Friday, January 22, 2010

"ಸಮ್ಮೇಳನದ ಭಾರ ಹೊತ್ತ ಐದರ ಪೋರ"

ಪೂರ್ವ ಕರಾವಳಿಯ ನ್ಯೂ ಜೆರ್ಸಿ ಕನ್ನಡ ಕುಟುಂಬಗಳ ಒಂದು ಚಿತ್ರವಿದು. ಎಡಿಸನ್ ಸುತ್ತಮುತ್ತ ಪ್ರದೇಶದಲ್ಲಿ ನೆಲೆಸಿರುವ ಸುಮಾರು ಇನ್ನೂರೈವತ್ತು ಕುಟುಂಬಗಳ ಪೈಕಿ ಶೇ.70ರಷ್ಟು ಕನ್ನಡಿಗರಿಗೆ ಕನ್ನಡವೆನಿಸಿಕೊಳ್ಳುವ ಎಲ್ಲದರ ಬಗ್ಗೆ ತಣಿಯದ ಬಯಕೆ. ಒಂದು ಸುಶ್ರಾವ್ಯ ಕನ್ನಡ ಹಾಡು ಆಲಿಸಬೇಕೆಂದರೆ ವಾರಾಂತ್ಯದವರೆಗೂ ಕಾಯಬೇಕಲ್ಲ ಎಂಬ ಕೊರಗು. ಕಾಯುವುದಕ್ಕೆ ತಾಳ್ಮೆ ಇಲ್ಲ. ಅಷ್ಟೇ ಅಲ್ಲ, ಕಾರ್ಯಕ್ರಮ ಎಲ್ಲಿದೆ ಎಂದು ಹುಡುಕಿಕೊಂಡು ಎಕ್ಸಿಟ್ಟುಗಳಲ್ಲಿ ಹೊರಳಾಡಿಕೊಂಡು ಕನ್ನಡದ ವಾಸನೆ ಹಿಡಿದು ಕಾರು ಓಡಿಸುತ್ತಿರಬೇಕು.

ಈ ಬಾರಿ ಟ್ರೈ ಸ್ಟೇಟ್ಸ್ ತ್ರಿವೇಣಿ ಕನ್ನಡ ಸಂಘದಲ್ಲಿ ನಾಟಕ ಇದೆ, ಅದರ ಮುಂದಿನ ವಾರ ಹೊಯ್ಸಳ ಸಂಘದಲ್ಲಿ ಭಾರತದ ಬಂದಿರುವ ಗಾಯಕಿಯ ಭರ್ಜರಿ ಹಾಡುಗಾರಿಕೆ ಇದೆಯಂತೆ, ಅಲ್ಲಿಗೆ ಹೋಗಬೇಕು. ಡಿಸೆಂಬರ್ ನಲ್ಲಿ ನ್ಯೂಯಾರ್ಕಿನಲ್ಲಿ ಕನ್ನಡ ಮಕ್ಕಳ ನಾಟಕಕ್ಕೆ ಹೋಗಲೇಬೇಕು.. ಹೀಗೆ, ಕನ್ನಡತನವನ್ನು ಹುಡುಕಿಕೊಂಡು ನಿತ್ಯ ಸುತ್ತಾಡುತ್ತಿರಬೇಕು. ಇದು ಹತ್ತಾರು ವರಷಗಳಿಂದ ನಡೆದುಬಂದ ಪರಿಪಾಠ. ಆದರೆ, ಎಷ್ಟು ದಿನ ಅಂತ ಅಲ್ಲಿ ಇಲ್ಲಿ ಹೋಗಿಬಂದು ಮಾಡುವುದಕ್ಕೆ ಸಾಧ್ಯ. ನಾವೇ ಒಂದು ಕನ್ನಡ ಸಂಘ ಕಟ್ಟಿದರೆ ಆಯ್ತು, ಅದೇನು ಮಹಾ, ಎಂದುಕೊಂಡರು ಅವರು.

ಒಂದು ದಿನ ಮನೆಗೆ ಹುಡುಗ ಹಾಲು ತರದಿದ್ದರೆ, ಅದಕ್ಕೇನಂತೆ ನಾವೇ ಒಂದು ಡೈರಿ ಶುರುಮಾಡೋಣ ಎನ್ನುವಂತಹವರು ಅಲ್ಲಿದ್ದರು. ಅವರಿಗೆಲ್ಲ ಪ್ರಸನ್ನಕುಮಾರ್ ಎಂಬ ಮಧ್ಯವಯಸ್ಕನೇ ನಾಯಕ. ಸರಿ, ಆಗಷ್ಟೇ ಫ್ಲಾರಿಡಾ ಅಕ್ಕ ಸಮ್ಮೇಳನ (2004) ಮುಗಿದು ಎಲ್ಲರೂ ನ್ಯೂ ಜೆರ್ಸಿಗೆ ವಾಪಸ್ಸಾಗಿದ್ದರು. ಕನ್ನಡದ ಪರಿಮಳ ಇನ್ನೂ ಹಸಿಹಸಿಯಾಗಿ ನವುರಾಗಿತ್ತು. ಒಂದು ಸಂಜೆ ಎಲ್ಲರೂ ಕುಳಿತು ಸಭೆ ಮಾಡಿ ಕನ್ನಡ ಸಂಘ ಕಟ್ಟಿಬಿಡುವ ನಿರ್ಧಾರಕ್ಕೆ ಬಂದರು. ಅಲ್ಲಿ ಒಂದು ಬೃಂದಾವನವೇ ನಿರ್ಮಾಣವಾಯಿತು. ನ್ಯೂ ಜೆರ್ಸಿ ಕನ್ನಡಿಗರ ನಂದಗೋಕುಲದಂತಿರುವ ಬೃಂದಾವನಕ್ಕೆ ಮೊನ್ನೆ ಡಿಸೆಂಬರ್ 5ಕ್ಕೆ ಐದು ವರ್ಷ ತುಂಬಿ ಆರಕ್ಕೆ ಬಿತ್ತು.

ಕರ್ನಾಟಕದ ಶಾಲೆಗಳ ಲೆಕ್ಕದಲ್ಲಿ ಬೃಂದಾವನ ನರ್ಸರಿಗೆ ಹೋಗುವ ಬಾಲಕ. ಐದು ವರ್ಷ ಎಂಟು ತಿಂಗಳು ತುಂಬದೆ ಒಂದನೆ ತರಗತಿಗೆ ಸೇರುವಂತಿಲ್ಲ. ಆದರೆ ಇದೊಂದು ಸ್ಪೆಷಲ್ ಕೇಸ್ ಎಂದು ಪರಿಗಣಿಸಿ ಬಾಲಕನನ್ನು ಪದವಿ ಪರೀಕ್ಷೆಗೆ ಒಡ್ಡಲಾಗಿದೆ. ಅಮೆರಿಕಾದ ಅತ್ಯಂತ ಕಿರಿಯ ಕನ್ನಡ ಸಂಘ ಬೃಂದಾವನ ಬೃಹತ್ ನ್ಯೂ ಜೆರ್ಸಿ ಅಕ್ಕ ಸಮ್ಮೇಳನದ ಭಾರ ಹೊತ್ತು ನಿಲ್ಲುತ್ತಿದೆ. ಈ ಸಮ್ಮೇಳನಕ್ಕೆ ಐದರ ಪೋರನಾಗಿದ್ದಾಗಲೇ ಪವರ್ಫುಲ್ ನಟನೆಯಿಂದ ಸ್ಟಾರ್ ಆಗಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬ್ರಾಂಡ್ ಅಂಬಾಸಡರ್ ಆಗಿದ್ದಾರೆ. ಬೃಂದಾವನ ಸಂಘ ಮಾಜಿ ಅಧ್ಯಕ್ಷ ಮತ್ತು ಅಕ್ಕ ಸಮ್ಮೇಳನದ ಸಂಯೋಜಕ ತ್ರಿವಳಿಗಳಲ್ಲಿ ಒಬ್ಬರಾಗಿರುವ ಪ್ರಸನ್ನ ಕುಮಾರ್ ಅವರನ್ನು ನಾನು ಮೊನ್ನೆ ಬೆಂಗಳೂರಿನಲ್ಲಿ ಭೇಟಿ ಆಗಿದ್ದೆ. ಅವರೊಂದಿಗೆ ನಡೆಸಿದ ಮಾತುಕತೆಯ ಸಾರಾಂಶಕ್ಕಾಗಿ, ನೋಡುತ್ತಿರಿ ದಟ್ಸ್ ಕನ್ನಡ ಎನ್ಆರ್ಐ.

No comments:

Post a Comment