇನೆ.

ಹೊಸವರ್ಷದ ಶುಭಾರಂಭದಲ್ಲಿ ನನ್ನ ಗುರುಗಳೆಲ್ಲ ನೆನಪಾಗುತ್ತಾರೆ. ಬೇಂದ್ರೆ, ಗೋಕಾಕ, ಮಧುರಚೆನ್ನರ ನೆನಪಾಗುತ್ತದೆ. ಕನ್ನಡ ಸಾಹಿತ್ಯದ ಈ ಮೂವರು ದಿಗ್ಗಜರು ನನಗೆ ಆತ್ಮೀಯರು ಎಂಬ ಹೆಮ್ಮೆ ನನಗಿದೆ. ಅವರ ಸಾಧನೆಯ ಪರ್ವತದ ಮುಂದೆ ನಮ್ಮ ಸಾಧನೆ ಒಂದು ಚಿಕ್ಕ ಮಳಲದಿನ್ನೆಯಂತಹದು. ಇನ್ನು ಜೀವನದಲ್ಲಿ ನನ್ನ ಸಂಪರ್ಕಕ್ಕೆ ಬಂದ ಮಹಾತ್ಮರ ನೆನಪಾಗುತ್ತದೆ. ಭಗವಾನ ನಿತ್ಯಾನಂದರನ್ನು ನಾನು 1960ರ ಸಾಲಿನಲ್ಲಿ ಪ್ರತಿವಾರ ಸಂದರ್ಶಿಸುತ್ತಿದ್ದೆ. ನಿತ್ಯಾನಂದ ದರ್ಶನ ಎಂಬ ಪತ್ರಿಕೆಯನ್ನು ಸಂಪಾದಕನಾಗಿ ಒಂದು ವರ್ಷ ನಡೆಸಿದೆ. ಈ ಸಿದ್ಧರ ಶಿಷ್ಯರಾದ ಸ್ವಾಮಿ ಶಿವಾನಂದರ ಸಂಪರ್ಕ ಬಂತು, ಆಶ್ಚರ್ಯವೆನಿಸಿತು. ಅವರು ನಿತ್ಯಾನಂದರನ್ನು ಪ್ರತ್ಯಕ್ಷ ಕಾಣದಿದ್ದರೂ ಸ್ವಪ್ನದಲ್ಲಿ ಕಂಡು ಮಾರ್ಗದರ್ಶನ ಪಡೆದಿದ್ದಾರೆ, ಅಗಾಧ ಸಾಧನೆ ಮಾಡಿದ್ದಾರೆ. ನಾವು ಅವರನ್ನು ಹತ್ತಿರದಿಂದ ಕಂಡು ಕೂಡ ಏನೂ ಸಾಧಿಸಲಿಲ್ಲ. ಗುರುದೇವ ರಾನಡೆಯವರ ನೆನಪಾಗುತ್ತದೆ. ಅವರ ಕೃಪಾಕಟಾಕ್ಷ ಪಡೆದವನು ನಾನು. ಮಹಾತ್ಮರ ಮಾನಸ ಸರೋವರಗಳಲ್ಲಿ ಮಿಂದೆ, ಆದರೆ ಪೂರ್ತಿ ಲಾಭ ಪಡೆಯುವ ಯೋಗ್ಯತೆ ನನ್ನಲ್ಲಿರಲಿಲ್ಲ. ಯೋಗ ವಿಷಯದಲ್ಲಿ ಯೋಗಾಚಾರ್ಯ ಬಿ.ಕೆ.ಎಸ್.ಅಯ್ಯಂಗಾರ್, ಹಟಯೋಗಿ ನಿಕಂ ಗುರೂಜಿ, ನಿಸರ್ಗೋಪಚಾರ ತಜ್ಞ ಡಾ| ಪದ್ಮನಾಭ ಬೋಳಾರ, ಇತ್ತೀಚೆಗೆ ನನ್ನ ಮೇಲೆ ಪ್ರಭಾವ ಬೀರುತ್ತಿರುವ ಬಾಬಾ ರಾಮದೇವ ಇವರಿಂದ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸ್ವಲ್ಪ ಕಲಿತಿದ್ದೇನೆ, ಆದರೆ ಕಲಿಯುವುದು ಇನ್ನೂ ಬಹಳ ಇದೆ ಎಂಬ ಎಚ್ಚರ ನನಗಿದೆ.

ಹೊಸ ವರುಷ ಬಂದಾಗ ಅನೇಕ ಅಪೂರ್ಣ ಕೆಲಸಗಳು ನೆನಪಾಗುತ್ತವೆ. ಈ ವರ್ಷ ಅವನ್ನೆಲ್ಲ ಪೂರೈಸಬೇಕೆಂಬ ಸಂಕಲ್ಪ ಮಾಡಬೇಕೆನಿಸುತ್ತದೆ. ಇದಕ್ಕಾಗಿ ಅವಿರತ ಪ್ರಯತ್ನ ಕಾರ್ಯಮಗ್ನತೆ ಅವಶ್ಯ. ನಾನೇ ಹಿಂದೆ ಬರೆದ ಒಂದು ವಚನ ನನಗೆ ನೆನಪಾಗುತ್ತದೆ: