Saturday, January 30, 2010

"ಕಾವ್ಯ ಸಮಾಜಮುಖಿಯಾಗಲಿ: ದೊಡ್ಡರಂಗೇಗೌಡ"


ಹಂಪಿ, ಜ.29:'ಅಂತರಂಗದ ಭಾವಲಹರಿ ಕವಿತೆ- ಬದುಕಿನ ಅನುಭವಗಳಿಂದ ಮಡುಗಟ್ಟಿ ಹೊರಹೊಮ್ಮಬೇಕು, ಕಾವ್ಯ ಮಾಜಮುಖಿಯಾಗಿರಬೇಕು ಎನ್ನುವ ಆಶಯವನ್ನು ಸಾಹಿತಿ ಡಾ. ದೊಡ್ಡರಂಗೇಗೌಡರು ವ್ಯಕ್ತಪಡಿಸಿದರು.

ಶ್ರೀ ಕೃಷ್ಣದೇವರಾಯರ ಪಟ್ಟಾಭಿಷೇಕದ 500ನೇ ವರ್ಷಾಚರಣೆ ಪ್ರಯುಕ್ತ ವಿರೂಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಲಾಗಿದ್ದ ಕವಿಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಂಪಿಯ ಕಲ್ಲು ಕಲ್ಲುಗಳೂ ವೀಣೆಯ ನಾದವನ್ನು ಹೊರಹೊಮ್ಮಿಸುತ್ತವೆ. ದಕ್ಷ ಆಡಳಿತದೊಂದಿಗೆ ನವರಸ ಕಾವ್ಯಗಳ ವಿಹಾರದಲ್ಲಿ ಜನಮನವನ್ನು ತಣಿಸಿದ ರಾಯರ ರಾಯ ಶ್ರೀಕೃಷ್ಣದೇವರಾಯ. ಅಂತಹ ನೆಲದಲ್ಲಿ ಇಂದು ಕವಿತಾ ವಾಚನ-ಗಾಯನ ಬಹಳಷ್ಟು ಅರ್ಥಪೂರ್ಣವೆಂದು ಕವಿ ದೊಡ್ಡರಂಗೇಗೌಡರು ನುಡಿದರು.

ಬೌದ್ಧಿಕವಾಗಿದ್ದು ಭಾವವಿಲ್ಲದಿದ್ದರೆ ಕವಿತೆ ನೀರಸವಾಗುತ್ತದೆ. ಅಂತ ಕವಿತೆ ಜನಮನದಲ್ಲಿ ಬೇರೂರುವುದಿಲ್ಲ. ಜೀವನ ಭಾವನೆಗಳ ಸಂಗಮವೇ ಕವಿತೆಯಾಗಬೇಕು. ಅನುಭವದ ಪುನರ್ಮನನವೇ ಕವಿತೆ ಎನ್ನುವ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು. ನುಡಿದಂತೆ ನಡೆಯುವ ಗುಣವನ್ನು ಕವಿ ರೂಪಿಸಿಕೊಳ್ಳಬೇಕು. ಬದುಕು- ಬರಹ ಕವಿಗೆ ಅಭೇದ್ಯವಾಗಬೇಕು. ಸಮಾಜಮುಖಿ ಕಾವ್ಯರಚನೆಗೆ ಈ ವೇದಿಕೆ ಸತ್ಪ್ರೇರಣೆಯಾಗಲಿ ಎನ್ನುವ ಆಶಯವನ್ನು ಕವಿಗಳು ವ್ಯಕ್ತಪಡಿಸಿದರು.

'ಅದ್ವಿತೀಯ ಶ್ರೀಕೃಷ್ಣದೇವರಾಯ ಎನ್ನುವ ಕವನವನ್ನು ದೊಡ್ಡರಂಗೇಗೌಡರು ವಾಚಿಸಿದರು. ಕವಿಗಳು ವಾಚಿಸಿದ ಕವನವನ್ನು ಮೃತ್ಯುಂಜಯ ದೊಡ್ಡವಾಡ ಅವರ ಸಂಗೀತ ಸಂಯೋಜನೆಯಲ್ಲಿ ವೇದಿಕೆಯಲ್ಲೇ ಹಾಡಲಾಯಿತು. ಅಧ್ಯಕ್ಷತೆ ವಹಿಸಿದ್ದ ಡಾ. ಎನ್ ಎಸ್ ಲಕ್ಷ್ಮೀನಾರಾಯಣಭಟ್ಟರು ಮಾತನಾಡಿ `ವೇದಿಕೆ ಬೃಹಸ್ಪತಿ- ಸಭೆ ಸಾಕ್ಷಾತ್ ಸರಸ್ವತಿ ಕವಿತಾ ವಾಚನ ಕೇಳಲು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಕೇಳುಗರು ಸೇರಿರುವುದು ತಮಗೆ ಸಂತಸ ತಂದಿದೆ ಎಂದರು.

ನಾನು ಹಾಡುವುದು ನನಗೆಂದು ,
ಎದೆಭಾರ ಇಳಿಯಲೆಂದು,
ಎಲ್ಲ ಮರೆತು ಕೇಳುತಿಹ ನಿಮಗೆಂದು
ಎನ್ನುವ ಕವನ ವಾಚಿಸಿದರು.

ಬಸವರಾಜ ವಕ್ಕುಂದ, ರವಿಕೊಟಾರಗಸ್ತಿ, ಡಾ.ಎಲ್ ಎನ್ ಮುಕುಂದರಾಜ್, ಡಾ. ವಿಕ್ರಮ್ ವಿಸಾಜಿ, ಎನ್ ಕೆ ಹನುಮಂತಯ್ಯ, ಡಾ. ಸತ್ಯಾನಂದ ಪಾತ್ರೋಟ, ಡಾ. ಲತಾಗುತ್ತಿ, ಸಂಗಮೇಶ್, ದೊಡ್ಡಾಲೂರು ಲಿಂಗಪ್ಪ, ಸಿದ್ದರಾಮ ಕಲ್ಮಠ, ಸಿದ್ದು ದೇವರಮನಿ, ಪರಮೇಶ್ವರಯ್ಯ ಸೊಪ್ಪಿಮಠ, ಶಿವಲಿಂಗಪ್ಪ ಬಳ್ಳಾರಿ, ವಿಘ್ನೇಶ್ವರ ಹಾಗೂ ಗೀತಾಭಟ್ ತಮ್ಮ ಕವನಗಳನ್ನು ವಾಚಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಮನುಬಳಿಗಾರ್, ಜಂಟಿನಿರ್ದೇಶಕರಾದ ಶಂಕರಪ್ಪ ಉಪಸ್ಥಿತರಿದ್ದರು.

No comments:

Post a Comment