Wednesday, October 7, 2009

ಬಸವಣ್ಣನವರ ವಚನಗಳು

೧.
ಉದಕದೊಳಗೆ ಬೈಚಿಟ್ಟ
ಬೈಕೆಯ ಕಿಚ್ಚಿನಂತೆ ಇದ್ದಿತ್ತು;
ಸಸಿಯೊಳಗಣ
ರಸದ ರುಚಿಯಂತೆ ಇದ್ದಿತ್ತು;
ನನೆಯೊಳಗಣ
ಪರಿಮಳದಂತೆ ಇದ್ದಿತ್ತು;
ಕೂಡಲಸಂಗಮದೇವರ ನಿಲವು
ಕನ್ನೆಯ ಸ್ನೇಹದಂತೆ ಇದ್ದಿತ್ತು.

೨.
ಕಾಳಿಯ ಕಂಕಾಳದಿಂದ ಮುನ್ನ
ತ್ರಿಪುರ ಸಂಹಾರದಿಂದ ಮುನ್ನ
ಹರಿವಿರಿಂಚಿಗಳಿಂದ ಮುನ್ನ
ಉಮೆಯ ಕಲ್ಯಾಣದಿಂದ ಮುನ್ನ
ಮುನ್ನ, ಮುನ್ನ, ಮುನ್ನ,
ಅಂದಂದಿಗೆ ಎಳೆಯ ನೀನು, ಹಳೆಯ ನಾನು
ಮಹಾದಾನಿ ಕೂಡಲಸಂಗಮದೇವ.

೩.
ಅಯ್ಯಾ, ನೀನು ನಿರಾಕಾರವಾದಲ್ಲಿ
ನಾನು ಜ್ಞಾನವೆಂಬ ವಾಹನವಾಗಿದ್ದೆ ಕಾಣಾ.
ಅಯ್ಯಾ, ನೀನು ನಾಂಟ್ಯಕ್ಕೆ ನಿಂದಲ್ಲಿ
ನಾನು ಚೈತನ್ಯವೆಂಬ ವಾಹನವಾಗಿದ್ದೆ ಕಾಣಾ.
ಅಯ್ಯಾ, ನೀನು ಸಾಕಾರವಾಗಿದ್ದಲ್ಲಿ
ನಾನು ವೃಷಭನೆಂಬ ವಾಹನವಾಗಿದ್ದೆ ಕಾಣಾ.
ಅಯ್ಯಾ, ನೀನೆನ್ನ ಭವವ ಕೊಂದಹೆನೆಂದು
ಜಂಗಮಲಾಂಛನವಾಗಿ ಬಂದಲ್ಲಿ
ನಾನು ಭಕ್ತನೆಂಬ ವಾಹನವಾಗಿದ್ದೆ ಕಾಣಾ ಕೂಡಲಸಂಗಮದೇವ.

೪.
ಕರಿ ಘನ, ಅಂಕುಶ ಕಿರಿದೆನ್ನಬಹುದೆ ? ಬಾರದಯ್ಯ!
ಗಿರಿ ಘನ, ವಜ್ರ ಕಿರಿದೆನ್ನಬಹುದೆ ? ಬಾರದಯ್ಯ!
ತಮಂಧ ಘನ, ನಿಮ್ಮ ನೆನೆವ ಮನ ಕಿರಿದೆನ್ನಬಹುದೆ ? ಬಾರದಯ್ಯ!
ಮರಹು ಘನ, ನಿಮ್ಮ ನೆನೆವ ಮನ ಕಿರಿದೆನ್ನಬಹುದೆ ? ಬಾರದಯ್ಯ!
ಕೂಡಲಸಂಗಮದೇವ.

೫.
ಸಂಸಾರಸಾಗರದ ತೆರೆ ಕೊಬ್ಬಿ
ಮುಖದ ಮೇಲೆ ಅಲೆವುತ್ತಿದೆ ನೋಡಾ!
ಸಂಸಾರಸಾಗರ ಉರದುದ್ದವೇ ಹೇಳಾ ?
ಸಂಸಾರಸಾಗರ ಕೊರಲುದ್ದವೇ ಹೇಳಾ ?
ಸಂಸಾರಸಾಗರ ಶಿರದುದ್ದವಾದ ಬಳಿಕ ಏನ ಹೇಳುವೆನಯ್ಯ ?
ಅಯ್ಯ; ಅಯ್ಯ, ಎನ್ನ ಹುಯ್ಯಲ ಕೇಳಯ್ಯ!
ಕೂಡಲಸಂಗಮದೇವ, ನಾನೇವೆನೇವೆನಯ್ಯ!

೬.
ಚಂದ್ರಮನಂತೆ ಕಳೆ ಸಮನಿಸಿತ್ತೆನಗೆ
ಸಂಸಾರವೆಂಬ ರಾಹು ಸರ್ವಗ್ರಾಸಿಯಾಗಿ ನುಂಗಿತ್ತಯ್ಯ,
ಇಂದೆನ್ನ ದೇಹಕ್ಕೆ ಗ್ರಹಣವಾಯಿತ್ತು.
ಇನ್ನೆಂದಿಂಗೆ ಮೋಕ್ಷವಹುದೋ ?! ಕೂಡಲಸಂಗಮದೇವ.

೭.
ನಾನೊಂದ ನೆನೆದರೆ, ತಾನೊಂದ ನೆನೆವುದು;
ನಾನಿತ್ತಲೆಳೆದರೆ, ತಾನತ್ತಲೆಳೆವುದು;
ತಾ ಬೇರೆ ಎನ್ನನಳಲಿಸಿ ಕಾಡಿತ್ತು;
ತಾ ಬೇರೆ ಎನ್ನ ಬಳಲಿಸಿ ಕಾಡಿತ್ತು;
ಕೂಡಲಸಂಗನ ಕೂಡಿಹೆನೆಂದರೆ
ತಾನೆನ್ನ ಮುಂದುಗೆಡಿಸಿತ್ತು ಮಾಯೆ.

೮.
ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ,
ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ,
ಕೂಟಕ್ಕೆ ಸ್ತ್ರಿಯಾಗಿ ಕೂಡಿದಳು ಮಾಯೆ,
ಇದಾವಾವ ಪರಿಯಲ್ಲು ಕಾಡಿತ್ತು ಮಾಯೆ.
ಈ ಮಾಯೆಯ ಕಳೆವಡೆ ಎನ್ನಳವಲ್ಲ
ನೀವೇ ಬಲ್ಲಿರಿ ಕೂಡಲಸಂಗಮದೇವ.

೯.
ಇಂದಿಂಗೆಂತು ನಾಳಿಂಗೆಂತೆಂದು
ಬೆಂದೊಡಲ ಹೊರೆಯ ಹೋಯಿತ್ತೆನ್ನ ಸಂಸಾರ!
ಹಿಂದೆ ನಾನಾ ಯೋನಿಯಲ್ಲಿ ಬಂದೆನೆಂಬ ಹೇಯವಿಲ್ಲ!
ಮುಂದೆ ಮುಕ್ತಿಯಾಗಬೇಕೆಂಬ ಯುಕ್ತಿಯಿಲ್ಲ!
ಎಂದೆಂದೂ ಸದಾಶಿವನ ಕುಂದದೆ ನೆನೆಯಲೀಯದೆ
ಕೊಂದಹುದೀ ಮಾಯೆ ಕೂಡಲಸಂಗಮದೇವ!

೧೦.
ಆಸತ್ತೆನಲಸಿದೆನೆಂದರೆ ಮಾಣದು,
ಬೇಸತ್ತೆ ಬೆಂಬಿದ್ದೆನೆಂದರೆ ಮಾಣದು,
ಏವೆನೇವೆನೆಂದರೆ ಮಾಣದು-
ಕಾಯದ ಕರ್ಮದ ಫಲಭೋಗವು.
ಕೂಡಲಸಂಗನ ಶರಣರು ಬಂದು
"ಹೋ ಹೋ ಅಂಜದಿರಂಜದಿರು" ಎಂದರಾನು ಬದುಕುವೆನು.

೧೧.
ಸಂಸಾರವೆಂಬ ಸರ್ಪ ಮುಟ್ಟಲು
ಪಂಚೇಂದ್ರಿಯವಿಷಯವೆಂಬ
ವಿಷದಿಂದಾನು ಮುಂದುಗೆಟ್ಟೆನಯ್ಯ,
ಆನು ಹೊರಳಿ ಬೀಳುತ್ತಿದ್ದೆನಯ್ಯ;
"ಓಂ ನಮಶ್ಶಿವಾಯ" ಎಂಬ ಮಂತ್ರವ ಜಪಿಸುತ್ತಿದ್ದೆನಯ್ಯ
ಕೂಡಲಸಂಗಮದೇವ.

೧೨.
ಎಂದೋ, ಸಂಸಾರದ ದಂದುಗ ಹಿಂಗುವುದೆನಗೆಂದೋ ?
ಮನದಲ್ಲಿ ಪರಿಣಾಮವಹುದೆನಗಿನ್ನೆಂದೊ ?
ಕೂಡಲಸಂಗಮದೇವಾ ಇನ್ನೆಂದೋ
ಪರಮಸಂತೋಷದಲಿಹುದೆನಗೆಂದೋ ?

೧೩.
ಕಾಲಲಿ ಕಟ್ಟಿದ ಗುಂಡು, ಕೊರಳಲಿ ಕಟ್ಟಿದ ಬೆಂಡು!
ತೇಲಲೀಯದು ಗುಂಡು, ಮುಳುಗಲೀಯದು ಬೆಂಡು!
ಇಂತಪ್ಪ ಸಂಸಾರಶರಧಿಯ ದಾಂಟಿಸಿ
ಕಾಲಾಂತಕನೇ ಕಾಯೋ, ಕೂಡಲಸಂಗಯ್ಯ!

೧೪.
ಲೇಸ ಕಂಡು ಮನ ಬಯಸಿ ಬಯಸಿ
ಆಶೆ ಮಾಡಿದರಿಲ್ಲ ಕಂಡಯ್ಯ.
ತಾಳಮರಕ್ಕೆ ಕೈಯ್ಯ ನೀಡಿ, ಮೇಲ ನೋಡಿ
ಗೋಣು ನೊಂದುದಯ್ಯ.
ಕೂಡಲಸಂಗಮದೇವ ಕೇಳಯ್ಯ
ನೀನೀವ ಕಾಲಕ್ಕಲ್ಲದಿಲ್ಲ ಕಂಡಯ್ಯ.

೧೫.
ಚಂದ್ರೋದಯಕ್ಕೆ ಅಂಬುಧಿ ಹೆಚ್ಚುವುದಯ್ಯ.
ಚಂದ್ರ ಕುಂದೆ ಕುಂದುವುದಯ್ಯ,
ಚಂದ್ರಂಗೆ ರಾಹು ಅಡ್ಡ ಬಂದಲ್ಲಿ
ಅಂಬುಧಿ ಬೊಬ್ಬಿಟ್ಟಿತ್ತೇ ಅಯ್ಯ ?
ಅಂಬುಧಿಯ ಮುನಿ ಆಪೋಶನವ ಕೊಂಡಲ್ಲಿ
ಚಂದ್ರಮನಡ್ಡ ಬಂದನೆ ಅಯ್ಯ ?
ಆರಿಗಾರೂ ಇಲ್ಲ, ಕೆಟ್ಟವಂಗೆ ಕೆಳೆಯಿಲ್ಲ
ಜಗದ್ ನಂಟ ನೀನೇ ಅಯ್ಯ ಕೂಡಲಸಂಗಮದೇವ.

೧೬.
ಒಲೆ ಹತ್ತಿ ಉರಿದರೆ ನಿಲ ಬಹುದಲ್ಲದೆ
ಧರೆ ಹತ್ತಿ ಉರಿದರೆ ನಿಲ ಬಾರದು.
ಏರಿ ನೀರುಂಬಡೆ, ಬೇಲಿ ಕೈಯ ಮೇವಡೆ
ನಾರಿ ತನ್ನ ಮನೆಯಲ್ಲಿ ಕಳುವಡೆ
ತಾಯ ಮೊಲೆವಾಲು ನಂಜಾಗಿ ಕೊಲುವಡೆ
ಇನ್ನಾರಿಗೆ ದೂರುವೆ
ತಂದೆ ಕೂಡಲಸಂಗಮದೇವ
ನೀ ಹುಟ್ಟಿಸಿ ಜೀವನ ಭವದುಃಖಿಯ ಮಾಡಿದ ಬಳಿಕ.
ಬಿಡಿಸುವರಾರುಂಟು ?

೧೭.
ಎನ್ನ ಚಿತ್ತವು ಅತ್ತಿಯ ಹಣ್ಣು ನೋಡಯ್ಯ,
ವಿಚಾರಿಸಿದರೇನು ಹುರುಳಿಲ್ಲವಯ್ಯ.
ಪ್ರಪಂಚಿನ ಡಂಬಿನಲ್ಲಿ ಎನ್ನನೊಂದು ರೂಹುಮಾಡಿ
ನೀವಿರಿಸಿದಿರಯ್ಯ ಕೂಡಲಸಂಗಮದೇವ.

೧೮.
ಮುಂಗಯ್ಯ ಕಂಕಣಕೆ ಕನ್ನಡಿಯ ತೋರುವಂತೆ
ಎನ್ನ ಮನ ನಿಧಾನವನೊಲ್ಲದೆ ಜರಗ ಮೆಚ್ಚಿತ್ತು ನೋಡಾ
ನಾಯಿಗೆ ನಾರಿವಾಣವಕ್ಕುವುದೆ ? ಕೂಡಲಸಂಗಮದೇವ.

೧೯.
ಎನ್ನ ಮನವೆಂಬ ಮರ್ಕಟನು
ತನುವಿಕಾರವೆಂಬ ಅಲ್ಪಸುಖದಾಸೆ ಮಾಡಿ,
ವೃಥಾ ಭ್ರಮಣಗೊಂಡು, ನಾನಾ ದೆಸೆಗೆ ಲಂಘಿಸಿ
ಅಳಲಿಸಿ ಬಳಲಿಸುತ್ತಿದೆ ನೋಡಾ!
ಕೂಡಲಸಂಗಮದೇವರೆಂಬ ವೃಕ್ಷಕ್ಕೆ ಲಂಘಿಸಿ
ಅಪರಿಮಿತ ಸುಖವನೆಯ್ದದು ನೋಡಾ!

೨೦.
ಕೊಂಬೆಯ ಮೇಲಣ ಮರ್ಕಟನಂತೆ
ಲಂಘಿಸುವುದೆನ್ನ ಮನವು
ನಿಂದಲ್ಲಿ ನಿಲಲೀಯದೆನ್ನ ಮನವು
ಹೊಂದಿದಲ್ಲಿ ಹೊಂದಲೀಯದೆನ್ನ ಮನವು
ಕೂಡಲಸಂಗಮದೇವಾ
ನಿಮ್ಮ ಚರಣ ಕಮಲದಲ್ಲಿ ಭ್ರಮರನಾಗಿರಿಸು ನಿಮ್ಮ ಧರ್ಮ.

೨೧.
ಅಂದಣವನೇರಿದ ಸೊಣಗನಂತೆ
ಕಂಡರೆ ಬಿಡದು ತನ್ನ ಮುನ್ನಿನ ಸ್ವಭಾವವನು
ಸುಡು, ಸುಡು; ಮನವಿದು ವಿಷಯಕ್ಕೆ ಹರಿವುದು,
ಮೃಡ, ನಿಮ್ಮನನುದಿನ ನೆನೆಯಲೀಯದು.
ಎನ್ನೊಡೆಯನೇ, ಕೂಡಲಸಂಗಮದೇವ,
ನಿಮ್ಮ ಚರಣವ ನೆನೆವಂತೆ ಕರುಣಿಸು,
ಸೆರಗೊಡ್ಡಿ ಬೇಡುವೆ ನಿಮ್ಮ ಧರ್ಮ.

೨೨.
ತುಪ್ಪದ ಸವಿಗೆ ಅಲಗ ನೆಕ್ಕುವ
ಸೊಣಗನಂತೆನ್ನ ಬಾಳುವೆ
ಸಂಸಾರಸಂಗವ ಬಿಡದು ನೋಡೆನ್ನ ಮನವು.
ಈ ನಾಯಿತನವ ಮಾಣಿಸು
ಕೂಡಲಸಂಗಮದೇವಯ್ಯ ನಿಮ್ಮ ಧರ್ಮ.

೨೩.
ಒಂದು ಮೊಲಕ್ಕೆ ನಾಯನೊಂಬತ್ತ ಬಿಟ್ಟಂತೆ
ಎನ್ನ ಬಿಡು, ತನ್ನ ಬಿಡೆಂಬುದು ಕಾಯವಿಕಾರ;
ಎನ್ನ ಬಿಡು, ತನ್ನ ಬಿಡೆಂಬುದು ಮನೋವಿಕಾರ.
ಕರಣೇಂದ್ರಿಯಗಳೆಂಬ ಸೊಣಗ ಮುಟ್ಟದ ಮುನ್ನ
ಮನ ನಿಮ್ಮನೆಯ್ದುಗೆ ಕೂಡಲಸಂಗಮದೇವ.

೨೪.
ತನ್ನ ವಿಚಾರಿಸಲೊಲ್ಲದು
ಇದಿರ ವಿಚಾರಿಸ ಹೋಹುದೀ ಮನವು.
ಏನು ಮಾಡುವೆನೀ ಮನವನು:
ಎಂತು ಮಾಡುವೆನೀ ಮನವನು-
ಕೂಡಲಸಂಗನ ಶರಣರ ನಚ್ಚದ ಮೆಚ್ಚದ ಬೆಂದ ಮನವನು ?

೨೫.
ತನ್ನಿಚ್ಛೆಯ ನುಡಿದರೆ ಮೆಚ್ಚುವುದೀ ಮನವು.
ಇದಿರಿಚ್ಛೆಯ ನುಡಿದರೆ ಮೆಚ್ಚದೀ ಮನವು
ಕೂಡಲಸಂಗನ ಶರಣರ ನಚ್ಚದ ಮೆಚ್ಚದ ಮನವನು
ಕಿಚ್ಚಿನೊಳಿಕ್ಕುವೆನು.

೨೬.
ಸುಡಲೀ ಮನವೆನ್ನ (ಮುಡುಬನ) ಮಾಡಿತ್ತು ನಡೆವಲ್ಲಿ;
ನುಡಿವಲ್ಲಿ ಅಧಿಕನೆಂದೆನಿಸಿತ್ತು.
ಬೆಡಗಿನ ಕೀಲು ಕಳೆದು, ಕೆಡೆದ ಬಳಿಕ,
ಕಡುಗೂಪ ಮಡದಿ ತಾ ಮುಟ್ಟಲಮ್ಮಳು;
ಒಡಲನುರಿಗೊಂಬುದು: ಒಡವೆಯನರಸು ಕೊಂಬ;
ಕಡುಗೂಪ ಮಡದಿಯ ಮತ್ತೊಬ್ಬ ಚೆನ್ನಿಗ ಕೊಂಬ.
ಮುನ್ನ ಮಾಡಿದ ಪಾಪ ತನ್ನ ಬೆನ್ನ ಬಿಡದನ್ನಕ
ಇನ್ನು ಬಯಸಿದರೊಳವೆ ಕೂಡಲಸಂಗಮದೇವ ?

೨೭.
ವಚನದ ಹುಸಿ-ನುಸುಳೆಂತು ಮಾಬುದೆನ್ನ ?
ಮನದ ಮರ್ಕಟತನವೆಂತು ಮಾಬುದೆನ್ನ ?
ಹೃದಯದ ಕಲ್ಮಷವೆಂತು ಮಾಬುದೆನ್ನ ?
ಕಾಯವಿಕಾರಕ್ಕೆ ತರಿಸಲುವೋದೆನು!
ಎನಗಿದು ವಿಧಿಯೇ, ಕೂಡಲಸಂಗಮದೇವ ?

೨೮.
ಮುನಿದೆಯಾದರೆ ಒಮ್ಮೆ ಜರಿದರೆ ಸಾಲದೆ ?
ಅಕಟಕಟ, ಮದನಂಗೆ ಮಾರುಗೊಡುವರೆ ?
ಹಗೆಗೆ ಮಾರುಗೊಟ್ಟು ನಿನ್ನವರನೊಪ್ಪಿಸುವರೆ ?
ಕೂಡಲಸಂಗಮದೇವ ?

೨೯.
ವಿಕಳನಾದೆನು ಪಂಚೇಂದ್ರಿಯಧಾತುವಿಂದ!
ಮತಿಗೆಟ್ಟನು ಮನದ ವಿಕಾರದಿಂದ!
ಧೃತಿಗೆಟ್ಟೆನು ಕಾಯವಿಕಾರದಿಂದ!
ಶರಣುವೊಕ್ಕೆನು ಕೂಡಲಸಂಗಮದೇವಯ್ಯ
ಎನ್ನುವನು ಕಾಯಯ್ಯ.

೩೦.
ಕಾಯವಿಕಾರ ಕಾಡಿಹುದಯ್ಯ!
ಮನೋವಿಕಾರ ಕೂಡಿಹುದಯ್ಯ!
ಇಂದ್ರಿಯವಿಕಾರ ಸುಳಿದಿಹುದಯ್ಯ!
ಆ ಸುಳುಹಿನೊಳಗೆ ಸುಳಿವುತ್ತಲಿದ್ದೇನೆ-ಸಿಲುಕಿಸದಿರಯ್ಯ!
ಅನ್ಯಚಿತ್ತವಿರಿಸದಿರಯ್ಯ, ನಿಮ್ಮ ಚಿತ್ತವಿರಿಸಯ್ಯ!
ಅನುಪಮಸುಖ ಸಾರಾಯ ಶರಣರಲ್ಲಿ,
ಕೂಡಲಸಂಗಮದೇವ, ನಿಮ್ಮಲ್ಲಿ ಇದೇ ವರವ ಬೇಡುವೆನಯ್ಯ ?

೩೧.
ಆನು ಒಬ್ಬನು; ಸುಡುವರೈವರು.
ಮೇಲೆ ಕಿಚ್ಚು ಘನ, ನಿಲಲು ಬಾರದು.
ಕಾಡುಬಸವನ ಹುಲಿ ಕೊಂಡೊಯ್ದರೆ
ಆರೈಯಲಾಗದೆ ಕೂಡಲಸಂಗಮದೇವ ?

೩೨.
ಬೆಳೆಯ ಭೂಮಿಯಲೊಂದು ಪ್ರಳಯದ ಕಸ ಹುಟ್ಟಿ,
ತಿಳಿಯಲೀಯದು; ಎಚ್ಚರಲೀಯದು.
ಎನ್ನವಗುಣವೆಂಬ ಕಸವ ಕಿತ್ತು ಸಲಹಯ್ಯ ಲಿಂಗತಂದೆ.
ಸುಳಿದೆಗೆದು ಬೆಳೆವೆನು ಕೂಡಲಸಂಗಮದೇವ.

೩೩.
ವಿಷಯವೆಂಬ ಹಸುರನೆನ್ನ ಮುಂದೆ ತಂದು
ಪಸರಿಸಿದೆಯಯ್ಯ;
ಪಶುವೇನ ಬಲ್ಲುದು ಹಸುರೆಂದೆಳಸುವುದು
ವಿಷಯರಹಿತನ ಮಾಡಿ, ಭಕ್ತಿರಸವ ದಣಿಯ ಮೇಯಿಸಿ
ಸುಬುದ್ಧಿಯೆಂಬುದಕವನೆರೆದು ನೋಡಿ ಸಲಹಯ್ಯ
ಕೂಡಲಸಂಗಮದೇವ.

೩೪.
ಅಯ್ಯ, ಎಳಗರು ತಾಯನರಸಿ ಬಳಲುವಂತೆ
ಅಯ್ಯ, ನಿಮ್ಮನರಸಿ ಬಳಲುತ್ತಿದ್ದೇನೆ,
ಅಯ್ಯ, ನೀವೆನ್ನ ಮನಕ್ಕೆ ಪ್ರಸನ್ನವ ಮಾಡಿ
ಕಾರುಣ್ಯವ ಮಾಡಿರಯ್ಯ!
ನೀವೆನ್ನ ಮನಕ್ಕೆ ನೆಲೆವನೆಯಾಗಿ ಕಾರುಣ್ಯವ ಮಾಡಿರಯ್ಯ!
ನೀವಿನಿತು ಲೇಸನೀಯಯ್ಯ, ಅಂಬೇ, ಅಂಬೇ,
ಕೂಡಲಸಂಗಮದೇವ!

೩೫.
ಕೆಸರಲ್ಲಿ ಬಿದ್ದ ಪಶುವಿನಂತೆ
ಅನು ದೆಸೆದೆಸೆಗೆ ಬಾಯ ಬಿಡುತಿದ್ದೇನಯ್ಯ
ಅಯ್ಯಾ, ಆರೈವರಿಲ್ಲ--
"ಅಕಟಕಟಾ! ಪಶು" ವೆಂದೆನ್ನ
ಕೂಡಲಸಂಗಮದೇವ ಕೊಂಬ ಹಿಡಿದೆತ್ತುವನ್ನಕ.

೩೬.
ಬಡಪಶು ಪಂಕದಲ್ಲಿ ಬಿದ್ದರೆ
ಕಾಲ ಬಡಿವುದಲ್ಲದೆ, ಬೇರೆ ಗತಿಯುಂಟೆ ?
ಶಿವ ಶಿವಾ! ಹೋದಹೆ, ಹೋದಹೆನಯ್ಯ!
ನಿಮ್ಮ ಮನದೆತ್ತಲೆನ್ನ ತೆಗೆಯಯ್ಯ
ಪಶುವಾನು, ಪಶುಪತಿ ನೀನು.
ತುಡುಗುಣಿಯೆಂದೆನ್ನ ಹಿಡಿದು ಬಡಿಯದ ಮುನ್ನ.
ಒಡೆಯ, ನಿಮ್ಮ ಬಯ್ಯದಂತೆ ಮಾಡು
ಕೂಡಲಸಂಗಮದೇವ.

೩೭.
ಬಲೆಗೆ ಸಿಕ್ಕಿದ ಮೃಗದಂತೆ ನಾನಯ್ಯ.
ಮರಿದಪ್ಪಿದ ಹುಲ್ಲೆಯಂತೆ
ದೆಸೆದೆಸೆಗೆ ಬಾಯ ಬಿಡುತಿರುವೆನಯ್ಯ,
ನಾನಾರ ಸಾರುವೆನಯ್ಯ.
ತಾಯಾಗಿ ತಂದೆಯಾಗಿ ನೀನೇ, ಸಕಲ ಬಂಧುಬಳಗವು ನೀನೆ
ಕೂಡಲಸಂಗಮದೇವ.

೩೮.
ಸಮುದ್ರದೊಳಗಣ ಸಿಂಪಿನಂತೆ ಬಾಯ ಬಿಡುತಿದ್ದೇನಯ್ಯ!
ನೀವಲ್ಲದೆ ಮತ್ತಾರೂ ಎನ್ನನರಿವರಿಲ್ಲ ನೋಡಯ್ಯ!
ಕೂಡಲಸಂಗಮದೇವ, ನೀನಲ್ಲದೊಳಕೊಂಬವರಿಲ್ಲವಯ್ಯ.

೩೯.
ನೀ ಹುಟ್ಟಿಸಿದಲ್ಲಿ ಹುಟ್ಟಿ, ನೀ ಕೊಂದಲ್ಲಿ ಸಾಯದೆ
ಎನ್ನ ವಶವೇ ಅಯ್ಯ ?
ನೀನಿರಿಸಿದಲ್ಲಿ ಇರದೆ ಎನ್ನ ವಶವೇ ಅಯ್ಯ.
ಅಕಟಕಟಾ ಎನ್ನವನೆನ್ನವನೆನ್ನಯ್ಯ ಕೂಡಲಸಂಗಮದೇವಯ್ಯ.

೪೦.
ನರವಿಂಧ್ಯದೊಳಗೆನ್ನ ಹುಲುಗಿಳಿಯ ಮಾಡಿ
ಸಲಹುತ್ತ, "ಶಿವಶಿವಾ" ಎಂದೋದಿಸಯ್ಯ.
ಭಕ್ತಿ ಎಂಬ ಪಂಜರದೊಳಗಿಕ್ಕಿ ಸಲಹು ಕೂಡಲಸಂಗಮದೇವ.

೪೧.
ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆ,
ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯ ತಂದೆ.
ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯ ತಂದೆ.
ನಿಮ್ಮ ಶರಣರ ಪಾದವಲ್ಲದೆ ಅನ್ಯವಿಷಯಕ್ಕೆಳಸದಂತೆ ಇರಿಸು
ಕೂಡಲಸಂಗಮದೇವ.

೪೨.
ಎನ್ನ ವಾಮ-ಕ್ಷೇಮ ನಿಮ್ಮದಯ್ಯ
ಎನ್ನ ಹಾನಿ-ವೃದ್ಧಿ ನಿಮ್ಮದಯ್ಯ
ಎನ್ನ ಮಾನಾಪಮಾನವು ನಿಮ್ಮದಯ್ಯ
ಬಳ್ಳಿಗೆ ಕಾಯಿ ದಿಮ್ಮಿತ್ತೆ ? ಕೂಡಲಸಂಗಮದೇವ.

೪೩.
ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯ.
ಇವ ನಮ್ಮವ, ಇವ ನಮ್ಮವ, ಇವನಮ್ಮವನೆಂದೆನಿಸಯ್ಯ
ಕೂಡಲಸಂಗಮದೇವಯ್ಯ ನಿಮ್ಮ ಮನೆಯ ಮಗನೆಂದೆನಿಸಯ್ಯ.

೪೪.
ನರ ಕೂರಂಬಿನಲೆಚ್ಚ; ಅವಂಗೊಲಿದೆಯಯ್ಯ
ಅರಳಂಬಿನಲೆಚ್ಚ ಕಾಮನನುರಹಿದೆಯಯ್ಯ.
ಇರುಳು ಹಗಲೆನ್ನದೆ ಪ್ರಾಣಘಾತವ ಮಾಡಿದ ಬೇಡನ
ಕೈಲಾಸಕೊಯ್ದೆಯಯ್ಯ.
ಎನ್ನನೇತಕೆ ಒಲ್ಲೆ ಕೂಡಲಸಂಗಮದೇವ ?

೪೫.
ನೀನೊಲಿದರೆ ಕೊರಡು ಕೊನರುವುದಯ್ಯ.
ನೀನೊಲಿದರೆ ಬರಡು ಹಯನಹುದಯ್ಯ.
ನೀನೊಲಿದರೆ ವಿಷವಮೃತವಹುದಯ್ಯ.
ನೀನೊಲಿದರೆ ಸಕಲ ಪಡಿಪದಾರ್ಥ ಇದಿರಲಿಪ್ಪವು
ಕೂಡಲಸಂಗಮದೇವ.

೪೬.
ಆಶೆಯೆಂಬ ಪಾಶದಲ್ಲಿ ಭವಬಂಧನವಾಗಿದ್ದೆನಯ್ಯ.
ಸಕೃತೂ ನಿಮ್ಮ ನೆನೆಯಲೆನಗೆ ತೆರೆಹಿಲ್ಲವಯ್ಯ.
ಕರುಣಾಕರ, ಅಭಯಕರ, ವರದಾನಿ ಕರುಣಿಸಯ್ಯ.
ಸಂಸಾರಬಂಧವನು ಮಾಣಿಸಿ ಎನಗೆ ಕೃಪೆ ಮಾಡಿ
ನಿಮ್ಮ ಶ್ರೀಪಾದಪದ್ಮದಲ್ಲಿ ಭ್ರಮರನಾಗಿರಿಸಯ್ಯ
ಭಕ್ತಜನಮನೋವಲ್ಲಭ ಕೂಡಲಸಂಗಮದೇವ.

೪೭.
ಅರಿದಹೆನೆಂದರೆ ಅರುಹಿಂಗಸಾಧ್ಯ!
ನೆನೆದಹೆನೆಂದರೆ ನೆನೆಹಿಂಗಸಾಧ್ಯ!
ಭಾವಿಸುವೆನೆಂದರೆ ಭಾವಕ್ಕಸಾಧ್ಯ!
ವಾಙ್‌ಮಾನಸಕ್ಕಗೋಚರವನರಿವ ಪರಿಯೆಂತಯ್ಯ
ಗುರು ತೋರದನ್ನಕ ?
ಗುರು-ಶಿಷ್ಯರ ಸಂವಾದದಲ್ಲಿ
ಸ್ವಯಂ ಜೋತಿರ್ಲಿಂಗ ಸಾವಯವಪ್ಪುದೆಂಬ ಶ್ರುತಿ ಹುಸಿಯೆ ?

೪೮.
ಜ್ಞಾನಾಮೃತವೆಂಬ ಜಲಧಿಯ ಮೇಲೆ
ಸಂಸಾರವೆಂಬ ಹಾವಸೆ ಮುಸುಕಿಹುದು!
ನೀರ ಮೊಗೆವವರು ಬಂದು ನೂಕಿದಲ್ಲದೆ ತೆರಳದು!
ಮರಳಿ ಮರಳಿ ಮುಸುಕುವುದು ಮಾಣದಯ್ಯ!
ಆಗಳೂ ಎನ್ನುವನು ನೆನೆವುತ್ತಿರಬೇಕೆಂದು-
ಬೇಗ ಗುರು ಅಪ್ಪೈಸಿ ತನ್ನ ಪ್ರಸಾದವೆಂದು ಕುರುಹ ಕೊಟ್ಟನು.
ದಿವಾರಾತ್ರಿ ಮಾಡ ಹೇಳಿದ ಲಿಂಗಪೂಜೆಯ, ತನ್ನನರಿಯಬೇಕೆಂದು.
ಕೆರೆಯ ನೀರನುಂಡು ತೊರೆಯ ನೀರ ಹೊಗಳುವ
ಅರೆಮರುಳುಗಳ ಮೆಚ್ಚ ನಮ್ಮ ಕೂಡಲಸಂಗಮದೇವ.

೪೯.
ಮಡಕೆಯ ಮಾಡುವಡೆ ಮಣ್ಣೇ ಮೊದಲು,
ತೊಡಿಗೆಯ ಮಾಡುವಡೆ ಹೊನ್ನೇ ಮೊದಲು,
ಶಿವಪಥವನರಿವಡೆ ಗುರುಪಾದವೇ ಮೊದಲು
ಕೂಡಲಸಂಗಮದೇವನರಿವಡೆ ಶರಣರ ಸಂಗವೇ ಮೊದಲು.

೫೦.
ಕರಿಯಂಜುವುದು ಅಂಕುಶಕ್ಕಯ್ಯ!
ಗಿರಿಯಂಜುವುದು ಕುಲಿಶಕ್ಕಯ್ಯ!
ತಮಂಧವಂಜುವುದು ಜ್ಯೋತಿಗಯ್ಯ!
ಕಾನನವಂಜುವುದು ಬೇಗೆಗಯ್ಯ!
ಪಂಚಮಹಾಪಾತಕವಂಜುವುದು
ನಮ್ಮ ಕೂಡಲಸಂಗನ ನಾಮಕ್ಕಯ್ಯ!

೫೧.
ನೀರಿಂಗೆ ನೈದಿಲೇ ಶೃಂಗಾರ,
ಊರಿಂಗೆ ಆರವೆಯೇ ಶೃಂಗಾರ,
ಸಮುದ್ರಕ್ಕೆ ತೆರೆಯೇ ಶೃಂಗಾರ
ನಾರಿಗೆ ಗುಣವೇ ಶೃಂಗಾರ
ಗಗನಕ್ಕೆ ಚಂದ್ರಮನೇ ಶೃಂಗಾರ
ನಮ್ಮ ಕೂಡಲಸಂಗನ ಶರಣರಿಗೆ ನೊಸಲ ವಿಭೂತಿಯೇ ಶೃಂಗಾರ.

೫೨.
ಅಕಟಕಟಾ ಬೆಡಗುಬಿನ್ನಾಣವೇನೋ ?!
'ಓಂ ನಮಶ್ಶಿವಾಯ' ಎಂಬುದೇ ಮಂತ್ರ!
'ಓಂ ನಮಶ್ಶಿವಾಯ' ಎಂಬುದೇ ತಂತ್ರ!
ನಮ್ಮ ಕೂಡಲಸಂಗಮದೇವರ ಮಾಣದೆ ನೆನವುದೇ ಮಂತ್ರ!

೫೩.
ಎಮ್ಮವರು ಬೆಸಗೊಂಡರೆ ಶುಭಲಗ್ನವೆಂದೆನ್ನಿರಯ್ಯ
ರಾಶಿ ಕೂಟ ಋಣ ಸಂಬಂಧ ಉಂಟೆಂದು ಹೇಳಿರಯ್ಯ
ನಾಳಿನ ದಿನಕಿಂದಿನ ದಿನ ಲೇಸೆಂದು ಹೇಳಿರಯ್ಯ
ಚಂದ್ರಬಲ ತಾರಾಬಲ ಉಂಟೆಂದು ಹೇಳಿರಯ್ಯ
ಕೂಡಲಸಂಗಮದೇವನ ಪೂಜಿಸಿದ ಫಲ ನಿಮ್ಮದಯ್ಯ.

೫೪.
ತಾಳಮರದ ಕೆಳಗೆ ಒಂದು ಹಾಲ ಹರವಿಯಿದ್ದರೆ
ಅದ ಹಾಲ ಹರವಿಯೆನ್ನರು: ಸುರೆಯ ಹರವಿಯೆಂಬರು.
ಈ ಭಾವಸಂದೆಯವ ಮಾಣಿಸಾ ಕೂಡಲಸಂಗಮದೇವ.

೫೫.
ಕುಂಬಳ ಕಾಯಿಗೆ ಕಬ್ಬುನದ ಕಟ್ಟ ಕೊಟ್ಟರೆ
ಕೊಳೆವುದಲ್ಲದೆ ಅದು ಬಲುಹಾಗ ಬಲ್ಲುದೆ ?
ಅಳಿಮನದವಂಗೆ ದೀಕ್ಷೆಯ ಕೊಟ್ಟರೆ
ಭಕ್ತಿಯೆಂತಹುದು ?
ಮುನ್ನಿನಂತೆ, ಕೂಡಲಸಂಗಯ್ಯ!
ಮನಹೀನನ ಮೀಸಲ ಕಾಯ್ದಿರಿಸಿದಂತೆ!!

೫೬.
ಸಗಣಿಯ ಬೆನಕನ ಮಾಡಿ ಸಂಪಿಗೆಯರಳಲ್ಲಿ
ಪೂಜಿಸಿದರೆ ರಂಜನೆಯಹುದಲ್ಲದೆ, ಅದರ ಗಂಜಳ ಬಿಡದಣ್ಣ!
ಮಣ್ಣ ಪ್ರತಿಮೆಯ ಮಾಡಿ ಮಜ್ಜನಕ್ಕೆರೆದರೆ
ನಿಚ್ಚ ಕೆಸರಹುದಲ್ಲದೆ ಅದರಚ್ಚಿಗ ಬಿಡದಣ್ಣ!!
ಲೋಕದ ಮಾನವಂಗೆ ಶಿವದೀಕ್ಷೆಯ ಕೊಟ್ಟರೆ
ಆ ಕೆಟ್ಟವನೇಕೆ ಸದ್ಭಕ್ತನಹನು ಕೂಡಲಸಂಗಮದೇವಾ ?

೫೭.
ಕಬ್ಬುನದ ಕೋಡಗ ಪರುಷ ಮುಟ್ಟಿ ಹೊನ್ನಾದರೇನು
ಅದು ತನ್ನ ಮುನ್ನಿನ ರೂಹ ಬಿಡದನ್ನಕ ? ಕೂಡಲಸಂಗಮದೇವಾ,
ನಿಮ್ಮ ನಂಬಿಯೂ, ನಂಬದ ಡಂಬಕ ನಾನಯ್ಯ.

೫೮.
ಒಳಗೆ ಕುಟಿಲ, ಹೊರಗೆ ವಿನಯವಾಗಿ
ಭಕ್ತರೆನಿಸಿಕೊಂಬವರನೊಲ್ಲನಯ್ಯಾ ಲಿಂಗವು!
ಅವರು ಸತ್ಪಥಕ್ಕೆ ಸಲ್ಲರು ಸಲ್ಲರಯ್ಯ!
ಒಳಹೊರಗೊಂದಾಗದವರಿಗೆ ಅಳಿಯಾಸೆದೋರಿ
ಬೀಸಾಡುವನವರ ಜಗದೀಶ ಕೂಡಲಸಂಗಮದೇವ.

೫೯.
ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೊ ?
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜ ತುಂಬಿ
ಮನೆಯೊಳಗೆ ಮನೆಯೊಡೆಯನಿಲ್ಲ!
ತನುವಿನಲಿ ಹುಸಿ ತುಂಬಿ, ಮನದಲ್ಲಿ ವಿಷಯ ತುಂಬಿ
ಮನೆಯೊಳಗೆ ಮನೆಯೊಡೆಯನಿಲ್ಲ!
ಕೂಡಲಸಂಗಮದೇವ.

೬೦.
ಹಲವು ಕಾಲ ಹಂಸೆಯ ಸಂಗದಲಿದ್ದರೇನು
ಬಕ ಶುಚಿಯಾಗಬಲ್ಲುದೇ ?
ಗಂಗಾನದಿಯಲ್ಲಿದ್ದರೇನು ಪಾಷಾಣ ಮೃದುವಾಗಬಲ್ಲುದೇ ?
ಕಲ್ಪತರುವಿನ ಸನ್ನಿಧಿಯಲ್ಲಿದ್ದರೇನು
ಒಣ ಕೊರಡು ಕೊನರಿ ಫಲವಾಗಬಲ್ಲುದೇ ?
ಕಾಶೀಕ್ಷೇತ್ರದಲ್ಲಿ ಒಂದು ಶುನಕನಿದ್ದರೇನು ?
ಅದರ ಹಾಲು ಪಂಚಾಮೃತಕ್ಕೆ ಸಲುವುದೇ ?
ತೀರ್ಥದಲೊಂದು ಗಾರ್ದಭನಿದ್ದರೇನು ಕಾರಣಿಕನಾಗಬಲ್ಲುದೇ ?
ಖಂಡುಗ ಹಾಲೊಳಗೊಂದು ಇದ್ದಲಿಯಿದ್ದರೇನು ?
ಅದು ಬಿಳುಹಾಗಬಲ್ಲುದೆ ?
ಇದು ಕಾರಣ-ಕೂಡಲಸಂಗನ ಶರಣರ ಸನ್ನಿಧಿಯಲ್ಲಿ
ಅಸಜ್ಜನನಿದ್ದರೇನು ಸದ್ಭಕ್ತನಾಗಬಲ್ಲನೇ ?

೬೧.
ಓಡೆತ್ತ ಬಲ್ಲುದೋ ಅವಲಕ್ಕಿಯ ಸವಿಯ ?
ಕೋಡಗ ಬಲ್ಲುದೇ ಸೆಳೆಮಂಚದ ಸುಖವ ?
ಕಾಗೆ ನಂದನವನದೊಳಗಿದ್ದರೇನು,
ಕೋಗಿಲೆಯಾಗಬಲ್ಲುದೇ ?
ಕೊಳನ ತಡಿಯಲೊಂದು ಹೊರಸು ಕುಳಿತಿದ್ದರೇನು
ಕಳಹಂಸೆಯಾಗಬಲ್ಲುದೇ ಕೂಡಲಸಂಗಮದೇವ ?

೬೨.
ಎನಿಸು ಕಾಲ ಕಲ್ಲು ನೀರೊಳಗಿದ್ದರೇನು,
ನೆನೆದು ಮೃದುವಾಗಬಲ್ಲುದೆ ?
ಎನಿಸುಕಾಲ ನಿಮ್ಮ ಪೂಜಿಸಿ ಏವೆನಯ್ಯಾ
ಮನದಲ್ಲಿ ದೃಢವಿಲ್ಲದನ್ನಕ ?
ನಿಧಾನವ ಕಾಯ್ದಿದ್ದ ಬೆಂತರನ ವಿಧಿ ಎನಗಾಯಿತ್ತು
ಕಾಣಾ ಕೂಡಲಸಂಗಮದೇವ.

೬೩.
ಕೂಸುಳ್ಳ ಸೂಳೆ ಧನದಾಸೆಗೊತ್ತೆಗೊಂಡರೆ
ಕೂಸಿಂಗಿಲ್ಲ, ಬೊಜಗಂಗಿಲ್ಲ;
ಕೂಸನೊಮ್ಮೆ ಸಂತವಿಡುವಳು,
ಬೊಜಗನನೊಮ್ಮೆ ನೆರೆವಳು;
ಧನದಾಸೆ ಬಿಡದು ಕೂಡಲಸಂಗಮದೇವ.

೬೪.
ಎರದೆಲೆಯಂತೆ ಒಳಗೊಂದು ಹೊರಗೊಂದಾದರೆ
ಮೆಚ್ಚುವನೆ ?
ತಾನು ತನ್ನಂತೆ!
ನುಡಿ ಎರಡಾದರೆ ಮೆಚ್ಚುವನೆ ?
ತಾನು ತನ್ನಂತೆ!
ನಡೆ ಎರಡಾದರೆ ಮೆಚ್ಚುವನೆ ?
ತಾನು ತನ್ನಂತೆ!
ಉಡುವಿನ ನಾಲಗೆಯಂತೆ ಎರಡಾದರೆ ಮೆಚ್ಚುವನೇ ?
ಕೂಡಲಸಂಗಮದೇವ ತಾನು ತನ್ನಂತೆ!

೬೫.
ಭಕ್ತರ ಕಂಡರೆ ಬೋಳಪ್ಪಿರಯ್ಯ;
ಸವಣರ ಕಂಡರೆ ಬತ್ತಲೆಯಪ್ಪಿರಯ್ಯ
ಹಾರುವರ ಕಂಡರೆ ಹರಿನಾಮವೆಂಬಿರಯ್ಯ;
ಅವರವರ ಕಂಡರೆ ಅವರವರಂತೆ
ಸೂಳೆಗೆ ಹುಟ್ಟಿದವರ ತೋರದಿರಯ್ಯ.
ಕೂಡಲಸಂಗಯ್ಯನ ಪೂಜಿಸಿ ಅನ್ಯದೈವಂಗಳಿಗೆರಗಿ
ಭಕ್ತರೆನಿಸಿಕೊಂಬ ಅಜ್ಞಾನಿಗಳ ನಾನೇನೆಂಬೆನಯ್ಯ!

೬೬.
ಗಂಡ ಶಿವಲಿಂಗದೇವರ ಭಕ್ತ,
ಹೆಂಡತಿ ಮಾರಿಮಸಣಿಯ ಭಕ್ತೆ;
ಗಂಡ ಕೊಂಬುದು ಪಾದೋದಕಪ್ರಸಾದ,
ಹೆಂಡತಿ ಕೊಂಬುದು ಸುರೆಮಾಂಸ.
ಭಾಂಡ-ಭಾಜನ ಶುದ್ಧವಿಲ್ಲದವರ ಭಕ್ತಿ
ಹೆಂಡದ ಮಡಕೆಯ ಹೊರಗೆ ತೊಳೆದಂತೆ
ಕೂಡಲಸಂಗಮದೇವ.

೬೭.
ಹಾವಾಡಿಗನು, ಮೂಕೊರತಿಯು ತನ್ನ ಮಗನ ಮದುವೆಗೆ
ಶಕುನವ ನೋಡ ಹೋಗುವಾಗ,
ಇದಿರಲೊಬ್ಬ ಮೂಕೊರತಿಯ ಹಾವಾಡಿಗನ ಕಂಡು
ಶಕುನ ಹೊಲ್ಲವೆಂಬ ಚದುರನ ನೋಡಾ!
ತನ್ನ ಸತಿ ಮೂಕೊರತಿ, ತನ್ನ ಕೈಯಲು ಹಾವು!
ತಾನು ತನ್ನ ಭಿನ್ನವನರಿಯದೆ
ಅನ್ಯರನೆಂಬ ಕುನ್ನಿಯನೇನೆಂಬೆ ಕೂಡಲಸಂಗಮದೇವ!

೬೮.
ಅರ್ಥರೇಖೆಯಿದ್ದಲ್ಲಿ ಫಲವೇನು
ಆಯುಷ್ಯರೇಖೆಯಿಲ್ಲದನ್ನಕ ?
ಹಂದೆಯ ಕೈಯಲ್ಲಿ ಚಂದ್ರಾಯುಧವಿದ್ದು ಫಲವೇನು ?
ಅಂಧಕನ ಕೈಯಲ್ಲಿ ದರ್ಪಣವಿದ್ದು ಫಲವೇನು ?
ಮರ್ಕಟನ ಕೈಯಲ್ಲಿ ಮಾಣಿಕ್ಯವಿದ್ದು ಫಲವೇನು ?
ನಮ್ಮ ಕೂಡಲಸಂಗನ ಶರಣರನರಿಯದವರ ಕೈಯಲ್ಲಿ
ಲಿಂಗವಿದ್ದು ಫಲವೇನು ಶಿವಪಥವನರಿಯದನ್ನಕ ?

೬೯.
ಗಂಡನ ಮೇಲೆ ಸ್ನೇಹವಿಲ್ಲದ ಹೆಂಡತಿ,
ಲಿಂಗದ ಮೇಲೆ ನಿಷ್ಠೆಯಿಲ್ಲದ ಭಕ್ತ,
ಇದ್ದರೇನೋ, ಶಿವಶಿವಾ, ಹೋದರೇನೋ!
ಕೂಡಲ ಸಂಗಮ ದೇವ, ಕೇಳಯ್ಯ,
ಊಡದ ಆವಿಂಗೆ ಉಣ್ಣದ ಕರುವ ಬಿಟ್ಟಂತೆ!

೭೦.
ಹಾದರಕ್ಕೆ ಹೋದರೆ ಕಳ್ಳದಮ್ಮವಾಯಿತ್ತು!
ಹಾಳುಗೋಡೆಗೆ ಹೋದರೆ ಚೇಳೂರಿತ್ತು!
ಅಬ್ಬರವ ಕೇಳಿ ತಳವಾರನುಟ್ಟ ಸೀರೆಯ ಸುಲಿದ!
ನಾಚಿ ಹೋದರೆ, ಮನೆಯ ಗಂಡ ಬೆನ್ನ ಬಾರನೆತ್ತಿದ!
ಅರಸು ಕೂಡಲಸಂಗಮದೇವ ದಂಡವ ಕೊಂಡ!

೭೧.
ಅಳೆಯುತ್ತ ಅಳೆಯುತ್ತ ಬಳಲುವರಲ್ಲದೆ
ಕೊಳಗ ಬಳಲುವುದೇ ?
ನಡೆಯುತ್ತ ನಡೆಯುತ್ತ ಬಳಲುವರಲ್ಲದೆ, ಬಟ್ಟೆ ಬಳಲುವುದೆ ?
ಶ್ರವವ ಮಾಡುತ್ತ ಮಾಡುತ್ತ ಬಳಲುವರಲ್ಲದೆ
ಕೋಲು ಬಳಲುವುದೆ ?
ನಿಜವನರಿಯದ ಭಕ್ತ ಬಳಲುವನಲ್ಲದೆ, ಲಿಂಗ ಬಳಲುವುದೆ ?
ಕೂಡಲಸಂಗಮದೇವ, ಅರಸರಿಯದ ಬಿಟ್ಟಿಯೋಪಾದಿ!

೭೨.
ಧರಣಿಯ ಮೇಲೊಂದು ಹಿರಿದಪ್ಪ ಅಂಗಡಿಯನಿಕ್ಕಿ
ಹರದ ಕುಳ್ಳಿರ್ದ ನಮ್ಮ ಮಹದೇವಸೆಟ್ಟಿ.
ಒಮ್ಮನವಾದರೆ ಒಡನೆ ನುಡಿವನು;
ಇಮ್ಮನವಾದರೆ ನುಡಿಯನು.
ಕಾಣಿಯ ಸೋಲ; ಅರ್ಧ ಕಾಣಿಯ ಗೆಲ್ಲ.
ಜಾಣ ನೋಡವ್ವ ನಮ್ಮ ಕೂಡಲಸಂಗಮದೇವ.

೭೩.
ನಂಬರು, ನಚ್ಚರು; ಬರಿದೆ ಕರೆವರು;
ನಂಬಲರಿಯರೀ ಲೋಕದ ಮನುಜರು!
ನಂಬಿ ಕರೆದಡೆ, "ಓ" ಎನ್ನನೇ ಶಿವನು ?
ನಂಬದೆ, ನಚ್ಚದೆ ಬರಿದೆ ಕರೆವರ

ಕೊಂಬ ಮೆಟ್ಟಿ ಕೂಗೆಂದ ಕೂಡಲಸಂಗಮದೇವ.

೭೪.
ಹುತ್ತವ ಬಡಿದರೆ ಉರಗ ಸಾವುದೆ
ಘೋರತಪವ ಮಾಡಿದರೇನು
ಅಂತರಂಗ-ಆತ್ಮಶುದ್ಧಿಯಿಲ್ಲದವರನೆಂತು ನಂಬುವನಯ್ಯ
ಕೂಡಲಸಂಗಮದೇವ ?

೭೫.
ಮೇರು ಗುಣವನರಸುವುದೇ ಕಾಗೆಯಲ್ಲಿ ?
ಪರುಷ ಗುಣವನರಸುವುದೇ ಕಬ್ಬುನದಲ್ಲಿ ?
ಸಾಧು ಗುಣವನರಸುವನೇ ಅವಗುಣಿಯಲ್ಲಿ ?
ಚಂದನ ಗುಣವನರಸುವುದೇ ತರುಗಳಲ್ಲಿ ?
ಸರ್ವಗುಣಸಂಪನ್ನ ಲಿಂಗವೇ,
ನೀನೆನ್ನಲ್ಲಿ ಅವಗುಣವನರಸುವುದೇ, ಕೂಡಲಸಂಗಮದೇವ!

೭೬
ಸಾರ, ಸಜ್ಜನರ ಸಂಗವ ಮಾಡುವುದು!
ದೂರ, ದುರ್ಜನರ ಸಂಗ ಬೇಡವಯ್ಯ!
ಆವ ಹಾವಾದರೇನು ? ವಿಷವೊಂದೆ!
ಅಂಥವರ ಸಂಗ ನಮಗೆ ಬೇಡವಯ್ಯ.
ಅಂತರಂಗಶುದ್ಧವಿಲ್ಲದವರ ಸಂಗ
ಸಿಂಗಿ ಕಾಳಕೂಟ ವಿಷವೋ ಕೂಡಲಸಂಗಯ್ಯ.

೭೭.
ಹಸಿದು ಎಕ್ಕೆಯ ಕಾಯ ಮೆಲಬಹುದೆ ?
ನೀರಡಸಿ ವಿಷವನೀಂಟಬಹುದೆ ?
ಸುಣ್ಣದ, ತುಯ್ಯಲ ಬಣ್ಣವೊಂದೆ ಎಂದರೆ
ನಂಟುತನಕ್ಕೆ ಉಣ್ಣಬಹುದೆ ?
ಲಿಂಗಸಾರಾಯ ಸಜ್ಜನರಲ್ಲದವರ
ಕೂಡಲಸಂಗಮ ದೇವರೆಂತೊಲಿವ!

೭೮.
ಎಲವದ ಮರ ಹೂತು ಫಲವಾದ ತೆರನಂತೆ
ಸಿರಿಯಾದರೇನು ಶಿವಭಕ್ತಿಯಿಲ್ಲದನ್ನಕ ?
ಫಲವಾದರೇನು, ಹೇಳಾ, ಹಾವುಮೆಕ್ಕೆಯ ಕಾಯಿ ?
ಕುಲವಿಲ್ಲದ ರೂಹು ಎಲ್ಲಿದ್ದರೇನು ?
ಬಚ್ಚಲ ನೀರು ತಿಳಿದಲ್ಲಿ ಫಲವೇನು ?
ಅವಗುಣಿಗಳ ಮೆಚ್ಚ ಕೂಡಲಸಂಗಮದೇವ.

೭೯.
ಗಿಳಿಯೋದಿ ಫಲವೇನು
ಬೆಕ್ಕು ಬಹುದ ಹೇಳಲರಿಯದು!
ಜಗವೆಲ್ಲವ ಕಾಂಬ ಕಣ್ಣು
ತನ್ನ ಕೊಂಬ ಕೊಯಿಲೆಯ ಕಾಣಲರಿಯದು!
ಇದಿರ ಗುಣವ ಬಲ್ಲೆವೆಂಬರು
ತಮ್ಮ ಗುಣವ ತಾವರಿಯರು ಕೂಡಲಸಂಗಮದೇವ.

೮೦.
ಲೋಕದ ಡೊಂಕ ನೀವೇಕೆ ತಿದ್ದುವಿರಿ ?
ನಿಮ್ಮ ನಿಮ್ಮ ತನವ ಸಂತೈಸಿಕೊಳ್ಳಿ;
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ.
ನೆರೆಮನೆಯ ದುಃಖಕ್ಕೆ ಅಳುವರ ಮೆಚ್ಚ
ನಮ್ಮ ಕೂಡಲಸಂಗಮದೇವ.

೮೧.
ಏತ ತಲೆವಾಗಿದರೇನು ? ಗುರುಭಕ್ತನಾಗಬಲ್ಲುದೆ ?
ಇಕ್ಕುಳ ಕೈ ಮುಗಿದರೇನು ? ಭೃತ್ಯಾಚಾರಿಯಾಗಬಲ್ಲುದೆ ?
ಗಿಳಿಯೋದಿದರೇನು ? ಲಿಂಗವೇದಿಯಾಗಬಲ್ಲುದೆ ?
ಕೂಡಲಸಂಗನ ಶರಣರು ಬಂದ ಬರವ, ನಿಂದ ನಿಲವ
ಅನಂಗಸಂಗಿಗಳೆತ್ತ ಬಲ್ಲರು ?

೮೨.
ಒಲವಿಲ್ಲದ ಪೂಜೆ, ನೇಹವಿಲ್ಲದ ಮಾಟ;
ಆ ಪೂಜೆಯು, ಆ ಮಾಟವು
ಚಿತ್ರದ ರೂಹು ಕಾಣಿರಣ್ಣ!
ಚಿತ್ರದ ಕಬ್ಬು ಕಾಣಿರಣ್ಣ!
ಅಪ್ಪಿದರೆ ಸುಖವಿಲ್ಲ, ಮೆಲಿದರೆ ಸವಿಯಿಲ್ಲ;
ಕೂಡಲಸಂಗಮದೇವ, ನಿಜವಿಲ್ಲದವನ ಭಕ್ತಿಯಿಂತುಟು!

೮೩.
ಹಬ್ಬಕ್ಕೆ ತಂದ ಹರಕೆಯ ಕುರಿ
ತೋರಣಕ್ಕೆ ತಂದ ತಳಿರ ಮೇಯಿತ್ತು!
ಕೊಂದಹರೆಂಬುದನರಿಯದೆ ಬೆಂದೊಡಲ ಹೊರೆಯ
ಹೋಯಿತ್ತು!
ಅದಂದೆ ಹುಟ್ಟಿತು, ಅದಂದೆ ಹೊಂದಿತ್ತು.
ಕೊಂದವರುಳಿದರೆ ಕೂಡಲಸಂಗಮದೇವ ?

೮೪.
ಹಾವಿನ ಬಾಯಿ ಕಪ್ಪೆ ಹಸಿದು
ತಾ ಹಾರುವ ನೊಣಕಾಸೆ ಮಾಡುವಂತೆ,
ಶೂಲವನೇರುವ ಕಳ್ಳ ಹಾಲು ತುಪ್ಪವ ಕುಡಿದು
ಮೇಲಿನ್ನೇಸು ಕಾಲ ಬದುಕುವನೋ ?!
ಕೆಡುವೊಡಲ ನೆಚ್ಚಿ, ಕಡುಹುಸಿಯನೆ ಹುಸಿದು
ಒಡಲ ಹೊರೆವವರ ಮೆಚ್ಚ ನಮ್ಮ ಕೂಡಲಸಂಗಮದೇವ.

೮೫.
ಅರತವಡಗದು. ಕ್ರೋಧ ತೊಲಗದು;
ಕ್ರೂರಕುಭಾಷೆ ಕುಹುಕ ಬಿಡದನ್ನಕ
ನೀನೆತ್ತಲು ? ಶಿವನೆತ್ತಲು ? ಹೋಗತ್ತ ಮರುಳೆ!
ಭವರೋಗವೆಂಬ ತಿಮಿರ ತಿಳಿಯದನ್ನಕ
ಕೂಡಲಸಂಗಯ್ಯನೆತ್ತ ? ನೀನೆತ್ತ ? ಮರುಳೇ!

೮೬.
ಹಾವು ತಿಂದವರ ನುಡಿಸ ಬಹುದು!
ಗರ ಹೊಡೆದವರ ನುಡಿಸ ಬಹುದು!
ಸಿರಿಗರ ಹೊಡೆದವರ ನುಡಿಸ ಬಾರದು ನೋಡಯ್ಯ!
ಬಡತನವೆಂಬ ಮಂತ್ರವಾದಿ ಹೋಗಲು
ಒಡನೆ ನುಡಿವರಯ್ಯ ಕೂಡಲಸಂಗಮದೇವ.

೮೭.
ಅರೆಭಕ್ತರಾದವರ ನೆರೆ ಬೇಡ, ಹೊರೆ ಬೇಡ.
ದಾರಿಸಂಗಡ ಬೇಡ, ದೂರ ನುಡಿಯಲು ಬೇಡ.
ಕೂಡಲಸಂಗನ ಶರಣರಲ್ಲಿ ಅಚ್ಚಲಿಂಗೈಕ್ಯಂಗೆ
ತೊತ್ತಾಗಿಹುದು ಕರಲೇಸಯ್ಯ.

೮೮.
ದೂಷಕನಾವನೊಬ್ಬ ದೇಶವ ಕೊಟ್ಟರೆ,
ಆಸೆಮಾಡಿ ಅವನ ಹೊರೆಯಲಿರಬೇಡ.
ಮಾದಾರ ಶಿವಭಕ್ತನಾದರೆ
ಆತನ ಹೊರೆಯಲು ಇಪ್ಪುದು ಕರಲೇಸಯ್ಯ!
ಭೃತ್ಯನಾಗಿ, ತೊತ್ತಾಗಿಪ್ಪುದು ಕರಲೇಸಯ್ಯ!
ಕಾಡುಸೊಪ್ಪ ತಂದು ಓಡಿನಲ್ಲಿ ಹುರಿದಿಟ್ಟುಕೊಂಡು
ಕೂಡಿಕೊಂಡಿಪ್ಪುದು ನಮ್ಮ ಕೂಡಲಸಂಗನ ಶರಣರ.

೮೯.
ಸಾರ ಸಜ್ಜನರ ಸಂಗವೇ ಲೇಸು ಕಂಡಯ್ಯ!
ದೂರ ದುರ್ಜನರ ಸಂಗವದು ಭಂಗವಯ್ಯ!
ಸಂಗವೆರಡುಂಟು-ಒಂದ ಬಿಡು, ಒಂದ ಹಿಡಿ
ಮಂಗಳಮೂರ್ತಿ ನಮ್ಮ ಕೂಡಲಸಂಗನ ಶರಣ.

೯೦.
ಪಟ್ಟವ ಕಟ್ಟಿದ ಬಳಿಕ ಲಕ್ಷಣವನರಸುವರೆ ?
ಲಿಂಗದೇವನ ಪೂಜಿಸಿ ಕುಲವನರಸುವರೆ,
ಅಯ್ಯಾ, ಕೂಡಲಸಂಗಮದೇವ
"ಭಕ್ತಕಾಯ ಮಮಕಾಯ" ವೆಂದನಾಗಿ ?

೯೧.
ಪರಷ ಮುಟ್ಟಿದ ಬಳಿಕ ಕಬ್ಬುನವಾಗದು ನೋಡಾ!
ಲಿಂಗ(ವ) ಮುಟ್ಟಿದ ಬಳಿಕ
ಕುಚಿತ್ತಾಚಾರವಾಗದು ನೋಡಾ
ಕೂಡಲಸಂಗನ ಶರಣರು ಅನ್ಯವನರಿಯರಾಗಿ.

೯೨.
ದೇವಲೋಕ ಮರ್ತ್ಯಲೋಕವೆಂಬುದು
ಬೇರೆ ಮತ್ತುಂಟೆ ? ಇಹಲೋಕದೊಳಗೇ ಮತ್ತನಂತಲೋಕ!
ಶಿವಲೋಕ ಶಿವಾಚಾರವಯ್ಯ,
ಶಿವಭಕ್ತನಿದ್ದ ಠಾವೇ ದೇವಲೋಕ,
ಭಕ್ತನಂಗಳವೇ ವಾರಣಾಸಿ,
ಶಿವಭಕ್ತನ ಕಾಯವೇ ಕೈಲಾಸ, ಇದು ಸತ್ಯ ಕೂಡಲಸಂಗಮದೇವ.

೯೩.
ಕಟ್ಟಿದಿರಲ್ಲಿ ಶಿವಭಕ್ತನ ಕಂಡು,
ದೃಷ್ಟಿಯಾರೆ ಮನಮುಟ್ಟಿ ನೋಡಿ ಶರಣೆಂದರೆ
ಹುಟ್ಟೇಳು ಜನ್ಮದ ಪಾಪ ಬಿಟ್ಟು ಹೋಹವು ನೋಡಾ!
ಮುಟ್ಟಿ ಚರಣಕ್ಕೆರಗಿದರೆ,
ತನು ಒಪ್ಪಿದಂತಿಹುದು
ಪರುಷ ಮುಟ್ಟಿದಂತೆ.
ಕರ್ತೃ ಕೂಡಲಸಂಗನ ಶರಣರ ಸಂಗವು!
ಮತ್ತೆ ಭವಮಾಲೆಯ ಹೊದ್ದಲೀಯದು ನೋಡಾ!

೯೪.
ಆರಾರ ಸಂಗವೇನೇನ ಮಾಡದಯ್ಯ!
ಕೀಡೆ ಕುಂಡಲಿಗನಾಗದೇನಯ್ಯ ?
ಚಂದನದ ಸನ್ನಿಧಿಯಲ್ಲಿ, ಪರಿಮಳ ತಾಗಿ
ಬೇವು-ಬೊಬ್ಬುಲಿ-ತರಿಯ ಗಂಧಂಗಳಾಗವೆ ?
ನಮ್ಮ ಕೂಡಲಸಂಗನ ಶರಣರ ಸನ್ನಿಧಿಯಲ್ಲಿದ್ದು
ಕರ್ಮ ನಿರ್ಮಳವಾಗದಿಹುದೇ ?

೯೫.
ಹಾವಿನ ಡೊಂಕು ಹುತ್ತಕ್ಕೆ ಸಸಿನ.
ನದಿಯ ಡೊಂಕು ಸಮುದ್ರಕ್ಕೆ ಸಸಿನ.
ನಮ್ಮ ಕೂಡಲಸಂಗನ ಶರಣರ ಡೊಂಕು ಲಿಂಗಕ್ಕೆ ಸಸಿನ.

೯೬.
ಆಳಿಗೊಂಡಿಹರೆಂದು ಅಂಜಲದೇಕೆ ?
ನಾಸ್ತಿಕವಾಡಿಹರೆಂದು ನಾಚಲದೇಕೆ ?
ಆರಾದಡಾಗಲಿ ಶ್ರೀ ಮಹಾದೇವಂಗೆ ಶರಣೆನ್ನಿ.
ಏನೂ ಅರಿಯೆನೆಂದು ಮೋನಗೊಂಡಿರಬೇಡ
ಕೂಡಲಸಂಗಮದೇವರ ಮುಂದೆ ದಂ-ದಣ-ದತ್ತಣಯೆನ್ನಿ.

೯೭.
ಹಮ್ಮಿನ ಭಕ್ತಿ ಕರ್ಮಕ್ಕೆ ಮೊದಲು!
ಮರ್ಮವರಿಯದ ಮಾಟ ಸಯಿದಾನದ ಕೇಡು!
ಬಂದ ಸಮಯೋಚಿತವನರಿಯದಿದ್ದರೆ
ನಿಂದಿರಲೊಲ್ಲ ಕೂಡಲಸಂಗಮದೇವ.

೯೮.
ಬಲ್ಲಿದರೊಡನೆ ಬವರವಾದರೆ
ಗೆಲಲುಂಟು ಸೋಲಲುಂಟು-
ಕಳನೊಳಗೆ ಭಾಷೆ ಪೂರಾಯವಯ್ಯ!
ನಮ್ಮ ಕೂಡಲಸಂಗನ ಶರಣರಿಗೆ
ಮಾಡಿ ಮಾಡಿ, ಧನ ಸವೆದು ಬಡವಾದರೆ
ಆ ಭಕ್ತನು ಲಿಂಗಕ್ಕೆ ಪೂಜೆಯಹನು.

೯೯.
ಗೀತವ ಬಲ್ಲಾತ ಜಾಣನಲ್ಲ.
ಮಾತ ಬಲ್ಲಾತ ಜಾಣನಲ್ಲ.
ಜಾಣನು ಜಾಣನು, ಆತ ಜಾಣನು;
ಲಿಂಗವ ನೆರೆ ನಂಬಿದಾತ ಆತ ಜಾಣನು!
ಜಂಗಮಕ್ಕೆ ಸವೆಸುವಾತ ಆತ ಜಾಣನು!
ಜವನ ಬಾಯಲು ಬಾಲವ ಕೊಯ್ದು
ಹೋದಾತ ಆತ ಜಾಣನು
ನಮ್ಮ ಕೂಡಲಸಂಗನ ಶರಣನು!

೧೦೦.
ಹಾವು-ಹದ್ದು-ಕಾಗೆ-ಗೂಗೆ ಅನಂತ ಕಾಲ ಬದುಕವೆ ?
ಬೇಡವೋ ಮಾನವ,
ಲೇಸೆನಿಸಿಕೊಂಡು ಬದುಕುವೋ, ಮಾನವ, ಶಿವಭಕ್ತನಾಗಿ!
"ಜೀವಿತಂ ಶಿವಭಕ್ತಾನಾಂ ವರಂ ಪಂಚ ದಿನಾನಿ ಚ
ಅಜಕಲ್ಪ ಸಹಸ್ರಂ ತು ಭಕ್ತಿಹೀನಂ ನ ಶಾಂಕರಿ" ಎಂದುದಾಗಿ
ನಮ್ಮ ಕೂಡಲಸಂಗಮದೇವರ ಭಕ್ತಿವಿಡಿದು
ಐದು ದಿನವಾದರೂ ಬದುಕಿದರೆ ಸಾಲದೆ ?!

೧೦೧.
ಲೇಸೆನಿಸಿಕೊಂಡು ಐದು ದಿನ ಬದುಕಿದರೇನು ?
ಲೇಸೆನಿಸಿಕೊಂಡು ನಾಲ್ಕು ದಿನ ಬದುಕಿದರೇನು ?
ಲೇಸೆನಿಸಿಕೊಂಡು ಮೂರು ದಿನ ಬದುಕಿದರೇನು ?
ಲೇಸೆನಿಸಿಕೊಂಡು ಎರಡು ದಿನ ಬದುಕಿದರೇನು ?
ಲೇಸೆನಿಸಿಕೊಂಡು ಒಂದು ದಿನ ಬದುಕಿದರೇನು ?
ಕೂಡಲಸಂಗನ ಶರಣರ ವಚನದಲ್ಲಿ
ಲೇಸೆನಿಸಿಕೊಂಡು ಒಂದು ದಿನ ಬದುಕಿದರೆ ಸಾಕು.

೧೦೨.
ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯ.
ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯ.
ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯ
ಕೂಡಲಸಂಗಮದೇವ.

೧೦೩.
ಹೊತ್ತಾರೆಯೆದ್ದು ಶಿವಲಿಂಗದೇವನ
ದೃಷ್ಟಿಯಾರೆ ನೋಡದವನ ಸಂಸಾರವೇನವನ ?!
ಬಾಳುವೆಣನ ಬೀಳುವೆಣನ ಸಂಸಾರವೇನವನ ?!
ನಡೆವೆಣನ ನುಡಿವೆಣನ ಸಂಸಾರವೇನವನ ?!
ಕರ್ತೃ ಕೂಡಲಸಂಗ, ನಿಮ್ಮ ತೊತ್ತಗೆಲಸಮಾಡದವನ
ಸಂಸಾರವೇನವನ ?!

೧೦೪.
ವ್ಯಾಧನೊಂದು ಮೊಲನ ತಂದರೆ
ಸಲುವ ಹಾಗಕ್ಕೆ ಬಿಲಿವರಯ್ಯ.
ನೆಲನಾಳ್ದನ ಹೆಣನೆಂದರೆ
ಒಂದಡಕೆಗೆ ಕೊಂಬವರಿಲ್ಲ ನೋಡಯ್ಯ.
ಮೊಲನಿಂದ ಕರಕಷ್ಟ ನರನ ಬಾಳುವೆ!
ಸಲೆ ನಂಬೋ ನಮ್ಮ ಕೂಡಲಸಂಗಮದೇವನ.

೧೦೫.
ಉತ್ಪತ್ತಿ ಶುಕ್ಲ-ಶೋಣಿತದಿಂದಾದ ಲಜ್ಜೆ ಸಾಲದೆ ?
ಅಂತು ಬಲಿದ ಸಪ್ತಧಾತುವಿನ
ನರಕದೇಹದೊಳಿಪ್ಪ ಹೇಸಿಕೆ ಸಾಲದೆ ?
ಮತ್ತೆಯು ಪಾಪಂಗಳ ಮಾಡಿ
ದುರಿತಂಗಳ ಹೆರುವ ಹೇಗತನವೇಕಯ್ಯ ?
ಕಾಲನ ಕೈಯ ಬಡಿಸಿಕೊಂಡು
ನರಕವನುಂಬುದು ವಿಧಿಯೇ, ಎಲೆ ಮನುಜ ?
ಒತ್ತೊತ್ತೆಯ ಜನನವ ಗೆಲುವಡೆ
ಕರ್ತನ ಪೂಜಿಸು ನಮ್ಮ ಕೂಡಲಸಂಗಮದೇವನ!

೧೦೬.
ಮನವೇ ಸರ್ಪ, ತನುವೇ ಹೇಳಿಗೆ!
ಹಾವಿನೊಡತಣ ಹುದುವಾಳಿಗೆ!
ಇನ್ನಾವಾಗ ಕೊಂದಹುದೆಂದರಿಯೆ.
ಇನ್ನಾವಾಗ ತಿಂದಹುದೆಂದರಿಯೆ.
ನಿಚ್ಚಕ್ಕೆ ನಿಮ್ಮ ಪೂಜಿಸಬಲ್ಲಡೆ
ಅದೇ ಗಾರುಡ ಕೂಡಲಸಂಗಮದೇವ.

೧೦೭.
ನರೆ ಕೆನ್ನೆಗೆ, ತೆರೆ ಗಲ್ಲಕೆ,
ಶರೀರ ಗೂಡುವೋಗದ ಮುನ್ನ;
ಹಲ್ಲು ಹೋಗಿ, ಬೆನ್ನು ಬಾಗಿ
ಆನ್ಯರಿಗೆ ಹಂಗಾಗದ ಮುನ್ನ;
ಕಾಲ ಮೇಲೆ ಕೈಯನೂರಿ
ಕೋಲ ಹಿಡಿಯದ ಮುನ್ನ;
ಮುಪ್ಪಿಂದೊಪ್ಪವಳಿಯದ ಮುನ್ನ;
ಮೃತ್ಯು ಮುಟ್ಟದ ಮುನ್ನ
ಪೂಜಿಸುವೋ ಕೂಡಲಸಂಗಮದೇವನ.

೧೦೮.
ನೀರ ಬೊಬ್ಬುಳಿಕೆಗೆ ಕಬ್ಬುನದ ಕಟ್ಟ ಕೊಟ್ಟು
ಸುರಕ್ಷಿತವ ಮಾಡುವ ಭರವ ನೋಡಾ!
ಮಹಾದಾನಿ ಕೂಡಲಸಂಗಮ ದೇವನ ಪೂಜಿಸಿ ಬದುಕುವೋ
ಕಾಯವ ನಿಶ್ಚಯಿಸದೆ!

೧೦೯.
ಹಂಜರ ಬಲ್ಲಿತ್ತೆಂದು ಅಂಜದೇ ಓದುವ ಗಿಳಿಯೇ,
ಎಂದೆಂದೂ ಅಳಿಯೆನೆಂದು
ಗುಡಿಗಟ್ಟಿದೆಯಲ್ಲಾ ನಿನ್ನ ಮನದಲ್ಲಿ!
ಮಾಯಾಮಂಜರ ಕೊಲುವಡೆ, ನಿನ್ನ ಹಂಜರ ಕಾವುದೇ
ಕೂಡಲಸಂಗಮದೇವನಲ್ಲದೆ ?

೧೧೦.
ಸಂಸಾರವೆಂಬುದೊಂದು ಗಾಳಿಯ ಸೊಡರು!
ಸಿರಿಯೆಂಬುದೊಂದು ಸಂತೆಯ ಮಂದಿ ಕಂಡಯ್ಯ!
ಇದ ನೆಚ್ಚಿ ಕೆಡಬೇಡ;
ಸಿರಿಯೆಂಬುದ ಮರೆದು ಪೂಜಿಸು
ನಮ್ಮ ಕೂಡಲಸಂಗಮದೇವನ.

೧೧೧.
ಎಲೆಯೆಲೆ ಮಾನವಾ, ಅಳಿಯಾಸೆ ಬೇಡವೋ,
ಕಾಳ-ಬೆಳುದಿಂಗಳು-ಸಿರಿ ಸ್ಥಿರವಲ್ಲ!
ಕೇಡಿಲ್ಲದ ಪದವಿಯನೀವ
ಕೂಡಲಸಂಗಮದೇವಯ್ಯನ ಮರೆಯದೆ ಪೂಜಿಸು.

೧೧೨.
ಎಂತಕ್ಕೆ ಎಂತಕ್ಕೆ
ಹಡೆದ ಕಾಯ ಬೀಯವಾಗದ ಮುನ್ನ ಅಟ್ಟುಣ್ಣವೋ!
ಬೆರಣಿಯುಳ್ಳಲ್ಲಿ ಹೊತ್ತು ಹೋಗದ ಮುನ್ನ ಅಟ್ಟುಣ್ಣವೋ!
ಮರಳಿ ಭವಕ್ಕೆ ಬಹೆ ಬಾರದಿಹೆ!
ಕರ್ತೃ ಕೂಡಲಸಂಗಂಗೆ ಶರಣೆನ್ನವೋ!

೧೧೩.
ಶಕುನವೆಂದೆಂಬೆ ಅಪಶಕುನವೆಂದೆಂಬೆ,
ನಿಮ್ಮವರು ಅಳಲಿಕಂದೇಕೆ ಬಂದೆ ?
ನಿಮ್ಮವರು ಅಳಲಿಕಿಂದೇಕೆ ಹೋದೆ ?
ನೀ ಹೋಹಾಗಳಕ್ಕೆ!
ನೀ ಬಾಹಾಗಳಕ್ಕೆ!
ಅಕ್ಕೆ ಬಾರದ ಮುನ್ನ ಪೂಜಿಸು ಕೂಡಲಸಂಗಮದೇವನ.

೧೧೪.
ನಿಮಿಷಂ ನಿಮಿಷಂ ಭೋ!
ಕ್ಷಣದೊಳಗರ್ಧಂ ಭೋ!
ಕಣ್ಣ ಮುಚ್ಚಿ ಬಿಚ್ಚುವಿನಿಸು ಬೇಗಂ ಭೋ
ಸಂಸಾರದಾಗುಂ ಭೋ!
ಸಂಸಾರದ ಹೋಗುಂ ಭೋ!
ಸಂಸಾರದೊಪ್ಪಂ ಭೊ!
ಕೂಡಲಸಂಗಮದೇವ ಮಾಡಿದ
ಮಾಯಂ ಭೋ!
ಅಭ್ರಚ್ಛಾಯಂ ಭೋ!

೧೧೫.
ಹರನೀವ ಕಾಲಕ್ಕೆ ಸಿರಿಯು ಬೆನ್ನಲಿ ಬಕ್ಕು-
ಹರಿದು ಹೆದ್ದೊರೆಯು ಕೆರೆ ತುಂಬಿದಂತಯ್ಯ;
ನೆರೆಯದ ವಸ್ತು ನೆರೆವುದು ನೋಡಯ್ಯ;
ಅರಸು ಪರಿವಾರ ಕೈವಾರ ನೋಡಯ್ಯ.
ಪರಮನಿರಂಜನ ಮರೆವ ಕಾಲಕ್ಕೆ
ತುಂಬಿದ ಹರವಿಯ ಕಲ್ಲು ಕೊಂಡಂತೆ
ಕೂಡಲಸಂಗಮದೇವ.

೧೧೬.
ಪುಣ್ಯಗಳಹ ಕಾಲಕ್ಕೆ ಹಗೆಗಳು ತನ್ನವರಹರು!
ಪುಣ್ಯಗಳಹ ಕಾಲಕ್ಕೆ ಮಣ್ಣು ಹೊನ್ನಹುದು!
ಪುಣ್ಯಗಳಹ ಕಾಲಕ್ಕೆ ಹಾವು ನೇವಳವಹುದು!
ಪುಣ್ಯಗಳಹ ಕಾಲಕ್ಕೆ ಅನ್ಯರು ತನ್ನವರಹರು!
ಇಂತಪ್ಪ ಪುಣ್ಯಗಳೆಲ್ಲವೂ ಭಕ್ತಿಯಿಂದಲಹುದು!
ಭಕ್ತಿ ಕೆಟ್ಟರೆ ಪುಣ್ಯವೂ ಕೆಡುವುದು!
ಇಂತಪ್ಪ ಭಕ್ತಿಯೂ ಪುಣ್ಯವೂ ಚೆನ್ನಬಸವಣ್ಣನಿಂದುಂಟಾಗಿ
ನಾನು ಬದುಕಿದೆನಯ್ಯ ಕೂಡಲಸಂಗಮದೇವ .

೧೧೭.
ಹೊಯ್ದರೆ ಹೊಯ್ಗಳು ಕೈಯ ಮೇಲೆ,
ಬೈದರೆ ಬೈಗಳು ಕೈಯ ಮೇಲೆ,
ಹಿಂದಣ ಜನನವೇನಾದರಾಗಲಿ,
ಇಂದಿನ ಭೋಗವು ಕೈಯ ಮೇಲೆ.
ಕೂಡಲಸಂಗಮದೇವಯ್ಯ,
ನಿನ್ನ ಪೂಜಿಸಿದ ಫಲ ಕೈಯ್ಯ ಮೇಲೆ!

೧೧೮.
ಹೊತ್ತಾರೆ ಎದ್ದು ಅಗ್ಘವಣಿ ಪತ್ರೆಯ ತಂದು
ಹೊತ್ತು ಹೋಗದ ಮುನ್ನ ಪೂಜಿಸು ಲಿಂಗವ.
ಹೊತ್ತು ಹೋದ ಬಳಿಕ ನಿನ್ನನಾರು ಬಲ್ಲರು ?
ಹೊತ್ತು ಹೋಗದ ಮುನ್ನ, ಮೃತ್ಯು ಒಯ್ಯದ ಮುನ್ನ
ತೊತ್ತುಗೆಲಸವ ಮಾಡು ಕೂಡಲಸಂಗಂಗೆ.

೧೧೯.
ಅಚ್ಚಿಗವೇಕಯ್ಯ ? ಸಂಸಾರದೊಳಗಿರ್ದು
ನಿಚ್ಚ ನಿಚ್ಚ ಶಿವರಾತ್ರಿಯ ಮಾಡುವುದು.
ಬೇಗ ಬೇಗ ಅರ್ಚನೆ-ಪೂಜನೆಯ ಮಾಡುವುದು!
ಬೇಗ ಬೇಗ ಕೂಡಲಸಂಗನ ಕೂಡುವುದು!

೧೨೦.
ಅಂದು ಇಂದು ಮತ್ತೊಂದೆನಬೇಡ.
ದಿನವಿಂದೇ ಶಿವಶರಣೆಂಬವಂಗೆ,
ದಿನವಿಂದೇ ಹರಶರಣೆಂಬವಂಗೆ,
ದಿನವಿಂದೇ ನಮ್ಮ ಕೂಡಲಸಂಗನ ಮಾಣದೆ ನೆನೆವಂಗೆ.

೧೨೧.
ಸುಪ್ರಭಾತ ಸಮಯದಲ್ಲಿ
ಅರ್ತಿಯಲ್ಲಿ ಲಿಂಗವ ನೆನೆದರೆ
ತಪ್ಪುವುದು ಅಪಮೃತ್ಯು ಕಾಲಕರ್ಮಂಗಳಯ್ಯ!
ದೇವಪೂಜೆಯ ಮಾಟ
ದುರಿತಬಂಧನದೋಟ!
ಶಂಭು ನಿಮ್ಮಯ ನೋಟ
ಹೆರೆಹಿಂಗದ ಕಣ್ಬೇಟ!!
ಸದಾ ಶಿವಲಿಂಗಸನ್ನಿಹಿತನಾಗಿಪ್ಪುದು,
ಶರಣೆಂದು ನಂಬುವುದು.
ಜಂಗಮಾರ್ಚನೆಯ ಮಾಟ
ಕೂಡಲಸಂಗನ ಕೂಟ!!!

೧೨೨.
ನಾದಪ್ರಿಯ ಶಿವನೆಂಬರು,
ನಾದಪ್ರಿಯ ಶಿವನಲ್ಲಯ್ಯ!
ವೇದಪ್ರಿಯಶಿವನೆಂಬರು
ವೇದಪ್ರಿಯ ಶಿವನಲ್ಲಯ್ಯ!
ನಾದವ ಮಾಡಿದ ರಾವಣಂಗೆ
ಆರೆಯಾಯುಷವಾಯಿತ್ತು.
ವೇದವನೋದಿದ ಬ್ರಹ್ಮನ ಶಿರ ಹೋಯಿತ್ತು.
ನಾದಪ್ರಿಯನೂ ಅಲ್ಲ,
ವೇದಪ್ರಿಯನೂ ಅಲ್ಲ,
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ.

೧೨೩.
ತನ್ನಾಶ್ರಯದ ರತಿಸುಖವನು
ತಾನುಂಬ ಊಟವನು
ಬೇರೊಬ್ಬರ ಕೈಯಲು ಮಾಡಿಸಬಹುದೇ ?
ತನ್ನ ಲಿಂಗಕ್ಕೆ ಮಾಡುವ
ನಿತ್ಯ ನೇಮವನು ತಾ ಮಾಡಬೇಕಲ್ಲದೆ,
ಬೇರೆ ಮತ್ತೊಬ್ಬರ ಕೈಯಲು ಮಾಡಿಸಬಹುದೇ ?
ಕೆಮ್ಮನುಪಚಾರಕ್ಕೆ ಮಾಡುವರಲ್ಲದೆ
ನಿಮ್ಮನೆತ್ತ ಬಲ್ಲರು ಕೂಡಲಸಂಗಮದೇವ.

೧೨೪.
ಬಂಡಿ ತುಂಬಿದ ಪತ್ರೆಯ ತಂದು
ಕಂಡ ಕಂಡಲ್ಲಿ ಮಜ್ಜನಕ್ಕೆರೆವಿರಯ್ಯ.
ತಾಪತ್ರಯವ ಕಳೆದು ಪೂಜಿಸಿ:
ತಾಪತ್ರಯವ ಲಿಂಗನೊಲ್ಲ!
ಕೂಡಲಸಂಗಮದೇವ ಬರಿಯುದಕದಲ್ಲಿ ನೆನೆವನೆ ?

೧೨೫.
ಕನ್ನಡಿಯ ನೋಡುವ ಅಣ್ಣಗಳಾ,
ಜಂಗಮವ ನೋಡಿರೇ!
ಜಂಗಮದೊಳಗೆ ಲಿಂಗಯ್ಯ ಸನ್ನಿಹಿತನಾಗಿಪ್ಪ.
ಸ್ಥಾವರ ಜಂಗಮ ಒಂದೆಂದುದು ಕೂಡಲಸಂಗನ ವಚನ.

೧೨೬.
ಗೀತವ ಹಾಡಿದರೇನು,
ಶಾಸ್ತ್ರ ಪುರಾಣವ ಕೇಳಿದರೇನು,
ವೇದವೇದಾಂತವನೋದಿದರೇನು,
ಮನವೊಲಿದು ಲಿಂಗಜಂಗಮವ ಪೂಜಿಸಲರಿಯದವರು ?
ಇವೆಲ್ಲರಲ್ಲಿಯೂ ಅನುಭಾವಿಯಾದರೇನು,
ಭಕ್ತಿಯಿಲ್ಲದವರನೊಲ್ಲ ಕೂಡಲಸಂಗಮದೇವ.

೧೨೭.
ಲಿಂಗವ ಪೂಜಿಸಿದ ಬಳಿಕ ಜಂಗಮಕ್ಕಂಜಲೇ ಬೇಕು.
ದಕ್ಕ ನುಂಗಿದಂತೆ ಬೆರೆದುಕೊಂಡಿರಬೇಡ.
ಬೀಗಿ ಬೆಳೆದ ಗೊನೆವಾಳೆಯಂತೆ ಬಾಗಿಕೊಂಡಿದ್ದರೆ,
ಬೇಡಿದ ಪದವಿಯನೀವ ಕೂಡಲಸಂಗಮದೇವ.

೧೨೮.
ದ್ವೈತಾದ್ವೈತವನೋದಿ ಏನ ಮಾಡುವಿರಯ್ಯ
ನಮ್ಮ ಶರಣರಿಗೆ ಉರಿಗರಗಾಗಿ ಕರಗದನ್ನಕ ?
ಸ್ಥಾವರ ಜಂಗಮ ಒಂದೆಂದು ನಂಬದನ್ನಕ ?
ಕೂಡಲಸಂಗಮದೇವ,
ಬರಿಯ ಮಾತಿನ ಮಾಲೆಯಲೇನಹುದು ?

೧೨೯.
ಆಡುತ್ತ ಹಾಡುತ್ತ ಭಕ್ತಿಯ ಮಾಡಬಹುದು ಲಿಂಗಕ್ಕೆ-
ಅದು ಬೇಡದು, ಬೆಸಗೊಳ್ಳದು !
ತಂದೊಮ್ಮೆ ನೀಡಬಹುದು !
ಕಾಡುವ ಬೇಡುವ ಜಂಗಮ ಬಂದರೆ
ನೀಡಲು ಬಾರದು ಕೂಡಲಸಂಗಮದೇವ.

೧೩೦.
ಕಲ್ಲ ನಾಗರ ಕಂಡರೆ ಹಾಲನೆರೆ ಎಂಬರು;
ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ!
ಉಂಬ ಜಂಗಮ ಬಂದರೆ ನಡೆ ಎಂಬರು;
ಉಣ್ಣದ ಲಿಂಗಕ್ಕೆ ಬೋನವ ಹಿಡಿ ಎಂಬರಯ್ಯ!
ನಮ್ಮ ಕೂಡಲಸಂಗನ ಶರಣರ ಕಂಡು
ಉದಾಸೀನವ ಮಾಡಿದರೆ,
ಕಲ್ಲ ತಾಗಿದ ಮಿಟ್ಟೆಯಂತಪ್ಪರಯ್ಯ!

೧೩೧.
ಎರೆದರೆ ನೆನೆಯದು, ಮರೆದರೆ ಬಾಡದು
ಹುರುಳಿಲ್ಲ ಹುರುಳಿಲ್ಲ ಲಿಂಗಾರ್ಚನೆ!
ನೋಡಯ್ಯ, ಕೂಡಲಸಂಗಮದೇವಯ್ಯ,
"ಜಂಗಮ"ಕ್ಕೆರೆದರೆ, "ಸ್ಥಾವರ" ನೆನೆಯಿತ್ತು.

೧೩೨.
ಅಗ್ನಿಯಾಧಾರದಲ್ಲಿ ಕಬ್ಬುನ ನೀರುಂಬುದಯ್ಯ;
ಭೂಮಿಯಧಾರದಲ್ಲಿ ವೃಕ್ಷ ನೀರುಂಬುದಯ್ಯ.
ಜಂಗಮಾಪ್ಯಾಯನವಾದರೆ ಲಿಂಗಸಂತುಷ್ಟಿಯಹುದಯ್ಯ
"ವೃಕ್ಷಸ್ಯ ವದನಂ ಭೂಮಿಃ
ಸ್ಥಾವರಸ್ಯ ತು ಜಂಗಮಃ!
ಅಹಂ ತುಷ್ಟಿರುಮೇ ದೇವ್ಯು-
ಭಯೋರ್ಜಂಗಮಲಿಂಗಯೋಃ ||"
ಇದು ಕಾರಣ ಕೂಡಲಸಂಗನ ಶರಣರಲ್ಲಿ
ಜಂಗಮಾಪ್ಯಾಯನವಾದರೆ ಲಿಂಗಸಂತುಷ್ಟಿ.

೧೩೩.
ಬಂಡವ ತುಂಬಿದ ಬಳಿಕ
ಸುಂಕವ ತೆತ್ತಲ್ಲದೆ ಹೊಗಬಾರದು.
ಕಳ್ಳನಾಣ್ಯ ಸಲಿಕೆಗೆ ಸಲ್ಲದು,
ಕಳ್ಳನಾಣ್ಯವ ಸಲಲೀಯರಯ್ಯ.
ಭಕ್ತಿಯೆಂಬ ಬಂಡಕ್ಕೆ ಜಂಗಮವೇ ಸುಂಕಿಗ
ಕೊಡಲಸಂಗಮದೇವ.

೧೩೪.
ಮಾಡಿ, ನೀಡಿ, ಲಿಂಗವ ಪೂಜಿಸಿಹೆವೆಂಬವರು
ನೀವೆಲ್ಲ ಕೇಳಿರಣ್ಣ;
ಹಾಗದ ಕೆರಹ ಹೊರಗೆ ಕಳೆದು
ದೇಗುಲಕ್ಕೆ ಹೋಗಿ,
ನಮಸ್ಕಾರವ ಮಾಡುವನಂತೆ,
ತನ್ನ ಕೆರಹಿನ ಧ್ಯಾನವಲ್ಲದೆ,
ದೇವರ ಧ್ಯಾನವಿಲ್ಲ;
ಧನವನಿರಿಸದಿರಾ ! ಇರಿಸಿದರೆ ಭವ ಬಪ್ಪುದು ತಪ್ಪದು!
ಕೂಡಲಸಂಗನ ಶರಣರಿಗೆ ಸವೆಸಲೇಬೇಕು.

೧೩೫.
ಉಂಡುದು ಬಂದೀತೆಂಬ ಸಂದೇಹಿಮಾನವ ನೀ ಕೇಳ!
ಉಂಡುದೇನಾಯಿತೆಂಬುದ ನಿನ್ನ ನೀ ತಿಳಿದು ನೋಡಾ!
ಉಂಡುದಾಗಳೇ ಆ ಪೀಯವಾಯಿತ್ತು!
ಆ ಉಂಡುದನುಣಬಂದ ಹಂದಿಯ ಬಾಳುವೆಯವರ
ಕಂಡು ಆನು ಮರುಗುವೆನಯ್ಯ ಕೂಡಲಸಂಗಮದೇವ.

೧೩೬.
ಆಯುಷ್ಯವುಂಟು ಪ್ರಳಯವಿಲ್ಲೆಂದು,
ಅರ್ಥವ ಮಡಗುವಿರಿ:
ಆಯುಷ್ಯ ತೀರಿ ಪ್ರಳಯ ಬಂದರೆ
ಆ ಅರ್ಥವನುಂಬವರಿಲ್ಲ:
ನೆಲನನಗೆದು ಮಡಗದಿರಾ!
ನೆಲ ನುಂಗಿದರುಗುಳುವುದೇ ?
ಕಣ್ಣಿನಲ್ಲಿ ನೋಡಿ, ಮಣ್ಣಿನಲ್ಲಿ ನೆರಹಿ
ಉಣ್ಣದೆ ಹೋಗದಿರಾ;
ನಿನ್ನ ಮಡದಿಗಿರಲೆಂದರೆ--ಮಡದಿಯ ಕೃತಕ ಬೇರೆ!
ನಿನ್ನೊಡಲು ಕೆಡೆಯಲು
ಮತ್ತೊಬ್ಬನಲ್ಲಿಗೆ ಅಡಕದೆ ಮಾಬಳೆ ?
ಹೆರರಿಗಿಕ್ಕಿ ಹೆಗ್ಗುರಿಯಾಗಿ ಕೆಡಬೇಡ.
ಕೂಡಲಸಂಗನ ಶರಣರಿಗೆ ಒಡನೆ ಸೆವೆಸುವುದು.

೧೩೭.
ಅವಳ ವಚನ ಬೆಲ್ಲದಂತೆ!
ಹೃದಯದಲಿಪ್ಪುದೆಲ್ಲಾ ನಂಜು ಕಂಡಯ್ಯ!!
ಕಂಗಳಲೊಬ್ಬನ ಕರೆವಳು ಮನದಲೊಬ್ಬನ ನೆನೆವಳು,
ವಚನದಲೊಬ್ಬನ ನೆರೆವಳು!
ಇಂತಿವಳ ತನು ಒಂದೆಸೆ, ಮನ ಒಂದೆಸೆ, ಮಾತೊಂದೆಸೆ!!
ಈ ಮಾನಿಸಗಳ್ಳಿಯ ನನ್ನವಳೆಂದು ನಂಬುವ
ಕುರಿನರರನೇನೆಂಬೆನಯ್ಯ ಕೂಡಲಸಂಗಮದೇವ.

೧೩೮.
ತನು-ಮನ-ಧನವ ಹಿಂದಿಕ್ಕಿಕೊಂಡು
ಮಾತಿನ ಬಣಬೆಯ ಒಳಲೊಟ್ಟೆಯ ನುಡಿವರು
ನೀವೆಲ್ಲ ಕೇಳಿರೆ:
ತಲಹಿಲ್ಲದ ಕೋಲು ಪೊಳ್ಳುಹಾರುವುದಲ್ಲದೆ
ಗುರಿಯ ತಾಗಬಲ್ಲುದೆ ?
ಮಾಯಾಪಾಶ ಹಿಂಗಿ, ಮನದ ಗಂಟು ಬಿಡದನ್ನಕ
ಕೂಡಲಸಂಗಮದೇವನೆಂತೊಲಿವನಯ್ಯ.

೧೩೯.
ಹಲವು ಮಣಿಯ ಕಟ್ಟಿ ಕುಣಿಕುಣಿದಾಡಿ,
ಹಲವು ಪರಿಯಲಿ ವಿಭೂತಿಯ ಪೂಸಿ,
ಗಣಾಡಂಬರದ ನಡುವೆ ನಲಿನಲಿದಾಡಿ
ಉಂಡು ತಂಬುಲಗೊಂಡು ಹೋಹುದಲ್ಲ!
ತನು-ಮನ-ಧನವ ಸಮರ್ಪಿಸದವರ
ಕೂಡಲಸಂಗಮದೇವನೆಂತೊಲಿವ ?

೧೪೦.
ತನುವ ಕೊಟ್ಟು ಗುರುವನೊಲಿಸಲೆ ಬೇಕು.
ಮನವ ಕೊಟ್ಟು ಲಿಂಗವನೊಲಿಸಲೆ ಬೇಕು.
ಧನವ ಕೊಟ್ಟು ಜಂಗಮವನೊಲಿಸಲೆ ಬೇಕು.
ಈ ತ್ರಿವಿಧವ ಮರೆಸಿಕೊಂಡು,
ಹರೆಯ ಹೊಯಿಸಿ, ಕುರುಹ ಪೂಜಿಸುವ ಡಂಬಕರ ಮೆಚ್ಚ
ಕೂಡಲಸಂಗಮದೇವ.

೧೪೧.
ಆಡಿದರೇನೋ, ಹಾಡಿದರೇನೋ, ಓದಿದರೇನೋ-
ತ್ರಿವಿಧ ದಾಸೋಹವಿಲ್ಲದನ್ನಕ ?
ಆಡದೇ ನವಿಲು ? ಹಾಡದೇ ತಂತಿ ? ಓದದೇ ಗಿಳಿ ?
ಭಕ್ತಿಯಿಲ್ಲದವರನೊಲ್ಲ ಕೂಡಲಸಂಗಮದೇವ!

೧೪೨.
ವೇದದಂತುಟಲ್ಲ, ಶಾಸ್ತ್ರದಂತುಟಲ್ಲ,
ಗೀತ-ಮಾತಿನಂತುಟಲ್ಲ ಕೇಳಿರಯ್ಯ !
ಮಾತಿನ ಮಾತಿನ ಕೌಳುಗೋಲ ಶ್ರವದಲ್ಲಿ
ಸತ್ತವರೊಳರೇ ಅಯ್ಯ ?
ದಿಟದಲಗಿನ ಕಾಳೆಗವಿತ್ತಲಿದ್ದುದೇ
ಕೂಡಲಸಂಗನ ಶರಣರು ಬಂದಲ್ಲಿ !?

೧೪೩.
ಮಾತಿನ ಮಾತಿನಲಪ್ಪುದೇ ಭಕ್ತಿ ?
ಮಾಡಿ ತನು ಸವೆಯದನ್ನಕ,
ಧನ ಸವೆಯದನ್ನಕ,
ಮನ ಸವೆಯದನ್ನಕ,
ಅಪ್ಪುದೇ ಭಕ್ತಿ ?
ಕೂಡಲಸಂಗಮದೇವನೆಲುದೋರ ಸರಸವಾಡುವನು;
ಸೈರಿಸದನ್ನಕ ಅಪ್ಪುದೇ ಭಕ್ತಿ ?

೧೪೪.
ಹಾವಸೆಗಲ್ಲ ಮೆಟ್ಟಿ ಹರಿದು
ಗೊತ್ತ ಮುಟ್ಟ ಬಾರದಯ್ಯ.
ನುಡಿದಂತೆ ನಡೆಯಲು ಬಾರದಯ್ಯ.
ಕೂಡಲಸಂಗನ ಶರಣರ ಭಕ್ತಿ ಬಾಳ ಬಾಯಿಧಾರೆ.

೧೪೫.
ಭಕ್ತಿಯೆಂಬುದ ಮಾಡಬಾರದು.
ಗರಗಸದಂತೆ ಹೋಗುತ್ತ ಕೊರೆವುದು;
ಬರುತ್ತ ಕೊಯ್ವುದು.
ಘಟಸರ್ಪನಲ್ಲಿ ಕೈದುಡುಕಿದರೆ ಹಿಡಿಯದೆ ಮಾಬುದೆ ?
ಕೂಡಲಸಂಗಮದೇವ.

೧೪೬.
ಹಲವು ಕಾಲ ಧಾವತಿಗೊಂಡು ಒಟ್ಟಿದ ಹಿದಿರೆಯು
ಒಂದು ಮಿಡುಕುರಲ್ಲಿ ಬೇವಂತೆ
ಸಲೆನೆಲೆ ಸನ್ನಿಹಿತನಾಗಿಪ್ಪ ಶರಣನ ಭಕ್ತಿ
ಒಂದನಾಯತದಿಂದ ಕೆಡುವುದು!
ಸ್ವಧರ್ಮದಲ್ಲಿ ಗಳಿಸಿದ ಪಿತನ ಧನವ
ಅಧರ್ಮದಲ್ಲಿ ಕೆಡಿಸುವ ಸುತನಂತೆ
ಶಿವನ ಸೊಮ್ಮ ಶಿವಂಗೆ ಮಾಡದೆ ಅನ್ಯಕ್ಕೆ ಮಾಡಿದರೆ
ತನ್ನ ಭಕ್ತಿ ತನ್ನನೇ ಕೆಡಿಸುವುದು ಕೂಡಲಸಂಗಮದೇವ!

೧೪೭.
ನೆಚ್ಚಿದೆನೆಂದರೆ, ಮೆಚ್ಚಿದೆನೆಂದರೆ,
ಸಲೆ ಮಾರುವೋದೆನೆಂದರೆ;
ತನುವನಲ್ಲಾಡಿಸಿ ನೋಡುವೆ ನೀನು!
ಮನವನಲ್ಲಾಡಿಸಿ ನೋಡುವೆ ನೀನು!
ಧನವನಲ್ಲಾಡಿಸಿ ನೋಡುವೆ ನೀನು!
ಇವೆಲ್ಲಕಂಜದಿದ್ದರೆ
ಭಕ್ತಿಕಂಪಿತ ನಮ್ಮ ಕೂಡಲಸಂಗಮದೇವ.

೧೪೮.
ಕೌಳುಗೋಲ ಹಿಡಿದು ಶ್ರವವ ಮಾಡಬಹುದಲ್ಲದೆ
ಕಳನೇರಿ ಕಾದುವುದರಿದು ನೋಡಾ!
ಬಣ್ಣವಿಟ್ಟು ನುಡಿದಲ್ಲಿ ಫಲವೇನು ಚಿನ್ನಗೆಯ್ಕನಾಡುವಂತೆ ?
ಬಂದ ಸಮಯೋಚಿತವನರಿತು
ಇದ್ದುದ ವಂಚಿಸದಿದ್ದರೆ
ಕೂಡಲಸಂಗಮದೇವನೊಲಿದು ಸಲಹುವ!

೧೪೯.
ಹಸಿದು ಬಂದ ಗಂಡನಿಗೆ ಉಣಲಿಕ್ಕದೆ
ಬಡವಾದನೆಂದು ಮರುಗುವ ಸತಿಯ ಸ್ನೇಹದಂತೆ
ಬಂದುದನರಿಯಳು, ಇದ್ದುದ ಸವಿಸಳು!
ದುಃಖವಿಲ್ಲದಕ್ಕೆ ಹಗರಣಿಗನ ತೆರನಂತೆ!
ಕೂಡಲಸಂಗನ ಶರಣರಿಗೆ ತ್ರಿವಿಧವ ವಂಚಿಸಿ
ಬಣ್ಣಿಸುವ ಭಕ್ತಿಯ ಕಂಡು ನಾನು ನಾಚಿದೆನು!

೧೫೦.
ಉದಯದ ಮಾಗಿಯ ಬಿಸಿಲು
ಅಂಗಕ್ಕೆ ಹಿತವಾಯಿತ್ತು!
ಮಧ್ಯಾಹ್ನದ ಬಿಸಿಲು
ಅಂಗಕ್ಕೆ ಕರ ಕಠಿನವಾಯಿತ್ತು!
ಮೊದಲಲ್ಲಿ ಲಿಂಗಭಕ್ತಿ ಹಿತವಾಯಿತ್ತು!
ಕಡೆಯಲ್ಲಿ ಜಂಗಮಭಕ್ತಿ ಕಠಿನವಾಯಿತ್ತು!
ಇದು ಕಾರಣ,
ಕೂಡಲಸಂಗಮದೇವನವರ
ಬಲ್ಲನಾಗಿ ಒಲ್ಲನಯ್ಯ.

೧೫೧.
ಬರಬರ ಭಕ್ತಿ ಅರೆಯಾಯಿತ್ತು ಕಾಣಿರಣ್ಣ!
ಮೊದಲ ದಿನ ಹಣೆ ಮುಟ್ಟಿ,
ಮರುದಿನ ಕೈ ಮುಟ್ಟಿ,
ಮೂರೆಂಬ ದಿನಕೆ ತೂಕಡಿಕೆ ಕಾಣಿರಣ್ಣಾ.
ಹಿಡಿದುದ ಬಿಡದಿದ್ದರೆ ತಡಿಗೆ ಚಾಚುವ

ಅಲ್ಲದಿದ್ದರೆ ನಡುನೀರಲದ್ದುವ
ನಮ್ಮ ಕೂಡಲಸಂಗ್ದೇವ.

೧೫೨.
ಬೆಟ್ಟದ ಬಿದಿರೇ ನೀನು ಅಟ್ಟಕ್ಕೆ ಏಣಿಯಾದೆ!
ಕಾಲು ಮುರಿದವರಿಗೆ ಊರುಗೋಲಾದೆ!
ಬಿದಿರಿಂ ಭೋ! ಅಯ್ಯ, ಬಿದಿರಿಂ ಭೋ!
ಬಿದಿರ ಫಲವನುಂಬರೆ ಬಿದಿರಿಂ ಭೊ;
ಬಿದಿರಲಂದಣವಕ್ಕು
ಬಿದಿರೆ ಸತ್ತಿಗೆಯಕ್ಕು,
ಬಿದಿರಲೀ ಗುಡಿಯು ಗುಡಾರಂಗಳಕ್ಕು,
ಬಿದಿರಲೀ ಸಕಲಸಂಪದವೆಲ್ಲ!
ಬಿದಿರದವರ ಮೆಚ್ಚ ನಮ್ಮ ಕೂಡಲಸಂಗಮದೇವ.

೧೫೩.
ಉಂಬಾಗಳಿಲ್ಲೆನ್ನ, ಉಡುವಾಗಳಿಲ್ಲೆನ್ನ
ಬಂಧುಗಳು ಬಂದಾಗಳಿಲ್ಲೆನ್ನ;
ಲಿಂಗಕ್ಕೆ ಇಲ್ಲೆಂಬ, ಜಂಗಮಕ್ಕೆ ಇಲ್ಲೆಂಬ,
ಬಂದ ಪುರಾತರಿಗೆ ಇಲ್ಲೆಂಬ;
ಸಾವಾಗ ದೇಹವ ದೇಗುಲಕ್ಕೊಯ್ಯೆಂಬ
ದೇವರಿಗೆ ಹೆಣ ಬಿಟ್ಟಿ ಹೇಳಿತ್ತೆ, ಕೂಡಲಸಂಗಮದೇವ ?

೧೫೪.
ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ,
ಸತ್ಪಾತ್ರಕ್ಕೆ ಸಲ್ಲದಯ್ಯ!
ನಾಯ ಹಾಲು ನಾಯಿಂಗಲ್ಲದೆ,
ಪಂಚಾಮೃತಕ್ಕೆ ಸಲ್ಲದಯ್ಯ!
ನಮ್ಮ ಕೂಡಲಸಂಗನ ಶರಣರಿಗಲ್ಲದೆ
ಮಾಡುವ ಅರ್ಥ ವ್ಯರ್ಥ ಕಂಡಯ್ಯ.

೧೫೫.
ಹತ್ತು ಮತ್ತರ ಭೂಮಿ,
ಬತ್ತುವ ಹಯನ, ನಂದಾದೀವಿಗೆಯ
ನಡೆಸಿಹೆನೆಂಬವರ ಮುಖವ ನೋಡಲಾಗದು!
ಅವರ ನುಡಿಯ ಕೇಳಲಾಗದು;
ಅಂಡಜ-ಸ್ವೇದಜ-ಉದ್ಬಿಜ-ಜರಾಯುಜವೆಂಬ
ಚತುರಶೀತಿ ಲಕ್ಷಪ್ರಾಣಿಗಳಿಗೆ ಭವಿತವ್ಯವ ಕೊಟ್ಟವರಾರೋ ?!
ಒಡೆಯರಿಗೆ ಉಂಡೆಯ ಮುರಿದಿಕ್ಕಿದಂತೆ
"ಎನ್ನಿಂದಲೇ ಆಯಿತು, ಎನ್ನಿಂದಲೇ ಹೋಯಿತು"
ಎಂಬುವನ ಬಾಯಲ್ಲಿ
ಮೆಟ್ಟಿ ಹುಡಿಯ ಹೊಯ್ಯದೆ ಮಾಬನೆ ಕೂಡಲಸಂಗಮದೇವ!

೧೫೬.
ಅನವರತ ಮಾಡಿಹೆನೆಂದು ಉಪ್ಪರ ಗುಡಿಯ ಕಟ್ಟಿ
ಮಾಡುವ ಭಕ್ತನ ಮನೆಯದು ಲಂದಣಗಿತ್ತಿಯ ಮನೆ,
ಸರ್ವಜೀವದಯಾಪಾರಿಯೆಂದು
ಭೂತದಯಕಿಕ್ಕುವನ ಮನೆ ಸಯಿದಾನದ ಕೇಡು.
ಸೂಳೆಯ ಮಗ ಮಾಳವ ಮಾಡಿದರೆ
ತಾಯ ಹೆಸರಾಯಿತ್ತಲ್ಲದೆ ತಂದೆಯ ಹೆಸರಿಲ್ಲ
ಕೂಡಲಸಂಗಮದೇವ.

೧೫೭.
ಓಡಲಾರದ ಮೃಗವು
ಸೊಣಗಂಗೆ ಮಾಂಸವ ಕೊಡುವಂತೆ,
ಮಾಡಲಾಗದು ಭಕ್ತನು, ಕೊಳಲಾಗದು ಜಂಗಮ;
ಹಿರಿಯರು ನರಮಾಂಸವ ಭುಂಜಿಸುವರೆ ?!
ತನು ಉಕ್ಕಿ ಮನ ಉಕ್ಕಿ ಮಾಡಬೇಕು ಭಕ್ತಿಯ,
ಮಾಡಿಸಿಕೊಳ್ಳಬೇಕು ಜಂಗಮ, ಕೂಡಲಸಂಗಮದೇವ.

೧೫೮.
ಬಂದುದ ಕೈಕೊಳಬಲ್ಲಡೆ ನೇಮ.
ಇದ್ದುದ ವಂಚನೆ ಮಾಡದಿದ್ದರೆ ಅದು ನೇಮ.
ನಡೆದು ತಪ್ಪದಿದ್ದರೆ ಅದು ನೇಮ.
ನುಡಿದು ಹುಸಿಯದಿದ್ದರೆ ಅದು ಮುನ್ನವೆ ನೇಮ.
ನಮ್ಮ ಕೂಡಲಸಂಗನ ಶರಣರು ಬಂದರೆ
ಒಡೆಯರಿಗೊಡವೆಯನೊಪ್ಪಿಸುವುದೇ ನೇಮ.

೧೫೯.
ಹಾಲ ನೇಮ, ಹಾಲ ಕೆನೆಯ ನೇಮ;
ಕೆನೆ ತಪ್ಪಿದ ಬಳಿಕ ಕಿಚ್ಚಡಿಯ ನೇಮ;
ಬೆಣ್ಣೆಯ ನೇಮ, ಬೆಲ್ಲದ ನೇಮ-
ಅಂಬಲಿಯ ನೇಮದವರನಾರನೂ ಕಾಣೆ,
ಕೂಡಲಸಂಗನ ಶರಣರಲ್ಲಿ
ಅಂಬಲಿಯ ನೇಮದಾತ ಮಾದರ ಚನ್ನಯ್ಯ

೧೬೦.
ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ.
ನೀಡ ನೀಡಿ ಕೆಟ್ಟರು ನಿಜವಿಲ್ಲದೆ.
ಮಾಡುವ ನೀಡುವ ನಿಜಗುಣವುಳ್ಳಡೆ.
ಕೂಡಿಕೊಂಬ ನಮ್ಮ ಕೂಡಲಸಂಗಮದೇವ.

೧೬೧.
ಮಾಡಿದೆನೆಂಬುದು ಮನದಲ್ಲಿ ಹೊಳೆದರೆ
ಏಡಿಸಿ ಕಾಡಿತ್ತು ಶಿವನ ಡಂಗುರ.
ಮಾಡಿದೆನೆನ್ನದಿರಾ ಲಿಂಗಕ್ಕೆ!
ಮಾಡಿದೆನೆನ್ನದಿರಾ ಜಂಗಮಕ್ಕೆ!
ಮಾಡಿದೆನೆಂಬುದು ಮನದಲಿಲ್ಲದಿದ್ದರೆ
ಬೇಡಿದ್ದನೀವ ಕೂಡಲಸಂಗಮದೇವ!!

೧೬೨.
ಮಾಡುವಂತಿರಬೇಕು ಮಾಡದಂತಿರಬೇಕು!
ಮಾಡುವ ಮಾಟದೊಳಗೆ ತಾನಿಲ್ಲದಿರಬೇಕು!!
ನೋಡುವಂತಿರಬೇಕು, ನೋಡದಂತಿರಬೇಕು!
ನೋಡುವ ನೋಟದೊಳಗೆ ತಾನಿಲ್ಲದಿರಬೇಕು!!
ನಮ್ಮ ಕೂಡಲಸಂಗಮದೇವರ
ನೆನೆವುತ್ತ ನೆನೆವುತ್ತ ನೆನೆಯದಂತಿರಬೇಕು!

೧೬೩.
ಭಕ್ತನು ಶಾಂತನಾಗಿರಬೇಕು.
ತನ್ನ ಕುರಿತು ಬಂದ ಠಾವಿನಲ್ಲಿ ಸತ್ಯನಾಗಿರಬೇಕು.
ಭೂತಹಿತವಹ ವಚನವ ನುಡಿಯಬೇಕು.
ಲಿಂಗ-ಜಂಗಮದಲ್ಲಿ ನಿಂದೆಯಿಲ್ಲದಿರಬೇಕು.
ಸಕಲ ಪ್ರಾಣಿಗಳ ತನ್ನಂತೆ ಭಾವಿಸಬೇಕು.
ತನು-ಮನ-ಧನವ ಗುರು-ಲಿಂಗ-ಜಂಗಮಕ್ಕೆ ಸವೆಸಬೇಕು.
ಅಪಾತ್ರದಾನವಂ ಗೆಯ್ಯದಿರಬೇಕು.
ಸಕಲೇಂದ್ರಿಯಂಗಳೂ ತನ್ನ ವಶಗತವಾಗಿರಬೇಕು.
ಇದೇ ಮೊದಲಲ್ಲಿ ಬೇಹ ಶೌಚ ನೋಡಾ!
ಲಿಂಗವ ಪೂಜಿಸಿ ಪ್ರಸಾದವ ಪಡೆವಡೆ
ಎನಗಿದೇ ಸಾಧನ ಕೂಡಲಸಂಗಮದೇವ!

೧೬೪
ಕಳಬೇಡ ಕೊಲಬೇಡ,
ಹುಸಿಯ ನುಡಿಯಲು ಬೇಡ,
ಮುನಿಯ ಬೇಡ,
ಅನ್ಯರಿಗೆ ಅಸಹ್ಯಪಡಬೇಡ.
ತನ್ನ ಬಣ್ಣಿಸಬೇಡ,
ಇದಿರ ಹಳಿಯಲು ಬೇಡ.
ಇದೇ ಅಂತರಂಗಶುದ್ಧಿ!
ಇದೇ ಬಹಿರಂಗಶುದ್ಧಿ!
ಇದೆ ನಮ್ಮ ಕೂಡಲಸಂಗನನೊಲಿಸುವ ಪರಿ.

೧೬೫.
ದೇವಲೋಕ ಮರ್ತ್ಯಲೋಕವೆಂಬುದು
ಬೇರಿಲ್ಲ ಕಾಣಿರಣ್ಣ.
ಸತ್ಯವ ನುಡಿವುದೇ ದೇವಲೋಕ!
ಮಿಥ್ಯವ ನುಡಿವುದೇ ಮರ್ತ್ಯಲೋಕ!
ಆಚಾರವೇ ಸ್ವರ್ಗ! ಅನಾಚಾರವೇ ನರಕ!
ನೀವೇ ಪ್ರಮಾಣ ಕೂಡಲಸಂಗಮದೇವ.

೧೬೬.
ಪುಣ್ಯಪಾಪಂಗಳೆಂಬವು
ತಮ್ಮಿಷ್ಟ ಕಂಡಿರೇ!
'ಅಯ್ಯ' ಎಂದರೆ ಸ್ವರ್ಗ,
'ಎಲವೋ' ಎಂದರೆ ನರಕ.
"ದೇವ, ಭಕ್ತ, ಜಯ, ಜೀಯ" ಎಂಬ
ನುಡಿಯೊಳಗೆ ಕೈಲಾಸವೈದುವುದು ಕೂಡಲಸಂಗಮದೇವ.

೧೬೭.
ಏನಿ ಬಂದಿರಿ, ಹದುಳಿದ್ದಿರೆಂದರೆ
ನಿಮ್ಮ ಮೈಸಿರಿ ಹಾರಿಹೋಹುದೇ ?
ಕುಳ್ಳಿರೆಂದರೆ ನೆಲ ಕುಳಿಹೋಹುದೇ ?
ಒಡನೆ ನುಡಿದರೆ ಶಿರಹೊಟ್ಟೆ ಒಡೆವುದೆ ?
ಕೊಡಲಿಲ್ಲದಿದ್ದರೊಂದು
ಗುಣವಿಲ್ಲದಿದ್ದರೆ
ಕೆಡಹಿ ಮೂಗ ಕೊಯ್ವುದ ಮಾಬನೆ ಕೂಡಲಸಂಗಯ್ಯ ?

೧೬೮.
ಭಕ್ತಿಯೆಂಬ ನಿಧಾನವ ಸಾಧಿಸುವಡೆ
ಶಿವಪ್ರೇಮವೆಂಬಂಜನವನೆಚ್ಚಿ ಕೊಂಬುದು ?
ಭಕ್ತನಾದವಂಗಿದೇ ಪಥವಾಗಿರಬೇಕು.
ನಮ್ಮ ಕೂಡಲಸಂಗನ ಶರಣರನುಭಾವ ಗಜವೈದ್ಯ.

೧೬೯.
ಕಂಡ ಭಕ್ತರಿಗೆ ಕೈಮುಗಿವಾತನೇ ಭಕ್ತ
ಮೃದುವಚನವೇ ಸಕಲ ಜಪಂಗಳಯ್ಯ!
ಮೃದುವಚನವೇ ಸಕಲ ತಪಂಗಳಯ್ಯ ?
ಸದುವಿನಯವೇ ಸದಾಶಿವನೊಲುಮೆಯಯ್ಯ!
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯ.

೧೭೦.
ದಯವಿಲ್ಲದ ಧರ್ಮವದೇವುದಯ್ಯ,
ದಯವೇ ಬೇಕು ಸರ್ವಪ್ರಾಣಿಗಳೆಲ್ಲರಲ್ಲಿ!
ದಯವೇ ಧರ್ಮದ ಮೂಲವಯ್ಯ.
ಕೂಡಲಸಂಗಯ್ಯನಂತಲ್ಲದೊಲ್ಲ ಕಂಡಯ್ಯ.

೧೭೧.
ಇತ್ತ ಬಾರೈ ಇತ್ತ ಬಾರೈಯೆಂದು
ಭಕ್ತರೆಲ್ಲರು ಕೂರ್ತು ಹತ್ತಿರಕೆ ಕರೆವುತಿರಲು,
ಮತ್ತೆ ಕೆಲಸಕ್ಕೆ ಹೋಗಿ,
ಶರಣೆಂದು ಹಸ್ತಬಾಯನೆ ಮುಚ್ಚಿ, ಕಿರಿದಾಗಿ;
ಭೃತ್ಯಾಚಾರವ ನುಡಿದು
ವಿನಯ ತದ್ಧ್ಯಾನ ಉಳ್ಳವರನೆತ್ತಿಕೊಂಬನಯ್ಯ
ಕೂಡಲಸಂಗಮದೇವ ಪ್ರಮಥರ ಮುಂದೆ.

೧೭೨.
ತನಗೆ ಮುನಿವರಿಗೆ ತಾ ಮುನಿಯಲೇಕಯ್ಯ ?
ತನಗಾದ ಆಗೇನು ? ಅವರಿಗಾದ ಚೇಗೇನು ?
ತನುವಿನ ಕೋಪ ತನ್ನ ಹಿರಿಯತನದ ಕೇಡು.
ಮನದ ಕೋಪ ತನ್ನ ಅರಿವಿನ ಕೇಡು.
ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ
ನೆರೆಮನೆಯ ಸುಡದು ಕೂಡಲಸಂಗಮದೇವ.

೧೭೩.
ಭಕ್ತನು ಕಾಣದ ಠಾವಿನಲ್ಲಿ ಜರಿದನೆಂದರೆ
ಕೇಳಿ ಪರಿಣಾಮಿಸಬೇಕು!
ಅದೇನು ಕಾರಣವೆಂದರೆ--
ಕೊಡದೆ ಕೊಳದೆ ಅವಂಗೆ ಸಂತೋಷವಹುದಾಗಿ!
ಎನ್ನ ಮನದ ತದ್ವೇಷವಳಿದು
ನಿಮ್ಮ ಶರಣರಿಗೆ ಶರಣೆಂಬುದ ಕರುಣಿಸು, ಕೂಡಲಸಂಗಮದೇವ!

೧೭೪.
ಕರಗಿಸಿ ಎನ್ನ ಮನದ ಕಾಳಿಕೆಯ ಕಳೆಯಯ್ಯ.
ಒರೆ ಬಣ್ಣಕ್ಕೆ ತಂದೆನ್ನ ಪುಟವಿಕ್ಕಿ ನೋಡಯ್ಯ,
ಕಡಿಹಕ್ಕೆ ಬಡಿಹಕ್ಕೆ ತಂದೆನ್ನ ಕಡೆಯಾಣಿಯ ಮಾಡಿ
ನಿಮ್ಮ ಶರಣರ ಪಾದಕ್ಕೆ ತೊಡಿಗೆಯ ಮಾಡಿ
ಸಲಹಯ್ಯ ಕೂಡಲಸಂಗಮದೇವ.

೧೭೫.
ಅವರಿವರೆನ್ನದೆ ಚರಣಕ್ಕೆರಗಲು
ಅಯ್ಯತನವೇರಿ ಬೆಬ್ಬನೆ ಬೆರೆವೆ ನಾನು
ಕೆಚ್ಚು ಬೆಳೆಯಿತಯ್ಯ ಎನ್ನ ಎದೆಯಲ್ಲಿ!
ಆ ಕೆಚ್ಚಿಂಗೆ ಕಿಚ್ಚನಿಕ್ಕಿ ಸುಟ್ಟು
ಬೆಳುಕನ ಮಾಡಿ
ಬೆಳುಗಾರದಂತೆ ಮಾಡು
ಕೂಡಲಸಂಗಮದೇವ.

೧೭೬.
ಇರಿಸಿಕೊಂಡು ಭಕ್ತರಾದರೆಮ್ಮವರು
ತರಿಸಿಕೊಂಡು ಭಕ್ತರಾದರೆಮ್ಮವರು
ಜರಿಸಿಕೊಂಡು ಭಕ್ತರಾದರೆಮ್ಮವರು
ಕೊರಿಸಿಕೊಂಡು ಭಕ್ತರಾದರೆಮ್ಮವರು
ಕೂಡಲಸಂಗನ ಶರಣರಿಗೆ ಮುಳಿಸ ತಾಳಿ
ಎನ್ನ ಭಕ್ತಿ ಅರೆಯಾಯಿತ್ತು.

೧೭೭.
ಕುದುರನೇಸು ತೊಳೆದರೆಯು ಕೆಸರು ಮಾಬುದೇ ?
ಎನ್ನ ಕಾಯದಲುಳ್ಳ ಅವಗುಣಂಗಳ ಕಳೆದು
ಕೃಪೆಯ ಮಾಡಯ್ಯ ತಂದೆ,
ಕಂಬಳಿಯಲ್ಲಿ ಕಣಿಕವ ನಾದಿದಂತೆ ಎನ್ನ ಮನ!
ಕೂಡಲಸಂಗಮದೇವ ನಿಮಗೆ ಶರಣೆಂದು ಶುದ್ಧ ಕಾಣಯ್ಯ.

೧೭೮.
ಕಾಣದುದನೆಲ್ಲವ ಕಾಣಲಾರೆನಯ್ಯ.
ಕೇಳದುದನೆಲ್ಲವ ಕೇಳಲಾರೆನಯ್ಯ.
ದ್ರೋಹವಿಲ್ಲ - ಎಮ್ಮ ಶಿವಲ್ಲಿ ಸೀಮೆಯಯ್ಯ.
ಒಲೆಯ ಮುಂದಿದ್ದು ಮಾಡದ ಕನಸ ಕಾಬವರನು
ಒಲ್ಲನಯ್ಯ ಕೂಡಲಸಂಗಮದೇವ.

೧೭೯.
ಕಾಣಬಹುದೇ ಪರುಷದ ಗಿರಿಯಂಧಕಂಗೆ ?
ಮೊಗೆಯಬಹುದೇ ರಸದ ಬಾವಿ ನಿರ್ಭಾಗ್ಯಂಗೆ ?
ತೆಗೆಯಬಹುದೇ ಕಡವರವು ದರಿದ್ರಂಗೆ ?
ಕರೆಯಬಹುದೇ ಕಾಮಧೇನುವಶುದ್ಧಂಗೆ ?
ಹೊನ್ನ ಹುಳುವ ಕಂಡು ನರಿ ತನ್ನ ಬಾಲವ
ಹುಣ್ಣುಮಾಡಿಕೊಂಡರೆ ಹೋಲಬಹುದೆ ?
ಎನ್ನೊಡೆಯ ಕೂಡಲಸಂಗನ ಶರಣನ
ಪುಣ್ಯವಿಲ್ಲದೆ ಕಾಣಬಹುದೇ ?

೧೮೦.
ಅರಿಸಿನವನೆ ಮಿಂದು, ಹೊಂದೊಡಿಗೆಯನೆ ತೊಟ್ಟು,
ಪುರುಷನ ಒಲವಿಲ್ಲದ ಲಲನೆಯಂತೆ ನಾನಿದ್ದೆನಯ್ಯ!
ವಿಭೂತಿಯನೆ ಪೂಸಿ, ರುದ್ರಾಕ್ಷಿಯನೆ ಧರಿಸಿ
ಶಿವ, ನಿಮ್ಮ ಒಲವಿಲ್ಲದಂತೆ ನಾನಿದ್ದೆನಯ್ಯ!
ಕೆಟ್ಟು ಬಾಳುವರಿಲ್ಲ ನಮ್ಮವರ ಕುಲದಲ್ಲಿ
ನೀನೊಲಿದಂತೆ ಸಲಹಯ್ಯ ಕೂಡಲಸಂಗಮದೇವ.

೧೮೧.
ಉದಯಾಸ್ತಮಾನವೆನ್ನ ಬೆಂದ ಬಸಿರಿಂಗೆ ಕುದಿಯಲಲ್ಲದೆ,
ನಿಮ್ಮ ನೆನೆಯಲು ತೆರಹಿಲ್ಲವಯ್ಯ.
ಎಂತೊ ಲಿಂಗ ತಂದೆ, ಎಂತಯ್ಯ ಎನ್ನ ಪೂರ್ವಲಿಖಿತ ?
ಬೆರಣಿಯನಾಯಲಲ್ಲದೆ
ಅಟ್ಟುಣ್ಣ ತೆರಹಿಲ್ಲೆನಗೆ!
ನೀ ಕರುಣಿಸು ಕೂಡಲಸಂಗಮದೇವ.

೧೮೨.
ಬೆಲ್ಲವ ತಿಂದ ಕೋಡಗದಂತೆ
ಸಿಹಿಯ ನೆನೆಯದಿರಾ ಮನವೆ!
ಕಬ್ಬ ತಿಂದ ನರಿಯಂತೆ
ಹಿಂದಕ್ಕೆಳಸದಿರಾ ಮನವೇ!
ಗಗನವನಡರಿದ ಕಾಗೆಯಂತೆ
ದೆಸೆದೆಸೆಗೆ ಹಂಬಲಿಸದಿರಾ ಮನವೇ!
ಕೂಡಲಸಂಗನ ಶರಣರ ಕಂಡು
ಲಿಂಗವೆಂದೇ ನಂಬು ಮನವೇ!

೧೮೩.
ಒಡೆಯನ ಕಂಡರೆ ಕಳ್ಳನಾಗದಿರಾ ಮನವೆ!
ಭವದ ಬಾಧೆಯ ತಪ್ಪಿಸಿಕೊಂಬಡೆ
ನೀನು ನಿಯತವಾಗಿ ಭಯಭರಿತನಾಗಿ,
ಅಹಂಕಾರಿಯಾಗದೆ ಶರಣೆನ್ನು ಮನವೇ!
ಕೂಡಲಸಂಗನ ಶರಣರಲ್ಲಿ
ಭಕ್ತಿಯ ನೋನುವಡೆ
ಕಿಂಕರನಾಗಿ ಬದುಕು ಮನವೇ.

೧೮೪.
ಕೋಟ್ಯನುಕೋಟಿ ಜಪವ ಮಾಡಿ
ಕೋಟಲೆಗೊಳ್ಳಲೆದೇಕೆ ಮನವೇ ?!
ಕಿಂಚಿತು ಗೀತ ಒಂದನಂತಕೋಟಿ ಜಪ!
ಜಪವೆಂಬುದೇಕೆ ಮನವೇ ?
ಕೂಡಲಸಂಗನ ಶರಣರ ಕಂಡು
ಆಡಿ, ಹಾಡಿ ಬದುಕು ಮನವೇ!

೧೮೫.
ಮನವೇ ನಿನ್ನ ಜನನದ ಪರಿಭವವ ಮರೆದೆಯಲ್ಲಾ!
ಮನವೇ, ಲಿಂಗವ ನಂಬು ಕಂಡಾ!
ಮನವೇ, ಜಂಗಮವ ನಂಬು ಕಂಡಾ!
ಮನವೇ, ಕೂಡಲಸಂಗಮದೇವರ
ಬಿಡದೆ ಬೆಂಬತ್ತು ಕಂಡಾ!

೧೮೬.
ಕೊಡುವಾತ ಸಂಗ, ಕೊಂಬಾತ ಸಂಗ ಕಾಣಿರೆಲವೋ!
ನರಮಾನವರು ಕೊಡುವರೆಂಬವನ ಬಾಯಲ್ಲಿ
ಬಾಲಹುಳುಗಳು ಸುರಿಯವೆ ?
ಮೂರು ಲೋಕಕ್ಕೆ ನಮ್ಮ ಕೂಡಲಸಂಗಯ್ಯ ಕೊಡುವ ಕಾಣಿರೆಲವೊ!

೧೮೭.
ಸುರರ ಬೇಡಿದರಿಲ್ಲ! ನರರ ಬೇಡಿದರಿಲ್ಲ!
ಬರಿದೆ ಧೃತಿಗೆಡಬೇಡ ಮನವೇ
ಆರನಾದರೆಯೂ ಬೇಡಿ ಬೇಡಿ
ಬರಿದೆ ಧೃತಿಗೆಡಬೇಡ ಮನವೇ!
ಕೂಡಲಸಂಗಮದೇವರನಲ್ಲದೆ ಆರ ಬೇಡಿದರಿಲ್ಲ ಮನವೇ!

೧೮೮.
ಹೃದಯದಿ ಕತ್ತರಿ, ತುದಿನಾಲಿಗೆ ಬೆಲ್ಲಂ ಭೋ!
ಆಡಿ ಏವೆಂ ಭೊ, ಹಾಡಿ ಏವೆಂ ಭೋ!
ನಿಚ್ಚ ನಿಚ್ಚ ಶಿವರಾತ್ರಿಯ ಮಾಡಿ ಏವೆಂ ಭೋ!
ಆನು ಎನ್ನಂತೆ, ಮನವು ಮನದಂತೆ!
ಕೂಡಲಸಂಗಮದೇವ ತಾನು ತನ್ನಂತೆ!

೧೮೯.
ಕೆಲಕ್ಕೆ ಶುದ್ಧನಾದೆನಲ್ಲದೆ
ಎನ್ನ ಮನಕ್ಕೆ ಶುದ್ಧನಾಗೆನೇಕಯ್ಯ!
ಕೈ ಮುಟ್ಟಿ ಪೂಜಿಸುವಡೆನ್ನ ಕೈ ಶುದ್ಧವಲ್ಲಯ್ಯ!
ಮನ ಮುಟ್ಟಿ ಪೂಜಿಸುವಡೆನ್ನ ಮನ ಶುದ್ಧವಲ್ಲಯ್ಯ!
ಭಾವ ಶುದ್ಧವಾದರೆ
ಕೂಡಲಸಂಗಯ್ಯನಿತ್ತ ಬಾ ಎಂದೆತ್ತಿಕೊಳ್ಳನೇಕಯ್ಯ ?!

೧೯೦.
ಲಿಂಗದಲ್ಲಿ ಕಠಿಣವುಂಟೆ ?
ಜಂಗಮದಲ್ಲಿ ಕುಲವುಂಟೆ ?
ಪ್ರಸಾದದಲ್ಲಿ ಅರುಚಿಯುಂಟೆ ?
ಈ ತ್ರಿವಿಧದಲ್ಲಿ ಭಾವಭೇದವನರಸುವೆನು:
ಕೂಡಲಸಂಗಮದೇವಾ,
ಧಾರೆವಟ್ಟಲೆನ್ನ ಮನವು.

೧೯೧.
ಓತಿ ಬೇಲಿವರಿದಂತೆನ್ನ ಮನವಯ್ಯ,
ಹೊತ್ತಿಗೊಂದು ಪರಿಯಪ್ಪ
ಗೋಸುಂಬೆಯಂತೆನ್ನ ಮನವು.
ಬಾವಲ ಬಾಳುವೆಯಂತೆನ್ನ ಮನವು.
ನಡುವಿರುಳೆದ್ದ ಕುರುಡಂಗಗುಸೆಯಲ್ಲಿ ಬೆಳಗಾದಂತೆ
ನಾನಿಲ್ಲದ ಭಕ್ತಿಯ ಬಯಸಿದರುಂಟೆ
ಕೂಡಲಸಂಗಮದೇವ.

೧೯೨.
ಶಬ್ದ-ಸಂಭಾಷಣೆಯ ನುಡಿಯ ವರ್ಚ್ಚಿಸಿ ನುಡಿವೆ
ತೊಡೆಹದ ಕೆಲಸದ ಬಣ್ಣದಂತೆ!
ಕಡಿಹಕ್ಕೆ ಒರಗೆ ಬಾರದು ನೋಡಾ!
ಎನ್ನ ಮನದಲೊಂದು, ಹೃದಯದಲೊಂದು,
ವಚನದಲೊಂದು ನೋಡಾ! ಕೂಡಲಸಂಗಮದೇವ,
ಆನು ಭಕ್ತನೆಂಬ ಹುಸಿಯ ಮಸಕವನೇನ ಬಣ್ಣಿಸುವೆನಯ್ಯ!

೧೯೩.
ಏನನೋದಿ, ಏನ ಕೇಳಿ, ಏನ ಮಾಡಿಯೂ
ಫಲವೇನು ನಿನ್ನವರೊಲಿಯದನ್ನಕ ?
ಶಿವ ಶಿವ ಮಹಾದೇವ!
ಬಾಳಿಲ್ಲದವಳ ಒಲೆಯಂತಾಯಿತ್ತೆನಗೆ
ಕೂಡಲಸಂಗಮದೇವ.

೧೯೪.
ಮುನ್ನೂರರವತ್ತು ದಿನ ಶರವ ಮಾಡಿ,
ಕಳನೇರಿ ಕೈಮರೆದಂತಾಯಿತ್ತೆನ್ನ ಭಕ್ತಿ!
ಎನಿಸು ಕಾಲ ಲಿಂಗಾರ್ಚನೆಯ ಮಾಡಿ
ಏವೆನಯ್ಯ ಮನದಲ್ಲಿ ದೃಢವಿಲ್ಲದನ್ನಕ ?
ಕೊಡನ ತುಂಬಿದ ಹಾಲ ಕೆಡಹಿ
ಉಡುಗಲೆನ್ನಳವೆ ಕೂಡಲಸಂಗಮದೇವ.

೧೯೫.
ಅಂಕ ಓಡಿದರೆ ತೆತ್ತಿಗಂಗೆ ಭಂಗವಯ್ಯ,
ಕಾದಿ ಗೆಲಿಸಯ್ಯ-ಎನ್ನನು ಕಾದಿ ಗೆಲಿಸಯ್ಯ,
ಕೂಡಲಸಂಗಮದೇವಯ್ಯ, ಎನ್ನ ತನು-ಮನ-ಧನದಲ್ಲಿ
ವಂಚನೆಯಿಲ್ಲದಂತೆ ಮಾಡಯ್ಯ.

೧೯೬.
ಅಂಕ ಕಳನೇರಿ ಕೈಮರೆದಿದ್ದರೆ
ಮಾರಂಕ ಬಂದಿರಿವುದು ಮಾಬನೆ ?
ನಿಮ್ಮ ನೆನವ ಮತಿ ಮರೆದಿದ್ದರೆ
ಪಾಪ ತನುವನಂಡಲೆವುದ ಮಾಬುದೆ ?
ಕೂಡಲಸಂಗಯ್ಯನ ನೆನೆದರೆ
ಪಾಪ ಉರಿಗೊಂಡಿದರಗಿನಂತೆ ಕರಗುವುದಯ್ಯ.

೧೯೭.
ಹೇಡಿ ಬಿರುದ ಕಟ್ಟಿದಂತಾಯಿತೆನ್ನ ವೇಷ!
ಕಾದಬೇಕು, ಕಾದುವರೆ ಮನವಿಲ್ಲ!
ಆಗಳೇ ಹೋಯಿತ್ತು ಬಿರುದು;
ಹಗರಣಿಗನಂತೆ ನಗೆಗೆಡೆಯಾಯಿತ್ತು!
ಮಾರಂಕ-ಜಂಗಮ ಮನೆಗೆ ಬಂದರೆ
ಕಾಣದಂತಡ್ಡ ಮುಸುಡಿಟ್ಟರೆ,
ಕೂಡಲಸಂಗಮದೇವ ಜಾಣ
ಮೂಗ ಕೊಯ್ವ ಹಲುದೋರಲು.

೧೯೮.
ಆಡುವುದಳವಟ್ಟಿತ್ತು-ಹಾಡುವುದಳವಟ್ಟಿತ್ತು.
ಅರ್ಚನೆಯಳವಟ್ಟಿತ್ತು-ಪೂಜನೆಯಳವಟ್ಟಿತ್ತು.
ನಿತ್ಯಲಿಂಗಾರ್ಚನೆಯು ಮುನ್ನವೇ ಅಳವಟ್ಟಿತ್ತು!
ಕೂಡಲಸಂಗನ ಶರಣರು ಬಂದರೆ
ಏಗುವುದೇಬೇಸನೆಂಬುದೊಪ್ಪಚ್ಚಿಯಳವಡದು!!

೧೯೯.
ಹೊರಿಸಿಕೊಂಡು ಹೋದ ನಾಯಿ
ಮೊಲನನೇನ ಹಿಡಿವುದಯ್ಯ ?
ಇರಿಯದ ವೀರ ಇಲ್ಲದ ಸೊಬಗುವ
ಹೇಳುವುದೇ ನಾಚಿಕೆ!
ಆನು ಭಕ್ತನೆಂತೆಂಬೆನಯ್ಯ
ಕೂಡಲಸಂಗಮದೇವ ?

೨೦೦.
ನೋಡುವರುಳ್ಳರೆ ಮಾಡುವೆ ದೇಹಾರವ,
ಎನಗೊಂದು ನಿಜವಿಲ್ಲ,
ಎನಗೊಂದು ನಿಷ್ಪತ್ತಿಯಿಲ್ಲ;
ಲಿಂಗವ ತೋರಿ ಉದರವ ಹೊರೆವ
ಭಂಗಗಾರ ನಾನು ಕೂಡಲಸಂಗಮದೇವ.

೨೦೧.
ಊರ ಸೀರೆಗೆ ಅಸಗ ಬಡಿವಡೆದಂತೆ
ಹೊನ್ನೆನ್ನದು, ಹೆಣ್ಣೆನ್ನದು, ಮಣ್ಣೆನ್ನದು,
ಎಂದು ಮರುಳಾದೆ.
ನಿಮ್ಮನರಿಯದ ಕಾರಣ,
ಕೆಮ್ಮನೆ ಕೆಟ್ಟೆ ಕೂಡಲಸಂಗಮದೇವ.

೨೦೨.
ಕಾಂಚನವೆಂಬ ನಾಯ ನೆಚ್ಚಿ
ನಿಮ್ಮ ನಾನು ಮರೆದೆನಯ್ಯ.
ಕಾಂಚನಕ್ಕೆ ವೇಳೆಯಲ್ಲದೆ, ಲಿಂಗಕ್ಕೆ ವೇಳೆಯಿಲ್ಲ!
ಹಡಕಿಗೆ ಮೆಚ್ಚಿದ ಸೊಣಗನಮೃತದ ರುಚಿಯ ಬಲ್ಲುದೇ ?
ಕೂಡಲಸಂಗಮದೇವ.

೨೦೩.
ಹಗೆಹದಲ್ಲಿ ಬಿದ್ದವರ ಮೇಲೆ ಒರಳ ನೂಂಕುವರೆ ?
ಕೋಳದ ಮೇಲೆ ಸಂಕಲೆಯನಿಕ್ಕುವರೆ ?
ಬೆಂದ ಹುಣ್ಣ ಕಂಬಿಯಲ್ಲಿ ಕೀಸುವರೆ ?
ಕೂಡಲಸಂಗಯ್ಯ ಕಾಡುವ ಕಾಟ
ಸಿರಿಯಾಳಂಗಲ್ಲದೆ ಸೈರಿಸಬಹುದೆ ?

೨೦೪.
ಮಾತಿನಲ್ಲಿ ಶ್ರೋತ್ರಸುಖವ ನುಡಿಯಬಹುದಲ್ಲದೆ,
ಮಾಡುವ ಸತ್ಕ್ರಿಯೆಯಿಂದ ಭಕ್ತನೆನಿಸಲು ಬಾರದು.
ಅರ್ಥಪ್ರಾಣಾಭಿಮಾನವಾರಿಗೆಯು ಸಮನಿಸದು,
ಲಿಂಗಮುಖದಲುದಯವಾದ ಶರಣಂಗಲ್ಲದೆ,
ಅಯ್ಯ, ಕೂಡಲಸಂಗನ ಶರಣರ
ಭಕ್ತಿಭಂಡಾರವು ಎನಗೆಂತು ಸಾಧ್ಯವಪ್ಪುದು,
ಹೇಳೆನ್ನ ತಂದೆ.

೨೦೫.
ಬಾಣಮಯೂರರಂತೆ ಬಣ್ಣಿಸಲರಿಯೆ
ಸಿರಿಯಾಳನಂತೆ ಉಣಲಿಕ್ಕಲರಿಯೆ
ದಾಸಿಮಯ್ಯನಂತೆ ಉಡಕೊಡಲರಿಯೆ
ಉಂಡುಟ್ಟು ಕೊಟ್ಟರೆ ಮುಯ್ಯಿಗೆ ಮುಯ್ಯೆನಿಸಿತ್ತು,
ಎನಗೆ ಕೊಟ್ಟರೆ ಧರ್ಮ ಕೂಡಲಸಂಗಮದೇವ.

೨೦೬.
ಎನ್ನ ತಪ್ಪನಂತಕೋಟಿ
ನಿಮ್ಮ ಸೈರಣೆಗೆ ಲೆಕ್ಕವಿಲ್ಲಯ್ಯ.
ಇನ್ನು ತಪ್ಪಿದೆನಾದರೆ
ನಿಮ್ಮ ಪಾದವೇ ದಿವ್ಯ ಕೂಡಲಸಂಗಮದೇವಯ್ಯ,
ನಿಮ್ಮ ಪ್ರಮಥರ ಮುಂದೆ ಕಿನ್ನರಿ ಬೊಮ್ಮಣ್ಣನೇ ಸಾಕ್ಷಿ!

೨೦೭.
ಅಡಿಗಡಿಗೆ ಎನ್ನ ಮನವ ಜಡಿದು ನೋಡದಿರಯ್ಯ.
ಬಡವನೆಂದೆನ್ನ ಕಾಡದಿರಯ್ಯ
ಎನಗೊಡೆಯರುಂಟು ನಮ್ಮ ಕೂಡಲಸಂಗನ ಶರಣರು.

೨೦೮.
ಮನೆ ನೋಡಾ ಬಡವರು,
ಮನ ನೋಡಾ ಧೀರರು
ಸೋಂಕಿನಲ್ಲಿ ಶುಚಿ;
ಸರ್ವಾಂಗಕಲಿ.
ಪರಸಕ್ಕನುವಿಲ್ಲ; ಬಂದ ತತ್ಕಾಲಕ್ಕುಂಟು.
ಕೂಡಲಸಂಗನ ಶರಣರು ಸ್ವತಂತ್ರಧೀರರು.

೨೦೯.
ಆ ಕರಿಯಾಕೃತಿಯ ಸೂಕರನ ಹೋಲಿಸಿದರೆ
ಸೂಕರ ಆ ಕರಿಯಾಗಬಲ್ಲುದೆ ?
ಆ ವ್ಯಾಳೇಶನಾಕೃತಿಯ ಭೂನಾಗನ ಹೋಲಿಸಿದರೆ
ಭೂನಾಗನಾ ವ್ಯಾಳೇಶನಾಗಬಲ್ಲುದೇ ?
ನಾನು ಭಕ್ತನಾದರೇನಯ್ಯ
ನಮ್ಮ ಕೂಡಲಸಂಗಮದೇವರ ಸದ್ಭಕ್ತರ ಹೋಲಲರಿವೆನೆ ?

೨೧೦.
ಮೋಟನ ಮೌಳಿ, ಮೂಕೊರತಿಯ ಶೃಂಗಾರ,
ಬೇಟ ಕುರುಡಂಗೆ ನಗೆಗೆಡೆಯಾಯಿತ್ತು!
ನಮ್ಮ ಕೂಡಲಸಂಗನ ಶರಣರ ಮುಂದೆ
ಆನು ಭಕ್ತನೆಂಬ ನಾಚಿಕೆ ಸಾಲದೆ ?

೨೧೧.
ಮಾವಿನ ಕಾಯೊಳಗೊಂದು ಎಕ್ಕೆಯ ಕಾಯಿ ನಾನಯ್ಯ!
ನಾನು ಭಕ್ತನೆಂತೆಂಬೆ ನಿಮ್ಮ ಶರಣರ ಮುಂದೆ ನಾಚಿಕೆಯಿಲ್ಲದೆ ?
ಕೂಡಲಸಂಗನ ಶರಣರ ಮುಂದೆ ನಾನೆಂತು ಭಕ್ತನಪ್ಪೆನಯ್ಯ ?!

೨೧೨.
ಮರದ ನೆಳಲಲ್ಲಿದ್ದು ತನ್ನ ನೆಳಲನರಸುವರೆ ?
ನಿಮ್ಮ ಶರಣರ ಮುಂದೆ ನಾನೇತರ ಭಕ್ತನಯ್ಯ!
ನಿಮ್ಮ ಶರಣರ ಮುಂದೆ ನಾನೇತರ ಯುಕ್ತನಯ್ಯ!
ನಾನು ಭಕ್ತನೆಂಬ ನುಡಿ ಸುಡದೆ ಕೂಡಲಸಂಗಮದೇವ.

೨೧೩.
ಎನಗಿಂತ ಕಿರಿಯರಿಲ್ಲ!
ಶಿವಭಕ್ತರಿಗಿಂತ ಹಿರಿಯರಿಲ್ಲ.
ನಿಮ್ಮ ಪಾದ ಸಾಕ್ಷಿ ಎನ್ನ ಮನ ಸಾಕ್ಷಿ!
ಕೂಡಲಸಂಗಮದೇವಾ ಎನಗಿದೇ ದಿಬ್ಯ.

೨೧೪.
ಅರ್ಚಿಸಲರಿಯೆ, ಪೂಜಿಸಲರಿಯೆ,
ನಿಚ್ಚ ನಿಚ್ಚ ಶಿವರಾತ್ರಿಯ ನಾ ಮಾಡಲರಿಯೆ!
ಕಪ್ಪಡಿವೇಷದಿಂದಾನು ಬಂದಾಡುವೆ.
ಕಪ್ಪಡಿವೇಷದಿಂದ, ಈಶ,
ನಿಮ್ಮ ದಾಸರ ದಾಸಿಯ ದಾಸ ನಾನಯ್ಯ.
ನಿಮ್ಮ ವೇಷಧಾರಿಯ ಮನೆಯ ಪಂಗುಳ ನಾನಯ್ಯ.
ಕೂಡಲಸಂಗಮದೇವ, ನಿಮ್ಮ ಲಾಂಛನವ ಧರಿಸಿಪ್ಪ
ಉದರಪೋಷಕ ನಾನಯ್ಯ.

೨೧೫.
ಅಪ್ಪನು ಡೋಹರ ಕಕ್ಕಯ್ಯನಾಗಿ,
ಮುತ್ತಯ್ಯ ಚೆನ್ನಯ್ಯನಾದರೆ ಆನು ಬದುಕೆನೆ ?
ಮತ್ತಾ ಶ್ವಪಚಯ್ಯನ ಸನ್ನಿಧಿಯಿಂದ
ಭಕ್ತಿಯ ಸದ್ಗುಣವ ನಾನರಿಯೆನೆ ?
ಕಷ್ಟಜಾತಿಜನ್ಮದಲ್ಲಿ ಜನಿಯಿಸಿದೆ ಎನ್ನ,
ಎನಗಿದು ವಿಧಿಯೇ ಕೂಡಲಸಂಗಮದೇವ ?

೨೧೬.
ಉತ್ತಮ ಕುಲದಲ್ಲಿ ಹುಟ್ಟಿದೆನೆಂಬ
ಕಷ್ಟತನದ ಹೊರೆಯ ಹೊರಿಸಿದಿರಯ್ಯ!
ಕಕ್ಕಯನೊಕ್ಕುದನಿಕ್ಕ ನೋಡಯ್ಯ,
ದಾಸಯ್ಯ ಶಿವದಾನವನೆರೆಯ ನೋಡಯ್ಯ.
ಮನ್ನಣೆಯ ಚೆನ್ನಯ್ಯನೆನ್ನುವ ಮನ್ನಿಸ.
ಉನ್ನತಮಹಿಮ ಕೂಡಲಸಂಗಮದೇವಾ
ಶಿವಧೋ! ಶಿವಧೋ!!

೨೧೭.
ಸೆಟ್ಟಿ ಎಂಬೆನೆ ಸಿರಿಯಾಳನ ?
ಮಡಿವಾಳನೆಂಬೆನೆ ಮಾಚಯ್ಯನ ?
ಡೋಹರನೆಂಬೆನೆ ಕಕ್ಕಯ್ಯನ ?
ಮಾದಾರನೆಂಬೆನೆ ಚೆನ್ನಯ್ಯನ ?
ಆನು ಹಾರುವನೆಂದರೆ,
ಕೂಡಲಸಂಗಯ್ಯ ನಗುವನಯ್ಯ.

೨೧೮.
ಸೂಳೆಗೆ ಹುಟ್ಟಿದ ಕೂಸಿನಂತೆ
ಆರನಾದರೆಯೂ 'ಅಯ್ಯ' 'ಅಯ್ಯ' ಎನಲಾರೆನಯ್ಯ.
ಚೆನ್ನಯ್ಯನೆಮ್ಮಯ್ಯನು,
ಚೆನ್ನಯ್ಯನ ಮಗ ನಾನು;
ಕೂಡಲಸಂಗನ ಮಹಾಮನೆಯಲ್ಲಿ
ಧರ್ಮಸಂತಾನ ಭಂಡಾರಿ ಬಸವನು!

೨೧೯.
ಭಕ್ತಿ ಇಲ್ಲದ ಬಡವ ನಾನಯ್ಯ.
ಕಕ್ಕಯ್ಯನ ಮನೆಯಲು ಬೇಡಿದೆ.
ದಾಸಯ್ಯನ ಮನೆಯಲು ಬೇಡಿದೆ.
ಚೆನ್ನಯ್ಯನ ಮನೆಯಲು ಬೇಡಿದೆ,
ಎಲ್ಲ ಪುರಾತರು ನೆರೆದು,
ಭಕ್ತಿ-ಭಿಕ್ಷವನಿಕ್ಕಿದರೆ ಎನ್ನ ಪಾತ್ರೆ ತುಂಬಿತ್ತು.
ಕೂಡಲಸಂಗಮದೇವ.

೨೨೦.
ಅರಸರ ಮನೆಯಲ್ಲಿ ಅರಸಿಯಾಗಿಪ್ಪುದರಿಂದ
ಭಕ್ತರ ಮನೆಯಲ್ಲಿ ತೊತ್ತಾಗಿಪ್ಪುದು ಕರ ಲೇಸಯ್ಯ.
ತಾರೌ ಅಗ್ಗವಣಿಯ, ನೀಡೌ ಪತ್ರೆಯ,
ಲಿಂಗಕ್ಕೆ ಬೋನವ ಹಿಡಿಯೌ ಎಂಬರು;
ಕೂಡಲಸಂಗನ ಮಹಾಮನೆಯಲ್ಲಿ ಒಕ್ಕುದನುಣ್ಣೌ
ತೊತ್ತೇ ಎಂಬರು.

೨೨೧.
ಮೇಲಾಗಲೊಲ್ಲೆ ಕೀಳಾಗಲೊಲ್ಲದೆ!
ಕೀಳಿಂಗಲ್ಲದೆ ಹಯನು ಕರೆವುದೆ ?
ಮೇಲಾಗಿ ನರಕದಲೋಲಾಡಲಾರೆನು!
ನಿಮ್ಮ ಶರಣರ ಪಾದಕ್ಕೆ ಕೀಳಾಗಿರಿಸು
ಮಹಾದಾನಿ ಕೂಡಲಸಂಗಮದೇವ.

೨೨೨.
ಕಾಗೆ ವಿಷ್ಟಿಸುವ ಹೊನ್ನಕಳಶವಹುದರಿಂದ,
ಒಡೆಯರು ಜೋಗೈಸುವ ಚಮ್ಮಾವುಗೆಯ ಮಾಡಯ್ಯ.
ಅಯ್ಯ, ನಿಮ್ಮ ಶರಣರ ಪಾದಕ್ಕೆ ಚಮ್ಮಾವುಗೆಯ ಮಾಡಯ್ಯ.
"ಕರ್ಮಾವಲಂಬಿನಃ ಕೇಚಿತ್
ಕೇಚಿತ್ ಜ್ಞಾನಾವಲಂಬಿನಃ
ವಯಂತು ಶಿವಭಕ್ತಾನಾಂ
ಪಾದರಕ್ಷಾವಲಂಬಿನಃ"
ಕೂಡಲಸಂಗಮದೇವ ನಿಮ್ಮ ಸೆರಗೊಡ್ಡಿ ಬೇಡುವೆನು
ಇದೊಂದೇ ವರವ ಕರುಣಿಸಯ್ಯ.

೨೨೩.
ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ,
ಅಂಬುಜಕ್ಕೆ ಭಾನುವಿನ ಉದಯದ ಚಿಂತೆ.
ಭ್ರಮರಂಗೆ ಪರಿಮಳದ ಬಂಡುಂಬ ಚಿಂತೆ.
ಎನಗೆ ನಮ್ಮ ಕೂಡಲಸಂಗಮದೇವರ
ನೆನೆವುದೇ ಚಿಂತೆ!

೨೨೪.
ಹೊಲಬುಗೆಟ್ಟ ಶಿಶು ತನ್ನ ತಾಯನರಸುವಂತೆ,
ಬಳಿದಪ್ಪಿದ ಪಶು ತನ್ನ ಹಿಂಡನರಸುವಂತೆ,
ಬಯಸುತ್ತಿದ್ದೆನಯ್ಯ ನಿಮ್ಮ ಭಕ್ತರ ಬರವನು!
ಬಯಸುತ್ತಿದ್ದೆನಯ್ಯ ನಿಮ್ಮ ಶರಣರ ಬರವನು!
ದಿನಕರನುದಯಕ್ಕೆ ಕಮಳ ವಿಕಸಿತವಾದಂತೆ
ಎನಗೆ ನಿಮ್ಮ ಶರಣರ ಬರವು ಕೂಡಲಸಂಗಮದೇವ.

೨೨೫.
ಸೂರ್ಯನುದಯ ತಾವರೆಗೆ ಜೀವಾಳ!
ಚಂದ್ರಮನುದಯ ನೈದಿಲೆಗೆ ಜೀವಾಳ!
ಕೂಪರ ಠಾವಿನಲ್ಲಿ ಕೂಟ-ಜೀವಾಳವಯ್ಯ.
ಒಲಿದ ಠಾವಿನಲ್ಲಿ ನೋಟ-ಜೀವಾಳವಯ್ಯ.
ಕೂಡಲಸಂಗನ ಶರಣರ ಬರವೆನಗೆ
ಪ್ರಾಣ-ಜೀವಾಳವಯ್ಯ.

೨೨೬.
ಕಂಡರೆ ಮನೋಹರವಯ್ಯ,
ಕಾಣದಿದ್ದರೆ ಅವಸ್ಥೆ ನೋಡಯ್ಯ.
ಹಗಲು ಇರುಳಹುದು; ಇರುಳು ಹಗಲಹುದು.
ಇರುಳು ಹಗಲೊಂದು
ಜುಗ ಮೇಲೆ ಕೆಡೆದಂತೆ ಇಹುದು.
ಕೂಡಲಸಂಗನ ಶರಣರನಗಲುವ ಧಾವತಿಯಿಂದ
ಮರಣವೇ ಲೇಸು ಕಂಡಯ್ಯ.

೨೨೭.
ಅಂಗೈ ತಿಂದುದು, ಎನ್ನ ಕಂಗಳು ಕೆತ್ತಿಹವಯ್ಯ.
ಬಂದಹರಯ್ಯ ಪುರಾತರೆನ್ನ ಮನೆಗೆ!
ಬಂದಹರಯ್ಯ ಶರಣರೆನ್ನ ಮನೆಗೆ!
ಕಂಡ ಕನಸು ದಿಟವಾಗಿ,
ಜಂಗಮ ಮನೆಗೆ ಬಂದರೆ
ಶಿವಾರ್ಚನೆಯ ಮಾಡಿಸುವೆ
ಕೂಡಲಸಂಗಮದೇವಾ ನಿಮ್ಮ ಮುಂದೆ.

೨೨೮.
ಗಿಳಿಯ ಪಂಜರವಿಕ್ಕಿ, ಸೊಡರಿಗೆಣ್ಣೆಯನೆರೆದು,
ಬತ್ತಿಯನಿಕ್ಕಿ ಬರವ ಹಾರುತ್ತಿದ್ದೆನೆಲೆಗವ್ವ!
ತರಗೆಲೆ ಗಿರಕಂದರೆ, ಹೊರಗನಾಲಿಸುವೆ.
ಅಗಲಿದೆನೆಂದೆನ್ನ ಮನ ಧಿಗಿಲೆಂದಿತ್ತೆಲೆಗವ್ವ.
ಕೂಡಲಸಂಗನ ಶರಣರು ಬಂದು
ಬಾಗಿಲ ಮುಂದೆ ನಿಂದು
'ಶಿವಾ' ಎಂದರೆ ಸಂತೋಷಪಟ್ಟೆನೆಲೆಗವ್ವ.

೨೨೯.
ಅಡವಿಯಲೊಬ್ಬ ಕಡುನೀರಡಸಿ
ಎಡೆಯಲ್ಲಿ ನೀರ ಕಂಡಂತಾಯಿತಯ್ಯ!
ಕುರುಡ ಕಣ್ಣ ಪಡೆದಂತಾಯಿತಯ್ಯ!
ಬಡವ ನಿಧಾನವ ಪಡೆದಂತಾಯಿತಯ್ಯ!
ನಮ್ಮ ಕೂಡಲಸಂಗನ ಶರಣರ
ಬರವೆನ್ನ ಪ್ರಾಣ ಕಂಡಯ್ಯ.

೨೩೦.
ಇಂದೆನ್ನ ಮನೆಗೆ ಪ್ರಮಥರು ಬಂದಾರೆಂದು,

ಗುಡಿ, ತೋರಣವ ಕಟ್ಟಿ;
ಪಡುಸಮ್ಮಾರ್ಜನೆಯ ಮಾಡಿ
ರಂಗವಾಲಿಯನಿಕ್ಕಿ
ಉಘೇ, ಚಾಂಗು, ಭಲಾ, ಎಂಬೆ!
ಕೂಡಲಸಂಗನ ಶರಣರು
ತಮ್ಮ ಒಕ್ಕುದನಿಕ್ಕಿ ಸಲಹುವರಾಗಿ.

೨೩೧.
ಸಾಸವೆಯ ಮೇಲೆ ಸಾಗರವರಿದಂತಾಯಿತಯ್ಯ!
ಆನಂದದಿಂದ ನಲಿನಲಿದಾಡುವೆನು.
ಆನಂದದಿಂದ ಕುಣಿಕುಣಿದಾಡುವೆನು.
ಕೂಡಲಸಂಗನ ಶರಣರು ಬಂದರೆ
ಉಬ್ಬಿಕೊಬ್ಬಿ ಹರುಷದಲೋಲಾಡುವೆನು.

೨೩೨.
ಎಳ್ಳಿಲ್ಲದ ಗಾಣವನಾಡಿದ
ಎತ್ತಿನಂತಾಯಿತ್ತೆನ್ನ ಭಕ್ತಿ!
ಉಪ್ಪ ಅಪ್ಪುವಿನಲ್ಲಿ ಅದ್ದಿ
ಮೆಲಿದಂತಾಯಿತ್ತೆನ್ನ ಭಕ್ತಿ!
ಕೂಡಲಸಂಗಮದೇವ,
ಅನು ಮಾಡಿದೆನೆಂಬೀ ಕಿಚ್ಚು ಸಾಲದೆ ?

೨೩೩.
ಧ್ಯಾನಮೌನವೆಂಬ ಶಸ್ತ್ರವ ಹಿಡಿಯಲಾರದೆ
ಅಹಂಕಾರಧಾರೆಯ ಮೊನೆಯಲಗೆಂಬ ಶಸ್ತ್ರವ ಹಿಡಿದು ಕೆಟ್ಟೆನಯ್ಯ!
ಅಂಜುವೆನಂಜುವೆನಯ್ಯ!
ಜಂಗಮ-ಲಿಂಗವೆಂಬ ಭಾಷೆ ಪಲ್ಲಟವಾಯಿತ್ತು!
ಇನ್ನು-ಜಂಗಮಲಿಂಗವೆಂಬ ಶಿಕ್ಷಾಶಸ್ತ್ರದಲ್ಲಿ,
ಎನ್ನ ಹೊಯ್ದು ಬಯ್ದು ರಕ್ಷಿಸುವುದು ಕೂಡಲಸಂಗಮದೇವ!

೨೩೪.
ಎನ್ನಲ್ಲಿ ಭಕ್ತಿ ಸಾಸವೆಯ ಷಡ್ಭಾಗದಿನಿತಿಲ್ಲ;
ಎನ್ನ ಭಕ್ತನೆಂಬರು; ಎನ್ನ ಸಮಯಾಚಾರಿ ಎಂದೆಂಬರು.
ನಾನೇನು ಪಾಪವ ಮಾಡಿದೆನೋ!
ಬೆಳೆಯದ ಮುನ್ನವೇ ಮೊಳೆಯ ಕೊಯ್ವರೆ ಹೇಳಯ್ಯ ?
ಇರಿಯದ ವೀರ ಇಲ್ಲದ ಸೊಬಗುವ
ಎಲ್ಲ ಒಡೆಯರು ಏರಿಸಿ ನುಡಿವರು!
ಎನಗಿದು ವಿಧಿಯೇ ಕೂಡಲಸಂಗಮದೇವ ?

೨೩೫.
ಎನ್ನವರೆನಗೊಲಿದು ಹೊನ್ನಶೂಲದಲ್ಲಿಕ್ಕಿದರೆನ್ನ
ಹೊಗಳಿ ಹೊಗಳಿ!
ಎನ್ನ ಹೊಗಳತೆ ಎನ್ನನಿಮ್ಮೈಗೊಂಡಿತಲ್ಲ!
ಅಯ್ಯೋ ನಿಮ್ಮ ಮನ್ನಣೆಯೆ
ಮಸೆದಲಗಾಗಿ ತಾಗಿತ್ತಲ್ಲ!
ನೊಂದೆನು, ಸೈರಿಸಲಾರೆನು-ಕೂಡಲಸಂಗಮದೇವ,
ನೀನೆನಗೊಳ್ಳಿದನಾದರೆ,
ಎನ್ನ ಹೊಗಳತೆಗಡ್ಡ ಬಾರಾ ಧರ್ಮೀ.

೨೩೬.
ಎನ್ನವರೆನಗೊಲಿದು ಹೊನ್ನಶೂಲದಲ್ಲಿಕ್ಕಿದರೆನ್ನ!
ಅಹಂಕಾರ ಪೂರಾಯ ಗಾಯದಲ್ಲಿ
ಆನೆಂತು ಬದುಕುವೆನೆಂತು ಜೀವಿಸುವೆ!
ಜಂಗಮವಾಗಿ ಬಂದು ಜರಿದು
ಶೂಲವನಿಳುಹಿ, ಪ್ರಸಾದದ ಮದ್ದನಿಕ್ಕಿ
ಸಲಹು ಕೂಡಲಸಂಗಮದೇವ.

೨೩೭.
ಹೊಯ್ದವರೆನ್ನ ಹೊರೆದವರೆಂಬೆ,
ಬಯ್ದವರೆನ್ನ ಬಂಧುಗಳೆಂಬೆ.
ನಿಂದಿಸಿದವರೆನ್ನ ತಂದೆತಾಯಿಗಳೆಂಬೆ!
ಆಳಿಗೊಂಡವರೆನ್ನ ಆಳ್ದರೆಂಬೆ.
ಜರಿದವರೆನ್ನ ಜನ್ಮಬಂಧುಗಳೆಂಬೆ.
ಹೊಗಳಿದವರೆನ್ನ ಹೊನ್ನಶೂಲದಲಿಕ್ಕಿದವರು
ಕೂಡಲಸಂಗಮದೇವ.

೨೩೮.
ಎಡದ ಕೈಯಲು ಹಾಲ ಬಟ್ಟಲು
ಬಲದ ಕೈಯಲು ಓಜುಗಟ್ಟಿಗೆ!
ಆವಾಗ ಬಂದಾನೆಮ್ಮಯ್ಯ
ಬಡಿದು ಹಾಲು ಕುಡಿಸುವ ತಂದೆ! ?
"ದಂಡಕ್ಷೀರದ್ವಯೀಹಸ್ತಂ
ಜಂಗಮಂ ಭಕ್ತಿಮಂದಿರಂ |
ತದ್‌ಭಕ್ತ್ಯಾ ಲಿಂಗಸಂತುಷ್ಟಿಃ
ಅಪಹಾಸಾಚ್ಚ ದಂಡನಂ ||"
ಎಂದುದಾಗಿ ಕೂಡಲಸಂಗಮದೇವಯ್ಯ
ತಾನೇ ಭಕ್ತಿಪಥವ ತೋರುವ ತಂದೆ.

೨೩೯.
ಕೃತಯುಗದಲ್ಲಿ ಕೇತಾರವೆಂಬ ಮೂಲಸ್ಥಾನ;
ತ್ರೇತಾಯುಗದಲ್ಲಿ ವಾರಣಾಸಿ ಎಂಬ ಮೂಲಸ್ಥಾನ;
ದ್ವಾಪರಯುಗದಲ್ಲಿ ವಿರೂಪಾಕ್ಷವೆಂಬ ಮೂಲಸ್ಥಾನ;
ಕಲಿಯುಗದಲ್ಲಿ ಪರ್ವತವೆಂಬ ಮೂಲಸ್ಥಾನ;
ನಾ-ನಾ ಸ್ಥಾನವ ಮೆಟ್ಟಿದೆ
ಜಂಗಮವೇ ಲಿಂಗವೆಂದು ನಂಬಿದೆ
ಕೂಡಲಸಂಗಮದೇವ.

೨೪೦.
ಭಕ್ತದೇಹೀಕದೇವನಪ್ಪ ದೇವನು
ಸದ್ಭಕ್ತರ ಬಳಿಯಲ್ಲಿ ಬಪ್ಪನಾಗಿ,
ಆಳ್ದನು ಬರಲಾಳು ಮಂಚದ ಮೇಲೆ
ಇಪ್ಪುದು ಗುಣವೇ ಹೇಳಾ
ಕೂಡಲಸಂಗಮದೇವ ?
ಜಂಗಮರೂಪವಾಗಿ ಸಂಗಯ್ಯ ಬಂದಾನೆಂದು
ಎಂದೆಂದೂ ನಾನು ಮಂಚವನೇರದ ಭಾಷೆ!

೨೪೧.
ಭಿತ್ತಿಯಿಲ್ಲದೆ ಬರೆಯಬಹುದೆ ಚಿತ್ತಾರವ ?
ಬಿತ್ತಿ ಬೆಳೆಯಬಹುದೆ ಧರೆಯಿಲ್ಲದೆ ?
ಜಂಗಮವಿಲ್ಲದೆ ಮಾಡಬಹುದೆ,
ರೂಢೀಶನ ಭೇದಿಸಬಹುದೆ ?
ಒಡಲಿಲ್ಲದ ನಿರಾಳಕರ್ತೃ ಕೂಡಲಸಂಗಮದೇವ
ಜಂಗಮಮುಖಲಿಂಗವಾದನಾಗಿ
ಮತ್ತೊಂದನರಿಯೆನಯ್ಯ.

೨೪೨.
ಕೆಂಡದಲ್ಲಿಟ್ಟರೆ ಕೈ ಬೆಂದುದೆಂಬರು;
ಕೊಂಡಿಟ್ಟವನ ಕೈ ಮುನ್ನವೇ ಬೆಂದುದು!
ನೊಂದೆ ನಾನು ನೊಂದೆನಯ್ಯ.
ಬೆಂದೆ ನಾನು ಬೆಂದೆನಯ್ಯ.
ಕೂಡಲಸಂಗನ ಶರಣರ ಕಂಡು
ಕಾಣದಂತಿದ್ದರೆ ಅಂದೇ ಬೆಂದೆನಯ್ಯ.

೨೪೩.
ಲಾಂಛನವ ಕಂಡು ನಂಬುವೆ,
ಅವರಂತರಂಗವ ನೀವೇ ಬಲ್ಲಿರಿ.
ತೊತ್ತಿಂಗೆ ತೊತ್ತುಗೆಲಸವಲ್ಲದೆ
ಅರಸರ ಸುದ್ದಿ ಎಮಗೇಕಯ್ಯ ?
ರತ್ನಮೌಕ್ತಿಕದಚ್ಚು ಕೂಡಲಸಂಗಮದೇವ, ನಿಮ್ಮ ಶರಣರು.

೨೪೪.
ಎಡದ ಕೈಯಲ್ಲಿ ನಿಗಳವನಿಕ್ಕಿ,
ಬಲದ ಕೈಯ್ಯ ಕಡಿದುಕೊಂಡರೆ,
ನೋಯದಿಪ್ಪುದೇ, ಅಯ್ಯ ?
ಪ್ರಾಣ ಒಂದಾಗಿ ದೇಹ ಬೇರಿಲ್ಲ.
ಲಿಂಗವ ಪೂಜಿಸಿ ಜಂಗಮವನುದಾಸೀನ ಮಾಡಿದರೆ
ಬೆಂದೆನಯ್ಯ ನಾನು, ಕೂಡಲಸಂಗಮದೇವ.

೨೪೫.
ತನುವ ನೋಯಿಸಿ, ಮನವ ಬಳಲಿಸಿ
ನಿಮ್ಮ ಪಾದವಿಡಿದವರೊಳರೆ ?
ಈ ನುಡಿ ಸುಡದಿಹುದೆ ?
ಕೂಡಲಸಂಗಮದೇವ,
ಶಿವಭಕ್ತರ ನೋವೇ ಅದು ಲಿಂಗದ ನೋವು!

೨೪೬.
ಕುದುರೆ ಸತ್ತಿಗೆಯವರ ಕಂಡರೆ
ಹೊರಳಿಬಿದ್ದು ಕಾಲ ಹಿಡಿವರಯ್ಯ.
ಬಡಭಕ್ತರು ಬಂದರೆ, ಎಡೆಯಿಲ್ಲ ಅತ್ತ ಸನ್ನಿ ಎಂಬರು.
ಎನ್ನೊಡೆಯ ಕೂಡಲಸಂಗಯ್ಯನವರ
ತಡೆಗೆಡಹಿ ಮೂಗ ಕೊಯ್ಯದೆ ಮಾಬನೆ ?

೨೪೭.
ಅಡ್ಡದೊಡ್ಡ ನಾನಲ್ಲಯ್ಯ.
ದೊಡ್ಡ ಬಸಿರು ಎನಗಿಲ್ಲವಯ್ಯ.
ದೊಡ್ಡವರನಲ್ಲದೆ ನಿಮ್ಮ ಶರಣರು ಮನ್ನಿಸರಯ್ಯ.
ಹಡೆದುಂಬ ಸೂಳೆಯಂತೆ
ಧನವುಳ್ಳವರನರಸಿಯರಸಿ ಬೋಧಿಸಲು,
ಪ್ರಾರ್ಥಿಸಲು ಮುನ್ನ ನಾನರಿಯೆನಯ್ಯ!
ದೊಡ್ಡತನವೆನಗಿಲ್ಲವಯ್ಯ.
ಅಂಜುವೆನಂಜುವೆ ನಿಮ್ಮ ಪ್ರಥಮರಿಗೆ
ಅನಾಥ ನಾನಯ್ಯ, ಕೂಡಲಸಂಗಮದೇವ.

೨೪೮.
ಹಾಲ ಕಂದಲು, ತುಪ್ಪದ ಗಡಿಗೆಯ-
ಬೋಡ, ಮುಕ್ಕೆನಬೇಡ!
ಹಾಲು ಸಿಹಿ, ತುಪ್ಪ ಕಮ್ಮಗೆ!
ಲಿಂಗಕ್ಕೆ ಬೋನ,
ಕೂಡಲಸಂಗನ ಶರಣರ
ಅಂಗಹೀನರೆಂದರೆ ನಾಯಕನರಕ!

೨೪೯.
ಮರಕ್ಕೆ ಬಾಯಿ ಬೇರೆಂದು
ತಳಕ್ಕೆ ನೀರನೆರೆದರೆ ಮೇಲೆ ಪಲ್ಲವಿಸಿತ್ತು ನೋಡಾ!
ಲಿಂಗದ ಬಾಯಿ ಜಂಗಮವೆಂದು
ಪಡಿಪದಾರ್ಥವ ನೀಡಿದರೆ, ಮುಂದೆ ಸಕಲಾರ್ಥವನೀವನು!
ಆ ಜಂಗಮವ ಹರನೆಂದು ಕಂಡು
ನರನೆಂದು ಭಾವಿಸಿದರೆ, ನರಕ ತಪ್ಪದು ಕಾಣಾ!
ಕೂಡಲಸಂಗಮದೇವ.

೨೫೦.
ನನಗೆ ನಾನೇ ಹಗೆ ನೋಡಯ್ಯ!
ನನಗೆ ನಾನೇ ಕೆಳೆ ನೋಡಯ್ಯ!
ನಿಮ್ಮ ಸದ್ಭಕ್ತರೊಡನೆ ವಿರೋಧವ ಮಾಡಿದರೆನ್ನ ಕೊಲುವುದಾಗಿ
ನಿಮ್ಮ ಪುರಾತನರಿಗಂಜಿ ಬೆಸಗೊಂಡರೆನ್ನ ಕಾಯ್ವುದಾಗಿ
ಅನ್ಯ ಹಗೆಯೆಲ್ಲಿ ? ಕೆಳೆಯೆಲ್ಲಿ ?
ಬಾಗಿದ ತಲೆಯ, ಮುಗಿದ ಕೈಯಾಗಿರಿಸು ಕೂಡಲಸಂಗಮದೇವ.

೨೫೧.
ಆರಾಧನೆಯ ಮಾಡಿದರೆ ಅಮೃತದ ಬೆಳಸು.
ವಿರೋಧಿಸಿದರೆ ವಿಷದ ಬೆಳಸು.
ಇದು ಕಾರಣ,
ಲಿಂಗ ಜಂಗಮಕ್ಕಂಜಲೇಬೇಕು.
ಸ್ಥಾವರ-ಜಂಗಮ ಒಂದೆಂದರಿದರೆ
ಕೂಡಲಸಂಗಮದೇವ ಶರಣಾಸನ್ನಿಹಿತನು.

೨೫೨.
ಜಂಗಮ ನಿಂದೆಯ ಮಾಡಿ, ಲಿಂಗವ ಪೂಜಿಸುವ
ಭಕ್ತನ ಅಂಘವಣೆ ಎಂತೋ ?
ಶಿವಶಿವ, ನಿಂದಿಸುವ ಪೂಜಿಸುವ
ಪಾತಕವಿದ ಕೇಳಲಾಗದು!
"ಗುರುವಿನ ಗುರು ಜಂಗಮ"
ಇಂತೆಂದುದು ಕೂಡಲಸಂಗನ ವಚನ.

೨೫೩.
ಅರಸರ ಕಂಡು ತನ್ನ ಪುರುಷನ ಮರೆತರೆ
ಮರನೇರಿ ಕಯ್ಯ ಬಿಟ್ಟಂತಾದೆನಯ್ಯ!
ಇಹಲೋಕಕ್ಕೆ ದೂರ, ಪರಲೋಕಕ್ಕೆ ದೂರ
ನಮ್ಮ ಕೂಡಲಸಂಗಮದೇವಯ್ಯ
ಜಂಗಮಮುಖಲಿಂಗವಾದ ಕಾರಣ.

೨೫೪.
ಲಿಂಗದಲ್ಲಿ ದಿಟವನರಸುವಡೆ
ಜಂಗಮವ ನೆರೆ ನಂಬುವುದು.
ನಡೆ ಲಿಂಗ, ನುಡಿ ಲಿಂಗ
ಮುಖ ಲಿಂಗವೆಂದೆ ನಂಬೊ.
ಯತ್ರ ಮಾಹೇಶ್ವರಸ್ತತ್ರಾಸನ್ನಹಿತನಾಗಿ,
ಅಧರ ತಾಗಿದ ರುಚಿಯನು
ಉದರ ತಾಗಿದ ಸುಖವ
ಉಂಬ-ಉಡುವ ಕೂಡಲಸಂಗಮದೇವ
ಜಂಗಮಮುಖದಲ್ಲಿ.

೨೫೫.
ಎಂಬತ್ತುನಾಲ್ಕುಲಕ್ಷ ಮುಖದೊಳಗೊಂದೇ ಮುಖವಾಗಿ
ಕಾಡಿ ನೋಡೆನ್ನನು, ಬೇಡಿ ನೋಡೆನ್ನನು
ಬೇಡದಿದ್ದರೆ, ಅಯ್ಯ, ನಿಮಗೆ ಪ್ರಮಥರಾಣೆ!
ನೀನಾವ ಮುಖದಲ್ಲಿ ಬಂದು ಬೇಡಿದರೀವೆನು
ಕೂಡಲಸಂಗಮದೇವ.

೨೫೬.
ಕಂದಿದೆನಯ್ಯ ಎನ್ನ ನೋಡುವರಿಲ್ಲದೆ.
ಕುಂದಿದೆನಯ್ಯ ಎನ್ನ ನುಡಿಸುವರಿಲ್ಲದೆ.
ಬಡವಾದೆನಯ್ಯ ಎನ್ನ ತನುಮನಧನವ ಬೇಡುವರಿಲ್ಲದೆ,
ಕಾಡುವ ಬೇಡುವ ಶರಣರ ತಂದು
ಕಾಡಿಸು ಬೇಡಿಸು ಕೂಡಲಸಂಗಮದೇವ.

೨೫೭.
ನೀನಿಕ್ಕಿದ ಬಿಯ್ಯದಲ್ಲಿ ವಂಚನೆಯುಳ್ಳೊಡೆ
ಸಂಗ, ನಿಮ್ಮ ತೊತ್ತುತನಕ್ಕೆ ದೂರವಯ್ಯ.
ಕದ್ದು ತಿಂದರೆ, ಕೈಯ ಹಿಡಿದೊಮ್ಮೆ ಬಡಿದು,
ತುಡುಗುಣಿತನವ ಬಿಡಿಸಯ್ಯ.
ಜಂಗಮ ಮನೆಗೆ ಬಂದಲ್ಲಿ ಓಸರಿಸಿದರೆ
ಹಿಡಿದು ಮೂಗ ಕೊಯ್ಯಯ್ಯ ಕೂಡಲಸಂಗಮದೇವ.

೨೫೮.
ಹೊನ್ನಿನೊಳಗೊಂದೊರೆಯ,
ಸೀರೆಯೊಳಗೊಂದೆಳೆಯ,
ಇಂದಿಂಗೆ ನಾಳಿಂಗೆ ಬೇಕೆಂದೆನಾದರೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ,
ನಿಮ್ಮ ಶರಣರಿಗಲ್ಲದೆ ಮತ್ತೊಂದಕಿಕ್ಕೆನಯ್ಯ
ಕೂಡಲಸಂಗಮದೇವ.

೨೫೯.
ಕಾಗೆಯಂದಗುಳ ಕಂಡರೆ
ಕರೆಯದೇ ತನ್ನ ಬಳಗವನ್ನು ?
ಕೋಳಿಯೊಂದು ಕುಟುಕ ಕಂಡರೆ
ಕೂಗಿ ಕರೆಯದೇ ತನ್ನ ಕುಲವೆಲ್ಲವನ್ನು ?
ಶಿವಭಕ್ತನಾಗಿ ಭಕ್ತಿ-ಪಕ್ಷವಿಲ್ಲದಿದ್ದರೆ
ಕಾಗೆ ಕೋಳಿಯಿಂದ ಕರಕಷ್ಟ ಕೂಡಲಸಂಗಮದೇವ.

೨೬೦.
ಆವನಾದರೇನು ಹೇಮವಿಲ್ಲದುಂಗೈಸಬಹುದೆ ?
ಕೊಡಲಿಲ್ಲೆಂಬುದರಿಂದ ಸಾಯಲುಬಹುದು,
ಸೈರಿಸಬಾರದು!
ಬೇಡುವರ ನೋಡಿ ನೋಡಿ
ಈಯಲಿಲ್ಲದ ಜೀವನವದೇಕೆ ಕೂಡಲಸಂಗಮದೇವ.

೨೬೧.
ಓಡುವಾತ ಲೆಂಕನಲ್ಲ, ಬೇಡುವಾತ ಭಕ್ತನಲ್ಲ!
ಓಡಲಾಗದು ಲೆಂಕನು ಬೇಡಲಾಗದು ಭಕ್ತನು!
ಓಡೆನಯ್ಯ, ಬೇಡೆನಯ್ಯ ಕೂಡಲಸಂಗಮದೇವ.

೨೬೨.
ಎಲ್ಲಿ ನೋಡಿರಲ್ಲಿ ಮನವೆಳಸಿದರೆ
ಆಣೆ, ನಿಮ್ಮಾಣೆ, ನಿಮ್ಮ ಪ್ರಮಥರಾಣೆ!
ಪರವಧುವನು ಮಾದೇವಿಯೆಂದೇ ಕಾಬೆ ಕೂಡಲಸಂಗಮದೇವ.

೨೬೩.
ಹರಿವ ಹಾವಿಂಗಂಜೆ, ಉರಿಯ ನಾಲಗೆಗಂಜೆ!
ಸುರಗಿಯ ಮೊನೆಗಂಜೆ!
ಒಂದಕ್ಕಂಜುವೆ, ಒಂದಕ್ಕಳುಕುವೆ;
ಪರಧನ ಪರಸ್ತ್ರೀಯೆಂಬೀ ಜೂಬಿಂಗಂಜುವೆ!
ಮುನ್ನಂಜದ ರಾವಣನೇ ವಿಧಿಯಾದ
ಅಂಜುವೆನಯ್ಯ, ಕೂಡಲಸಂಗಮದೇವ!

೨೬೪.
ಅಸುರನೈಶ್ವರ್ಯವನೆಣಿಸುವಡೆ-
ಸೀತೆಗೆ ಸರಿ-ಮಿಗಿಲೆನಿಸುವ ಸತಿಯರುಂಟು ಕೋಟಿ!
ಮತಿವಂತ ಶಿರಃಪ್ರಧಾನರೆಂಟು ಕೋಟಿ!
ಲೆಕ್ಕವಿಲ್ಲದ ದಳವು! ಲಕ್ಷ ಕುಮಾರರು!
ದಿಕ್ಪಾಲಕರವನ ಮನೆಯ ಬಂಧನದಲಿಪ್ಪರು
ಸುರಸತಿಯರನೆಲ್ಲರನಾತ ಸೆರೆಮಾಡಿಯಾಳಿದ!
ಶಿವನೇ ನೀ ಕರುಣಿಸಿದಂತಿರದೆ
ಪರವಧುವಿನ ಬೇಟವವನ ಪ್ರಾಣವ ಕೊಂಡಿತ್ತು.
ಇದನರಿತು ಪರವಧುವಿಗೆಳಸುವವರ ಕಂಡು
ಗರುಡ ಕಂಡ ಸರ್ಪ ಧರೆಗಿಳಿವಂತೆ ಅಡಗಿಪ್ಪೆನಯ್ಯ
ಕೂಡಲಸಂಗಮದೇವ.

೨೬೫.
ಒಂದಕೊಂಬತ್ತ ನುಡಿದು ಕಣ್ಣ ಕೆಚ್ಚನೆ ಮಾಡಿ,
ಗಂಡುಗೆದರಿ ಮುಡುಹಿಕ್ಕಿ
ಕೆಲೆವರ ಕಂಡಂಜುವೆ ಓಸರಿಸುವೆ,
ಓಡಿದೆನೆಂಬ ಭಂಗವಾದರಾಗಲಿ
ನಮ್ಮ ಕೂಡಲಸಂಗನ ಶರಣರನುಭಾವವಿಲ್ಲದವರ
ಹೊಲಮೇರೆಯ ಹೊದ್ದೆ, ಹೊಲನ ಬಿಟ್ಟೋಡುವೆ.

೨೬೬.
ದೇವಸಹಿತ ಭಕ್ತ ಮನೆಗೆ ಬಂದರೆ
ಕಾಯಕವಾವುದೆಂದು ಬೆಸಗೊಂಡೆನಾದರೆ
ನಿಮ್ಮಾಣೆ, ನಿಮ್ಮ ಪುರಾತರಾಣೆ, ತಲೆದಂಡ, ತಲೆದಂಡ.
ಕೂಡಲಸಂಗಮದೇವಾ, ಭಕ್ತರಲ್ಲಿ ಕುಲವನರಸಿದರೆ
ನಿಮ್ಮ ರಾಣಿವಾಸದಾಣೆ.

೨೬೭.
ಕೂಪರಿಗೆ ಹೇಳುವೆನು ಕುಳಸ್ಥಳಂಗಳನೆಲ್ಲ,
ಕೂರದವರಿಗೆ ಹೇಳಿ ನಾನೇವೇನು ಶಿವನೆ,
ಕರಲ ಭೂಮಿಯಲ್ಲಿ ಕರೆದ ವೃಷ್ಟಿಯ ತೆರನಂತೆ!
ಅವರೆತ್ತ ಬಲ್ಲರೆನ್ನ ಸುಖದುಃಖವ ?
ಅಂಗವಿಲ್ಲದ ಸಂಗವು
ಅಳಲಿಲ್ಲದ ಹುಯ್ಯಲಂತೆ.
ಇದು ಕಾರಣ ಕೂಡಲಸಂಗಮದೇವಾ
ನಿಮ್ಮ ಶರಣರಿಗಲ್ಲದೆ ಬಾಯ ತೆರೆಯನು.

೨೬೮.
ಒಡೆದೋಡೂ ಎನ್ನ ಮನೆಯಲಿಲ್ಲದಂತೆ ಮಾಡಯ್ಯ !
ಕೊಡು ದೇವ ಎನ್ನ ಕೈಯಲೊಂದು ಗರಿಕೆಯನು,
ಮೃಡದೇವಾ ಶರಣೆಂದು ಭಿಕ್ಷಕ್ಕೆ ಹೋದರೆ,
ಅಲ್ಲಿ, ನಡೆ ದೇವಾ ಎಂದೆನಿಸು ಕೂಡಲಸಂಗಮದೇವ.

೨೬೯.
ಅಯ್ಯ, ನಿಮ್ಮ ಶರಣರ ದಾಸೋಹಕ್ಕೆ
ಎನ್ನ ತನು-ಮನ-ಧನವಲಸದಂತೆ ಮಾಡಯ್ಯ.
ತನು ದಾಸೋಹಕ್ಕೆ ಉಬ್ಬುವಂತೆ ಮಾಡು;
ಮನ ದಾಸೋಹಕ್ಕೆ ಲೀಯವಹಂತೆ ಮಾಡು;
ಧನ ದಾಸೋಹಕ್ಕೆ ಸವೆದು
ನಿಮ್ಮ ಶರಣರ ಪ್ರಸಾದದಲ್ಲಿ ನಿರಂತರ
ಆಡಿ, ಪಾಡಿ; ನೋಡಿ, ಕೂಡಿ;
ಭಾವಿಸಿ, ಸುಖಿಸಿ; ಪರಿಣಾಮಿಸುವಂತೆ ಮಾಡು
ಕೂಡಲಸಂಗಮದೇವ.

೨೭೦.
ಹಾರುವ ಹಾರುವನಪ್ಪೆ ನಾನು,
ಸದ್ಭಕ್ತರೆನ್ನವರೆನ್ನವರೆಂದು!
ಹಾರುವ ಹಾರುವನಪ್ಪೆ ನಾನು, ಶರಣರು ಎನ್ನವರೆನ್ನವರೆಂದು!
ಕೂಡಲಸಂಗನ ಶರಣರು ಒಕ್ಕುದನಿಕ್ಕಿ ಸಲಹುವರೆಂದು!

೨೭೧.
ಆವನಾದರೇನು ?
ಶ್ರೀಮಹಾದೇವನ ನೆನೆವನ ಬಾಯ ತಂಬುಲವ ಮೆಲುವೆ,
ಬೀಳುಡಿಗೆಯ ಕಾಯ್ದು ಬದುಕುವೆ
ಕೂಡಲಸಂಗಮದೇವ.

೨೭೨.
ನಾನು ಹೊತ್ತ ಹುಳ್ಳಿಯನಂಬಲಿಗೆ
ಕೊಂಬವರಿಲ್ಲ ನೋಡಯ್ಯ.
ಆನು ನಿಮ್ಮ ಶರಣರ ಒಕ್ಕುದನುಂಡು
ಬದುಕುವೆನಯ್ಯ.
ಮೇರುವ ಸಾರಿದ ಕಾಗೆ
ಹೊಂಬಣ್ಣವಪ್ಪುದು ತಪ್ಪದು ಕೂಡಲಸಂಗಮದೇವ.

೨೭೩.
ದಾಸಿಯ ವರ್ಗದಲ್ಲಿಪ್ಪೆನು ಶಿವಶರಣರ ಮನೆಯಲ್ಲಿ.
ಅವರೊಕ್ಕುದನುಂಡು, ಮಿಕ್ಕುದನಾಯ್ದುಕೊಂಡಿಪ್ಪ ಕಾರಣ-
ಕಾಲ ಮುಟ್ಟಲಮ್ಮದು, ಕಲ್ಪಿತ ತೊಡೆಯಿತ್ತು;
ಭವಬಂಧನ ಹಿಂಗಿತ್ತು, ಕರ್ಮನಿರ್ಮಳವಾಯಿತ್ತು.
ಅವರ ತೊತ್ತಿನ ತೊತ್ತಿನ ಪಡಿದೊತ್ತಿನ ಮಗನೆಂದು
ಕೂಡಲಸಂಗಮದೇವನು ಇತ್ತ ಬಾ ಎಂದೆತ್ತಿಕೊಂಡನು.

೨೭೪
ಜನ್ಮ ಜನ್ಮಕ್ಕೆ ಹೋಗಲೀಯದೆ,
"ಸೋಹಂ" ಎಂದೆನಿಸದೆ, 'ದಾಸೋಹಂ' ಎಂದೆನಿಸಯ್ಯ.
ಲಿಂಗಜಂಗಮದ ಪ್ರಸಾದವ ತೋರಿ
ಬದುಕಿಸಯ್ಯ ಕೂಡಲಸಂಗಮದೇವ.

೨೭೫.
ಕರ್ತರು ನಿಮ್ಮ ಗಣಂಗಳು,
ಎನ್ನ ತೊತ್ತ ಮಾಡಿ ಸಲಹಿದ ಸುಖವು
ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ, ಸಾಯುಜ್ಯದುಂತುಟಲ್ಲ
ಕೇಳಿರಯ್ಯ, ಕೂಡಲಸಂಗನ ಶರಣರು
ತಮ್ಮ ಒಕ್ಕುದನಿಕ್ಕಿ ಸಲಹಿದ ಸುಖವು.

೨೭೬.
ತೊತ್ತಿಂಗೆ ಬಲ್ಲಹನೊಲಿದರೆ
ಪದವಿಯನೀಯದೆ ಮಾಬನೆ ?
ಅಯ್ಯ, ಜೇಡರ ದಾಸಯ್ಯಂಗೊಲಿದಾತ
ಮತ್ತೊಬ್ಬ ದೇವನೆ ?
ಅಯ್ಯ, ಮಾದರ ಚೆನ್ನಯ್ಯಂಗೆ
ಡೋಹರಕಕ್ಕಯ್ಯಂಗೆ, ತೆಲುಗ ಜೊಮ್ಮಯ್ಯಂಗೆ
ಒಲಿದಾತ ಮತ್ತೊಬ್ಬ ದೇವನೆ ?
ಅಯ್ಯ, ಎನ್ನ ಮನದ ಪಂಚೇಂದ್ರಿಯ
ನಿಮ್ಮತ್ತಲಾದರೆ ತನ್ನತ್ತ ಮಾಡುವ ಕೂಡಲಸಂಗಮದೇವ.

೨೭೭.
ಹೊರಗೆ ಪೂಸಿ ಏವೆನಯ್ಯಾ
ಒಳಗೆ ಶುದ್ಧವಿಲ್ಲದನ್ನಕ ?
ಮಣಿಯ ಕಟ್ಟಿ ಏವೆನಯ್ಯ ?
ಮನ ಮುಟ್ಟದನ್ನಕ ?
ನೂರನೋದಿ ಏವೆನಯ್ಯ
ನಮ್ಮ ಕೂಡಲಸಂಗಮದೇವನ
ಮನ ಮುಟ್ಟದನ್ನಕ ?

೨೭೮.
ಸುಚಿತ್ತದಿಂದ ನಿಮ್ಮ ನೆನೆಯಲೊಲ್ಲದೆನ್ನ ಮನವು,
ಎಂತಯ್ಯ ?
ಎನಗಿನ್ನಾವುದು ಗತಿ ಎಂತಯ್ಯ ?
ಎನಗಿನ್ನಾವುದು ಮತಿ ಎಂತಯ್ಯ ?
ಹರಹರ ಕೂಡಲಸಂಗಮದೇವ.
ಮನವ ಸಂತೈಸೆನ್ನ.

೨೭೯.
ನಾ ನಿಮ್ಮ ನೆನೆವೆನು
ನೀವೆನ್ನನರಿಯಿರಿ!
ನಾ ನಿಮ್ಮನೋಲೈಸುವೆನು
ನೀವೆನ್ನ ಕಾಣಿರಿ!
ನಾನೆಂತು ಬದುಕುವೆನೆಂತು ಜೀವಿಸುವೆನಯ್ಯ ?
ಕೂಡಲಸಂಗಮದೇವ,
ಎನಗೇ ನೀವೇ ಪ್ರಾಣ, ಗತಿ, ಮತಿ ನೋಡಯ್ಯ!

೨೮೦.
ತಂದೆ ನೀನು, ತಾಯಿ ನೀನು;
ಬಂಧು ನೀನು ಬಳಗ ನೀನು;
ನೀನಲ್ಲದೆ ಮತ್ತಾರು ಇಲ್ಲವಯ್ಯ!
ಕೂಡಲಸಂಗಮದೇವ,
ಹಾಲಲದ್ದು ನೀರಲದ್ದು.

೨೮೧.
ಎನ್ನ ಜನ್ಮವ ತೊಡೆದ ನೀ ಧರ್ಮಿ!
ಎನ್ನ ಜನ್ಮವನತಿಗಳೆದ ನೀ ಧರ್ಮಿ!
ಎನ್ನ ಭವಬಂಧನವ ನೀಕರಿಸಿದೆಯಾಗಿ
ಶಿವನೇ ಗತಿಯೆಂದು ನಂಬಿದೆನಯ್ಯ.
ಎನ್ನಷ್ಟಮದಂಗಳ ಸುಟ್ಟುರುಹಿದೆಯಾಗಿ
ಕಟ್ಟುಗ್ರದಿಂದ ನಿಮ್ಮ ಶ್ರೀಚರಣವ ಕಂಡೆ.
ಸೃಷ್ಟಿಪ್ರತಿಪಾಲಕ ನಿಮ್ಮ ನಾ ನಂಬಿದೆ
ಕರುಣಿಸು ಕೂಡಲಸಂಗಮದೇವ.

೨೮೨.
ಭವರೋಗವೈದ್ಯನೆಂದು ನಾ ನಿಮ್ಮ ಮರೆವೊಕ್ಕೆ,
ಭಕ್ತಿದಾಯಕ ನೀನು, ಕರುಣಿಸು ಲಿಂಗತಂದೆ.
ಜಯ ಜಯ ಶ್ರೀ ಮಹಾದೇವ,
ಜಯ ಜಯ ಶ್ರೀ ಮಹಾದೇವ,
ಎನುತಿದ್ದಿತೆನ್ನ ಮನವು;
ಕೂಡಲಸಂಗಮದೇವಂಗೆ
ಶರಣೆನುತಿದ್ದಿತೆನ್ನ ಮನವು.

೨೮೩.
ಅಂಗೈಯೊಳಗಣ ಲಿಂಗವ ನೋಡುತ್ತ
ಕಂಗಳು ಕಡೆಗೋಡಿವರಿವುತ್ತ ಸುರಿವುತ್ತ ಎಂದಿಪ್ಪೆನೋ ?!
ನೋಟವೇ ಪ್ರಾಣವಾಗಿ ಎಂದಿಪ್ಪೆನೋ!
ಕೂಟವೇ ಪ್ರಾಣವಾಗಿ ಎಂದಿಪ್ಪೆನೋ!
ಎನ್ನಂಗ ವಿಕಾರದ ಸಂಗವಳಿದು
ಕೂಡಲಸಂಗಯ್ಯ ಲಿಂಗಯ್ಯ ಲಿಂಗವೆನುತ್ತ ಎಂದಿಪ್ಪೆನೋ !?

೨೮೪.
ಎದೆ ಬಿರಿವನ್ನಕ, ಮನ ದಣಿವನ್ನಕ
ನಾಲಗೆ ನಲಿನಲಿದೋಲಾಡುವನ್ನಕ
ನಿಮ್ಮ ನಾಮಾಮೃತವ ತಂದಿರಿಸು ಕಂಡ
ಎಲೆ ಹರನೆ
ಎಲೆ ಶಿವನೆ!
ನಿಮ್ಮ ನಾಮಾಮೃತವ ತಂದಿರಿಸು ಕಂಡಾ
ಬಿರಿಮುಗುಳಂತೆ ಎನ್ನ ಹೃದಯ
ನಿಮ್ಮ ಶ್ರೀಚರಣದ ಮೇಲೆ ಬಿದ್ದರಳುಗೆ
ಕೂಡಲಸಂಗಮದೇವ.

೨೮೫.
ಆಡಿ ಕಾಲು ದಣಿಯದು
ನೋಡಿ ಕಣ್ಣು ದಣಿಯದು,
ಹಾಡಿ ನಾಲಗೆ ದಣಿಯದು,
ಇನ್ನೇವೆನಿನ್ನೇವೆ!
ನಾ ನಿಮ್ಮ ಕಯ್ಯಾರೆ ಪೂಜಿಸಿ
ಮನ ದಣಿಯಲೊಲ್ಲದು
ಇನ್ನೇವೆನಿನ್ನೇವೆ!
ಕೂಡಲಸಂಗಮದೇವಯ್ಯ,
ನಿಮ್ಮ ಉದರವ ಬಗಿದಾನು ಹೊಗುವ ಭರವೆನಗೆ!

೨೮೬.
ಕಾಮಸಂಗ ನಿಸ್ಸಂಗವಾಗಿ
ಇನ್ನಾವ ಸಂಗವನರಿಯೆನಯ್ಯ.
ಮಿಗೆ ಒಲಿದೆನಾಗಿ ಅಗಲಲಾರೆ:
ನಗೆಮೊಗದರಸ ಅವಧಾರು! ಕೂಡಲಸಂಗಮದೇವ,
ಬಗಿದು ಹೊಗುವೆ ನಾ ನಿಮ್ಮ ಮನವನು.

೨೮೭.
ವಾರವೆಂದರಿಯೆ, ದಿನವೆಂದರಿಯೆ!
ಏನೆಂದರಿಯೆನಯ್ಯ.
ನಾನು ಇರುಳೆಂದರಿಯೆ, ಹಗಲೆಂದರಿಯೆ!
ಏನೆಂದರಿಯೆನಯ್ಯ.
ನಾನು ನಿಮ್ಮುವ ಪೂಜಿಸಿ, ಎನ್ನುವ ಮರೆದೆನು
ಕೂಡಲಸಂಗಮದೇವ.

೨೮೮.
ನಿಮ್ಮ ನೋಟವನಂತಸುಖ.
ನಿಮ್ಮ ಕೂಟ ಪರಮಸುಖ.
ಅಷ್ಟಕೋಟಿರೋಮಂಗಳೆಲ್ಲ
ಕಂಗಳಾಗಿ ನೋಡುತ್ತಿದ್ದೆನು.
ಕೂಡಲಸಂಗಮದೇವಯ್ಯ,
ನಿಮ್ಮ ನೋಡಿ ನೋಡಿ
ಎನ್ನ ಮನದಲ್ಲಿ ರತಿ ಹುಟ್ಟಿ,
ನಿಮಿರ್ದವೆನ್ನ ಕಳೆಗಳು.

೨೮೯.
ವಚನದಲ್ಲಿ ನಾಮಾಮೃತ ತುಂಬಿ.
ನಯನದಲ್ಲಿ ನಿಮ್ಮ ಮೂರುತಿ ತುಂಬಿ,
ಮನದಲ್ಲಿ ನಿಮ್ಮ ನೆನಹು ತುಂಬಿ;
ಕಿವಿಯಲ್ಲಿ ನಿಮ್ಮ ಕೀರುತಿ ತುಂಬಿ;
ಕೂಡಲಸಂಗಮದೇವ,
ನಿಮ್ಮ ಚರಣಕಮಲದೊಳಗಾನು ತುಂಬಿ!

೨೯೦.
ಉರಿಯೊಳಗಣ ಕರ್ಪೂರಕ್ಕೆ ಕರೆಯುಂಟೇ ಅಯ್ಯ ?
ಬಯಲು ಮರೀಚಿಕೆಯ ಜಲಕ್ಕೆ ಕೆಸರುಂಟೇ ಅಯ್ಯ ?
ವಾಯುವನಪ್ಪಿದ ಪರಿಮಳಕ್ಕೆ ನಿರ್ಮಾಲ್ಯವುಂಟೇ ಅಯ್ಯ ?
ನೀವು ನೆರೆಯೊಲಿದ ಬಳಿಕೆನಗೆ ಭವವುಂಟೇ ?
ಕೂಡಲಸಂಗಮದೇವ.
ಚರಣಕಮಲದೊಳಗೆನ್ನನಿಂಬಿಟ್ಟುಕೊಳ್ಳಯ್ಯ!

೨೯೧.
ಮಂಡೆಯ ಬೋಳಿಸಿಕೊಂಡು
ಗಂಡುದೊತ್ತುವೊಕ್ಕೆನಯ್ಯ.
ಲಜ್ಜೆಗೆಟ್ಟಾದರೂ ಲಿಂಗವನೊಲಿಸುವೆ.
ನಾಣುಗೆಟ್ಟಾದರೂ ಲಿಂಗವನೊಲಿಸುವೆ.
ಕೆಲದ ಸಂಸಾರಿಗಳು ನಗುತಿದ್ದರಿರಲಿ.
ಕೂಡಲಸಂಗಮದೇವ ಶರಣಾಗತಿವೊಕ್ಕೆನಯ್ಯ.

೨೯೨.
ಎನಗೆ ನಿಮ್ಮ ನೆನಹಾದಾಗವೇ ಉದಯ!
ಎನಗೆ ನಿಮ್ಮ ಮರಹಾದಾಗವೇ ಅಸ್ತಮಾನ!
ಎನಗೆ ನಿಮ್ಮ ನೆನಹವೇ ಜೀವ!
ಎನಗೆ ನಿಮ್ಮ ನೆನಹವೇ ಪ್ರಾಣ ಕಾಣ ತಂದೆ!
ಸ್ವಾಮಿ, ಎನ್ನ ಹೃದಯದಲ್ಲಿ
ನಿಮ್ಮ ಚರಣದುಂಡಿಗೆಯನೊತ್ತಯ್ಯ!
ವದನದಲ್ಲಿ ಪಂಚಾಕ್ಷರಿಯ ಬರೆಯಯ್ಯ
ಕೂಡಲಸಂಗಮದೇವ.

೨೯೩.
ಎನ್ನ ಕಾಯವ ದಂಡಿಗೆಯ ಮಾಡಯ್ಯ,
ಎನ್ನ ಶಿರವ ಸೋರೆಯ ಮಾಡಯ್ಯ,
ಎನ್ನ ನರವ ತಂತಿಯ ಮಾಡಯ್ಯ,
ಎನ್ನ ಬೆರಲ ಕಡ್ಡಿಯ ಮಾಡಯ್ಯ,
ಬತ್ತೀಸ ರಾಗವ ಹಾಡಯ್ಯ,
ಉರದಲೊತ್ತಿ ಬಾಜಿಸು ಕೂಡಲಸಂಗಮದೇವ.

೨೯೪.
ಮನಕ್ಕೆ ಮನೋಹರವಲ್ಲದ ಗಂಡರು
ಮನಕ್ಕೆ ಬಾರರು ಕೇಳವ್ವ ಕೆಳದಿ.
ಪನ್ನಗಭೂಷಣನಲ್ಲದ ಗಂಡರು
ಇನ್ನೆನಗಾಗದ ಮೋರೆ ನೋಡವ್ವ!
ಕನ್ನೆಯಂದಿನ ಕೂಟ:
ಚಿಕ್ಕಂದಿನ ಬಾಳುವೆ,
ನಿಮ್ಮಾಣೆಯಯ್ಯ ಕೂಡಲಸಂಗಮದೇವ.

೨೯೫.
ಜಗವೆಲ್ಲಾ ಅರಿಯಲು
ಎನಗೊಬ್ಬ ಗಂಡನುಂಟು!
ಆನು ಮುತ್ತೈದೆ;
ಆನು ನಿಟ್ಟೈದೆ.
ಕೂಡಲಸಂಗಮದೇವನಂತಪ್ಪ
ಎನಗೊಬ್ಬ ಗಂಡನುಂಟು.

೨೯೬.
ಸಂಸಾರವೆಂಬ ಶ್ವಾನನಟ್ಟಿ
ಮೀಸಲ ಬೀಸರ ಮಾಡದಿರಯ್ಯ!
ಎನ್ನ ಚಿತ್ತವು ನಿನ್ನ ಧ್ಯಾನವಯ್ಯ!
ನೀನಲ್ಲದೆ ಮತ್ತೇನನೂ ಅರಿಯೆನು
ಕನ್ನೆಯಲ್ಲಿ ಕೈವಿಡಿದೆನು.
ನಿನ್ನಲ್ಲಿ ನೆರೆದೆನು.
ಮನ್ನಿಸು ಕಂಡಾ ಮಹಾಲಿಂಗವೆ!
ಸತಿಯಾನು ಪತಿ ನೀನು
ಮನೆಯೊಡೆಯ ಮನೆಯ ಕಾಯ್ದಿಪ್ಪಂತೆ
ನೀನೆನ್ನ ಮನವ ಕಾಯ್ದಿಪ್ಪ ಗಂಡನು.
ನಿನಗೋತ ಮನವನನ್ಯಕ್ಕೆ ಹರಿಸಿದರೆ
ನಿನ್ನಭಿಮಾನ ಹಾನಿ ಕೂಡಲಸಂಗಮದೇವ.

೨೯೭.
ಅಯ್ಯ, ನಿಮ್ಮ ಅನುಭಾವದಿಂದ
ಎನ್ನ ತನು ಹಾಳಾಯಿತ್ತು.
ಅಯ್ಯ, ನಿಮ್ಮ ಅನುಭಾವದಿಂದ
ಎನ್ನ ಮನ ಹಾಳಾಯಿತ್ತು.
ಅಯ್ಯ, ನಿಮ್ಮ ಅನುಭಾವದಿಂದ
ಎನ್ನ ಕರ್ಮಚ್ಛೇದನವಾಯಿತ್ತು.
ಅಯ್ಯ, ನಿಮ್ಮವರು ಅಡಿಗಡಿಗೆ ಹೇಳಿ
ಭಕ್ತಿ ಎಂಬೀ ಒಡವೆಯನು
ದಿಟಮಾಡಿ ತೋರಿದರು ಕೂಡಲಸಂಗಮದೇವ.

೨೯೮.
ಭಕ್ತನೆಂತೆಂಬೆನಯ್ಯ, ಭವಿಸಂಗ ಬಿಡದನ್ನಕ ?
ಮಾಹೇಶ್ವರನೆಂತೆಂಬೆನಯ್ಯ,
ಪರಸ್ತ್ರೀ ಪರರರ್ಥದಾಸೆ ಬಿಡದನ್ನಕ ?
ಪ್ರಸಾದಿಯೆಂತೆಂಬೆನಯ್ಯ,
ಆಧಿವ್ಯಾಧಿ ನಷ್ಟವಾಗದನ್ನಕ ?
ಪ್ರಾಣಲಿಂಗಿಯೆಂತೆಂಬೆನಯ್ಯ,
ಪ್ರಾಣ ಸ್ವಸ್ಥಿರವಾಗದನ್ನಕ ?
ಶರಣನೆಂತೆಂಬೆನಯ್ಯ,
ಪಂಚೇಂದ್ರಿಯ ನಾಸ್ತಿಯಾಗದನ್ನಕ ?
ಐಕ್ಯನೆಂತೆಂಬೆನಯ್ಯ,
ಜನನ ಮರಣ ವಿರಹಿತವಾಗದನ್ನಕ ?
ಇಂತಪ್ಪ ಭಾಷೆ-ವ್ರತ-ವೇಷಂಗಳ
ನಾನರಿಯೆನಯ್ಯ!
ಅಘಟಿತ-ಘಟಿತ-ವರ್ತಮಾನವ
ನಾನರಿಯೆನಯ್ಯ!
ನಿಮ್ಮ ಶರಣರ ತೊತ್ತು,
ಭೃತ್ಯಾಚಾರವ ಮಾಡುವೆ ಕೂಡಲಸಂಗಮದೇವ.

೨೯೯.
ಅಭ್ಯಾಸವೆನ್ನ ವರ್ತಿಸಿತ್ತಯ್ಯ!
ಭಕ್ತಿ ಸಾಧ್ಯವಾಗದು, ನಾನೇವೆನಯ್ಯ ?
ಆನು ನಿಮ್ಮ ಮನಂಬೊಗುವನ್ನಕ,
ನೀವೆನ್ನ ಮನಂಬೊಗುವನ್ನಕ.
ಕಾಯಗುಣಂಗಳ ಕಳೆದವರಿಗೆ ಶರಣೆಂಬೆ
ಕೂಡಲಸಂಗಮದೇವ.

೩೦೦.
ತನುಸಾರಾಯರ, ಮನಸಾರಾಯರ,
ಜ್ಞಾನಸಾರಾಯರ ತೋರಯ್ಯ ನಿಮ್ಮ ಧರ್ಮ!
ಭಾವಸಾರಾಯರ, ಭಕ್ತಿಸಾರಾಯರ,
ತೋರಯ್ಯ ನಿಮ್ಮ ಧರ್ಮ !
ಕೂಡಲಸಂಗಮದೇವಯ್ಯ, ನಿಮ್ಮನರಿಯದ
ಅವಗುಣಿಗಳ ತೋರದಿರಯ್ಯ ನಿಮ್ಮ ಧರ್ಮ.

೩೦೧.
ಕಾಮ ಸಂಗವಳಿದು,
ಅನುಭಾವ ಸಂಗದಲುಳಿದವರನಗಲಲಾರೆ,
ಶಿವಂಗೆ ಮಿಗೆ ಒಲಿದವರನು
ನಾನು ಅಗಲಲಾರೆ ಕಾಣಾ ಕೂಡಲಸಂಗಮದೇವ.

೩೦೨.
ಭಕ್ತಿರತಿಯ ವಿಕಲತೆಯ
ಯುಕುತಿಯನೇನ ಬೆಸಗೊಂಬಿರಯ್ಯ ?
ಕಾಮಿಗುಂಟೇ ಲಜ್ಜೆ ನಾಚಿಕೆ ?
ಕಾಮಿಗುಂಟೇ ಮಾನಾಪಮಾನವು ?
ಕೂಡಲಸಂಗನ ಶರಣರಿಗೊಲಿದ
ಮರುಳನನೇನ ಬೆಸಗೊಂಬಿರಯ್ಯ ?

೩೦೩.
ಸಕ್ಕರೆಯ ಕೊಡನ ತುಂಬಿ
ಹೊರಗ ಸವಿದರೆ ರುಚಿಯುಂಟೆ ?
ತಕ್ಕೈಸಿ ಭುಜತುಂಬಿ,
ಲಿಂಗಸ್ಪರ್ಶನವ ಮಾಡದೆ,
ಅಕ್ಕಟಾ, ಸಂಸಾರ ವೃಥಾ ಹೋಯಿತ್ತಲ್ಲ!
ಅದೇತರ ಭಕ್ತಿ ? ಅದೇತರ ಯುಕ್ತಿ ? ಕೂಡಿಕೊ!
ಕೂಡಲಸಂಗಮದೇವ.

೩೦೪.
ಪರಚಿಂತೆ ಎಮಗೇಕಯ್ಯ ?
ನಮ್ಮ ಚಿಂತೆ ಎಮಗೆ ಸಾಲದೆ ?
ಕೂಡಲಸಂಗಯ್ಯ ಒಲಿದಾನೋ ಒಲಿಯನೋ
ಎಂಬ ಚಿಂತೆ
ಹಾಸಲುಂಟು ಹೊದಿಯಲುಂಟು!

೩೦೫.
ಲಜ್ಜೆಗೆಟ್ಟೆನು, ನಾಣುಗೆಟ್ಟೆನು,
ಕುಲಗೆಟ್ಟೆನು, ಛಲಗೆಟ್ಟೆನು,
ಸಂಗಾ, ನಿಮ್ಮ ಪೂಜಿಸಿ ಭವಗೆಟ್ಟೆನು ನಾನಯ್ಯ!
ಕೂಡಲಸಂಗಮದೇವಯ್ಯ,
ನಿಮ್ಮ ಮುಟ್ಟಿ ಹುಟ್ಟುಗೆಟ್ಟೆನು ನಾನಯ್ಯ!

೩೦೬.
ಮಾಡುವ ಭಕ್ತನ ಕಾಯ
ಬಾಳೆಯ ಕಂಬದಂತಿರಬೇಕು!
ಮೆಲ್ಲಮೆಲ್ಲನೆ ಹೊರೆಯೆತ್ತಿ ನೋಡಿದರೆ
ಒಳಗೆ ಕೆಚ್ಚಿಲ್ಲದಿರಬೇಕು!
ಮೇಲಾದ ಫಲವ ನಮ್ಮವರು
ಬೀಜ ಸಹಿತ ನುಂಗಿದರು.
ಎನಗಿನ್ನಾವ ಭವವಿಲ್ಲ ಕಾಣಾ
ಕೂಡಲಸಂಗಮದೇವ.

೩೦೭.
ಏನು ಮಾಡುವೆನೆನ್ನ ಪುಣ್ಯದ ಫಲವು!
ಶಾಂತಿಯ ಮಾಡಹೋದರೆ ಬೇತಾಳ ಮೂಡಿತ್ತು!
ಕೂಡಲಸಂಗಮದೇವನ ಪೂಜಿಸಿಹೆನೆಂದರೆ
ಭಕ್ತಿ ಎಂಬ ಮೃಗವೆನ್ನನಟ್ಟಿ ಬಂದು
ನುಂಗಿತಯ್ಯ!

೩೦೮.
ಭಕ್ತಿಯೆಂಬ ಫೃಥ್ವಿಯ ಮೇಲೆ
ಗುರುವೆಂಬ ಬೀಜವಂಕುರಿಸಿ,
ಲಿಂಗವೆಂಬ ಎಲೆಯಾಯಿತ್ತು!
ಲಿಂಗವೆಂಬ ಎಲೆಯ ಮೇಲೆ
ವಿಚಾರವೆಂಬ ಹೂವಾಯಿತ್ತು!
ಆಚಾರವೆಂಬ ಕಾಯಾಯಿತ್ತು!!
ನಿಷ್ಪತ್ತಿಯೆಂಬ ಹಣ್ಣಾಯಿತ್ತು!!!
ನಿಷ್ಪತ್ತಿಯೆಂಬ ಹಣ್ಣು
ತೊಟ್ಟುಬಿಟ್ಟು ಕಳಚಿಬೀಳುವಲ್ಲಿ
ಕೂಡಲಸಂಗಮದೇವನು
ತನಗೆ ಬೇಕೆಂದೆತ್ತಿಕೊಂಡನು.

೩೦೯.
ಸ್ವಾಮಿ ನೀನು, ಶಾಶ್ವತ ನೀನು.
ಎತ್ತಿದೆ ಬಿರುದ ಜಗವೆಲ್ಲರಿಯಲು.
ಮಹಾದೇವ, ಮಹಾದೇವ!
ಇಲ್ಲಿಂದ ಮೇಲೆ ಶಬ್ದವಿಲ್ಲ!
ಪಶುಪತಿ ಜಗಕ್ಕೆ ಏಕೋದೇವ;
ಸ್ವರ್ಗಮರ್ತ್ಯ ಪಾತಾಳದೊಳಗೊಬ್ಬನೇ ದೇವ;
ಕೂಡಲಸಂಗಮದೇವ.

೩೧೦.
ಶ್ರುತಿತತಿಶಿರದ ಮೇಲೆ
ಅತ್ಯತಿಷ್ಠದ್ದಶಾಂಗುಲನ ನಾನೇನೆಂಬೆನಯ್ಯ
ಘನಕ್ಕೆ ಘನಮಹಿಮನ
ಮನಕ್ಕಗೋಚರನ !?
ಅಣೋರಣೀಯಾನ್
ಮಹತೋ ಮಹೀಯಾನ್
ಮಹಾದಾನಿ ಕೂಡಲಸಂಗಮದೇವ.

೩೧೧.
ಸಕಲ-ನಿಷ್ಕಲವ ಕೂಡಿಕೊಂಡಿಪ್ಪೆಯಾಗಿ
ಸಕಲ ನೀನೆ, ನಿಷ್ಕಲ ನೀನೇ ಕಂಡಯ್ಯ!
ವಿಶ್ವತಶ್ಚಕ್ಷು ನೀನೇ ದೇವ!
ವಿಶ್ವತೋಬಾಹು ನೀನೇ ದೇವ
ವಿಶ್ವತೋಮುಖ ನೀನೇ ದೇವ!
ಕೂಡಲಸಂಗಮದೇವ.

೩೧೨.
ಎತ್ತೆತ್ತ ನೋಡಿದಡತ್ತತ್ತ ನೀನೇ ದೇವ!
ಸಕಲ ವಿಸ್ತಾರದ ರೂಹು ನೀನೇ ದೇವ.
ವಿಶ್ವತಶ್ಚಕ್ಷು ನೀನೇ ದೇವ,
ವಿಶ್ವತೋಮುಖ ನೀನೇ ದೇವ.
ವಿಶ್ವತೋಬಾಹು ನೀನೇ ದೇವ.
ವಿಶ್ವತೋಪಾದ ನೀನೇ ದೇವ.
ಕೂಡಲಸಂಗಮದೇವ.

೩೧೩.
ಹರನ ಕೊರಳಲ್ಲಿಪ್ಪ ಕರೋಟಿಮಾಲೆಯ
ಶಿರದ ಲಿಖಿತವ ಕಂಡು, ಮರುಳುತಂಡಗಳು
ಓದಿನೋಡಿ
"ಇವನಜ, ಇವ ಹರಿ, ಇವ ಸುರಪತಿ
ಇವ ಧರಣೀಂದ್ರ, ಇವನಂತಕ"ನೆಂದು
ಹರುಷದಿಂದ ಸರಸವಾಡುವುದ ಹರ ನೋಡಿ
ಮುಗುಳುನಗೆಯ ನಗುತ್ತಿದ್ದನು!
ಕೂಡಲಸಂಗಮದೇವ.

೩೧೪.
ಅದುರಿತು ಪಾದಘಾತದಿಂದ ಧರೆ!
ಬಿದಿರಿದವು ಮಕುಟ ತಾಗಿ ತಾರಕಿಗಳು
ಉದುರಿದವು ಕೈತಾಗಿ ಲೋಕಂಗಳೆಲ್ಲ!
"ಮಹೀ ಪಾದಾಘಾತಾದ್ವ್ರಜತಿ ಸಹಸಾ ಸಂಶಯಪದಂ
ಪದಂ ವಿಷ್ಣೋರ್ಭ್ರಾಮ್ಯದ್ಭುಜಪರಿಘರುಗ್ಣಗ್ರಹಗಣಂ!
ಮುಹರ್ದ್ಯೌರ್ಧ್ವಸ್ತಾತ್ಯಂತ್ಯನಿಭೃತಜಟಾತಾಟಿತತಟಾ
ಜಗದ್ರಕ್ಷಾಯೈ ತ್ವಂ ನನು ವಹಸಿ ಭೌಮಾಂ ಚ ವಿಭುತಾಂ"
ನಮ್ಮ ಕೂಡಲಸಂಗಮದೇವ
ನಿಂದು ನಾಂಟ್ಯವನಾಡೆ!

೩೧೫.
ಇಬ್ಬರು ಮೂವರು ದೇವರೆಂದು
ಉಬ್ಬಿ ಮಾತನಾಡಬೇಡ.
ದೇವನೊಬ್ಬನೇ ಕಾಣಿರೋ.
ಇಬ್ಬರೆಂಬುದು ಹುಸಿ ನೋಡಾ.
ಕೂಡಲಸಂಗಮನಲ್ಲದಿಲ್ಲೆಂದಿತ್ತು ವೇದ.

೩೧೬.
ಬಿದಿರೆಲೆಯ ಮೆಲಿದಂತಲ್ಲದೆ,
ರಸ ಪಡೆಯಲು ಬಾರದು.
ನೀರ ಕಡೆದರೆ, ಕಡೆದಂತಲ್ಲದೆ,
ಬೆಣ್ಣೆಯ ಪಡೆಯಲು ಬಾರದು.
ಮಳಲ ಹೊಸೆದರೆ, ಹೊಸೆದಂತಲ್ಲದೆ,
ಸರವಿಯ ಪಡೆಯಲು ಬಾರದು.
ನಮ್ಮ ಕೂಡಲಸಂಗಮದೇವನಲ್ಲದೆ
ಅನ್ಯ ದೈವಕ್ಕೆರಗಿದರೆ,
ಪೊಳ್ಳ ಕುಟ್ಟಿ ಕೈ ಪೋಟು ಹೋದಂತಾಯಿತ್ತಯ್ಯ!

೩೧೭.
ಆಗಳೂ ಲೋಗರ ಮನೆಯ ಬಾಗಿಲ
ಕಾಯ್ದುಕೊಂಡಿಪ್ಪವು ಕೆಲವು ದೈವಂಗಳು,
ಹೋಗೆಂದರೆ ಹೋಗವು,
ನಾಯಿಂದ ಕರಕಷ್ಟ ಕೆಲವು ದೈವಂಗಳು!
ಲೋಗರ ಬೇಡಿಕೊಂಡುಂಬ ದೈವಂಗಳು
ತಾವೇನ ಕೊಡುವವು ಕೂಡಲಸಂಗಮದೇವ.

೩೧೮.
ಹಾಳುಮೊರಡಿಗಳಲ್ಲಿ, ಊರ ದಾರಿಗಳಲ್ಲಿ;
ಕೆರೆ-ಭಾವಿ-ಹೂಗಿಡಂ-ಮರಂಗಳಲ್ಲಿ,
ಗ್ರಾಮಮಧ್ಯಂಗಳಲ್ಲಿ,
ಚೌಪಥ-ಪಟ್ಟಣ ಪ್ರವೇಶದಲ್ಲಿ, ಹಿರಿಯಾಲದ ಮರದಲ್ಲಿ
ಮನೆಯ ಮಾಡಿ,
ಕರೆವೆಮ್ಮೆ, ಹಸುಗೂಸು, ಬಸುರಿ, ಬಾಣತಿ, ಕುಮಾರಿ
ಕೊಡುಗೂಸೆಂಬರ ಹಿಡಿದುಂಬ, ತಿರಿದುಂಬ
ಮಾರಯ್ಯ, ಬೀರಯ್ಯ,
ಖೇಚರ ಗಾವಿಲ, ಅಂತರಬೆಂತರ,
ಕಾಳಯ್ಯ, ಮಾರಯ್ಯ, ಮಾಳಯ್ಯ, ಕೇತಯ್ಯಗಳೆಂಬ
ನೂರು ಮಡಕೆಗೆ ನಮ್ಮ ಕೂಡಲಸಂಗಮದೇವ
ಶರಣೆಂಬುದೊಂದು ದಡಿ ಸಾಲದೆ ?

೩೧೯.
ಅರಗು ತಿಂದರೆ ಕರಗುವ ದೈವವ,
ಉರಿಯ ಕಂಡರೆ ಮುರುಟುವ ದೈವವ,
ಎಂತು ಸರಿಯೆಂಬೆನಯ್ಯ!
ಅವಸರ ಬಂದರೆ ಮಾರುವ
ದೈವವನೆಂತು ಸರಿಯೆಂಬೆನಯ್ಯ!
ಅಂಜಿಕೆಯಾದರೆ ಹೂಳುವ
ದೈವವನೆಂತು ಸರಿಯೆಂಬೆನಯ್ಯ!
ಸಹಜಭಾವ ನಿಜೈಕ್ಯ
ಕೂಡಲಸಂಗಮದೇವನೊಬ್ಬನೇ ದೇವ.

೩೨೦.
ಮಾರಿಕವ್ವೆಯ ನೋಂತು ಕೊರಳಲ್ಲಿ ಕಟ್ಟಿಕೊಂಬರು.
ಸಾಲಬಟ್ಟರೆ ಮಾರಿಕೊಂಬರಯ್ಯ!
ಸಾಲಬಟ್ಟರೆ ಅವನೊತ್ತೆಯನಿಟ್ಟು ಕೊಂಡುಂಬರಯ್ಯ!
ಮಾರುವೋಗನೊತ್ತೆವೋಗ
ನಮ್ಮ ಕೂಡಲಸಂಗಮದೇವ.

೩೨೧.
ಮೊರನ ಗೋಟಿಗೆ ಬಪ್ಪ ಕಿರುಕುಳದೈವಕ್ಕೆ
ಕುರಿಯನಿಕ್ಕಿಹೆವೆಂದು ನಲಿನಲಿದಾಡುವರು.
ಕುರಿ ಸತ್ತು ಕಾವುದೆ ಹರ ಮುಳಿದವರ ?
ಕುರಿ ಬೇಡ, ಮರಿ ಬೇಡ
ಬರಿಯ ಪತ್ರೆಯ ತಂದು
ಮರೆಯದೇ ಪೂಜಿಸು ನಮ್ಮ ಕೂಡಲಸಂಗಮದೇವನ.

೩೨೨.
ಮಡಕೆ ದೈವ, ಮೊರ ದೈವ,
ಬೀದಿಯ ಕಲ್ಲು ದೈವ,
ಹಣಿಗೆ ದೈವ, ಬಿಲ್ಲ ನಾರಿ ದೈವ--ಕಾಣಿರೊ!
ಕೊಳಗ ದೈವ, ಗಿಣ್ಣಿಲು ದೈವ--ಕಾಣಿರೊ!
ದೈವ ದೈವವೆಂದು ಕಾಲಿಡಲಿಂಬಿಲ್ಲ!
ದೇವನೊಬ್ಬನೆ ಕೂಡಲಸಂಗಮದೇವ.

೩೨೩.
ಋಣ ತಪ್ಪಿದ ಹೆಂಡಿರಲ್ಲಿ,
ಗುಣ ತಪ್ಪಿದ ನಂಟರಲ್ಲಿ,
ಜೀವವಿಲ್ಲದ ದೇಹದಲ್ಲಿ ಫಲವೇನೋ ?
ಆಳ್ದನೊಲ್ಲದಾಳಿನಲ್ಲಿ,
ಸಿರಿತೊಲಗಿದರಸಿನಲ್ಲಿ
ವರವಿಲ್ಲದ ದೈವದಲ್ಲಿ ಫಲವೇನೋ ?
ಕಳಿದ ಹೂವಿನಲ್ಲಿ ಕಂಪನು,
ಉಳಿದ ಸೊಳೆಯಲ್ಲಿ ಪೆಂಪನು,
ಕೊಳೆಚೆನೀರಿನಲ್ಲಿ ಗುಣ್ಪನರಸುವಿರಿ!
ಮರುಳೆ, ವರಗುರು ವಿಶ್ವಕ್ಕೆಲ್ಲ
ಗಿರಿಜಾಮನೋವಲ್ಲಭ ಪರಮ ಕಾರುಣಿಕ
ನಮ್ಮ ಕೂಡಲಸಂಗಮದೇವ.

೩೨೪.
ಗುಡಿಯೊಳಗಿದ್ದು ಗುಡಿಯ ನೇಣ ಕೊಯ್ದರೆ
ಗುಡಿಯ ದಡಿ ಬಿದ್ದು ಹಲ್ಲು ಹೋಹುದು ನೋಡಾ!
ಪೊಡವಿಗೀಶ್ವರನ ಗರ್ಭವಾಸದೊಳಗಿದ್ದು
ನುಡಿವರು ಮತ್ತೊಂದು ದೈವ ಉಂಟೆಂದು!
ತುಡುಗುಣಿ ನಾಯ ಹಿಡಿತಂದು ಸಾಕಿದರೆ
ತನ್ನೊಡಯಂಗೆ ಬೊಗಳುವಂತೆ ಕಾಣಾ
ಕೂಡಲಸಂಗಮದೇವ.

೩೨೫.
ಮಾತಿನ ಮಾತಿಂಗೆ ನಿನ್ನ ಕೊಂದೆಹರೆಂದು
ಅಳು ಕಂಡಾ! ಎಲೆ ಹೋತೇ,
ವೇದವನೋದಿದವರ ಮುಂದೆ
ಅಳು, ಕಂಡಾ! ಎಲೆ ಹೋತೇ,
ಶಾಸ್ತ್ರವನೋದಿದವರ ಮುಂದೆ
ಅಳು, ಕಂಡಾ! ಎಲೆ ಹೋತೇ,
ನೀನತ್ತುದಕೆ ತಕ್ಕುದ ಮಾಡುವ ಕೂಡಲಸಂಗಮದೇವ.

೩೨೬.
ಹೊಲೆಯೊಳಗೆ ಹುಟ್ಟಿ ಕುಲವನರಸುವೆಯೆಲವೋ
ಮಾತಂಗಿಯ ಮಗ ನೀನು!
ಸತ್ತುದನೆಳೆವವನೆತ್ತಣ ಹೊಲೆಯ ?
ಹೊತ್ತು ತಂದು ನೀವು ಕೊಲುವಿರಿ!
ಶಾಸ್ತ್ರವೆಂಬುದು ಹೋತಿಂಗೆ ಮಾರಿ.
ವೇದವೆಂಬುದು ನಿಮಗೆ ತಿಳಿಯದು.
ನಮ್ಮ ಕೂಡಲಸಂಗನ ಶರಣರು
ಕರ್ಮವಿರಹಿತರು, ಶರಣಾಸನ್ನಹಿತರು,
ಅನುಪಮ ಚರಿತ್ರರು,
ಅವರಿಗೆ ತೋರಲು ಪ್ರತಿಯಿಲ್ಲವೋ.

೩೨೭.
ಇಟ್ಟಯ ಹಣ್ಣ ನರಿ ತಿಂದು
ಸೃಷ್ಟಿ ತಿರುಗಿತೆಂಬಂತೆ,
ಮಟ್ಟಿಯನಿಟ್ಟ ದ್ವಿಜರ ಮಾತದೇಕೆ ?
ಹಗಲುಗಾಣದ ಗೂಗೆ ಇರುಳಾಯಿತ್ತೆಂದರೆ
ಜಗಕ್ಕೆ ಯಿರುಳಪ್ಪುದೆ ಮರುಳೆ ?
ಹೋಮದ ನೆವದಿಂದ ಹೋತನ ಕೊಂದು ತಿಂಬ
ಅನಾಮಿಕರೊಡನಾಡಿ ಗೆಲುವುದೇನು
ಕೂಡಲಸಂಗಮದೇವ.

೩೨೮.
ನೀರ ಕಂಡಲ್ಲಿ ಮುಳುಗುವರಯ್ಯ!
ಮರನ ಕಂಡಲ್ಲಿ ಸುತ್ತುವರಯ್ಯ!
ಬತ್ತುವ ಜಲವನೊಣಗುವ ಮರನ
ಮೆಚ್ಚಿದವರು ನಿಮ್ಮನೆತ್ತ ಬಲ್ಲರು
ಕೂಡಲಸಂಗಮದೇವ.

೩೨೯.
ಕಣ್ಣಮುಚ್ಚಿ ಕನ್ನಡಿಯ ತೋರುವಂತೆ!
ಇರುಳು ಹಗಲಿನ ನಿದ್ರೆ ಸಾಲದೆ ?
ಬೆರಳನೆಣಿಸಿ ಪರಮಾರ್ಥವ ಹಡೆವುದು
ಚೋದ್ಯವಲ್ಲವೆ ಹೇಳಾ ?
ಮೂಗ ಮುಚ್ಚಿ ಮುಕ್ತಿಯ ಬಯಸುವ
ನಾಚಿಕೆಯಿಲ್ಲದವರ ನಾನೇನೆಂಬೆ ಕೂಡಲಸಂಗಮದೇವ.

೩೩೦.
ನಿಮ್ಮನರಿಯದ ಕಾರಣ ಕೈಯಲ್ಲಿ ಹುಲ್ಲು.
ನಿಮಗೆರಗದ ಕಾರಣ ಕೊರಳಲ್ಲಿ ನೇಣು.
ಹಿಂಡಲೇಕೋ, ತೊಳೆಯಲೇಕೊ ?
ಮುಳುಮುಳುಗಿ ಮೂಗ ಹಿಡಿಯಲೇಕೋ ?
ಕೂಡಲಸಂಗನ ಶರಣರಲ್ಲಿ
ಡೋಹರಕಕ್ಕಯ್ಯನಾವ ತೊರೆಯಲ್ಲಿ ಮಿಂದ ?

೩೩೧.
ವ್ಯಾಸ ಬೋಯಿತಿಯ ಮಗ.
ಮಾರ್ಕಂಡೇಯ ಮಾತಂಗಿಯ ಮಗ.
ಮಂಡೋದರಿ ಕಪ್ಪೆಯ ಮಗಳು.
ಕುಲವನರಸದಿರಿ ಭೋ!
ಕುಲದಿಂದ ಮುನ್ನೇನಾದಿರಿ ಭೋ!
ಸಾಕ್ಷಾತ್ ಅಗಸ್ತ್ಯ ಕಬ್ಬಿಲ.
ದೂರ್ವಾಸ ಮಚ್ಚಿಗ.
ಕಶ್ಯಪ ಕಮ್ಮಾರ.
ಕೌಂಡಿನ್ಯನೆಂಬ ಋಷಿ
ಮೂರುಲೋಕವರಿಯೆ ನಾವಿದ ಕಾಣಿ ಭೋ!
ನಮ್ಮ ಕೂಡಲಸಂಗನ ವಚನವಿಂತೆಂದುದು-
"ಶ್ವಪಚೋಪಿಯಾದರೇನು ಶೀವಭಕ್ತನೇ ಕುಲಜಂ" ಭೋ!

೩೩೨.
ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ.
ಜಲಬಿಂದುವಿನ ವ್ಯವಹಾರವೊಂದೇ.
ಆಶೆಯಾಮಿಷ ಹರ್ಷರೋಷ ವಿಷಯಾದಿಗಳೆಲ್ಲವೊಂದೇ.
ಏನನೋದಿ ಏನ ಕೇಳಿ ಏನು ಫಲ ?!
ಕುಲಜನೆಂಬುದಕ್ಕೆ ಆವುದು ದೃಷ್ಟ ?
"ಸಪ್ತಧಾತುಸಮಂ ಪಿಂಡಂ
ಸಮಯೋನಿಸಮುದ್ಭವಂ |
ಆತ್ಮಾಜೀವಸ್ಸಮಸ್ತಸ್ಮಾತ್
ವರ್ಣಾನಾಂ ಕಿಂ ಪ್ರಯೋಜನಂ ?" ||
ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ,
ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ.
ಕರ್ಣದಲ್ಲಿ ಜನಿಸಿದವರುಂಟೆ ಜಗದೊಳಗೆ ?
ಇದು ಕಾರಣ, ಕೂಡಲಸಂಗಮದೇವ,
ಲಿಂಗಸ್ಥಲವನರಿದವನೇ ಕುಲಜನು!

೩೩೩.
ಕೊಲುವವನೇ ಮಾದಿಗ!
ಹೊಲಸ ತಿಂಬವನೇ ಹೊಲೆಯ!
ಕುಲವೇನೋ ? ಆವದಿರ ಕುಲವೇನೋ ?
ಸಕಲ ಜೀವಾತ್ಮರಿಗೆ ಲೇಸನೇ ಬಯಸುವ
ನಮ್ಮ ಕೂಡಲಸಂಗನ ಶರಣರೇ ಕುಲಜರು!

೩೩೪.
ಹೊನ್ನ ನೇಗಿಲಲುತ್ತು
ಎಕ್ಕೆಯ ಬೀಜವ ಬಿತ್ತುವರೆ ?
ಕರ್ಪೂರದ ಮರನ ಕಡಿದು
ಕಳ್ಳಿಗೆ ಬೇಲಿಯನಿಕ್ಕುವರೆ ?
ಶ್ರೀಗಂಧದ ಮರನ ಕಡಿದು
ಬೇವಿಂಗೆ ಅಡೆಯನಿಕ್ಕುವರೆ ?
ನಮ್ಮ ಕೂಡಲಸಂಗನ
ಶರಣರಿಗಲ್ಲದೆ ಬೇರೆ ಇಚ್ಛಾಭೋಜನವಿಕ್ಕಿದರೆ
ಕಿಚ್ಚಿನೊಳಗುಚ್ಚೆಯ ಹೊಯ್ದು
ಹವಿಯ ಬೇಳ್ದಂತಾಯಿತ್ತು.

೩೩೫.
ಕುರಿವಿಂಡು ಕಬ್ಬಿನ ಉಲಿವ ತೋಂಟವ ಹೊಕ್ಕು
ತೆರನನರಿಯದೇ ತನಿರಸದ,
ಹೊರಗಣೆಲೆಯನೇ ಮೇದುವು!
ನಿಮ್ಮನರಿವ ಮದಕರಿಯಲ್ಲದೆ
ಕುರಿಯೇನ ಬಲ್ಲುದೋ ಕೂಡಲಸಂಗಮದೇವ ?

೩೩೬.
ದೇವ, ನಿಮ್ಮ ಪೂಜಿಸಿ
ಚೆನ್ನನ ಕುಲ ಚೆನ್ನಾಯಿತ್ತು!
ದೇವ, ನಿಮ್ಮ ಪೂಜಿಸಿ
ದಾಸನ ಕುಲ ದೇಸಿವಡೆಯಿತ್ತು!
ದೇವ, ನಿಮ್ಮಡಿಗೆರಗಿ
ಮಡಿವಾಳ ಮಾಚಯ್ಯ ನಿಮ್ಮಡಿಯಾದ!
ನೀನೊಲಿದ ಕುಲಕ್ಕೆ
ನೀನೊಲಿದ ಹೊಲೆಗೆ ಮೇರೆಯುಂಟೇ, ದೇವ ?
ಶ್ವಪಚೋಪಿ ಮುನಿಶ್ರೇಷ್ಠಃ
ಯಸ್ತು ಲಿಂಗಾರ್ಚನೇ ರತಃ |
ಲಿಂಗಾರ್ಚನವಿಹೀನೋಪಿ
ಬ್ರಾಹ್ಮಣಃ ಶ್ವಪಚಾಧಮಃ ||
ಎಂದುದಾಗಿ ಜಾತಿ-ವಿಜಾತಿಯಾದರೇನು
ಅಜಾತಂಗೆ ಶರಣೆಂದೆನ್ನದವನು ?
ಆತನೇ ಹೊಲೆಯ ಕೂಡಲಸಂಗಮದೇವ.

೩೩೭.
ಭಕ್ತಿಹೀನನ ದಾಸೋಹವ
ಸದ್ಭಕ್ತರು ಸವಿಯರು!
ಬೇವಿನ ಹಣ್ಣು ಕಾಗೆಗೆ ಇನಿದಲ್ಲದೆ
ಕೋಗಿಲೆಗೆ ಮೆಲಲಾಗದು!
ಲಿಂಗಸಂಬಂಧವಿಲ್ಲದವರ ನುಡಿ
ಕೂಡಲಸಂಗನ ಶರಣರಿಗೆ ಸಮನಿಸದು.

೩೩೮.
ಬಂದು ಬಲ್ಲಹ ಬಿಡಲು
ಹೊಲಗೇರಿಯೆಂಬ ಹೆಸರೊಳವೇ ಅಯ್ಯ!
ಲಿಂಗವಿದ್ದವರ ಮನೆ
ಕೈಲಾಸವೆಂದು ನಂಬಬೇಕು!
ಇದಕ್ಕೆ ಪ್ರಮಾಣ:-
ಚಂಡಾಲವಾಟಿಕಾಯಾಂ ವಾ
ಶಿವಭಕ್ತಃಸ್ಸ್ಥಿತೋ ಯದಿ |
ತತ್ ಶ್ರೇಣಿಶ್ಯಿವಲೋಕಸ್ಯಾತ್
ತದ್ ಗೃಹಂ ಶಿವಮಂದಿರಂ ||
ಲೋಕದ ಡಂಭಕರ ಮಾತು ಬೇಡ.
ಕೂಡಲಸಂಗನಿದ್ದುದೇ ಕೈಲಾಸ!

೩೩೯.
ದೇವನೊಬ್ಬ ನಾಮ ಹಲವು.
ಪರಮ ಪತಿವ್ರತೆಗೆ ಗಂಡನೊಬ್ಬ.
ಮತ್ತೊಂದಕ್ಕೆರಗಿದರೆ
ಕಿವಿ ಮೂಗ ಕೊಯ್ವನು.
ಹಲವು ದೈವದ ಎಂಜಲ
ತಿಂಬವರನೇನೆಂಬೆ ಕೂಡಲಸಂಗಮದೇವ.

೩೪೦.
ಎಲವೋ! ಎಲವೋ!
ಪಾಪಕರ್ಮವ ಮಾಡಿದವನೇ
ಎಲವೊ! ಎಲವೊ!
ಬ್ರಹ್ಮೇತಿಯ ಮಾಡಿದವನೇ
ಒಮ್ಮೆ ಶರಣೆನ್ನೆಲವೋ!
ಒಮ್ಮೆ ಶರಣೆಂದರೆ
ಪಾಪಕರ್ಮ ಓಡುವವು.
ಸರ್ವಪ್ರಾಯಶ್ಚಿತ್ತಕ್ಕೆ
ಹೊನ್ನಪರ್ವತಂಗಳೆಯ್ದವು!
ಓರ್ವಂಗೆ ಶರಣೆನ್ನು ನಮ್ಮ ಕೂಡಲಸಂಗಮದೇವಂಗೆ!

೩೪೧.
ಅರಸು-ವಿಚಾರ, ಸಿರಿಯು-ಶೃಂಗಾರ
ಸ್ಥಿರವಲ್ಲ ಮಾನವ!
ಕೆಟ್ಟಿತ್ತು ಕಲ್ಯಾಣ ಹಾಳಾಯಿತ್ತು ನೋಡಾ!
ಒಬ್ಬ ಜಂಗಮನಭಿಮಾನದಿಂದ
ಚಾಳುಕ್ಯರಾಯನಾಳ್ವಿಕೆ ತೆಗೆಯಿತ್ತು
ಸಂದಿತ್ತು, ಕೂಡಲಸಂಗಮದೇವ,
ನಿನ್ನ ಕವಳಿಗೆಗೆ.

೩೪೨.
ಬೇವಿನ ಬೀಜವ ಬಿತ್ತಿ,
ಬೆಲ್ಲದ ಕಟ್ಟೆಯ ಕಟ್ಟಿ,
ಆಕಳ ಹಾಲನೆರೆದು,
ಜೇನುತುಪ್ಪವ ಹೊಯ್ದರೆ
ಸಿಹಿಯಾಗಬಲ್ಲುದೆ ಕಹಿಯಹುದಲ್ಲದೆ ?
ಶಿವಭಕ್ತರಲ್ಲದವರ ಕೂಡೆ
ನುಡಿಯಲಾಗದು ಕೂಡಲಸಂಗಮದೇವ.

೩೪೩.
ಮಾರಿ ಮಸಣಿ ಎಂಬವು ಬೇರಿಲ್ಲ ಕಾಣಿರೋ!
ಮಾರಿ ಎಂಬುದೇನು ?
ಕಂಗಳು ತಪ್ಪಿ ನೋಡಿದರೆ ಮಾರಿ!
ನಾಲಿಗೆ ತಪ್ಪಿ ನುಡಿದರೆ ಮಾರಿ!
ನಮ್ಮ ಕೂಡಲಸಂಗಯ್ಯನ ನೆನಹ ಮರೆದರೆ ಮಾರಿ!

೩೪೪.
ಆಯುಧವಿಕ್ಕಿದವಂಗೆ ವೀರದ ಮಾತೇಕೆ ?
ಲಿಂಗವು ಅಂತರಿಸಿದವಂಗೆ ಒಳುನುಡಿಯೇಕೆ ?
ಐದೆಯರ ಪೋಚಿ ಇಲ್ಲದವಳಿಗೆ
ಸೌಭಾಗ್ಯದ ಹೂವಿನ ಬಟ್ಟೇಕೆ ?
ಸತ್ಯನಲ್ಲದವಂಗೆ ನಿತ್ಯನೇಮವೇಕೆ ?
ಕರ್ತಾರ, ನಿನ್ನ ಒಲವಿಲ್ಲದವಂಗೆ
ಶಂಭುವಿನ ಬಂಧುಗಳೇಕೆ ?
ಕೂಡಲಸಂಗಮದೇವಯ್ಯ
ನೀವಿಲ್ಲದವಂಗೆ ಶಿವಾಚಾರದ ಮಾತೇಕೆ ?

೩೪೫.
ಸಿಂಗದ ನಡು ಮುರಿಯಲಾ ಸಿಂಗವೇಬಾತೆ!
ಸೊಂಡಿಲು ಮುರಿದರೆ ಆ ಗಜವೇಬಾತೆ!
ಸಂಗ್ರಾಮದಲ್ಲಿ ಧೀರನುಳಿಯೆ ಆ ಧೀರತ್ವವೇಬಾತೆ!
ಸಿಂಗಾರದ ಮೂಗು ಹೋದರಾ ಶೃಂಗಾರವೇಬಾತೆ!
ನಿಜತುಂಬಿದ ಭಕ್ತಿ ತುಳುಕಾಡದವರ ಸಂಗವೇಬಾತೆ!
ಕೂಡಲಸಂಗಮದೇವ.

೩೪೬.
ಗೀಜಗನ ಗೂಡು, ಕೋಡಗದಣಲ ಸಂಚ,
ಬಾದುಮನ ಮದುವೆ, ಬಾವಲನ ಬಿದ್ದಿನಂತೆ:
ಜೂಜುಗಾರನ ಮಾತು, ಬೀದಿಯ ಗುಂಡನ ಸೊಬಗು;
ಓಡಿನೊಳಗಗೆಯ ಹೊಯ್ದಂತೆ ಕಾಣಿರೇ;
ಶಿವನಾದಿಯಂತುವನರಿಯದವನ ಭಕ್ತಿ
ಸುಖಶೋಧನೆಗೆ ಮದ್ದ ಕೊಂಡಂತೆ
ಕೂಡಲಸಂಗಮದೇವ.

೩೪೭.
ತೊತ್ತಿನ ಕೊರಳಲ್ಲಿ
ಹೊಂಬಿತ್ತಾಳಿಯ ಸಿಂಗಾರವ ಮಾಡಿದಂತೆ!
ಕುಚಿತ್ತರ ಸಂಗ ಸುಸಂಗಿಗೆ ಸಂಗವಲ್ಲ.
ಗುರುಗುಂಜಿ ಮಾಣಿಕಕ್ಕೆ ಸರಿಯಪ್ಪುದೆ ?
ಕೂಡಲಸಂಗಮದೇವ.

೩೪೮.
ಆನೆಯನೇರಿಕೊಂಡು ಹೋದಿರಿ ನೀವು,
ಕುದುರೆಯನೇರಿಕೊಂಡು ಹೋದಿರಿ ನೀವು.
ಕುಂಕುಮ-ಕಸ್ತುರಿಯ ಪೂಸಿಕೊಂಡು ಹೋದಿರಿ ಅಣ್ಣಾ;
ಸತ್ಯದ ನಿಲುವನರಿಯದೆ ಹೋದಿರಲ್ಲಾ!
ಸದ್ಗುಣವೆಂಬ ಫಲವ ಬಿತ್ತದೆ ಬೆಳೆಯದೆ ಹೋದಿರಲ್ಲಾ
ಅಹಂಕಾರವೆಂಬ ಮದಗಜವನೇರಿ
ವಿಧಿಗೆ ಗುರಿಯಾಗಿ ನೀವು ಕೆಟ್ಟು ಹೋದಿರಲ್ಲಾ!
ನಮ್ಮ ಕೂಡಲಸಂಗಮದೇವನನರಿಯದೆ
ನರಕಕ್ಕೆ ಭಾಜನವಾದಿರಲ್ಲಾ!

೩೪೯.
ಇಂದ್ರಿಯನಿಗ್ರಹವ ಮಾಡಿದರೆ
ಹೊಂದುವವು ದೋಷಂಗಳು.
ಮುಂದೆ ಬಂದು ಕಾಡುವವು ಪಂಚೇಂದ್ರಿಯಂಗಳು.
ಸತಿಪತಿರತಿಸುಖವ ಬಿಟ್ಟರೇ ಸಿರಿಯಾಳ-ಚೆಂಗಳೆಯರು ?
ಸತಿಪತಿರತಿಸುಖ ಭೋಗೋಪಭೋಗವಿಳಾಸವ
ಬಿಟ್ಟರೇ ಸಿಂಧುಬಲ್ಲಾಳನವರು ?
ನಿಮ್ಮ ಮುಟ್ಟಿ, ಪರಧನ ಪರಸತಿಯರಿಗೆಳಸಿದರೆ
ನಿಮ್ಮ ಚರಣಕ್ಕೆ ದೂರ ಕೂಡಲಸಂಗಮದೇವ.

೩೫೦.
ನೋಡಲಾಗದು, ನುಡಿಸಲಾಗದು ಪರಸ್ತ್ರೀಯರ;
ಬೇಡ ಕಾಣಿರೋ!
ತಗರ ಬೆನ್ನಲಿ ಹರಿವ ಸೊಣಗನಂತೆ;
ಬೇಡ ಕಾಣಿರೋ!
ಒಂದಾಸೆಗೆ ಸಾಸಿರ ವರುಷ
ನರಕದಲದ್ದುವ ಕೂಡಲಸಂಗಮದೇವ.

೩೫೧.
ತೊರೆಯ ಮೀವ ಅಣ್ಣಗಳಿರಾ,
ತೊರೆಯ ಮೀವ ಸ್ವಾಮಿಗಳಿರಾ,
ತೊರೆಯಿಂ ಭೋ, ತೊರೆಯಿಂ ಭೋ!
ಪರನಾರಿಯ ಸಂಗವ ತೊರೆಯಿಂ ಭೋ!
ಪರಧನದಾಮಿಷವ ತೊರೆಯಿಂ ಭೋ!
ಇವ ತೊರೆಯದೇ, ಹೋಗಿ ತೊರೆಯ ಮಿಂದರೆ
ಬರುದೊರೆ ಹೋಹುದು ಕೂಡಲಸಂಗಮದೇವ.

೩೫೨.
ಹುತ್ತವ ಕಂಡಲ್ಲಿ ಹಾವಾಗಿ,
ನೀರ ಕಂಡಲ್ಲಿ ಹೊಳೆಯಾದವನ ಮೆಚ್ಚುವನೆ ?
ಬಾರದ ಭವಕ್ಕೆ ಬರಿಸುವನಲ್ಲದೆ ಮೆಚ್ಚುವನೆ ?
ಅಘೋರ ನರಕವನುಣಿಸುವನಲ್ಲದೆ ಮೆಚ್ಚುವನೆ ?
ಅಟಮಟದ ಭಕ್ತರ ಕಂಡರೆ
ಕೋಟಲೆಗೊಳಿಸುವನು ಕೂಡಲಸಂಗಯ್ಯನು.

೩೫೩.
ಕುಳ್ಳಿದ್ದು ಲಿಂಗವ ಪೂಜಿಸಿ
ಅಲ್ಲದಾಟವನಾಡುವರಯ್ಯ;
ಬೆಳ್ಳೆತ್ತಿನ ಮರೆಯಲ್ಲಿದ್ದು
ಹುಲ್ಲೆಗೆ ಅಂಬ ತೊಡುವಂತೆ!
ಕಳ್ಳ-ಹಾದರಿಗರ ಕೈಯಲು ಪೂಜೆಯ ಕೊಳ್ಳ
ನಮ್ಮ ಕೂಡಲಸಂಗಮದೇವ.

೩೫೪.
ತನುಶುಚಿಯಿಲ್ಲದವನ ದೇಹಾರವೇಕೆ ?
ದೇವರು ಕೊಡನೆಂಬ ಭ್ರಾಂತೇಕೆ ?
ಮನಕ್ಕೆ ಮನವೇ ಸಾಕ್ಷಿ ಸಾಲದೆ ಲಿಂಗ ತಂದೆ ?!
ಹೇಂಗೆ ಮನ ಹಾಂಗೆ ಘನ!
ತಪ್ಪದು ಕೂಡಲಸಂಗಮದೇವ.

೩೫೫.
ನೂರನೋದಿ ನೂರ ಕೇಳಿದರೇನು ?
ಆಶೆ ಹರಿಯದು, ರೋಷ ಬಿಡದು!
ಮಜ್ಜನಕ್ಕೆರೆದು ಫಲವೇನು ?
ಮಾತಿನಂತೆ ಮನವಿಲ್ಲದ
ಜಾತಿ-ಡೊಂಬರ ನೋಡಿ ನಗುವನಯ್ಯ
ಕೂಡಲಸಂಗಮದೇವರು.

೩೫೬.
ಗುರೂಪದೇಶ ಮಂತ್ರವೈದ್ಯ!
ಜಂಗಮೋಪದೇಶ ಶಸ್ತ್ರವೈದ್ಯ ನೋಡಾ!
ಭವರೋಗವ ಕಳೆವ ಪರಿಯ ನೋಡಾ!
ಕೂಡಲಸಂಗನ ಶರಣರ ಅನುಭಾವ
ಮಡಿವಾಳನ ಕಾಯಕದಂತೆ!

೩೫೭.
ಶ್ವಪಚನಾದರೇನು ಲಿಂಗಭಕ್ತನೇ ಕುಲಜನು.
ನಂಬಿ ನಂಬದಿದ್ದರೆ, ಸಂದೇಹಿ ನೋಡಾ!
ಕಟ್ಟಿದರೇನು, ಮುಟ್ಟಿದರೇನು,
ಪೂಸಿದರೇನು ಮನಮುಟ್ಟದನ್ನಕ ?
ಭಾವಶುದ್ಧವಿಲ್ಲದವಂಗೆ ಭಕ್ತಿ ನೆಲೆಗೊಳ್ಳದು
ಕೂಡಲಸಂಗಮದೇವನೊಲಿದವಂಗಲ್ಲದೆ.

೩೫೮.
ಅರಗಿನ ಪುತ್ಧಳಿಗೆ ಉರಿಯ ನಾಲಗೆ ಹೊಯ್ದು
ಮಾತಾಡುವ ಸರಸ ಬೇಡ!
ಬೆಣ್ಣೆಯ ಬೆನಕಂಗೆ ಕೆಂಡದುಂಡಲಿಗೆಯ ಮಾಡಿ
ಚಲ್ಲವಾಡಿದರೆ ಹಲ್ಲು ಹೋಹುದು!
ಕೂಡಲಸಂಗನ ಶರಣರೊಡನೆ ಸರಸವಾಡಿದರೆ
ಅದು ವಿರಸ ಕಾಣಿರಣ್ಣ.

೩೫೯.
ಹಾವಿನ ಹೆಡೆಗಳ ಕೊಂಡು
ಕೆನ್ನೆಯ ತುರಿಸಿಕೊಂಬಂತೆ,
ಉರಿವ ಕೊಳ್ಳಿಯ ಕೊಂಡು
ಮಂಡೆಯ ಸಿಕ್ಕ ಬಿಡಿಸುವಂತೆ,
ಹುಲಿಯ ಮೀಸೆಯ ಹಿಡಿದುಕೊಂಡು
ಒಲೆದುಯ್ಯಲನಾಡುವಂತೆ,
ಕೂಡಲಸಂಗನ ಶರಣರೊಡನೆ ಮರೆದು ಸರಸವಾಡಿದರೆ
ಸುಣ್ಣಕಲ್ಲ ಮಡಿಲಲ್ಲಿ ಕಟ್ಟಿಕೊಂಡು ಮಡುವ ಬಿದ್ದಂತೆ!

೩೬೦.
ಉರಿವ ಕೊಳ್ಳಿಯ ಮಂಡೆಯಲಿಕ್ಕಿದಡೆ
ಉರಿವುದು ಮಾಣ್ಬುದೇ ?
ಕಲ್ಲ ಗುಗ್ಗುರಿಯ ಮೆಲಿದರೆ
ಹಲ್ಲು ಹೋಹುದು ಮಾಣ್ಬುದೇ ?
ಶರಣರೊಡನೆ ಸರಸವಾಡಿದರೆ
ನರಕ ತಪ್ಪದು ಕಾಣಾ ಕೂಡಲಸಂಗಮದೇವ.

೩೬೧.
ಕೋಣನ ಹೇರಿಗೆ ಕುನ್ನಿ ಬಸುಗುತ್ತಬಡುವಂತೆ
ತಾವು ನಂಬರು, ನಂಬುವರನು ನಂಬಲೀಯರು!
ತಾವು ಮಾಡರು, ಮಾಡುವರನು ಮಾಡಲೀಯರು!
ಮಾಡುವ ಭಕ್ತರ ಕಂಡು ಸೈರಿಸಲಾರದವರ
ಕೂಗಿಡೆ ಕೂಗಿಡೆ ನರಕದಲ್ಲಿಕ್ಕುವ ಕೂಡಲಸಂಗಮದೇವ.

೩೬೨.
ಚೇಳಿಂಗೆ ಬಸುರಾಯಿತ್ತೆ ಕಡೆ!
ಬಾಳೆಗೆ ಫಲವಾಯಿತ್ತೆ ಕಡೆ ನೋಡಾ !
ರಣರಂಗದಲ್ಲಿ ಕಾದುವ ಓಲೆಯಕಾರಂಗೆ ಓಸರಿಸಿತ್ತೆ ಕಡೆ!
ಮಾಡುವ ಭಕ್ತಂಗೆ ಮನಹೀನವಾದರೆ
ಅದೇ ಕಡೆ ಕೂಡಲಸಂಗಮದೇವ.

೩೬೩.
ಹುಲಿಯ ಹಾಲು ಹುಲಿಗಲ್ಲದೆ
ಹೊಲದ ಹುಲ್ಲೆಗುಣಬಾರದು
ಕಲಿಯ ಕಾಲ ತೊಡರು ಛಲದಾಳಿಂಗಲ್ಲದೆ ಇಕ್ಕಬಾರದು.
ಅಳಿಮನದಾಸೆಯವರ ಮೂಗ ಹಲುದೋರ ಕೊಯ್ವ
ಕೂಡಲಸಂಗಮದೇವ.

೩೬೪.
ಅಲಗಲಗು ಮೋಹಿದಲ್ಲದೆ
ಕಲಿತನವ ಕಾಣಬಾರದು.
ನುಡಿವ ನುಡಿ ಜಾರಿದರೆ
ಮನಕ್ಕೆ ಮನ ನಾಚಬೇಕು.
ಶಬ್ದಗಟ್ಟಿಯತನದಲ್ಲಿ
ಎಂತಪ್ಪುದಯ್ಯ ಭಕ್ತಿ ?
ಪಾಪಿಯ ಕೂಸನೆತ್ತಿದಂತೆ-
ಕೂಡಲಸಂಗಮದೇವರ ಭಕ್ತಿ
ಅಳಿಮನದವರಿಗೆ ಅಳವಡದಯ್ಯ!

೩೬೫.
ಹರಬೀಜವಾದರೆ ಹಂದೆ ತಾನಪ್ಪನೇ ?
ಒರೆಯ ಬಿಚ್ಚಿ ಇರಿಯದವರ ಲೋಕ ಮೆಚ್ಚುವುದೆ ?
ಚಲ್ಲಣವುಟ್ಟು ಕೈಯ ಪಟ್ಟೆಹವಿಡಿದು
ಗರುಡಿಯ ಕಟ್ಟಿ ಶ್ರಮವ ಮಾಡುವ-
ಅಂತೆ ತನ್ನ ತಪ್ಪಿಸಿಕೊಂಡರೆ ಶಿವ ಮೆಚ್ಚುವನೆ ?
ಅರಿಯದವರಿಗೆ ಒಳ್ಳೆ ಹೆಡೆಯೆತ್ತಿ ಆಡುವಂತೆ
ಬೊಳ್ಳೆಗನ ಭಕ್ತಿ ಕೂಡಲಸಂಗಮದೇವ.

೩೬೬.
ಮೊನೆ ತಪ್ಪಿದ ಬಳಿಕ,
ಅಲಗೇನ ಮಾಡುವುದು ?
ವಿಷ ತಪ್ಪಿದ ಬಳಿಕ,
ಹಾವೇನ ಮಾಡುವುದು ?
ಭಾಷೆ ತಪ್ಪಿದ ಬಳಿಕ
ದೇವನೇ ಬಲ್ಲಿದ;
ಭಕ್ತನೇನ ಮಾಡುವನಯ್ಯ ?
ಭಾಷೆ ತಪ್ಪಿದ ಬಳಿಕ
ಪ್ರಾಣದಾಸೆಯನು ಹಾರಿದರೆ
ಮೀಸಲನು ಸೊಣಗ ಮುಟ್ಟಿದಂತೆ
ಕೂಡಲಸಂಗಮದೇವ.

೩೬೭.
ವೀರ, ವ್ರತಿ, ಭಕ್ತನೆಂದು ಹೊಗಳಿಕೊಂಬಿರಿ!
ಹೇಳಿರಯ್ಯ.
ವೀರನಾದರೆ ವೈರಿಗಳು ಮೆಚ್ಚಬೇಕು!
ವ್ರತಿಯಾದರೆ ಅಂಗನೆಯರು ಮೆಚ್ಚಬೇಕು!
ಭಕ್ತನಾದರೆ ಜಂಗಮ ಮೆಚ್ಚಬೇಕು.
ಈ ನುಡಿಯೊಳಗೆ ತನ್ನ ಬಗೆಯಿರೆ
ಬೇಡಿದ ಪದವಿಯನೀವ ಕೂಡಲಸಂಗಮದೇವ.

೩೬೮.
ಕಟ್ಟಿ ಬಿಡುವನೇ ಶರಣನು ?
ಬಿಟ್ಟು ಹಿಡಿವನೇ ಶರಣನು ?
ನಡೆದು ತಪ್ಪುವನೇ ಶರಣನು ?
ನುಡಿದು ಹುಸಿವನೇ ಶರಣನು ?
ಸಜ್ಜನಿಕೆ ತಪ್ಪಿದರೆ
ಕೂಡಲಸಂಗಯ್ಯ ಮೂಗ ಹಲುದೋರ ಕೊಯ್ವ!

೩೬೯.
ಒಡನೆ ಹುಟ್ಟಿದುದಲ್ಲ;
ಒಡನೆ ಬೆಳೆದುದಲ್ಲ;
ಎಡೆಯಲಾದೊಂದುಡಿಗೆಯನುಟ್ಟು ಸಡಿಲಿದರೆ
ಲಜ್ಜೆ-ನಾಚಿಕೆಯಾಯಿತ್ತೆಂಬ ನುಡಿ ದಿಟವಾಯಿತ್ತು ಲೌಕಿಕದಲ್ಲಿ
ಪಡೆದ ಗುರುಕರುಣದೊಡನೆ ಹುಟ್ಟಿದ
ನೇಮವನು ಬಿಡದಿರೆಲವೋ!
ಬಿಟ್ಟರೆ ಕಷ್ಟ!
ಕೂಡಲಸಂಗಮದೇವನು
ಅಡಸಿ ಕೆಡಹುವ ನಾಯಕನರಕದಲ್ಲಿ.

೩೭೦.
ಛಲಬೇಕು ಶರಣಂಗೆ ಪರಧನವನೊಲ್ಲೆಂಬ!
ಛಲಬೇಕು ಶರಣಂಗೆ ಪರಸತಿಯನೊಲ್ಲೆಂಬ!
ಛಲಬೇಕು ಶರಣಂಗೆ ಪರದೈವವನೊಲ್ಲೆಂಬ
ಛಲಬೇಕು ಶರಣಂಗೆ ಲಿಂಗಜಂಗಮವೊಂದೆಂಬ!
ಛಲಬೇಕು ಶರಣಂಗೆ ಪ್ರಸಾದ ದಿಟವೆಂಬ!
ಛಲವಿಲ್ಲದವರ ಮೆಚ್ಚ ಕೂಡಲಸಂಗಮದೇವ.

೩೭೧.
ಜಂಬೂದ್ವೀಪನವಖಂಡಪೃಥ್ವಿಯೊಳಗೆ
ಕೇಳಿರಯ್ಯ ಎರಡಾಳಿನ ಭಾಷೆಯ!
ಕೊಲುವೆನೆಂಬ ಭಾಷೆ ದೇವನದು,
ಗೆಲುವೆನೆಂಬ ಭಾಷೆ ಭಕ್ತನದು.
ಸತ್ಯವೆಂಬ ಕೂರಲಗನೆ ಕಳೆದುಕೊಂಡು
ಸದ್ಭಕ್ತರು ಗೆದ್ದರು ಕಾಣಾ ಕೂಡಲಸಂಗಮದೇವ.

೩೭೨.
ಶಿವಭಕ್ತನಾಗಿ ತನ್ನ ಹಿಡಿದಹೆನೆಂದು ಹೋದರೆ
ನುಗ್ಗುಮಾಡುವ, ನುಸಿಯ ಮಾಡುವ!
ಮಣ್ಣುಮಾಡುವ, ಮಸಿಯ ಮಾಡುವ!
ಕೂಡಲಸಂಗಮದೇವರ ನೆರೆನಂಬಿದನಾದರೆ
ಕಡೆಗೆ ತನ್ನಂತೆ ಮಾಡುವ.

೩೭೩.
ಅರೆವನಯ್ಯ ಸಣ್ಣವಹನ್ನಕ
ಒರೆವನಯ್ಯ ಬಣ್ಣಗಾಬನ್ನಕ
ಅರೆದರೆ ಸುಣ್ಣವಾಗಿ,
ಒರೆದರೆ ಬಣ್ಣವಾದರೆ
ಕೂಡಲಸಂಗಮದೇವನೊಲಿದು ಸಲಹುವನು.

೩೭೪.
ಎಡದ ಪಾದದಲೊದ್ದರೆ ಬಲದ ಪಾದವ ಹಿಡಿವೆ!
ಬಲದ ಪಾದದಲೊದ್ದರೆ ಎಡದ ಪಾದವ ಹಿಡಿವೆ!
ತ್ರಾಹಿ, ತ್ರಾಹಿ! ತಪ್ಪೆನ್ನದು, ಕ್ಷಮೆ ನಿನ್ನದು!
ಕೂಡಲಸಂಗಮದೇವ ನಿಮ್ಮ ಕರುಣದ ಕಂದ ನಾನು!

೩೭೫.
ಅಂಜಿದರಾಗದು, ಅಳುಕಿದರಾಗದು!
ವಜ್ರಪಂಜರದೊಳಗಿದ್ದರಾಗದು!
ತಪ್ಪದೆಲವೋ ಲಲಾಟಲಿಖಿತ!
ಕಕ್ಕುಲತೆಬಟ್ಟರಾಗದು ನೋಡಾ!
ಧೃತಿಗೆಟ್ಟು ಮನ ಧಾತುಗೆಟ್ಟರೆ
ಅಪ್ಪುದು ತಪ್ಪದು ಕೂಡಲಸಂಗಮದೇವ.

೩೭೬.
ಆಯುಷ್ಯ ತೀರಿದಲ್ಲದೆ ಮರಣವಿಲ್ಲ.
ಭಾಷೆ ತೀರಿದಲ್ಲದೆ ದಾರಿದ್ರ್ಯವಿಲ್ಲ.
ಅಂಜಲದೇಕೋ ಲೋಕವಿಗರ್ಹಣೆಗೆ ?
ಅಂಜಲದೇಕೋ ಕೂಡಲಸಂಗಮದೇವ ನಿಮ್ಮಾಳಾಗಿ ?

೩೭೭.
ಮನಕ್ಕೆ ಮನ ಒಂದಾಗಿ, ಧನಕ್ಕೆ ಧನ ಒಂದಾಗಿ;
ನಚ್ಚಿದ ಮಚ್ಚು ಅಚ್ಚೊತ್ತಿದಂತಿರಬೇಕು.
ಪ್ರಾಣಕ್ಕೆ ಪ್ರಾಣ ಒಂದಾಗಿ, ಶುಭಸೂಚನೆ ಒಂದಾಗಿರದ
ನಚ್ಚು ಮಚ್ಚು ಪಾರವೈದುವುದೆ ?
ಶಿರ ಹರಿದರೇನು ? ಕರುಳು ಕುಪ್ಪಳಿಸಿದರೇನು ?
ಇಂತಪ್ಪ ಸಮಸ್ತ ವಸ್ತುವೆಲ್ಲ ಹೋದರೇನು ?
ಚಿತ್ತ-ಮನ-ಬುದ್ಧಿಯೊಂದಾದ ಮಚ್ಚು
ಬಿಚ್ಚಿ ಬೇರಾಗದಿದ್ದರೆ
ಮೆಚ್ಚುವ ನಮ್ಮ ಕೂಡಲಸಂಗಮದೇವ.

೩೭೮.
ಎನಿಸೆನಿಸೆಂದಡೆಯೂ ನಾ ಧೃತಿಗೆಡೆನಯ್ಯ ?
ಎಲುದೋರಿದಡೆಯೂ, ನರ ಹರಿದಡೆಯೂ,
ಕರಳು ಕುಪ್ಪಳಿಸಿದಡೆಯೂ ನಾ ಧೃತಿಗೆಡೆನಯ್ಯ ?
ಸಿರ ಹರಿದು ಅಟ್ಟೆ ನೆಲಕ್ಕೆ ಬಿದ್ದಡೆಯೂ
ನಾಲಗೆ ಕೂಡಲಸಂಗ ಶರಣೆನುತಿಪ್ಪುದಯ್ಯ ?

೩೭೯.
ಒಣಗಿಸಿಯೆನ್ನ ಘಣಘಣಲನೆ ಮಾಡಿದಡೆಯೂ
ಹರಣವುಳ್ಳನ್ನಕ ನಿಮ್ಮ ಚರಣವ ನೆನೆವುದ ಮಾಣೆ, ಮಾಣೆ!

ಶರಣೆಂಬುದ ಮಾಣೆ, ಮಾಣೆ!
ಕೂಡಲಸಂಗಮದೇವಯ್ಯ
ಎನ್ನ ಹೆಣನ ಮೇಲೆ ಕಂಚಿಟ್ಟುಂಡೊಡೆಯು ಮಾಣೆ, ಮಾಣೆ!

೩೮೦.
ಜಾಗ್ರತ್-ಸ್ವಪ್ನ-ಸುಷುಪ್ತಿಯಲ್ಲಿ
ಮತ್ತೊಂದ ನೆನೆದಡೆ ತಲೆದಂಡ, ತಲೆದಂಡ!
ಹುಸಿಯಾದಡ ದೇವಾ, ತಲೆದಂಡ! ತಲೆದಂಡ!
ಕೂಡಲಸಂಗಮದೇವ ನೀವಲ್ಲದೆ ಅನ್ಯವ ನೆನೆದಡೆ
ತಲೆದಂಡ, ತಲೆದಂಡ!

೩೮೧.
ಸುಖ ಬಂದರೆ ಪುಣ್ಯದ ಫಲವೆನ್ನೆನು,
ದುಃಖ ಬಂದರೆ ಪಾಪದ ಫಲವೆನ್ನೆನು,
ನೀ ಮಾಡಿದಡಾಯಿತ್ತೆನ್ನೆನು,
ಕರ್ಮಕ್ಕೆ ಕರ್ತೃವೇ ಕಡೆಯೆನ್ನೆನು,
ಉದಾಸೀನವಿಡಿದು ಶರಣೆನ್ನೆನು ಕೂಡಲಸಂಗಮದೇವ.
ನೀ ಮಾಡಿದುಪದೇಶವು ಎನಗೀ ಪರಿಯಲಿ!
ಸಂಸಾರವ ಸವೆಯ ಬಳಸುವೆನು.

೩೮೨.
ಕಾಯದ ಕಳವಳಕಂಜಿ ಕಾಯಯ್ಯ ಎನ್ನೆನು.
ಜೀವನೋಪಾಯಕಂಜಿ ಈಯಯ್ಯ ಎನ್ನೆನು.
'ಯದ್ಭಾವಂ ತದ್ಭವತಿ'
ಉರಿ ಬರಲಿ, ಸಿರಿ ಬರಲಿ
ಬೇಕು ಬೇಡೆನ್ನೆನಯ್ಯ!
ಆನು ನಿಮ್ಮ ಹಾರೆನು, ಮಾನವರ ಬೇಡೆನು;
ಆಣೆ, ನಿಮ್ಮಾಣೆ ಕೂಡಲಸಂಗಮದೇವ.

೩೮೩.
ನಾಳೆ ಬಪ್ಪುದು ನಮಗಿಂದೇ ಬರಲಿ.
ಇಂದು ಬಪ್ಪುದು ನಮಗೀಗಲೇ ಬರಲಿ.
ಇದಕಾರಂಜುವರು ? ಇದಕಾರಳುಕುವರು-
'ಜಾತಸ್ಯ ಮರಣಂ ಧ್ರುವಂ' ಎಂದುದಾಗಿ ?
ನಮ್ಮ ಕೂಡಲಸಂಗಮದೇವ ಬರೆದ
ಬರಹವ ತಪ್ಪಿಸುವಡೆ ಹರಿಬ್ರಹ್ಮಾದಿಗಳಿಗಳವಲ್ಲ ?

೩೮೪.
ಕಳ ಹೋದರೆ ಕನ್ನದುಳಿಯ ಹಿಡಿವೆ.
ಬಂದಿವಿಡಿದರೆ ನಿಮ್ಮಿಂದ ಮುಂದೆ ನಡೆವೆ,
ಮನಭೀತಿ ಮನಶಂಕೆಗೊಂಡೆನಾದರೆ,
ನಿಮ್ಮಾಣೆ ನಿಮ್ಮ ಪುರಾತರಾಣೆ.
ಆಳ್ದರ ನಡೆ ಸದಾಚಾರವೆನ್ನದಿದ್ದರೆ
ಕಟ್ಟಾಳು ಶಿಷ್ಟತನಕ್ಕೆ ಹೋಹ ಕಷ್ಟವ ನೋಡಾ
ಕೂಡಲಸಂಗಮದೇವ.

೩೮೫.
ಜೋಳವಾಳಿಯಾನಲ್ಲ,
ವೇಳೆವಾಳಿಯವ ನಾನಯ್ಯ!
ಹಾಳುಗೆಟ್ಟೋಡುವಾಳು ನಾನಲ್ಲಯ್ಯ,
ಕೇಳು, ಕೂಡಲಸಂಗಮದೇವ,
ಮರಣವೇ ಮಹಾನವಮಿ.

೩೮೬.
ಎನಗೆ ಜನನವಾಯಿತ್ತೆಂಬರು,
ಎನಗೆ ಜನನವಿಲ್ಲಯ್ಯ!
ಎನಗೆ ಮರಣವಾಯಿತ್ತೆಂಬರು,
ಎನಗೆ ಮರಣವಿಲ್ಲಯ್ಯ!
ಜನನವಾದರೆ ನಿಮ್ಮ ಪಾದೋದಕಪ್ರಸಾದವ ಕೊಂಬೆ.
ಮರಣವಾದರೆ ನಿಮ್ಮ ಶ್ರೀ ಚರಣವನೆಯ್ದುವೆ.
ಬಾವನ್ನದ ವೃಕ್ಷ ಊರೊಳಗಿದ್ದರೇನು ?
ಅಡವಿಯೊಳಗಿದ್ದರೇನು ?
ಪರಿಮಳವೊಂದೆ!
ಕೂಡಲಸಂಗಮದೇವ.

೩೮೭.
ಒಡೆಯರುಳ್ಳಾವಿಂಗೆ ಕೇಡಿಲ್ಲ ಕಾಣಿರೋ
ಊರೆನ್ನದೆ ಅಡವಿಯೆನ್ನದೆ ಆಳನರಸಿ ಬಹ ಆಳ್ದರುಂಟೆ!
ಜೋಳವಾಳಿಂಗೆ ಬಿಜ್ಜಳಂಗೆ ಆಳಾದರೇನು ?
ವೇಳೆವಾಳಿಂಗೆ ಕೊಡಿಕೊಂಡಿಪ್ಪ ಕೂಡಲಸಂಗಮದೇವ!

೩೮೮.
ಕರ್ಮವೆಂಬ ಅಂಕದೊಡನೆ ತೊಡರಿದೆ
ಬಿನ್ನಪವ ಅವಧಾರು-ನಿಮ್ಮಾಳಿನ ಭಾಷೆಯ:
ಕಡೆಗಳಕ್ಕೆ ನೂಂಕುವೆ, ಕೆಡಹುವೆನಂಕವ.
ಕರೆದಡೋಸರಿಸಿದರೆ ನಿಮ್ಮಾಳಲ್ಲ!
ಶಿವಶರಣೆಂಬ ದಂಡೆಯ ಹೂಡಿ
ಗಣಮೇಳಾಪವೆಂಬಲಗಿನಿಂದಿರಿವೆ
ಕೂಡಲಸಂಗಮದೇವ.

೩೮೯.
ಎಲೆ ಗಂಡುಗೂಸೆ ನೀ ಕೇಳಾ!
ನಿನಗೊಬ್ಬಗೆಂದುಟ್ಟೆ ಗಂಡುಡುಗೆಯನು;
ಮತ್ತೊಮ್ಮೆಯಾನು ಗಂಡಪ್ಪೆನಯ್ಯ;
ಮತ್ತೊಮ್ಮೆಯಾನು ಹೆಣ್ಣಪ್ಪೆನಯ್ಯ!
ಕೂಡಲಸಂಗಮದೇವ,
ನಿಮಗೆ ವೀರನಪ್ಪೆ! ನಿಮ್ಮ ಶರಣರಿಗೆ ವಧುವಪ್ಪೆ!

೩೯೦.
ಹುಟ್ಟುತ್ತ ದ್ರವ್ಯವನರಿಯದವಂಗೆ
ಐಶ್ವರ್ಯವಂತ ಮಗನಾದರೆ
ಲಕ್ಷಸಂಖ್ಯೆಯ ಹಿರಣ್ಯವ ತಂದು ಸಂತೋಷಂಬಡಿಸುವಂತೆ;
ಕಾಳಗದ ಮುಖವಾವುದೆಂದರಿಯದ ಹಂದೆ-ನೃಪಂಗೆ
ಒಬ್ಬ ಕ್ಷತ್ರಿಯನಂತಹ ಕುಮಾರ ಹುಟ್ಟಿ
ಕಿಗ್ಗಡಲ ರಕ್ತದ ಹೊನಲಲ್ಲಿ ಕಡಿದು ಮುಳುಗಾಡುವ
ಕೊಳುಗುಳವ ಕಂಡು ಪರಿಣಾಮಿಸುವಂತೆ
ಆನು ಪರಿಣಾಮಿಸುವೆನಯ್ಯ, ಕೂಡಲಸಂಗಮದೇವ,
ನೀ ಬಂದೆನ್ನ ಬೇಡಿದರೆ.

೩೯೧.
ಒಡವೆ-ಭಂಡಾರ-ಕಡವರ-ದ್ರವ್ಯವ
ಬಡ್ಡಿಯ ವ್ಯವಹಾರಕ್ಕೆ ಕೊಟ್ಟು
ಮನೆಯ ಗೊಂಟಿನಲ್ಲಿ ಹೊಯ್ದುಕೊಂಡಿದ್ದೆನಾದರೆ
ಅದು ಎನ್ನರ್ಥವಲ್ಲ! ಅನರ್ಥವೆಂಬೆ!!
ಸಂಗಮ ದೇವ, ನೀ ಜಂಗಮರೂಪಾಗಿ ಬಂದು
ಆ ಧನವನು ನೀ ಬಲ್ಲಂತೆನ್ನ ಮುಂದೆ ಸೂರೆಗೊಳ್ಳುತ್ತಿರಲು
ನಾ ಬೇಕು-ಬೇಡೆಂದು ಮನದಲ್ಲಿ ಮರುಗಿದೆನಾದರೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ, ಮನದೊಡೆಯ, ನೀನೆ ಬಲ್ಲೆ!
ಕಾಮನೇಮವೆಂಬ ಸಿಂಧುಬಲ್ಲಾಳನ ವಧುವ
ಸರ್ವಭುವನದೊಡೆಯ ಸಂಗಮದೇವರು ಬೇಡುವಂತಲ್ಲ-
ಎನ್ನ ಸತಿ ನೀಲಲೋಚನೆ ಪೃಥ್ವಿಗಗ್ಗಳೆ ಚೆಲುವೆ
ಆಕೆಯನು, ಸಂಗಮದೇವ, ನೀ ಜಂಗಮರೂಪಾಗಿ ಬಂದು
ಎನ್ನ ಮುಂದೆ ಸಂಗವ ಮಾಡುತ್ತಿರಲು
ಎನ್ನೊಡನಿದ್ದ ಸತಿಯೆಂದು ವಾಯಕ್ಕೆ ಮರುಗಿದೆನಾದರೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ ಮನದೊಡೆಯ, ನೀನೆ ಬಲ್ಲೆ!
ಪ್ರತ್ಯಕ್ಷವಾಗಿ ಸಿರಿಯಾಳ-ಚಂಗಳೆಯರ ಮನೆಗೆ ಬಂದು
ಅವರ ಮಗನ ಬೇಡುವಂತಲ್ಲ-
ಸಂಗಮ ದೇವ, ನಿಮ್ಮ ಹೆಸರ ಚಿಕ್ಕಸಂಗಯ್ಯನಿದ್ದಹನು
ನೀ ಜಂಗಮರೂಪಾಗಿ ಬಂದು ಅವನ ಹಿಡಿದು
ಎನ್ನ ಮುಂದೆ ಹೆಡಗುಡಿಯ ಕಟ್ಟಿ ಚಿನಿಖಂಡವ ಮಾಡಿ
ಬಾಣಸವ ಮಾಡುವಾಗಲು
ಎನ್ನುದರದಲ್ಲಿ ಬಂದ ಪುತ್ರನೆಂದು ವಾಯಕ್ಕೆ ಮರುಗಿದೆನಾದಡೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ, ಮನದೊಡೆಯ, ನೀನೆ ಬಲ್ಲೆ!
ಇಂತೀ ತ್ರಿವಿಧವು ಹೊರಗಣವು-
ಎನ್ನ ನೋವಿನೊಳಗಲ್ಲ! ಎನ್ನ ಬೇನೆಯೊಳಗಲ್ಲ!
ಇನ್ನು ನಾನಿದ್ದಿಹೆ-
ಕದ್ದ ಕಳ್ಳನ ಕಟ್ಟುವಂತೆ ಕಟ್ಟಿ ನೀ ಜಂಗಮರೂಪಾಗಿ ಬಂದು
ಎನ್ನಂಗದ ಮೇಲೆ ಶಸ್ತ್ರವನಿಕ್ಕಿ ನೋಡು!
ಬಸಿವ ಶೂಲಪ್ರಾಪ್ತಿಯ ಮಾಡಿ ನೋಡು!
ಸೂಜಿಯ ಮೊನೆಯಂತಿದ್ದ ಶೂಲದ ಮೇಲಿಕ್ಕಿ ನೋಡು!
ನವಖಂಡವ ಮಾಡಿ ಕಡಿಕಡಿದು ನೋಡು!
ಆ ಶೂಲವೈದೈದು ಮುಖವಾಗಿ ಹಾಯುವಾಗ ಹರಿತಿನಿಸಿ
ನೋಡು!
ಎಂತೆನ್ನ ಭಂಗಬಡಿಸಿ ನೋಡಿದರೆಯೂ
ಲಿಂಗಾರ್ಚನೆಯ ಮಾಡುವುದ ಬಿಡೆ,
ಜಂಗಮದಾಸೋಹವ ಮಾಡುವುದು ಬಿಡೆ.
ಪಾದತೀರ್ಥ ಪ್ರಸಾದವ ಕೊಂಬುದ ಬಿಡೆ.
ಇಂತೀ ತ್ರಿವಿಧಕ್ಕೆ ರೋಷವ ಮಾಡಿ ಬಿಟ್ಟೆನಾದರೆ
ನಿಮ್ಮಾಣೆ, ನಿಮ್ಮ ಪ್ರಮಥರಾಣೆ!
ಇನಿತರೊಳಗೆ ತಪ್ಪುಳ್ಳಡೆ ಮೂದಲಿಸಿ ಮೂಗ ಕೊಯಿ
ಕೂಡಲಸಂಗಮದೇವ.

೩೯೨.
ಅರ್ಥವನರ್ಥವ ಮಾಡಿ ಕೋಳಾಹಳಂಗೈವುತ್ತಿರಲಿ;
ಹುಟ್ಟಿದ ಮಕ್ಕಳ ನವಖಂಡವ ಮಾಡಿ ಕಡಿವುತ್ತಿರಲಿ!
ಮುಟ್ಟಿದ ಸ್ತ್ರೀಯ ಕಣ್ಣ ಮುಂದೆ ಅಭಿಮಾನಂಗೊಂಡು
ನೆರೆವುತ್ತಿರಲಿ.
ಇಂತೀ ತ್ರಿವಿಧವು ಹೊರಗಣವು.
ಇನ್ನೆನ್ನಂಗದ ಮೇಲೆ ಬರಲಿ, ಹಿಡಿಖಂಡವ ಕೊಯ್ಯಲಿ.
ಇಕ್ಕುವ ಶೂಲ ಪ್ರಾಪ್ತಿಸಲಿ
ಹಾಕೊಂದೆಸೆ ಹನ್ನೊಂದೆಸೆಯಾಗಿ ಮಾಡುತ್ತಿರಲಿ,
ಮತ್ತೆಯೂ ಲಿಂಗಾರಾಧನೆಯ ಮಾಡುವೆ,
ಜಂಗಮಾರಾಧನೆಯ ಮಾಡುವೆ,
ಪ್ರಸಾದಕ್ಕೆ ತಪ್ಪೆ.
ಇಂತಪ್ಪ ಭಾಷೆ ಕಿಂಚಿತ್ತು ಹುಸಿಯಾದರೆ
ನೀನಂದೇ ಮೂಗ ಕೊಯಿ ಕೂಡಲಸಂಗಮದೇವ.

೩೯೩.
ತನುವ ಬೇಡಿದಡೀವೆ, ಮನವ ಬೇಡಿದಡೀವೆ,
ಧನವ ಬೇಡಿದಡೀವೆ; ಬೇಡು ಬೇಡೆಲೆ ಹಂದೆ.
ಕಣ್ಣ ಬೇಡಿದಡೀವೆ, ತಲೆಯ ಬೇಡಿದಡೀವೆ.
ಕೂಡಲ ಸಂಗಮ ದೇವ,
ನಿಮಗಿತ್ತು ಶುದ್ಧನಾಗಿಪ್ಪೆ ನಿಮ್ಮ ಪುರಾತರ ಮನೆಯಲ್ಲಿ.

೩೯೪.
ಓಡದಿರೋಡದಿರು ನಿನ್ನ ಬೇಡುವವ ನಾನಲ್ಲ!
ಶಿವನೇ, ನೋಡುವೆ ಕಣ್ಣ ತುಂಬ! ಆಡಿ-ಪಾಡಿ ನಲಿದಾಡುವೆ!
ಬೇಡೆನ್ನ ಕೂಡೆ ಮಾತನಾಡಲಾಗದೆ ?
ಕೂಡಲಸಂಗಮದೇವ, ನೀನಾಡಿಸುವ ಗೊಂಬೆ ನಾನು!

೩೯೫.
ನಾನು ಆರಂಬವ ಮಾಡುವೆನಯ್ಯ ಗುರುಪೂಜೆಗೆಂದು.
ನಾನು ಬೆವಹಾರವ ಮಾಡುವೆನಯ್ಯ ಲಿಂಗಾರ್ಚನೆಗೆಂದು
ನಾನು ಪರಸೇವೆಯ ಮಾಡುವೆನಯ್ಯ
ಜಂಗಮದಾಸೋಹಕ್ಕೆಂದು.
ನಾನಾವಾವ ಕರ್ಮಂಗಳ ಮಾಡಿದಡೆಯೂ
ಆ ಕರ್ಮಫಲಭೋಗವ ನೀ ಕೊಡುವೆಯೆಂಬುದ
ನಾನು ಬಲ್ಲೆನು.
ನೀ ಕೊಟ್ಟ ದ್ರವ್ಯದ ನಿಮಗಲ್ಲದೆ
ಮತ್ತೊಂದು ಕ್ರೀಯ ಮಾಡೆನು.
ನಿಮ್ಮ ಸೊಮ್ಮ ನಿಮಗೆ ಸಲ್ಲಿಸುವೆನು
ನಿಮ್ಮಾಣೆ ಕೂಡಲಸಂಗಮದೇವ.

೩೯೬.
ಹೊತ್ತಾರೆಯೆದ್ದು ಕಣ್ಣ ಹೊಸೆವುತ್ತ
ಎನ್ನ ಒಡಲಿಂಗೆ, ಎನ್ನ ಒಡವೆಗೆ,
ಎನ್ನ ಮಡದಿ ಮಕ್ಕಳಿಗೆಂದು ಕುದಿದೆನಾದರೆ
ಎನ್ನ ಮನಕ್ಕೆ ಮನವೇ ಸಾಕ್ಷಿ!
"ಆಶನೇ ಶಯನೇ ಯಾನೇ
ಸಂಪರ್ಕೇ ಸಹಭೋಜನೇ,
ಸಂಚರಂತಿ ಮಹಾಘೋರೇ
ನರಕೇ ಯಾವದಕ್ಷಯೇ"
ಎಂಬ ಶ್ರುತಿಯ ಬಸವಣ್ಣನೋದುವನು.
ಭವಿಬಿಜ್ಜಳನ ಗದ್ದುಗೆಯ ಕೆಳಗೆ ಕುಳ್ಳಿರ್ದು
ಓಲೈಸಿಹೆನೆಂದು ನುಡಿವರಯ್ಯ ಪ್ರಮಥರು;
ಕೊಡುವೆನ್ನುತ್ತರವನವರಿಗೆ - ಕೊಡಲಮ್ಮೆ,
ಪ್ರತ್ಯುತ್ತರ ನಾಯಕನರಕವೆಂಬುದುಂಟಾಗಿ,
ಹೊಲೆಹೊಲೆಯರ ಮನೆಯ ಹೊಕ್ಕಾದರೆಯು,
ಸಲೆ ಕೈಕೂಲಿಯ ಮಾಡಿಯಾದರೆಯು,
ನಿಮ್ಮ ನಿಲವಿಂಗೆ ಕುದಿವೆನಲ್ಲದೆ,
ಎನ್ನ ಒಡಲವಸರಕ್ಕೆ ಕುದಿದೆನಾದರೆ
ತಲೆದಂಡ ಕೂಡಲಸಂಗಮದೇವ.

೩೯೭.
ಅಣ್ಣ, ತಮ್ಮ, ಹೆತ್ತಣ್ಣ ಗೋತ್ರವಾದರೇನು
ಲಿಂಗಸಾಹಿತ್ಯವಿಲ್ಲದವರ ಎನ್ನವರೆನ್ನೆನಯ್ಯ.
ನಂಟು-ಭಕ್ತಿ-ನಾಯಕನರಕ ಕೂಡಲಸಂಗಮದೇವ.

೩೯೮.
ಹೊನ್ನು-ಹೆಣ್ಣು-ಮಣ್ಣೆಂಬ
ಕರ್ಮದ ಬಲೆಯಲ್ಲಿ ಸಿಲುಕಿ
ವೃಥಾ ಬರುದೊರೆ ಹೋಹ ಕೆಡುಕ ಹಾರುವ ನಾನಲ್ಲ.
ಹಾರುವೆನಯ್ಯ ಭಕ್ತರ ಬರವ ಗುಡಿಗಟ್ಟಿ!
ಹಾರುವೆನಯ್ಯ ಶರಣರ ಬರವ ಗುಡಿಗಟ್ಟಿ!
ಕೂಡಲಸಂಗಮದೇವನು
ವಿಪ್ರಕರ್ಮವ ಬಿಡಿಸಿ
ಅಶುದ್ಧನ ಶುದ್ಧನ ಮಾಡಿದನಾಗಿ.

೩೯೯.
ವೇದಕ್ಕೆ ಒರೆಯ ಕಟ್ಟುವೆ!
ಶಾಸ್ತ್ರಕ್ಕೆ ನಿಗಳವನಿಕ್ಕುವೆ!
ತರ್ಕದ ಬೆನ್ನ ಬಾರನೆತ್ತುವೆ!
ಆಗಮದ ಮೂಗ ಕೊಯ್ವೆ!
ನೋಡಯ್ಯ, ಮಹಾದಾನಿ ಕೂಡಲಸಂಗಮದೇವ,
ಮಾದರ ಚೆನ್ನಯ್ಯನ ಮನೆಯ ಮಗ ನಾನಯ್ಯ!

೪೦೦.
ಕಳ್ಳ, ಬಂದಿಕಾರ, ಹಾವಾಡಿಗ, ಹಾದರಿಗ,
ಬಂಟನೋಲೆಯಕಾರನೆಂದೆನಾದರೆ,
ನೀ ಮುಂತಾಗಿ ಬಂದ ಭಕ್ತರ ನೀನೆನ್ನದಿದ್ದರೆ,
ಅದೇ ದ್ರೋಹ!
ನಡೆ-ನುಡಿ ಹುಸಿಯುಂಟಾದರೆ
ಕೂಡಲಸಂಗನ ತೋರಿದ ಚೆನ್ನಬಸವಣ್ಣನಾಣೆ.

೪೦೧.
ಒಡೆಯರೊಡವೆಯ ಕೊಂಡರೆ
ಕಳ್ಳಂಗಳಲಾಯಿತ್ತೆಂಬ ಗಾದೆಯೆನಗಿಲ್ಲಯ್ಯ.
ಇಂದೆನ್ನ ವಧುವ, ನಾಳೆನ್ನ ಧನವ,
ನಾಡಿದೆನ್ನ ತನುವ ಬೇಡರೇಕಯ್ಯ ?
ಕೂಡಲಸಂಗಮದೇವ, ಆನು ಮಾಡಿದುದಲ್ಲದೆ
ಬಯಸಿದ ಬಯಕೆ ಸಲುವುದೇ ಅಯ್ಯ ?

೪೦೨.
ಸಮಚಿತ್ತವೆಂಬ ನೇಮದ ಹಲಗೆಯ ಹಿಡಿದು,
ಶಿವಚಿತ್ತವೆಂಬ ಕೂರಲಗ ಕೊಂಡು
ಶರಣಾರ್ಥಿಯೆಂಬ ಶ್ರವಗಲಿತಡೆ
ಆಳುತನಕ್ಕೆ ದೆಸೆಯಪ್ಪೆ ನೋಡಾ!
ಮಾರಂಕ-ಜಂಗಮ ಮನೆಗೆ ಬಂದಲ್ಲಿ
ಇದಿರೆತ್ತಿ ನಡೆವುದು;
ಕೂಡಲಸಂಗಮದೇವನನೊಲಿಸುವಡಿದು ಚಿಹ್ನ.

೪೦೩.
ಅಟ್ಟಟ್ಟಿಕೆಯ ಮಾತನಾಡಲದೇಕೋ ?
ಮುಟ್ಟಿ ಬಂದುದಕ್ಕಂಜಲದೇಕೋ ?
ಕಾದಿದಲ್ಲದೆ ಮಾಣೆನು,
ಓಡಿದರೆ ಭಂಗ ಹಿಂಗದಾಗಿ;
ಕೂಡಲಸಂಗಮದೇವ ಎನ್ನ ಭಂಗ ನಿಮ್ಮದಾಗಿ!

೪೦೪.
ನೀನಿರಿಸಿದ ಮನದಲ್ಲಿ ನಾನಂಜೆನಯ್ಯ.
ಮನವು ಮಹಾಘನಕ್ಕೆ ಶರಣಾಗತಿವೊಕ್ಕುದಾಗಿ!
ನೀನಿರಿಸಿದ ಧನದಲ್ಲಿ ನಾನಂಜೆನಯ್ಯ,
ಧನವು ಸತಿಸುತಮಾತಾಪಿತರಿಗೆ ಹೋಗದಾಗಿ!
ನೀನಿರಿಸಿದ ತನುವಿನಲ್ಲಿ ನಾನಂಜೆನಯ್ಯ,
ಸರ್ವಾರ್ಪಿತದಲ್ಲಿ ತನು ನಿಯತಪ್ರಸಾದಭೋಗಿಯಾಗಿ!
ಇದು ಕಾರಣ ವೀರಧೀರ ಸಮಗ್ರನಾಗಿ
ಕೂಡಲಸಂಗಮದೇವಯ್ಯ ನಿಮಗಾನಂಜೆನು!

೪೦೫.
ಬತ್ತೀಸಾಯುಧದಲ್ಲಿ ಅಭ್ಯಾಸವ ಮಾಡಿದರೇನು ?
ಹಗೆಯ ಕೊಲುವಡೆ ಒಂದಲಗು ಸಾಲದೆ ?
ಲಿಂಗವ ಗೆಲುವಡೆ "ಶರಣಸತಿ ಲಿಂಗಪತಿ"
ಎಂಬಲಗು ಸಾಲದೆ ?
ಎನಗೆ ನಿನಗೆ ಜಂಗಮಪ್ರಸಾದವೆಂಬಲಗು ಸಾಲದೆ
ಕೂಡಲಸಂಗಮದೇವ ?

೪೦೬.
ಕೊಲ್ಲೆನಯ್ಯ ಪ್ರಾಣಿಗಳ,
ಮೆಲ್ಲೆನಯ್ಯ ಬಾಯಿಚ್ಚೆಗೆ,
ಒಲ್ಲೆನಯ್ಯ ಪರಸತಿಯರ ಸಂಗವ,
ಬಲ್ಲೆನಯ್ಯ ಮುಂದೆ ತೊಡಕುಂಟೆಂಬುದ!
ಬಳ್ಳದ ಬಾಯಂತೆ ಒಂದೇ ಮನವ ಮಾಡಿ
ನಿಲ್ಲೆಂದು ನಿಲಿಸಯ್ಯ ಕೂಡಲಸಂಗಮದೇವ.

೪೦೭.
ಆನೆ ಅಂಕುಶಕ್ಕಂಜುವುದೆ ಅಯ್ಯ,
ಮಾಣದೆ ಸಿಂಹದ ನಖವೆಂದಂಜುವುದಲ್ಲದೆ ?
ಆನೀ ಬಿಜ್ಜಳಂಗಂಜುವೆನೇ ಅಯ್ಯ,
ಕೂಡಲಸಂಗಮದೇವ,
ನೀನು ಸರ್ವಜೀವದಯಾಪಾರಿಯಾದ ಕಾರಣ
ನಿಮಗಂಜುವೆನಲ್ಲದೆ !?

೪೦೮.
ಬಂದಹೆನೆಂದು ಬಾರದಿದ್ದರೆ
ಬಟ್ಟೆಗಳ ನೋಡುತ್ತಿದ್ದೆನಯ್ಯ!
ಇನ್ನಾರನಟ್ಟುವೆ ? ಇನ್ನಾರನಟ್ಟುವೆ ?
ಇನ್ನಾರ ಪಾದವ ಹಿಡಿವೆನಯ್ಯ ?
ಕೂಡಲಸಂಗನ ಶರಣರು ಬಾರದಿದ್ದರೆ
ಅಟ್ಟುವೆನೆನ್ನ ಪ್ರಾಣವನು!

೪೦೯.
ಜಗದಗಲ ಮುಗಿಲಗಲ
ಮಿಗೆಯಗಲ ನಿಮ್ಮಗಲ!
ಪಾತಾಳದಿಂದವತ್ತತ್ತ ನಿಮ್ಮ ಶ್ರೀಚರಣ!
ಬ್ರಹ್ಮಾಂಡದಿಂದವತ್ತತ್ತ ನಿಮ್ಮ ಶ್ರೀಮಕುಟ!
ಅಗಮ್ಯ ಅಪ್ರಮಾಣ
ಅಗೋಚರ ಅಪ್ರತಿಮಲಿಂಗವೇ,
ಕೂಡಲಸಂಗಮದೇವಯ್ಯ,
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯ.

೪೧೦.
ನಿಷ್ಠೆಯಿಂದ ಲಿಂಗವ ಪೂಜಿಸಿ,
ಮತ್ತೊಂದು ಪಥವನರಿಯದ ಶರಣರು,
ಸರ್ಪನ ಹೆಡಯ ಮಾಣಿಕದ ಮಕುಟದಂತಿಪ್ಪರು ಭೂಷಣರಾಗಿ!
ದರ್ಪಣದೊಳಗಣ ಪ್ರತಿಬಿಂಬದಂತಿಪ್ಪರು
ಕೂಡಲಸಂಗಮದೇವ, ನಿಮ್ಮ ಶರಣರು!

೪೧೧.
ಶಿವಲೋಕಕ್ಕೆ ಸರಿ ಬೇರೆ ಲೋಕವಿಲ್ಲ!
ಶಿವಮಂತ್ರಕ್ಕೆ ಸರಿ ಬೇರೆ ಮಂತ್ರವಿಲ್ಲ!
ಜಗಕ್ಕೆ ಇಕ್ಕಿದೆ ಮುಂಡಿಗೆಯ!
ಎತ್ತಿಕೊಳ್ಳಿ, ಕೂಡಲಸಂಗಯ್ಯನೊಬ್ಬನೇ ದೈವವೆಂದು!

೪೧೨.
ವೇದ ನಡನಡುಗಿತ್ತು.
ಶಾಸ್ತ್ರವಗಲಿ ಕೆಲಕ್ಕೆ ಸಾರಿದ್ದುದಯ್ಯ,
ತರ್ಕ ತರ್ಕಿಸಲರಿಯದೆ ಮೂಗುವಟ್ಟಿದ್ದಿತಯ್ಯ,
ಆಗಮ ಹೊರತೊಲಗಿ ಆಗಲಿದ್ದಿತಯ್ಯ,
ನಮ್ಮ ಕೂಡಲಸಂಗಯ್ಯನು
ಚೆನ್ನಯ್ಯನ ಮನೆಯಲುಂಡ ಕಾರಣ!

೪೧೩.
ಆರು ಮುನಿದು ನಮ್ಮನೇನ ಮಾಡುವರು ?
ಊರು ಮುನಿದು ನಮ್ಮನೆಂತು ಮಾಡುವರು ?
ನಮ್ಮ ಕುನ್ನಿಗೆ ಕೂಸ ಕೊಡಬೇಡ!
ನಮ್ಮ ಸೊಣಗಂಗೆ ತಣಿಗೆಯಲ್ಲಿಕ್ಕಬೇಡ!
ಆನೆಯ ಮೇಲೆ ಹೋಹನ ಶ್ವಾನ ಕಚ್ಚಬಲ್ಲುದೆ ?
ನಮಗೆ ನಮ್ಮ ಕೂಡಲಸಂಗನುಳ್ಳನ್ನಕ ?

೪೧೪.
ನ್ಯಾಯನಿಷ್ಠುರ!
ದಾಕ್ಷಿಣ್ಯಪರ ನಾನಲ್ಲ.
ಲೋಕವಿರೋಧಿ!
ಶರಣನಾರಿಗಂಜುವನಲ್ಲ,
ಕೂಡಲಸಂಗಮದೇವರ ರಾಜತೇಜದಲ್ಲಿಪ್ಪೆನಾಗಿ!

೪೧೫.
ಊರ ಮುಂದೆ
ಹಾಲ ಹಳ್ಳ ಹರಿಯುತ್ತಿರಲು ?
ಓರೆಯಾವಿನ ಬೆನ್ನ ಹರಿಯಲದೇಕಯ್ಯ ?
ಲಜ್ಜೆಗೆಡಲೇಕೆ ? ನಾಣುಗೆಡಲೇಕೆ ?
ಕೂಡಲಸಂಗಮದೇವಯ್ಯನುಳ್ಳನ್ನಕ
ಬಿಜ್ಜಳನ ಭಂಡಾರವೆನಗೇಕಯ್ಯ ?

೪೧೬.
ಕಂಡುದಕ್ಕೆಳೆಸೆನೆನ್ನ ಮನದಲ್ಲಿ;
ನೋಡಿ ಸೋಲೆನೆನ್ನ ಕಂಗಳಲ್ಲಿ;
ಆಡಿ ಹುಸಿಯನೆನ್ನ ಜಿಹ್ವೆಯಲ್ಲಿ;
ಕೂಡಲಸಂಗಮದೇವ,
ನಿಮ್ಮ ಶರಣನ ಪರಿ ಇಂತುಟಯ್ಯ.

೪೧೭.
ಆಪ್ಯಾಯನಕ್ಕೆ ನೀಡುವೆ:
ಲಾಂಛನಕ್ಕೆ ಶರಣೆಂಬೆ.
ಲಾಂಛನಕ್ಕೆ ತಕ್ಕ ಆಚಾರವಿಲ್ಲದಿದ್ದರೆ
ನೀ ಸಾಕ್ಷಿಯಾಗಿ ಛೀಯೆಂಬೆನು.

೪೧೮.
ದಾಸನಂತೆ ತವನಿಧಿಯ ಬೇಡುವನಲ್ಲ,
ಚೋಳನಂತೆ ಹೊನ್ನ ಮಳೆಯ ಕರಸೆಂಬುವನಲ್ಲ.
ಅಂಜದಿರು, ಅಂಜದಿರು!
ಅವರಂದದವ ನಾನಲ್ಲ!
ಎನ್ನ ತಂದೆ ಕೂಡಲಸಂಗಮದೇವ,
ಸದ್ಭಕ್ತಿಯನೆ ಕರಣಿಸೆನಗೆ.

೪೧೯.
ಲಿಂಗದಲ್ಲಿ ಸಮ್ಯಕ್ಕರು,
ಲಿಂಗದಲ್ಲಿ ಸದರ್ಥರು,
ಲಿಂಗದ ಸೊಮ್ಮು-ಸಂಬಂಧವರಿತ
ಸ್ವಾಮಿಭೃತ್ಯರೆಲ್ಲರು ನಿಮ್ಮ ಬೇಡೆನಂಜದಿರಿ.
ಎನಗೆ ಮರ್ತ್ಯಲೋಕದ ಮಹಾಗಣಂಗಳುಂಟು.
ಇದು ಕಾರಣ, ಕೂಡಲಸಂಗಮದೇವರ ಲೋಕವ
ಹಂಚಿಕೊಳ್ಳಿ ನಿಮನಿಮಗೆ.

೪೨೦.
ಕಲಿಯ ಕಯ್ಯ ಕೈದುವನಂತಿರಬೇಕಯ್ಯ
ಎಲುದೋರ ಸರಸವಾಡಿದರೆ ಸೈರಿಸಬೇಕಯ್ಯ,
ರಣದಲ್ಲಿ ತಲೆ ಹರಿದು ನೆಲಕ್ಕೆ ಬಿದ್ದು ಬೊಬ್ಬಿಡಲು
ಅದಕ್ಕೆ ಒಲಿವ ಕೂಡಲಸಂಗಮದೇವ.

೪೨೧.
ಸೂಳೆಗೆ ಮೆಚ್ಚಿ
ಸೂಳೆಯ ಬಂಟರೆಂಜಲ ತಿಂಬುದೀ ಲೋಕವೆಲ್ಲ!
ಅಡಗ ವೆಚ್ಚಿ
ಸೊಣಗನೆಂಜಲ ತಿಂಬುದೀ ಲೋಕವೆಲ್ಲ!
ಲಿಂಗವ ಮೆಚ್ಚಿ
ಜಂಗಮಪ್ರಸಾದವ ಕೊಂಬರ ನೋಡಿ ನಗುವವರ
ಕುಂಭೀಪಾಕ ನಾಯಕನರಕದಲಿಕ್ಕುವ
ಕೂಡಲಸಂಗಮದೇವ.

೪೨೨.
ಹೊಲೆಯುಂಟೆ ಲಿಂಗವಿದ್ದೆಡೆಯಲ್ಲಿ ?
ಕುಲವುಂಟೇ ಜಂಗಮವಿದ್ದೆಡೆಯಲ್ಲಿ ?
ಎಂಜಲುಂಟೇ ಪ್ರಸಾದವಿದ್ದೆಡೆಯಲ್ಲಿ ?
ಅಪವಿತ್ರದ ನುಡಿಯ ನುಡಿವ ಸೂತಕವೆ ಪಾತಕ.
ನಿಷ್ಕಳಂಕ, ನಿಜೈಕ್ಯ, ತ್ರಿವಿಧನಿರ್ಣಯ
ಕೂಡಲಸಂಗಮದೇವ, ನಿಮ್ಮ ಶರಣರಿಗಲ್ಲದಿಲ್ಲ.

೪೨೩.
ಹುತ್ತದ ಮೇಲಣ ರಜ್ಜು ಮುಟ್ಟಿದರೆ
ಸಾವರು ಶಂಕಿತರಾದವರು!
ಸರ್ಪದಷ್ಟವಾದರೆಯೂ
ಸಾಯರು ನಿಶ್ಶಂಕಿತರಾದವರು!
ಕೂಡಲಸಂಗಮದೇವಯ್ಯ,
ಶಂಕಿತಂಗೆ ಪ್ರಸಾದ ಕಾಳಕೂಟವಿಷವು!

೪೨೪.
ನಂಬಿದರೆ ಪ್ರಸಾದ
ನಂಬದಿದ್ದರೆ ವಿಷವು!
ತುಡುಕಬಾರದು ನೋಡಾ ಲಿಂಗನ ಪ್ರಸಾದ!
ಸಂಗನ ಪ್ರಸಾದ!
ಕೂಡಲಸಂಗನ ಪ್ರಸಾದ ಸಿಂಗಿ-ಕಾಳಕೂಟ ವಿಷವು.

೪೨೫.
ಪಂಡಿತನಾಗಲಿ ಮೂರ್ಖನಾಗಲಿ
ಸಂಚಿತಕರ್ಮ ಉಂಡಲ್ಲದೆ ಬಿಡದು.
ಪ್ರಾರಬ್ಧಕರ್ಮ ಭೋಗಿಸಿದಲ್ಲದೆ ಹೋಗದು-
ಎಂದು ಶ್ರುತಿ ಸಾರುತ್ತೈದಾವೆ-
ನೋಡಾ, ತಾನಾವ ಲೋಕದೊಳಗಿದ್ದರೆಯು ಬಿಡದು.
ಕರ್ಮಫಲಗೂಡಿ ಕೂಡಲಸಂಗಮದೇವಂಗೆ
ಆತ್ಮನೈವೇದ್ಯವ ಮಾಡಿದವನೇ ಧನ್ಯನು!

೪೨೬.
ಒಲ್ಲೆನೆಂಬುದು ವೈರಾಗ್ಯ,
ಒಲಿವೆನೆಂಬುದು ಕಾಯಗುಣ.
ಆವ ಪದಾರ್ಥವಾದರೇನು
ತಾನಿದ್ದೆಡೆಗೆ ಬಂದುದು ಲಿಂಗಾರ್ಪಿತವ ಮಾಡಿ
ಭೋಗಿಸುವುದೇ ಆಚಾರ!
ಕೂಡಲಸಂಗಮದೇವನ
ಒಲಿಸ ಬಂದ ಪ್ರಸಾದಕಾಯವ ಕೆಡಿಸಲಾಗದು.

೪೨೭.
ಒಪ್ಪವ ನುಡಿವಿರಯ್ಯ ತುಪ್ಪವ ತೊಡೆದಂತೆ!
ಶರಣ ತನ್ನ ಮೆರೆವನೇ ಬಿನ್ನಾಣಿಯಂತೆ ?
ಕೂಡಲಸಂಗನ ಪ್ರಸಾದದಿಂದ ಬದುಕುವನಲ್ಲದೆ
ತನ್ನ ಮೆರೆವನೇ ?

೪೨೮.
ದಾಸೋಹವೆಂಬ ಸೋಹೆಗೊಂಡು ಹೋಗಿ
ಗುರುವ ಕಂಡೆ, ಲಿಂಗವ ಕಂಡೆ,
ಜಂಗಮವ ಕಂಡೆ, ಪ್ರಸಾದವ ಕಂಡೆ
ಇಂತೀ ಚತುರ್ವಿಧ ಸಂಪನ್ನನಾದೆ ಕಾಣಾ
ಕೂಡಲಸಂಗಮದೇವ.

೪೨೯.
ಕಿವಿಯ ಸೂತಕ ಹೋಯಿತ್ತು
ಸದ್ಗುರುವಿನ ವಚನದಿಂದ!
ಕಂಗಳ ಸೂತಕ ಹೋಯಿತ್ತು
ಸದ್ಭಕ್ತರ ಕಂಡೆನಾಗಿ!
ಕಾಯದ ಸೂತಕ ಹೋಯಿತ್ತು
ನಿಮ್ಮ ಚರಣವ ಮುಟ್ಟಿದೆನಾಗಿ!
ಬಾಯ ಸೂತಕ ಹೋಯಿತ್ತು
ನಿಮ್ಮ ಒಕ್ಕುದ ಕೊಂಡೆನಾಗಿ!
ನಾನಾ ಸೂತಕ ಹೋಯಿತ್ತು
ನಿಮ್ಮ ಶರಣರನುಭಾವಿಯಾಗಿ!
ಕೂಡಲಸಂಗಮದೇವ ಕೇಳಯ್ಯ
ಎನ್ನ ಮನದ ಸೂತಕ ಹೋಯಿತ್ತು
ನೀವಲ್ಲದಿಲ್ಲೆಂದರಿದೆನಾಗಿ!

೪೩೦.
ಮೋನದಲುಂಬುದು ಆಚಾರವಲ್ಲ,
ಲಿಂಗಾರ್ಪಿತವ ಮಾಡಿದ ಬಳಿಕ
ತುತ್ತಿಗೊಮ್ಮೆ ಶಿವಶರಣೆನ್ನುತ್ತಿರಬೇಕು.
ಕರಣವೃತ್ತಿಗಳಡಗುವವು,
ಕೂಡಲಸಂಗನ ನೆನೆವುತ್ತ ಉಂಡರೆ.

೪೩೧.
ಶಿವಾಚಾರವೆಂಬುದೊಂದು ಬಾಳ ಬಾಯಿಧಾರೆ
ಲಿಂಗ ಮೆಚ್ಚಬೇಕು; ಜಂಗಮ ಮೆಚ್ಚಬೇಕು
ಪ್ರಸಾದ ಮೆಚ್ಚಿ ತನ್ನಲ್ಲಿ ಸ್ವಾಯತವಾಗಿರಬೇಕು.
ಬಿಚ್ಚಿ ಬೇರಾದರೆ ಮೆಚ್ಚ ನಮ್ಮ ಕೂಡಲಸಂಗಮದೇವ.

೪೩೨.
ಆವಾವ ಭಾವದಲ್ಲಿ ಶಿವನ ನಂಬಿದ ಶರಣರು
ಎಂತಿದ್ದರೇನಯ್ಯ ?
ಆವಾವ ಭಾವದಲ್ಲಿ ಶಿವನ ನಂಬಿದ ಮಹಿಮರು
ಎಂತಿದ್ದರೇನಯ್ಯ ?
ಸುಚರಿತ್ರರೆಂತಿದ್ದರೇನಯ್ಯ ?
ಅವಲೋಹವ ಕಳೆವ
ಪರುಷವೆಂತಿದ್ದರೇನಯ್ಯ ?
ಕೂಡಲಸಂಗನ ಶರಣರು ರಸದ ವಾರಿಧಿಗಳು
ಎಂತಿದ್ದರೇನಯ್ಯ ?

೪೩೩.
ನಡೆ ಚೆನ್ನ, ನುಡಿ ಚೆನ್ನ, ಎಲ್ಲಿ ನೋಡಿದರಲ್ಲಿ ಚೆನ್ನ!
ಪ್ರಮಥರೊಳಗೆ ಚೆನ್ನ, ಪುರಾತರೊಳಗೆ ಚೆನ್ನ!
ಪ್ರಸಾದಿಗಳೊಳಗೆ ಚೆನ್ನ!
ಸವಿದು ನೋಡಿ ಅಂಬಲಿ ರುಚಿಯಾಯಿತ್ತೆಂದು
ಕೂಡಲಸಂಗಮದೇವರಿಗೆ ಬೇಕಾಯಿತ್ತೆಂದು
ಕೈದೆಗೆದ ನಮ್ಮ ಚೆನ್ನ!

೪೩೪.
ಲಿಂಗವಿಕಾರಿಗೆ ಅಂಗವಿಕಾರವೆಂಬುದಿಲ್ಲ.
ಜಂಗಮವಿಕಾರಿಗೆ ಧನವಿಕಾರವೆಂಬುದಿಲ್ಲ.
ಪ್ರಸಾದವಿಕಾರಿಗೆ ಮನವಿಕಾರವೆಂಬುದಿಲ್ಲ.
ಇಂತೀ ತ್ರಿವಿಧಗುಣವನರಿದಾತನು
ಅಚ್ಚಲಿಂಗೈಕ್ಯನು ಕೂಡಲಸಂಗಮದೇವ.

೪೩೫.
ಪ್ರಾಣಲಿಂಗಪ್ರತಿಗ್ರಾಹಕನಾದ ಬಳಿಕ
ಲಿಂಗವಿರಹಿತವಾಗಿ ನಡೆವ ಪರಿಯೆಂತೊ ?
ಲಿಂಗವಿರಹಿತವಾಗಿ ನುಡಿವ ಪರಿಯೆಂತೊ ?
ಪಂಚೇಂದ್ರಿಯಸುಖವನು
ಲಿಂಗವಿರಹಿತವಾಗಿ ಭುಂಜಿಸಲಾಗದು!
"ಲಿಂಗವಿರಹಿತವಾಗಿ ಉಗುಳ ನುಂಗಲಾಗದು!"
ಇಂತೆಂದುದು ಕೂಡಲಸಂಗನ ವಚನ.

೪೩೬.
ಹತ್ತು ಸಾವಿರ ಗೀತವ ಹಾಡಿ ಅರ್ಥವಿಟ್ಟಲ್ಲಿ ಫಲವೇನು
ಮುಟ್ಟುವ ತೆರನನರಿಯದನ್ನಕ ?
ಕಟ್ಟಿದರೇನು ಬಿಟ್ಟರೇನು
ಮನವು ಲಿಂಗದಲ್ಲಿ ಮುಟ್ಟದನ್ನಕ ?
ಮಾತಿನಲೆ ಒಲಿಸಿ ಮಹತ್ತಪ್ಪ ಲಿಂಗವ ಕಂಡೆನೆಂಬ
ಪಾತಕರ ಮೆಚ್ಚ ನಮ್ಮ ಕೂಡಲಸಂಗಮದೇವ

೪೩೭.
ಶ್ವಾನಜ್ಞಾನ, ಗಜಜ್ಞಾನ, ಕುಕ್ಕುಟಜ್ಞಾನವೆಂಬ
ಜ್ಞಾನತ್ರಯಂಗಳೇಕಾದವು ?!
ಕೂಡಲಸಂಗಮದೇವ,
ನಿಮ್ಮನರಿಯದ ಜ್ಞಾನವೆಲ್ಲ ಅಜ್ಞಾನ!

೪೩೮.
ಕಬ್ಬುನ ಪರುಷವೇದಿಯಾದರೇನು ?!
ಕಬ್ಬುನ ಹೊನ್ನಾಗದೊಡೆ ಪರುಷವದೇಕೋ ?
ಮನೆಯೊಳಗೆ ಕತ್ತಲೆ ಹರಿಯದೊಡೆ
ಆ ಜ್ಯೋತಿಯದೇಕೋ ?
ಕೂಡಲಸಂಗಮದೇವರ ಮನಮುಟ್ಟಿ ಪೂಜಿಸಿ
ಕರ್ಮ ಹರಿಯದೊಡೆ ಆ ಪೂಜೆಯದೇಕೋ ?

೪೩೯.
ಅಹಂಕಾರ ಮನವನಿಂಬುಗೊಂಡಲ್ಲಿ
ಲಿಂಗ ತಾನೆಲ್ಲಿಪ್ಪುದೋ ?
ಅಹಂಕಾರಕ್ಕೆ ಎಡೆಗುಡದೆ
ಲಿಂಗತನುವಾಗಿರಬೇಕು!
ಅಹಂಕಾರರಹಿತನಾದಲ್ಲಿ
ಸನ್ನಿಹಿತ ಕಾಣಾ ಕೂಡಲಸಂಗಮದೇವ.

೪೪೦.
ನುಡಿದರೆ ಮುತ್ತಿನ ಹಾರದಂತಿರಬೇಕು!
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು!
ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು!
ನುಡಿದರೆ ಲಿಂಗ ಮೆಚ್ಚಿ ಅಹುದೆನಬೇಕು ?
ನುಡಿಯೊಳಗಾಗಿ ನಡೆಯದಿದ್ದರೆ
ಕೂಡಲಸಂಗಮದೇವನೆಂತೊಲಿವನಯ್ಯ ?

೪೪೧.
ಅರಿದರಿದು ಸಮಗಾಣಿಸಬಾರದು ?
ತ್ರಾಸಿನ ಕಟ್ಟಳೆಯಂತಿನಿತು ವೆಗ್ಗಳವಾದರೆ
ಈಶ್ವರನು ಒಡೆಯಿಕ್ಕದೆ ಮಾಣುವನೆ ?
ಪಾತ್ರಾಪಾತ್ರವೆಂದು ಕಂಡರೆ
ಶಿವನೆಂತು ಮೆಚ್ಚುವನೊ ?
ಜೀವಜೀವಾತ್ಮವ ಸರಿಯೆಂದು ಕಂಡರೆ
ಸಮವೇದಿಸದಿಪ್ಪನೇ ಶಿವನು ?
ತನ್ನ ಮನದಲ್ಲಿ
"ಯತ್ರ ಜೀವಸ್ತತ್ರ ಶಿವ"ನೆಂದು
ಸರ್ವಜೀವದಯಾಪಾರಿಯಾದರೆ
ಕೂಡಲಸಂಗಮದೇವನು
ಕೈಲಾಸದಿಂದ ಬಂದು ಎತ್ತಿಕೊಳ್ಳದಿಪ್ಪನೆ ?

೪೪೨.
ಮುತ್ತು ಉದಕದಲಾಗದು,
ಉದಕ ಮುತ್ತಿನೊಲಾಗದು,
ತತ್ತ್ವಘಟಿಸಿದ ಸುಮುಹೂರ್ತದಲಲ್ಲದೆ!
ಚಿತ್ತವೇದ್ಯವಾಗದು ಸದ್ಗುರುವಿನ ಕರುಣಕಲ್ಲದೆ,
ಕರ್ತೃ ಕೂಡಲಸಂಗಮದೇವರ
ಒಲವಿನ ದಯದ ಚಿತ್ತವಿಡಿದಂಗಲ್ಲದೆ
ಶಿವತತ್ತ್ವ ಸಾಹಿತ್ಯವಾಗದು.

೪೪೩.
ಚಂದ್ರಕಾಂತದ ಶಿಲೆಯಲ್ಲಿ ಜಲವಿಲ್ಲದನ್ನಕ
ಶೈತ್ಯವ ತೋರುವ ಪರಿಯೆಂತೋ ?
ಸೂರ್ಯಕಾಂತದ ಶಿಲೆಯಲ್ಲಿ ಅಗ್ನಿಯಿಲ್ಲದನ್ನಕ
ಉಷ್ಣವ ತೋರುವ ಪರಿಯೆಂತೋ ?
ಶರಣಂಗೆ ಭಕ್ತಿಕಾಯವಿಲ್ಲದನ್ನಕ
ಕೂಡಲಸಂಗನನರಿವ ಪರಿಯೆಂತೋ ?

೪೪೪.
ಮುನ್ನೂರರುವತ್ತು ನಕ್ಷತ್ರಕ್ಕೆ
ಬಾಯ ಬಿಟ್ಟುಕೊಂಡಿಪ್ಪುದೇ ಸಿಂಪು ?
ಅದು ಸ್ವಾತಿಗಲ್ಲದೆ ಬಾಯ್ದೆರೆಯದು ಕೇಳಾ ಕೇಳು ತಂದೆ!
ಎಲ್ಲವಕ್ಕೆ ಬಾಯ ಬಿಟ್ಟರೆ
ತಾನೆಲ್ಲಿಯ ಮುತ್ತಪ್ಪುದು ?
ಪರಮಂಗಲ್ಲದೆ ಹರುಷವಿಲ್ಲೆಂದು
ಕರಣಾದಿ ಗುಣಂಗಳ ಮರೆದರು;
ಇದು ಕಾರಣ ಕೂಡಲಸಂಗನ ಶರಣರು
ಸಪ್ತವ್ಯಸನಿಗಳಲ್ಲಾಗಿ.

೪೪೫.
ಮೈಗೆ ಕಾಹ ಹೇಳುವರಲ್ಲದೆ,
ಮನಕ್ಕೆ ಕಾಹ ಹೇಳುವರೆ ?
ಅಣಕದ ಗಂಡನ ಹೊಸ ಪರಿಯ ನೋಡಾ!
ಕೂಡಲಸಂಗಮದೇವನೆನ್ನ ಮನವ ನಂಬದೆ
ತನ್ನಲ್ಲಿದ್ದ ಲೇಸ ಕಾಹ ಹೇಳಿದನು.

೪೪೬.
ಬೆಳಗಿನೊಳಗಣ ಮಹಾಬೆಳಗು! ಶಿವಶಿವಾ!!
ಪರಮಾಶ್ರಯವೆ ತಾನಾಗಿ,
ಶತಪತ್ರಕಮಳಕರ್ಣಿಕಾಮಧ್ಯದಲ್ಲಿ
ಸ್ವತಸ್ಸಿದ್ಧನಾಗಿಪ್ಪ ನಮ್ಮ ಕೂಡಲಸಂಗಮದೇವ.

೪೪೭.
ತಮತಮಗೆಲ್ಲ ನೊಸಲ ಕಣ್ಣವರು!
ತಮತಮಗೆಲ್ಲ ನಂದಿವಾಹನರು!
ತಮತಮಗೆಲ್ಲ ಖಟ್ವಾಂಗಕಪಾಲ ತ್ರಿಶೂಲಧರರು!
ದೇವರಾರು ಭಕ್ತರಾರು ಹೇಳಿರಯ್ಯ ?
ಕೂಡಲಸಂಗಮದೇವ,
ನಿಮ್ಮ ಶರಣರು ಸ್ವತಂತ್ರರು!
ಎನ್ನ ಬಚ್ಚಬರಿಯ ಬಸವನೆನಿಸಯ್ಯ!

೪೪೮.
ಉಳ್ಳವರು ಶಿವಾಲಯವ ಮಾಡಿಹರು!
ನಾನೇನ ಮಾಡುವೆ ? ಬಡವನಯ್ಯ!
ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಶಿರವೇ ಹೊನ್ನ ಕಳಶವಯ್ಯ!
ಕೂಡಲಸಂಗಮದೇವ ಕೇಳಯ್ಯ,

ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ!

೪೪೯.
ಗುರು ಮುನಿದರೆ ಒಂದು ದಿನ ತಾಳುವೆ,
ಲಿಂಗ ಮುನಿದರೆ ದಿನವರೆ ತಾಳುವೆ.
ಜಂಗಮ ಮುನಿದರೆ
ಕ್ಷಣಮಾತ್ರವ ತಾಳಿದೆನಾದರೆ
ಎನ್ನ ಪ್ರಾಣದ ಹೋಕು ಕೂಡಲಸಂಗಮದೇವ.

೪೫೦.
ರಚ್ಚೆಯ ನೆರವಿಗೆ ನಾಡನುಡಿ ಇಲ್ಲದಿಹುದೆ ?
ಅದರಂತೆನಬಹುದೇ ಸಜ್ಜನ ಸ್ತ್ರೀಯ ?
ಅದರಂತೆನಬಹುದೇ ಭಕ್ತಿರತಿಯ ?
ಕರುಳ ಕಲೆ-ಪ್ರಕಟಿತ ಉಂಟೆ ಕೂಡಲಸಂಗಮದೇವ ?

೪೫೧.
ಭೂತ ಒಲಿದು ಆತ್ಮನ ಸೋಂಕಿದ ಬಳಿಕ
ಭೂತದ ಗುಣವಲ್ಲದೆ, ಆತ್ಮನ ಗುಣವುಂಟೆ ?
ಗುರುಕಾರುಣ್ಯವಾಗಿ,
ಹಸ್ತಮಸ್ತಕಸಂಯೋಗವಾದ ಬಳಿಕ
ಗುರುಲಿಂಗಜಂಗಮವೇ ಗತಿಯಾಗಿದ್ದೆ
ಕೂಡಲಸಂಗಮದೇವ.

೪೫೨.
ಮಾಡುವಾತ ನಾನಲ್ಲಯ್ಯ,
ನೀಡುವಾತ ನಾನಲ್ಲಯ್ಯ,
ಬೇಡುವಾತ ನಾನಲ್ಲಯ್ಯ,
ನಿಮ್ಮ ಕಾರುಣ್ಯವಲ್ಲದೆ, ಎಲೆ ದೇವಾ!
ಮನೆಯ ತೊತ್ತಲಸಿದರೆ ಒಡತಿ ಮಾಡಿಕೊಂಬಂತೆ
ನಿನಗೆ ನೀ ಮಾಡಿಕೋ ಕೂಡಲಸಂಗಮದೇವಾ!

೪೫೩.
ಪರಿಯಾಣವೇ ಭಾಜನವೆಂಬರು
ಪರಿಯಾಣ ಭಾಜನವಲ್ಲ ಲಿಂಗಕ್ಕೆ!
ತನ್ನ ಮನವೇ ಭಾಜನ!
ಪ್ರಾಣವನು ಬೀಸರವೋಗದೆ
ಮೀಸಲಾಗರ್ಪಿಸಬಲ್ಲಡೆ,
ಕೂಡಿಕೊಂಡಿಪ್ಪ ನಮ್ಮ ಕೂಡಲಸಂಗಮದೇವ.

೪೫೪.
ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ.
ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯ.
ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯ.
ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯ.
ಕೂಡಲಸಂಗನ ಶರಣರನುಭಾವದಿಂದ
ಎನ್ನ ಭವದ ಕೇಡು ನೋಡಯ್ಯ.

೪೫೫.
ಆಲಿಕಲ್ಲ ಹರಳಿನಂತೆ,
ಅರಗಿನ ಪುತ್ಥಳಿಯಂತೆ
ತನು ಕರಗಿ ನೆರೆವ ಸುಖವ ನಾನೇನೆಂಬ!
ಕಡೆಗೋಡಿವರಿದವೆನಗಯ್ಯ ನಯನದ ಸುಖಜಲಂಗಳು!
ನಮ್ಮ ಕೂಡಲಸಂಗಮದೇವರ ಮುಟ್ಟಿ
ನೆರೆವ ಸುಖವನಾರಿಗೇನೆಂಬೆ!

೪೫೬.
ನಾಲಗೆ ತಾಗಿದ ರುಚಿಗೆ ಮನವೇ ಸಾಕ್ಷಿ!
ಸಾಲದೇ ಅಯ್ಯ!
ಮಾಲೆಗಾರನ ಕೇಳಿ ನನೆಯರಳುವುದೇ ?
ಆಗಮವನಿದಿರಿಂಗೆ ತೋರುವುದು ಆಚಾರವೇ ಅಯ್ಯ ?
ಕೂಡಲಸಂಗನ ಕೂಡಿದ
ಕೂಟದ ಕರುಳ ಕಲೆಯನು
ಇದಿರಿಂಗೆ ತೋರುವುದು ಆಚಾರವೇ ಅಯ್ಯ ?

೪೫೭.
ಎಲ್ಲ ಗಂಡರ ಪರಿಯಂತಲ್ಲ ನೋಡವ್ವ ನನ್ನ ನಲ್ಲ!
ಸುಳಿಯಲಿಲ್ಲ, ಸುಳಿದು ಸಿಂಗರವ ಮಾಡಲಿಲ್ಲ;
ಕೂಡಲ ಸಂಗಮ ದೇವನು ತನ್ನೊಳಗೆ ಬೈಚಿಟ್ಟನಾಗಿ!

೪೫೮.
ಆಹ್ವಾನಿಸಿ ಕರೆವಲ್ಲಿ ಎಲ್ಲಿದ್ದನೋ
ಈರೇಳು ಭುವನಂಗಳ ಒಳಗೊಂಡಿಪ್ಪ ದಿವ್ಯವಸ್ತು ?
ಮತ್ತೆ, ವಿಸರ್ಜಿಸಿ ಬಿಡುವಾಗ ಎಲ್ಲಿದ್ದನೋ
ಮುಳ್ಳೂರ ತೆರಹಿಲ್ಲದಿಪ್ಪ ಅಖಂಡವಸ್ತು ?
ಬರಿಯ ಮಾತಿನ ಬಳಕೆಯ ತೂತಿನ ಜ್ಞಾನವ ಬಿಟ್ಟು
ನೆಟ್ಟನೆ ತನ್ನ ಕರಸ್ಥಳದೊಳಗಿರುತಿಪ್ಪ
ಇಷ್ಟಲಿಂಗವ ದಿಟ್ಟಿಸಿ ನೋಡಲು
ಅಲ್ಲಿ ತನ್ನ ಮನಕ್ಕೆ ಮನ-ಸಂಧಾನವಾಗಿ ದಿವ್ಯನಿಶ್ಚಯ ಒದಗೆ
ಆ ದಿವ್ಯ ನಿಶ್ಚಯದಿಂದ ಕುಳವಡಗಿ ಅದ್ವೈತವಪ್ಪುದು!
ಇದು ಕಾರಣ, ನಮ್ಮ ಕೂಡಲಸಂಗನ ಶರಣರು
ಆಹ್ವಾನ-ವಿಸರ್ಜನವೆಂಬುಭಯ ಜಡತೆಯ ಬಿಟ್ಟು
ತಮ್ಮ ತಮ್ಮ ಕರಸ್ಥಳದಲ್ಲಿ ನಿಶ್ಚೈಸಿ ಅವರೇ
ಸ್ವಯಲಿಂಗವಾದರು ಕಾಣಿರೋ!

೪೫೯.
ಎನ್ನ ಗಂಡ ಬರಬೇಕೆಂದು
ಎನ್ನ ಅಂತರಂಗವೆಂಬ ಮನೆಯ ತೆರಹುಮಾಡಿ
ಅಷ್ಟದಳಕಮಲವೆಂಬ ಓವರಿಯೊಳಗೆ
ನಿಜನಿವಾಸವೆಂಬ ಹಾಸುಗೆಯ ಹಾಸಿ
ಧ್ಯಾನಮೌನವೆಂಬ ಮೇಲುಕಟ್ಟ ಕಟ್ಟಿ
ಜ್ಞಾನವೆಂಬ ದೀಪವ ಬೆಳಗಿ
ನಿಷ್ಕ್ರೀಗಳೆಂಬುಪಕರಣಂಗಳ ಹರಹಿಕೊಂಡು
ಪಶ್ಚಿಮದ್ವಾರವೆಂಬ ಬಾಗಿಲ ತೆರೆದು
ಕಂಗಳೇ ಪ್ರಾಣವಾಗಿ ಹಾರುತಿರ್ದೆನಯ್ಯ!
"ನಾನು ಬಾರೆನೆಂದು ಉಮ್ಮಳಿಸಿಹ"ನೆಂದು
ತಾನೇ ಬಂದು ಎನ್ನ ಹೃದಯಸಿಂಹಾಸನದ ಮೇಲೆ
ಮೂರ್ತಿಗೊಂಡರೆ
ಎನ್ನ ಮನದ ಬಯಕೆ ಸಯವಾಯಿತ್ತು.
ಹಿಂದೆ ಹನ್ನೆರಡು ವರ್ಷದಿಂದಿದ್ದ ಚಿಂತೆ ನಿಶ್ಚಿಂತೆಯಾಯಿತ್ತು!
ಕೂಡಲಸಂಗಮದೇವ ಕೃಪಾಮೂರ್ತಿಯಾದ ಕಾರಣ,
ಆನು ಬದುಕಿದೆನು.

೪೬೦.
ಕಾಯವೆಂಬ ಘಟಕ್ಕೆ
ಚೈತನ್ಯವೇ ಸಯಿದಾನ,
ಸಮತೆ ಎಂಬ ಜಲ,
ಕರಣಾದಿಗಳೇ ಸ್ರವಣ,
ಜ್ಞಾನವೆಂಬ ಅಗ್ನಿಯನಿಕ್ಕಿ
ಮತಿಯೆಂಬ ಸಟ್ಟುಗದಲ್ಲಿ ಘಟ್ಟಿಸಿ,
ಪಾಕಕ್ಕೆ ತಂದು, ಭಾವದಲ್ಲಿ ಕುಳ್ಳಿರಿಸಿ
ಪರಿಣಾಮದೋಗರವ ನೀಡಿದರೆ
ಕೂಡಲಸಂಗಮದೇವಂಗೆ ಆರೋಗಣೆಯಾಯಿತ್ತು.

೪೬೧.
ಅಡಿಗಡಿಗೆ ಸ್ಥಾನನಿಧಿ!
ಅಡಿಗಡಿಗೆ ದಿವ್ಯಕ್ಷೇತ್ರ!
ಅಡಿಗಡಿಗೆ ನಿಧಿಯು ನಿಧಾನ! ನೋಡಾ!
ಆತನಿರವೇ ಅವಿಮುಕ್ತ ಕ್ಷೇತ್ರ,
ಕೂಡಲಸಂಗನ ಶರಣ ಸ್ವತಂತ್ರನಾಗಿ.

೪೬೨.
ಧನದಲ್ಲಿ ಶುಚಿ, ಪ್ರಾಣದಲ್ಲಿ ನಿರ್ಭಯ
ಇದಾವಂಗಳವಡುವುದಯ್ಯ ?
ನಿಧಾನ ತಪ್ಪಿ ಬಂದರೆ ಒಲ್ಲೆನೆಂಬವರಿಲ್ಲ!
ಪ್ರಮಾದವಶ ಬಂದರೆ ಹುಸಿಯೆನೆಂಬವರಿಲ್ಲ!
ನಿರಾಶೆ, ನಿರ್ಭಯ, ಕೂಡಲಸಂಗಮದೇವ,
ನೀನೊಲಿದ ಶರಣಂಗಲ್ಲದಿಲ್ಲ!

೪೬೩.
ಹಲಬರ ನುಂಗಿದ ಹಾವಿಂಗೆ ತಲೆ-ಬಾಲವಿಲ್ಲ ನೋಡಾ!
ಕೊಲುವುದು ತ್ರೈಜಗವೆಲ್ಲವ!
ತನಗೆ ಬೇರೆ ಪ್ರಳಯವಿಲ್ಲ!!
ನಾಕಡಿಯನೆಯ್ದದು,
ಲೋಕದ ಕಡೆಯನೇ ಕಾಬುದು!
ಸೂಕ್ಷ್ಮಪಥದಲ್ಲಿ ನಡೆವುದು,
ತನಗೆ ಬೇರೊಡಲಿಲ್ಲ!
ಅಹಂಕಾರವೆಂಬ ಗಾರುಡಿಗನ ನುಂಗಿತ್ತು
ಕೂಡಲಸಂಗನ ಶರಣರಲ್ಲದುಳಿದವರ.

೪೬೪.
ಉಂಬ ಬಟ್ಟಲು ಬೇರೆ ಕಂಚಲ್ಲ!
ನೋಡುವ ದರ್ಪಣ ಬೇರೆ ಕಂಚಲ್ಲ!
ಭಾಂಡ, ಭಾಜನ ಒಂದೆ!
ಬೆಳಗೆ ಕನ್ನಡಿಯೆನಿಸಿತ್ತಯ್ಯ!
ಅರಿದರೆ ಶರಣನು, ಮರೆದರೆ ಮಾನವನು!
ಮರೆಯದೆ ಪೂಜಿಸು ಕೂಡಲಸಂಗನ.

೪೬೫.
ಕೆರೆ ಹಳ್ಳ ಭಾವಿಗಳು ಮೈದೆಗೆದರೆ
ಗುಳ್ಳೆ, ಗೊರಚೆ, ಚಿಪ್ಪು ಕಾಣಬಹವು!
ವಾರಿಧಿ ಮೈದೆಗೆದರೆ
ರತ್ನ ಮುತ್ತುಗಳು ಕಾಣಬಹವು!
ಕೂಡಲಸಂಗನ ಶರಣರು
ಮನದೆರೆದು ಮಾತನಾಡಿದರೆ
ಲಿಂಗವೇ ಕಾಣಬಹುದು!

೪೬೬.
ನಾರುಳಿಯ ಹಣಿದವನಾರಾದರೆಯು ಆಡರೆ
ನಾರುಳಿದರೆ ಮುಂದೆ ಅಂಕುರಿತ ಫಲ ತಪ್ಪದು!
ಮಾಡುವನ್ನಕ ಫಲದಾಯಕ.
ಮಾಟವರತು ನಿಮ್ಮಲ್ಲಿ ಸಯವಾದರೆ
ಆತನೇ ಅಚ್ಚ ಶರಣನಯ್ಯ, ಕೂಡಲಸಂಗಮದೇವ.

೪೬೭.
ಐದು ಮಾನವ ಕುಟ್ಟಿ
ಒಂದು ಮಾನವ ಮಾಡು ಕಂಡೆಯಾ ಮದುವಳಿಗೆ!
ಇದು ನಮ್ಮ ಬಾಳುವೆ ಮದುವಳಿಗೆ!
ಇದು ನಮ್ಮ ವಿಸ್ತಾರ ಮದುವಳಿಗೆ!
ಮದವಳಿದು ನಿಜವುಳಿದ ಬಳಿಕ
ಅದು ಸತ್ಯ ಕಾಣಾ ಕೂಡಲಸಂಗಮದೇವಾ.

೪೬೮.
ಕುಲಮದವಳಿಯದನ್ನಕ ಶರಣನಾಗಲೇಕೆ ?
ವಿಧಿವಶ ಬಿಡದನ್ನಕ ಭಕ್ತನಾಗಲೇಕೆ ?
ಹಮ್ಮಿನ ಸೊಮ್ಮಿನ ಸಂಬಂಧ ಬಿಟ್ಟು
ಕಿಂಕರರ ಕಿಂಕರನಾಗಿರಬೇಕು.
ಹೆಪ್ಪನೆರೆದ ಹಾಲು ಕೆಟ್ಟು
ತುಪ್ಪವಪ್ಪಂತೆಯಿಪ್ಪರು,
ಕೂಡಲಸಂಗಮದೇವ, ನಿಮ್ಮ ಶರಣರು.

೪೬೯.
ಮಣ್ಣ ಮಡಕೆ ಮಣ್ಣಾಗದು ಕ್ರೀಯಳಿದು,
ಬೆಣ್ಣೆ ಕರಗಿ ತುಪ್ಪವಾಗಿ
ಮರಳಿ ಬೆಣ್ಣೆಯಾಗದು ಕ್ರೀಯಳಿದು,
ಹೊನ್ನು ಕಬ್ಬುನವಾಗದು ಕ್ರೀಯಳಿದು,
ಮುತ್ತು ನೀರಲ್ಲಿ ಹುಟ್ಟಿ ಮತ್ತೆ ನೀರಾಗದು ಕ್ರೀಯಳಿದು.
ಕೂಡಲಸಂಗನ ಶರಣನಾಗಿ
ಮರಳಿ ಮಾನವನಾಗ ಕ್ರೀಯಳಿದು.

೪೭೦.
ಪೂರ್ವಜನ್ಮ ನಿವೃತ್ತಿಯಾಗಿ
ಗುರುಕರುಣವಿಡಿದಂಗೆ ಬಂಧನವೆಲ್ಲಿಯದೋ,
ಭವಬಂಧನವೆಲ್ಲಿಯದೋ
ಸಂಕಲ್ಪ-ವಿಕಲ್ಪವೆಂಬ ಸಂದೇಹವ ಕಳೆದುಳಿದವಂಗೆ
ಕೂಡಲಸಂಗಮದೇವರ
ತ್ರಿಸಂಧ್ಯಾಕಾಲದಲ್ಲಿ ಮಾಣದೇ ನೆನೆವಂಗೆ ?

೪೭೧.
ಲಗ್ನವೆಲ್ಲಿಯದೋ
ವಿಘ್ನವೆಲ್ಲಿಯದೋ ಸಂಗಯ್ಯ ?
ದೋಷವೆಲ್ಲಿಯದೋ
ದುರಿತವೆಲ್ಲಿಯದೋ ಸಂಗಯ್ಯ ?
ನಿಮ್ಮ ಮಾಣದೆ ನೆನೆವಂಗೆ
ಭವಕರ್ಮವೆಲ್ಲಿಯದೋ ಕೂಡಲಸಂಗಯ್ಯ!

೪೭೨.
ಶರಣ ನಿದ್ರೆಗೈದರೆ ಜಪ ಕಾಣಿರೋ!
ಶರಣನೆದ್ದು ಕುಳಿತರೆ ಶಿವರಾತ್ರಿ ಕಾಣಿರೋ!
ಶರಣ ನಡೆದುದೇ ಪಾವನ ಕಾಣಿರೋ!
ಶರಣ ನುಡಿದುದೇ ಶಿವತತ್ವಕಾಣಿರೋ
ಕೂಡಲಸಂಗನ ಶರಣನ ಕಾಯವೇ
ಕೈಲಾಸ ಕಾಣಿರೋ!

೪೭೩.
ಸಮುದ್ರ ಘನವೆಂಬೆನೆ ?
ಧರೆಯ ಮೇಲಡಗಿತ್ತು!
ಧರೆ ಘನವೆಂಬೆನೆ ?
ನಾಗೇಂದ್ರನ ಫಣಾಮಣಿಯ ಮೇಲಡಗಿತ್ತು!
ನಾಗೇಂದ್ರ ಘನವೆಂಬೆನೆ ?
ಪಾರ್ವತಿಯ ಕಿರುಗುಣಿಕೆಯ ಮುದ್ರಿಕೆಯಾಯಿತ್ತು!
ಅಂಥ ಪಾರ್ವತಿ ಘನವೆಂಬೆನೆ ?
ಪರಮೇಶ್ವರನ ಅರ್ಧಾಂಗಿಯಾದಳು!
ಅಂಥ ಪರಮೇಶ್ವರ ಘನವೆಂಬೆನೆ ?
ನಮ್ಮ ಕೂಡಲಸಂಗನ ಶರಣರ
ಮನದ ಕೊನೆಯ ಮೊನೆಯ ಮೇಲಡಗಿದನು!

೪೭೪.
ನೆಲನೊಂದೇ ಹೊಲೆಗೇರಿ, ಶಿವಾಲಯಕ್ಕೆ!
ಜಲವೊಂದೇ ಶೌಚಾಚಮನಕ್ಕೆ!
ಕುಲವೊಂದೇ ತನ್ನ ತಾನರಿದವಂಗೆ!
ಫಲವೊಂದೇ ಷಡುದರ್ಶನ ಮುಕ್ತಿಗೆ!
ನಿಲವೊಂದೇ, ಕೂಡಲಸಂಗಮದೇವ,
ನಿಮ್ಮನರಿದವಂಗೆ.

೪೭೫.
ಅಯ್ಯಾ, ಸಜ್ಜನ ಸದ್ಭಕ್ತರ ಸಂಗದಿಂದ
ಮಹಾನುಭಾವರ ಕಾಣಬಹುದು!
ಮಹಾನುಭಾವರ ಸಂಗದಿಂದ
ಶ್ರಿಗುರುವನರಿಯಬಹುದು!
ಲಿಂಗವನರಿಯಬಹುದು ಜಂಗಮವನರಿಯಬಹುದು!
ಪ್ರಸಾದವನರಿಯಬಹುದು! ತನ್ನ ತಾನರಿಯಬಹುದು!!
ಇದು ಕಾರಣ ಸದ್ಭಕ್ತರ ಸಂಗವ ಕರುಣಿಸು
ಕೂಡಲಸಂಗಮದೇವಾ ನಿಮ್ಮ ಧರ್ಮ!

೪೭೬.
ಕುಂಡಲಿಗನೊಂದು ಕೀಡೆಯ ತಂದು
ತನ್ನಂತೆ ಮಾಡಿತಲ್ಲ!
ಎಲೆ ಮಾನವಾ, ಕೇಳಿ ನಂಬಯ್ಯ!
ನೋಡಿ ನಂಬಯ್ಯ, ಎಲೆ ಮಾನವ!
"ತ್ವಚ್ಚಿಂತಯಾ ಮಹಾದೇವ!
ತ್ವಮೇವಾಸ್ಮಿ ನ ಸಂಶಯಃ!
ಭ್ರಮದ್ ಭ್ರಮರಚಿಂತಾಯಾಂ
ಕೀಟೋಪಿ ಭ್ರಮರಾಯತೇ"!!
ಕೂಡಲಸಂಗನ ಶರಣರ ಅನುಭಾವ
ಇದರಿಂದ ಕಿರುಕುಳವೆ ಎಲೆ ಮಾನವಾ ?!

೪೭೭.
ಮರಮರನ ಮಥನದಿಂದಗ್ನಿ ಹುಟ್ಟಿ,
ಆ ಮರನೆಲ್ಲವ ಸುಡದಿಪ್ಪುದೆ ?
ಮಹಾನುಭಾವರ ಸಂಗದಿಂದ ಜ್ಞಾನಾಗ್ನಿ ಹುಟ್ಟಿ
ಎನ್ನ ತನುಗುಣವೆಲ್ಲವ ಸುಡದಿಪ್ಪುದೆ ?
ಇದು ಕಾರಣ,
ಮಹಾನುಭಾವರ ತೋರಿಸು
ಕೂಡಲಸಂಗಮದೇವ.

೪೭೮.
ಅರಿದುದ ಅರಿಯಲೊಲ್ಲದು! ಅದೆಂತಯ್ಯ ?
ಮರೆದುದ ಮರೆಯಲೊಲ್ಲದು! ಅದೆಂತಯ್ಯ
ಅರಿದು ಮರೆದ ಮನವ
ಕೂಡಲಸಂಗಯ್ಯ ತಾನೇ ಬಲ್ಲ.

೪೭೯.
ಮೀಸಲು ಬೀಸರವೋದ ಪರಿಯ ನೋಡಾ!
ಕಾಲು ತಾಗಿದ ಅಗ್ಛವಣಿ,
ಕೈ ಮುಟ್ಟಿದರ್ಪಿತ
ಮನ ಮುಟ್ಟಿದಾರೋಗಣೆಯನೆಂತು ಘನವೆಂಬೆನಯ್ಯ !?
ಬಂದ ಪರಿಯಲಿ ಪರಿಣಾಮಿಸಿ
ನಿಂದ ಪರಿಯಲ್ಲಿ ನಿಜಮಾಡಿ
ಆನೆಂದ ಪರಿಯಲ್ಲಿ ಕೈಕೋ
ಕೂಡಲಸಂಗಮದೇವ!

೪೮೦.
ಹಾಲೆಂಜಲು ವತ್ಸನ!
ಉದಕವೆಂಜಲು ಮತ್ಸ್ಯದ!
ಪುಷ್ಪವೆಂಜಲು ತುಂಬಿಯ!
ಎಂತು ಪೂಜಿಸುವೆನಯ್ಯ!
ಶಿವಶಿವಾ! ಎಂತು ಪೂಜಿಸುವೆ ?
ಈ ಎಂಜಲವನತಿಗಳೆವರೆ ಎನ್ನಳವಲ್ಲ.
ಬಂದುದ ಕೈಕೋ ಕೂಡಲಸಂಗಮದೇವ.

೪೮೧.
ದಿಟ ಮಾಡಿ ಪೂಜಿಸಿದರೆ ಸಟೆ ಮಾಡಿ ಕಳೆವೆ.
ಸಟೆ ಮಾಡಿ ಪೂಜಿಸಿದರೆ ದಿಟ ಮಾಡಿ ಕಳೆವೆ.
ಏನೆಂಬೆನೆಂತೆಂಬೆ!
ಸುಖಕ್ಕೆ ತುಂಬಿದ ದೀವಿಗೆ ಮನೆಯೆಲ್ಲವ ಸುಟ್ಟಂತೆ
ಆನು ಮಾಡಿದ ಭಕ್ತಿ
ಎನಗಿಂತಾಯಿತ್ತು ಕೂಡಲಸಂಗಮದೇವ.

೪೮೨.
ಎಂಬತ್ತೆಂಟು ಪವಾಡವ ಮೆರೆದು
ಹಗರಣದ ಚೋಹದಂತಾಯಿತ್ತೆನ್ನ ಭಕ್ತಿ;
ತನುವಿನೊಳಗೆ ಮನ ಸಿಲುಕದೆ,
ಮನದೊಳಗೆ ತನು ಸಿಲುಕದೆ
ತನು ಅಲ್ಲಮನಲ್ಲಿ ಸಿಲುಕಿತ್ತು!
ಮನ ಚೆನ್ನಬಸವಣ್ಣನಲ್ಲಿ ಸಿಲುಕಿತ್ತು
ನಾನೇತರಲ್ಲಿ ನೆನೆವೆನಯ್ಯ
ಕೂಡಲಸಂಗಮದೇವ ? !

೪೮೩.
ಬಸವ ಬಾರಯ್ಯ,
ಮರ್ತ್ಯಲೋಕದೊಳಗೆ ಭಕ್ತರುಂಟೆ ಹೇಳಯ್ಯ ?
ಮತ್ತಾರು ಇಲ್ಲಯ್ಯ, ಮತ್ತಾರು ಇಲ್ಲಯ್ಯ !
ನಾನೊಬ್ಬನೇ ಭಕ್ತನು,
ಮರ್ತ್ಯಲೋಕದೊಳಗಣ ಭಕ್ತರೆಲ್ಲರೂ
ಜಂಗಮಲಿಂಗ ನೀನೇ ಅಯ್ಯ ಕೂಡಲಸಂಗಮದೇವ!!

೪೮೪.
ಭಕ್ತ, ಮಾಹೇಶ್ವರ, ಪ್ರಸಾದಿ,
ಪ್ರಾಣಲಿಂಗ, ಶರಣನೈಕ್ಯನು
ಮೆಲ್ಲಮೆಲ್ಲನೆ ಆದೆನೆಂಬನ್ನಬರ,
ನಾನು ವಜ್ರದೇಹಿಯೆ ?
ನಾನೇನು ಅಮೃತವ ಸೇವಿಸಿದೆನೆ ?
ನಾನು ಮರುಜೇವಣಿಯ ಕೊಂಡೆನೆ ?
ನುಡಿದ ನುಡಿಯೊಳಗೆ ಷಡುಸ್ಥಲ ಬಂದು
ನನ್ನ ಮನವನಿಂಬುಗೊಳದಿದ್ದರೆ
ಸುಡುವೆನೀ ತನುವ ಕೂಡಲಸಂಗಮದೇವ.

೪೮೫.
ತಾಪತ್ರಯವೆಂದರೆ ರೂಪ ಕಾಣುತ್ತ ಕನಲಿದ!
ಕೋಪದಲ್ಲಿ ಶಿವಕಳೆಯದ ಕರಡಿಗೆಯನೆ ಮುರಿದ!
ಧೂಪಗುಂಡಿಗೆಯನೊಡೆದ!
ದೀಪದಾರತಿಯ ನಂದಿಸಿದ!
ಬಹು ಪರಿಣಾಮದೋಗರವ ತುಡುಕಿದ!
ಪಾಪಕರ್ಮ, ಕೂಡಲಸಂಗಮದೇವಾ,
ನಿಮ್ಮ ಶರಣ.

೪೮೬.
ಜಗವ ಸುತ್ತಿಪ್ಪುದು ನಿನ್ನ ಮಾಯೆಯಯ್ಯ,
ನಿನ್ನ ಸುತ್ತಿಪ್ಪುದು ಎನ್ನ ಮನ ನೋಡಯ್ಯ!
ನೀನು ಜಗಕ್ಕೆ ಬಲ್ಲಿದನು,
ನಾನು ನಿನಗೆ ಬಲ್ಲಿದನು ಕಂಡಯ್ಯ!
ಕರಿಯು ಕನ್ನಡಿಯೊಳಡಗಿದಂತಯ್ಯ -
ಎನ್ನೊಳಗೆ ನೀನಡಗಿದೆ ಕೂಡಲಸಂಗಮದೇವ.

೪೮೭.
ಎಲ್ಲರ ಗಂಡರು ಬೇಂಟೆಯ ಹೋದರು.
ನೀನೇಕೆ ಹೋಗೆ ಎಲೆ ಗಂಡನೆ ?
ಸತ್ತುದ ತಾರದಿರು; ಕೈ ಮುಟ್ಟಿ ಕೊಲ್ಲದಿರು!
ಅಡಗಿಲ್ಲದೆ ಮನೆಗೆ ಬಾರದಿರು!
ದೇವರ ಧರ್ಮದಲೊಂದು
ಬೇಂಟೆ ದೊರೆಕೊಂಡರೆ
ಕೂಡಲಸಂಗಮದೇವಂಗರ್ಪಿತ ಮಾಡುವೆ ಎಲೆ ಗಂಡನೆ,

೪೮೮.
ಗ್ರಹ ಬಂದು ಆವರಿಸಲೊಡನೆ ತನ್ನ ಮರೆಸುವುದು;
ಮತ್ತೊಂದಕಿಂಬುಗೊಡಲೀಯದಯ್ಯ!
ಕೂಡಲಸಂಗಮದೇವನ ಅರಿವು
ಅನುಪಮವಾಗಲೊಡನೆ,
ಬೆವಹಾರದೊಳಗಿರಲೀಯದಯ್ಯ!

೪೮೯.
ಮನೆಯ ಗಂಡನ ಮನೆವಾರ್ತೆಯನೇನ ಹೇಳುವೆನವ್ವ!
ಅಂಗವಿದ್ಯವನೊಲ್ಲ,
ಕಂಗಳೊಳಗಣ ಕಸವ ಕಳೆದಲ್ಲದೆ ನೋಡಲೀಯ!
ಕಯ್ಯ ತೊಳೆದಲ್ಲದೆ ಮುಟ್ಟಲೀಯ,
ಕಾಲ ತೊಳೆದಲ್ಲದೆ ಹೊದ್ದಲೀಯ.
ಇಂತೀ ಸರ್ವಾಂಗ ತಲೆದೊಳೆದ ಕಾರಣ
ಕೂಡಲಸಂಗಮದೇವನೆನ್ನ
ಕೂಡಿಕೊಂಡನವ್ವ.

೪೯೦.
ಅಯ್ಯ, ನೀ ಮಾಡಲಾದ ಜಗತ್ತು;
ಅಯ್ಯ, ನೀ ಮಾಡಲಾದ ಸಂಸಾರ;
ಅಯ್ಯ, ನೀ ಮಾಡಲಾದ ಮರವೆ;
ಅಯ್ಯ, ನೀ ಮಾಡಲಾದ ದುಃಖ!
ಅಯ್ಯ, ನೀ ಬಿಡಿಸಿದರೆ ಬಿಟ್ಟಿತ್ತು ತಾಮಸವಯ್ಯ!
ನಾನೀ ಮಾಯೆಯ ಗೆದ್ದೆನೆಂಬ ಹಮ್ಮಿದೇಕೆ,
ಕೂಡಲಸಂಗಮದೇವ ?

೪೯೧.
ಅರತುದಯ್ಯ ಅಂಗಗುಣ, ಒರೆತುದಯ್ಯ ಭಕ್ತಿರಸ!
ಆವರಿಸಿತಯ್ಯ ಅಂಗ ಲಿಂಗವನು!
ಏನೆಂದರಿಯೆನಯ್ಯ ಲೋಕ-ಲೌಕಿಕದ ಮದವ,
ಕೂಡಲಸಂಗಮದೇವ, ನಿಮ್ಮ ಕರುಣವೆನ್ನನೆಡೆಗೊಂಡಿತ್ತಾಗಿ!

೪೯೨.
ಪೂಜೆಯುಳ್ಳನ್ನಬರ ಲಿಂಗವ ಹಾಡಿದೆ!
ಮಾಟವುಳ್ಳನ್ನಬರ ಜಂಗಮವ ಹಾಡಿದೆ!
ಜಿಹ್ವೆಯುಳ್ಳನ್ನಬರ ಪ್ರಸಾದವ ಹಾಡಿದೆ!
ಈ ತ್ರಿವಿಧ ನಾಸ್ತಿಯಾದ ಬಳಿಕ
ಎನ್ನ ನಾ ಹಾಡಿಕೊಂಡೆ ಕಾಣಾ
ಕೂಡಲಸಂಗಮದೇವ.

೪೯೩.
ಮರಳು ತಲೆ, ಹುರುಳು ತಲೆ ನೀನೇ ದೇವ
ಹೆಂಗೂಸು ಗಂಡುಗೂಸೂ ನೀನೇ ದೇವ
ಎಮ್ಮಕ್ಕನ ಗಂಡ ನೀನೇ ದೇವ,
ಕೂಡಲಸಂಗಮದೇವ,
ಭ್ರಾಂತಳಿದು ಭಾವ ನಿಂದುದಾಗಿ.

೪೯೪.
ಉಮಾದಿನಾಥರು ಕೋಟಿ,
ಪಂಚವಕ್ತ್ರರು ಕೋಟಿ,
ನಂದಿವಾಹನರೊಂದು ಕೋಟಿ ನೋಡಯ್ಯ!
ಸದಾಶಿವರೊಂದು ಕೋಟಿ
ಗಂಗೆವಾಳುಕಸಮಾರುದ್ರರು ಇವರೆಲ್ಲರು
ಕೂಡಲಸಂಗನ ಸಾನ್ನಿಧ್ಯರಲ್ಲದೆ
ಸಮರಸವೇದ್ಯರೊಬ್ಬರೂ ಇಲ್ಲ!

೪೯೫.
ಬಯಲ ರೂಪಮಾಡಬಲ್ಲಾತನೇ ಶರಣನು,
ಆ ರೂಪ ಬಯಲಮಾಡಬಲ್ಲಾತನೇ ಲಿಂಗಾನುಭಾವಿ.
ಬಯಲ ರೂಪಮಾಡಲರಿಯದಿದ್ದರೆ
ಎಂತು ಶರಣನೆಂಬೆ ?
ಆ ರೂಪ ಬಯಲ ಮಾಡಲರಿಯದಿದ್ದರೆ
ಎಂತು ಲಿಂಗಾನುಭಾವಿಯೆಂಬೆ ?
ಈ ಉಭಯವೊಂದಾದರೆ
ನಿಮ್ಮಲ್ಲಿ ತೆರಹುಂಟೇ ಕೂಡಲಸಂಗಮದೇವ ?

೪೯೬.
ದೇವಲೋಕ, ಮರ್ತ್ಯಲೋಕವೆಂಬ
ಸೀಮೆಯುಳ್ಳನ್ನಕ ಕೇವಲ ಶರಣನಾಗಲರಿಯ,
ಸತ್ತು ಬೆರೆಸಿಹೆನೆಂದರೆ
ಕಬ್ಬಿನ ತುದಿಯ ಮೆಲಿದಂತೆ ಕೂಡಲಸಂಗಮದೇವ.

೪೯೭.
ಏನನಾದರೆಯು ಸಾಧಿಸಬಹುದು!
ಮತ್ತೇನನಾದರೆಯು ಸಾಧಿಸಬಹುದಯ್ಯ!
ತಾನಾರೆಂಬುದ ಸಾಧಿಸಬಾರದು,
ಕೂಡಲಸಂಗಮದೇವನ
ಕರುಣವುಳ್ಳವಂಗಲ್ಲದೆ!

೪೯೮.
ಗುರುಶಿಷ್ಯ ಸಂಬಂಧವಾದುದಕ್ಕೆ ಇದು ಚಿಹ್ನ!
ಹಿಂದ ಬಿಟ್ಟು ಮುಂದ ಹಿಡಿಯಲೇ ಬೇಕು.
ಕೂಡಲಸಂಗಮದೇವಯ್ಯ
ಕಿಚ್ಚಿನೊಳಗೆ ಕೋಲ ಬೈಚಿಟ್ಟಂತಿರಬೇಕು.

೪೯೯.
ಲಿಂಗವ ಪೂಜಿಸಿ ಫಲವೇನಯ್ಯ
ಸಮರತಿ, ಸಮಕಳೆ, ಸಮಸುಖವರಿಯದನ್ನಕ ?
ಲಿಂಗವ ಪೂಜಿಸಿ ಫಲವೇನಯ್ಯ
ಕೂಡಲಸಂಗಮದೇವರ ಪೂಜಿಸಿ
ನದಿಯೊಳಗೆ ನದಿ ಬೆರಸಿದಂತಾಗದನ್ನಕ ?

೫೦೦.
ಲಿಂಗಾರ್ಚನೆಯ ಮಾಡುವ ಮಹಿಮರೆಲ್ಲರೂ
ಸಲಿಗೆವಂತರಾಗಿ ಒಳಗೈದಾರೆ.
ಆನು ದೇವಾ ಹೊರಗಳವನು!
ಸಂಬೋಳಿಯೆನುತ್ತ, ಇಂಬಿನಲ್ಲಿದೇನೆ.
ಕೂಡಲಸಂಗಮದೇವ.
ನಿಮ್ಮ ನಾಮವಿಡಿದ ಅನಾಮಿಕ ನಾನು.

೫೦೧.
ಭಿತ್ತಿಯಿಲ್ಲದ ಚಿತ್ತಾರದಂತೆ,
ಭಕ್ತಿಯಲ್ಲದ ಪ್ರಮಥನಾಗಿ ಎಂದಿಪ್ಪೆನಯ್ಯ
ಸತ್ಯವಿಲ್ಲದ ಶರಣನಾಗಿ ಎಂದಿಪ್ಪೆನಯ್ಯ!
ಗೆರೆಯಿಲ್ಲದ ಕೋಲಲ್ಲಿ
ಉದ್ದರೆಯನಿಕ್ಕಿದ ಭಂಡದ ಹರದನಂತಾದೆನಯ್ಯ!
ಕೂಡಲಸಂಗಮದೇವ.

೫೦೨.
ಹುಸಿಯಿಂದ ಜನಿಸಿದೆನಯ್ಯ
ಮರ್ತ್ಯಲೋಕದೊಳಯಿಂಕೆ!
ಹುಸಿಯಿಂದ ಲಿಂಗವ ಹೆಸರುಗೊಂಡು ಕರೆದೆನಯ್ಯ!
ಅದು ಎನಗೆ ಭಾವವೂ ಅಲ್ಲದೆ
ನಿರ್ಭಾವವೂ ಅಲ್ಲದೆ ನಿಂದಿತ್ತಯ್ಯ!
ಅದರ ಅವಯವಂಗಳೆಲ್ಲವು ಜಂಗಮವಯ್ಯ!
ಅದಕ್ಕೆ ಎನ್ನ ಉಳ್ಳ ಸಯದಾನವ ಮಾಡಿ ನೀಡಿದೆನಯ್ಯ,
ಆ ಪ್ರಸಾದಕ್ಕೆ ಶರಣೆಂದೆನಯ್ಯ!
ಅದು ಸಾರವೂ ಅಲ್ಲ, ನಿಸ್ಸಾರವೂ ಅಲ್ಲ!
ಆ ಪ್ರಸಾದದಲ್ಲಿ ನಾನೇ ತದ್ಗತನಾದೆ ಕಾಣಾ
ಕೂಡಲಸಂಗಮದೇವ.

೫೦೩.
ಕುರುಹಿಲ್ಲ ಕುರುಹಿಲ್ಲ ಲಿಂಗವೆಂದೆಂಬರೆ,
ತೆರಹಿಲ್ಲ ತೆರಹಿಲ್ಲ ಜಂಗಮವೆಂದೆಂಬರೆ-
ಇದೇ ನೋಡಾ ಶಿವಾಚಾರ!
ಇದೇ ನೋಡಾ ಶಿವದೊಡಕು!
"ಆತ್ಮಾನಾಂ ಪ್ರಕೃತಿಸ್ವಭಾವ" ಎಂದುದಾಗಿ
ಮುಟ್ಟಬಾರದ ಠಾವ ಮರೆಗೊಂಡಿಪ್ಪ
ಮಮ ಕರ್ತೃ ಕೂಡಲಸಂಗಮದೇವ.

೫೦೪.
ವೇದ ವೇದಿಸಲರಿಯದೆ,
ಅಭೇದ್ಯ ಲಿಂಗವೆಂದು ನಡನಡುಗಿತ್ತು!
ಶಾಸ್ತ್ರ ಸಾಧಿಸಲರಿಯದೆ,
ಅಸಾಧ್ಯಲಿಂಗವೆಂದು ಸಾರುತ್ತೈದಾವೆ!
ತರ್ಕ ತರ್ಕಿಸಲರಿಯದೆ,
ಅತರ್ಕ್ಯಲಿಂಗವೆಂದು ಮನಂಗೊಳ್ಳವು!
ಆಗಮ ಗಮನಿಸಲರಿಯದೆ,
ಅಗಮ್ಯವೆಂದು ಹೋದುವು!
ನರರು ಸುರರು ಅಂತುವ ಕಾಣರು!
ನಮ್ಮ ಕೂಡಲಸಂಗಮದೇವನ ಪ್ರಮಾಣವ ಶರಣ ಬಲ್ಲ!

೫೦೫.
ಅಂತರಂಗ ಬಹಿರಂಗ
ಆತ್ಮಸಂಗ ಒಂದೇ ಅಯ್ಯ!
ನಾದ-ಬಿಂದು-ಕಳಾತೀತ
ಆದಿಯಾಧಾರ ನೀನೇ ಅಯ್ಯ!
ಆರೂಢದ ಕೂಟದ ಸುಖವ
ಕೂಡಲ ಸಂಗಯ್ಯ ತಾನೇ ಬಲ್ಲ!

೫೦೬.
ಕಾಮವೇಕೋ ಲಿಂಗಪ್ರೇಮಿಯೆನಿಸುವಂಗೆ ?
ಕಾಮವೇಕೋ ಶರಣವೇದ್ಯನೆನಿಸುವಂಗೆ ?
ಲೋಭವೇಕೋ ಭಕ್ತಿಲಾಭವ ಬಯಸುವಂಗೆ ?
ಮೋಹವೇಕೋ ಪ್ರಸಾದವೇದ್ಯನೆನಿಸುವಂಗೆ ?
ಮದಮತ್ಸರವುಳ್ಳವಂಗೆ ಹೃದಯ ಶುದ್ಧವೆಲ್ಲಿಯದೋ ?
ಹದುಳಿಗರಾದಲ್ಲಿಪ್ಪ ಕೂಡಲಸಂಗಮದೇವ |

೫೦೭.
ಎನ್ನ ನಡೆಯೊಂದು ಪರಿ |
ಎನ್ನ ನುಡಿಯೊಂದು ಪರಿ |
ಎನ್ನೊಳಗೇನೂ ಶುದ್ಧವಿಲ್ಲ ನೋಡಯ್ಯ |
ನುಡಿಗೆ ತಕ್ಕ ನಡೆಯ ಕಂಡರೆ
ಕೂಡಲಸಂಗಮದೇವ ತನ್ನೊಳಗಿಪ್ಪನಯ್ಯ |

೫೦೮.
ಬಡಪಶು ಪಂಕದಲ್ಲಿ ಬಿದ್ದರೆ
ಕಾಲ ಬಡಿವುದಲ್ಲದೆ ಬೇರೆ ಗತಿಯುಂಟೆ ?
ಶಿವ ಶಿವಾ ಹೋದಹೆ ಹೋದಹೆನಯ್ಯ |
ನಿಮ್ಮ ಮನದತ್ತಲೆನ್ನ ತೆಗೆಯಯ್ಯ |
ಪಶುವಾನು ಪಶುಪತಿ ನೀನು |
ತುಡುಗುಣಿಯಿಂದೆನ್ನ ಹಿಡಿದು ಬಡಿಯದ ಮುನ್ನ
ಒಡೆಯ, ನಿಮ್ಮ ಬೈಯದಂತೆ ಮಾಡು
ಕೂಡಲಸಂಗಮದೇವ.

೫೦೯.
ತನು ನಿಮ್ಮದೆಂದ ಬಳಿಕ ಎನಗೆ ಬೇರೆ ತನುವಿಲ್ಲ |
ಮನ ನಿಮ್ಮದೆಂದ ಬಳಿಕ ಎನಗೆ ಬೇರೆ ಮನವಿಲ್ಲ |
ಧನ ನಿಮ್ಮದೆಂದ ಬಳಿಕ ಎನಗೆ ಬೇರೆ ಧನವಿಲ್ಲ |
ಇಂತಿ ತ್ರಿವಿಧವೂ ನಿಮ್ಮದೆಂದರಿತ ಬಳೀಕ
ಎನಗೆ ಬೇರೆ ವಿಚಾರವುಂಟೇ ಕೂಡಲಸಂಗಮದೇವ ||

೫೧೦.
ಅಂಗದಿಚ್ಚೆಗೆ ಮದ್ದು ಮಾಸವ ತಿಂಬರು |
ಕಂಗಳಿಚ್ಚೆಗೆ ಪರವಧುವ ನೆರೆವರು |
ಲಿಂಗಲಾಂಛನಧಾರಿಯಾದಲ್ಲಿ ಫಲವೇನು ?
ಲಿಂಗಪಥವ ತಪ್ಪಿ ನಡೆವರು |
ಜಂಗಮ ಮುಖದಿಂದೆ ನಿಂದೆ ಬಂದರೆ
ಕೊಂಡ ಮಾರಿಂಗೆ ಹೋಹುದು ತಪ್ಪದು
ಕೂಡಲಸಂಗಮದೇವ |

೫೧೧.
ಕೋಪಿ ಮಜ್ಜನಕ್ಕೆರೆದರೆ ರಕ್ತದ ಧಾರೆ |
ಪಾಪಿ ಹೂವನೇರಿಸಿದರೆ ಮಸೆದಡಾಯುಧದ ಗಾಯ |
ಕೂಪವರನಾರನೂ ಕಾಣೆನು ಮಾದಾರಚೆನ್ನಯ್ಯನಲ್ಲದೆ |
ಕೂಪವರನಾರನೂ ಕಾಣೆನು ಡೋಹರಕಕ್ಕಯ್ಯನಲ್ಲದೆ |
ವ್ಯಾಪತ್ತಿಯುಳ್ಳವ ನಮ್ಮ ಮಡಿವಾಳ ಮಾಚಯ್ಯ |
ನಿನ್ನ ಪತ್ತಿಗರಿವರಯ್ಯ ಕೂಡಲಸಂಗಮದೇವ |

೫೧೨.
ಕೃಷಿ-ಕೃತ್ಯ-ಕಾಯಕದಿಂದಾದರೇನು ?
ತನು-ಮನವ ಬಳಲಿಸಿ ಪಾದವ ತಂದು ದಾಸೋಹವ ಮಾಡುವ
ಪರಮ ಸದ್ಭಕ್ತನ ಪಾದವ ತೋರಯ್ಯ ಎನಗೆ |
ಅದೆಂತೆನೆ :
ಆತನ ತನು ಶುದ್ಧ | ಆತನ ಮನ ಶುದ್ಧ |
ಆತನ ನಡೆ ಶುದ್ಧ | ನುಡಿಯೆಲ್ಲವು ಪಾವನ |
ಆತಂಗೆ ಉಪದೇಶವ ಮಾಡಿದಾತನೆ ಪರಮಸದ್ಗುರು |
ಅಂತಪ್ಪ ಸದ್ಭಕ್ತನ ಮನೆಯ ಕೈಲಾಸವೆಂದು ಹೊಕ್ಕು
ಲಿಂಗಾರ್ಚನೆಯ ಮಾಡುವ ಜಂಗಮವೇ ಜಗತ್ಪಾವನ |
ಇಂತಪ್ಪವರ ನಾನು ನೆರೆ ನಂಬಿ
ನಮೋ ನಮೋ ಎಂಬೆನಯ್ಯ ಕೂಡಲಸಂಗಮದೇವ |

೫೧೩.
ದೇವ ದೇವ ಬಿನ್ನಪವ ಅವಧಾರು |
ವಿಪ್ರ ಮೊದಲು ಅಂತ್ಯಜ ಕಡೆಯಾಗಿ
ಶಿವಭಕ್ತರಾದವರನೆಲ್ಲರನು ಒಂದೇ ಎಂಬೆ
ಹಾರುವ ಮೊದಲು ಶ್ವಪಚ ಕಡೆಯಾಗಿ
ಭವಿಯಾದವರನೆಲ್ಲರನು ಒಂದೇ ಎಂಬೆ |
ಈ ಹೀಂಗೆಂದು ನಂಬುವುದೆನ್ನ ಮನವು |
ಈ ನುಡಿದ ನುಡಿಯೊಳಗೆ ಎಳ್ಳ ಮೊನೆಯಷ್ಟುಸಂದೇಹವುಳ್ಳೆರೆ
ಹಲುದೋರ ಮೂಗ ಕೊಯಿ ಕೂಡಲಸಂಗಮದೇವ |

೫೧೪.
ಗೋತ್ರನಾಮವ ಬೆಸಗೊಂಡರೆ
ಮಾತ ನೂಂಕದೆ ಸುಮ್ಮನಿದ್ದಿರಿದೇಕಯ್ಯ ?
ತಲೆಯ ಕುತ್ತಿ ನೆಲನ ಬರುವುತಿದ್ದಿದೇನಯ್ಯ ?
ಗೋತ್ರ ಮಾದಾರ ಚೆನ್ನಯ್ಯ
ಡೋಹಾರ ಕಕ್ಕಯ್ಯನೆಂಬುದೇನು ?
ಕೂಡಲಸಂಗಯ್ಯ.

೫೧೫.
ಕುಲಮದಕ್ಕೆ ಹೋರಿ ಜಂಗಮಬೇಧವ ಮಾಡುವೆ |
ಫಲವೇನು ? ನಿತ್ಯಲಿಂಗಾರ್ಚನೆ ಪ್ರಾಯಶ್ಚಿತ್ತ |
ಛಲಮದಕ್ಕೆ ಹೋರಿ ಲಿಂಗ ಭೇದವ ಮಾಡುವೆ
ಜಂಗುಳಿಯ ಕಾವ ಗೋವಳ ಹಲವು ಪಶುವ ನಿವಾರಿಸುವಂತೆ |
ತನುಭಕ್ತನಾಯಿತ್ತೆನ್ನ ಮನ ಭವಿ |
ಕೂಡಲಸಂಗಮದೇವ

೫೧೬.
ಬ್ರಹ್ಮಪದವಿಯನೊಲ್ಲೆ |
ವಿಷ್ಣುಪದವಿಯನೊಲ್ಲೆ |
ರುದ್ರಪದವಿಯನೊಲ್ಲೆ |
ನಾನು ಮತ್ತಾವ ಪದವಿಯನೊಲ್ಲೆನಯ್ಯ |
ಕೂಡಲಸಂಗಮದೇವ
ನಿಮ್ಮ ಸದ್ಭಕ್ತರ ಪಾದವನರಿದಿಪ್ಪ
ಮಹಾಪದವಿಯನೆ ಕರಿಶಿಸಯ್ಯ |

೫೦೬.
ಕಾಮವೇಕೋ ಲಿಂಗಪ್ರೇಮಿಯೆನಿಸುವಂಗೆ ?
ಕಾಮವೇಕೋ ಶರಣವೇದ್ಯನೆನಿಸುವಂಗೆ ?
ಲೋಭವೇಕೋ ಭಕ್ತಿಲಾಭವ ಬಯಸುವಂಗೆ ?
ಮೋಹವೇಕೋ ಪ್ರಸಾದವೇದ್ಯನೆನಿಸುವಂಗೆ ?
ಮದಮತ್ಸರವುಳ್ಳವಂಗೆ ಹೃದಯ ಶುದ್ಧವೆಲ್ಲಿಯದೋ ?
ಹದುಳಿಗರಾದಲ್ಲಿಪ್ಪ ಕೂಡಲಸಂಗಮದೇವ |

೫೦೭.
ಎನ್ನ ನಡೆಯೊಂದು ಪರಿ |
ಎನ್ನ ನುಡಿಯೊಂದು ಪರಿ |
ಎನ್ನೊಳಗೇನೂ ಶುದ್ಧವಿಲ್ಲ ನೋಡಯ್ಯ |
ನುಡಿಗೆ ತಕ್ಕ ನಡೆಯ ಕಂಡರೆ
ಕೂಡಲಸಂಗಮದೇವ ತನ್ನೊಳಗಿಪ್ಪನಯ್ಯ |

೫೦೮.
ಬಡಪಶು ಪಂಕದಲ್ಲಿ ಬಿದ್ದರೆ
ಕಾಲ ಬಡಿವುದಲ್ಲದೆ ಬೇರೆ ಗತಿಯುಂಟೆ ?
ಶಿವ ಶಿವಾ ಹೋದಹೆ ಹೋದಹೆನಯ್ಯ |
ನಿಮ್ಮ ಮನದತ್ತಲೆನ್ನ ತೆಗೆಯಯ್ಯ |
ಪಶುವಾನು ಪಶುಪತಿ ನೀನು |
ತುಡುಗುಣಿಯಿಂದೆನ್ನ ಹಿಡಿದು ಬಡಿಯದ ಮುನ್ನ
ಒಡೆಯ, ನಿಮ್ಮ ಬೈಯದಂತೆ ಮಾಡು
ಕೂಡಲಸಂಗಮದೇವ.

೫೦೯.
ತನು ನಿಮ್ಮದೆಂದ ಬಳಿಕ ಎನಗೆ ಬೇರೆ ತನುವಿಲ್ಲ |
ಮನ ನಿಮ್ಮದೆಂದ ಬಳಿಕ ಎನಗೆ ಬೇರೆ ಮನವಿಲ್ಲ |
ಧನ ನಿಮ್ಮದೆಂದ ಬಳಿಕ ಎನಗೆ ಬೇರೆ ಧನವಿಲ್ಲ |
ಇಂತಿ ತ್ರಿವಿಧವೂ ನಿಮ್ಮದೆಂದರಿತ ಬಳೀಕ
ಎನಗೆ ಬೇರೆ ವಿಚಾರವುಂಟೇ ಕೂಡಲಸಂಗಮದೇವ ||

೫೧೦.
ಅಂಗದಿಚ್ಚೆಗೆ ಮದ್ದು ಮಾಸವ ತಿಂಬರು |
ಕಂಗಳಿಚ್ಚೆಗೆ ಪರವಧುವ ನೆರೆವರು |
ಲಿಂಗಲಾಂಛನಧಾರಿಯಾದಲ್ಲಿ ಫಲವೇನು ?
ಲಿಂಗಪಥವ ತಪ್ಪಿ ನಡೆವರು |
ಜಂಗಮ ಮುಖದಿಂದೆ ನಿಂದೆ ಬಂದರೆ
ಕೊಂಡ ಮಾರಿಂಗೆ ಹೋಹುದು ತಪ್ಪದು
ಕೂಡಲಸಂಗಮದೇವ |

೫೧೧.
ಕೋಪಿ ಮಜ್ಜನಕ್ಕೆರೆದರೆ ರಕ್ತದ ಧಾರೆ |
ಪಾಪಿ ಹೂವನೇರಿಸಿದರೆ ಮಸೆದಡಾಯುಧದ ಗಾಯ |
ಕೂಪವರನಾರನೂ ಕಾಣೆನು ಮಾದಾರಚೆನ್ನಯ್ಯನಲ್ಲದೆ |
ಕೂಪವರನಾರನೂ ಕಾಣೆನು ಡೋಹರಕಕ್ಕಯ್ಯನಲ್ಲದೆ |
ವ್ಯಾಪತ್ತಿಯುಳ್ಳವ ನಮ್ಮ ಮಡಿವಾಳ ಮಾಚಯ್ಯ |
ನಿನ್ನ ಪತ್ತಿಗರಿವರಯ್ಯ ಕೂಡಲಸಂಗಮದೇವ |

೫೧೨.
ಕೃಷಿ-ಕೃತ್ಯ-ಕಾಯಕದಿಂದಾದರೇನು ?
ತನು-ಮನವ ಬಳಲಿಸಿ ಪಾದವ ತಂದು ದಾಸೋಹವ ಮಾಡುವ
ಪರಮ ಸದ್ಭಕ್ತನ ಪಾದವ ತೋರಯ್ಯ ಎನಗೆ |
ಅದೆಂತೆನೆ :
ಆತನ ತನು ಶುದ್ಧ | ಆತನ ಮನ ಶುದ್ಧ |
ಆತನ ನಡೆ ಶುದ್ಧ | ನುಡಿಯೆಲ್ಲವು ಪಾವನ |
ಆತಂಗೆ ಉಪದೇಶವ ಮಾಡಿದಾತನೆ ಪರಮಸದ್ಗುರು |
ಅಂತಪ್ಪ ಸದ್ಭಕ್ತನ ಮನೆಯ ಕೈಲಾಸವೆಂದು ಹೊಕ್ಕು
ಲಿಂಗಾರ್ಚನೆಯ ಮಾಡುವ ಜಂಗಮವೇ ಜಗತ್ಪಾವನ |
ಇಂತಪ್ಪವರ ನಾನು ನೆರೆ ನಂಬಿ
ನಮೋ ನಮೋ ಎಂಬೆನಯ್ಯ ಕೂಡಲಸಂಗಮದೇವ |

೫೧೩.
ದೇವ ದೇವ ಬಿನ್ನಪವ ಅವಧಾರು |
ವಿಪ್ರ ಮೊದಲು ಅಂತ್ಯಜ ಕಡೆಯಾಗಿ
ಶಿವಭಕ್ತರಾದವರನೆಲ್ಲರನು ಒಂದೇ ಎಂಬೆ
ಹಾರುವ ಮೊದಲು ಶ್ವಪಚ ಕಡೆಯಾಗಿ
ಭವಿಯಾದವರನೆಲ್ಲರನು ಒಂದೇ ಎಂಬೆ |
ಈ ಹೀಂಗೆಂದು ನಂಬುವುದೆನ್ನ ಮನವು |
ಈ ನುಡಿದ ನುಡಿಯೊಳಗೆ ಎಳ್ಳ ಮೊನೆಯಷ್ಟುಸಂದೇಹವುಳ್ಳೆರೆ
ಹಲುದೋರ ಮೂಗ ಕೊಯಿ ಕೂಡಲಸಂಗಮದೇವ |

೫೧೪.
ಗೋತ್ರನಾಮವ ಬೆಸಗೊಂಡರೆ
ಮಾತ ನೂಂಕದೆ ಸುಮ್ಮನಿದ್ದಿರಿದೇಕಯ್ಯ ?
ತಲೆಯ ಕುತ್ತಿ ನೆಲನ ಬರುವುತಿದ್ದಿದೇನಯ್ಯ ?
ಗೋತ್ರ ಮಾದಾರ ಚೆನ್ನಯ್ಯ
ಡೋಹಾರ ಕಕ್ಕಯ್ಯನೆಂಬುದೇನು ?
ಕೂಡಲಸಂಗಯ್ಯ.

೫೧೫.
ಕುಲಮದಕ್ಕೆ ಹೋರಿ ಜಂಗಮಬೇಧವ ಮಾಡುವೆ |
ಫಲವೇನು ? ನಿತ್ಯಲಿಂಗಾರ್ಚನೆ ಪ್ರಾಯಶ್ಚಿತ್ತ |
ಛಲಮದಕ್ಕೆ ಹೋರಿ ಲಿಂಗ ಭೇದವ ಮಾಡುವೆ
ಜಂಗುಳಿಯ ಕಾವ ಗೋವಳ ಹಲವು ಪಶುವ ನಿವಾರಿಸುವಂತೆ |
ತನುಭಕ್ತನಾಯಿತ್ತೆನ್ನ ಮನ ಭವಿ |
ಕೂಡಲಸಂಗಮದೇವ

೫೧೬.
ಬ್ರಹ್ಮಪದವಿಯನೊಲ್ಲೆ |
ವಿಷ್ಣುಪದವಿಯನೊಲ್ಲೆ |
ರುದ್ರಪದವಿಯನೊಲ್ಲೆ |
ನಾನು ಮತ್ತಾವ ಪದವಿಯನೊಲ್ಲೆನಯ್ಯ |
ಕೂಡಲಸಂಗಮದೇವ
ನಿಮ್ಮ ಸದ್ಭಕ್ತರ ಪಾದವನರಿದಿಪ್ಪ
ಮಹಾಪದವಿಯನೆ ಕರಿಶಿಸಯ್ಯ |

3 comments:

  1. dayamaadi bere kadeinda kaddu nimma blognalli prakatisi kannadada Runa tirisuva tamma mahatkarya olleyadalla....tamma hitaishi

    ReplyDelete
  2. ಮನದ ಮೊನೆಯ ಕೊನೆಯ ಮೇಲೆ ಮನೆಯ ಮಾಡಿ ಕೊಂಡಿಹನೊಬ್ಬ ದಾಸೋಹಿ - ಬಸವಣ್ಣನವರ ವಚನ mp3 song ನಿಮ್ಮ ಬಳಿ ಇದೆಯ ???

    ReplyDelete